ಕನ್ನಡ ಸುದ್ದಿ  /  Nation And-world  /  World Diabetes Day: Diabetes Is Increasing Among Youths, It's Time To Change Lifestyle

World Diabetes Day: ಯುವಕ ಯುವತಿಯರಲ್ಲಿ ಹೆಚ್ಚುತ್ತಿದೆ ಮಧುಮೇಹ, ಜೀವನಶೈಲಿ ಬದಲಾಯಿಸಿಕೊಳ್ಳಲು ಇದು ಸಕಾಲ

ಯುವ ಜನತೆಯಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಧುಮೇಹಿಗಳ ಪ್ರಮಾಣ ಗಮನಾರ್ಹ ಏರಿಕೆ ಕಂಡಿದೆ. ನವೆಂಬರ್‌ 14 ವಿಶ್ವ ಮಧುಮೇಹ ದಿನವಾಗಿದ್ದು, ಮಧುಮೇಹ ಅಪಾಯಗಳ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ.

World Diabetes Day: ಯುವಕ ಯುವತಿಯರಲ್ಲಿ ಹೆಚ್ಚುತ್ತಿದೆ ಮಧುಮೇಹ, ಜೀವನಶೈಲಿ ಬದಲಾಯಿಸಿ
World Diabetes Day: ಯುವಕ ಯುವತಿಯರಲ್ಲಿ ಹೆಚ್ಚುತ್ತಿದೆ ಮಧುಮೇಹ, ಜೀವನಶೈಲಿ ಬದಲಾಯಿಸಿ (HT_PRINT)

ಬೆಂಗಳೂರು: ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶೇಷವಾಗಿ, ಯುವ ಜನತೆಯಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಧುಮೇಹಿಗಳ ಪ್ರಮಾಣ ಗಮನಾರ್ಹ ಏರಿಕೆ ಕಂಡಿದೆ ಎಂದು ಹೆಲ್ತ್‌ಕೇರ್‌ ಅಧ್ಯಯನವೊಂದು ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಡಯಾಬಿಟಿಕ್ ಅಂದರೆ ಮಧುಮೇಹಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಶೇ.44 ರಷ್ಟು ಹೆಚ್ಚಳವಾಗಿದೆ(ಅಕ್ಟೋಬರ್ 2020 ರಿಂದ ಸೆಪ್ಟಂಬರ್ 2021 ಕ್ಕೆ ಹೋಲಿಸಿದರೆ ಅಕ್ಟೋಬರ್ 2021 ರಿಂದ ಸೆಪ್ಟಂಬರ್ 2022 ರವರೆಗೆ). ಇದರಲ್ಲಿನ ಆಘಾತಕಾರಿ ಅಂಶವೆಂದರೆ 25 ರಿಂದ 34 ವಯೋಮಾನದ ಯುವ ಭಾರತೀಯರು ಡಯಾಬಿಟಿಕ್ ಗಾಗಿ ವೈದ್ಯರನ್ನು ಸಂಪರ್ಕಿಸುವ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಯೋಮಾನದವರ ಸಂಖ್ಯೆ ಶೇ.46 ರಷ್ಟು ಹೆಚ್ಚಳವಾಗಿದೆ ಎಂದು ಪ್ರಾಕ್ಟೊ ನಡೆಸಿದ ಅಧ್ಯಯನ ತಿಳಿಸಿದೆ.

ಜೀವನಶೈಲಿ ಬದಲಾಯಿಸಿಕೊಳ್ಳಿ

ಯುವ ಜನತೆಯಲ್ಲಿ ಮಧುಮೇಹ ಹೆಚ್ಚಾಗಲು ಹಲವು ಕಾರಣಗಳಿವೆ. ಪ್ರಮುಖ ಕಾರಣ ಕಳಪೆ ಜೀವನಶೈಲಿ ಆಯ್ಕೆಗಳು, ವ್ಯಾಯಾಮ ಮಾಡದೇ ಇರುವುದು ಅಥವಾ ಕಳಪೆ ಆಹಾರ ಪದ್ಧತಿಗಳು. ಇದರ ಪರಿಣಾಮ ಯುವ ಸಮುದಾಯದಲ್ಲಿ ಮಧುಮೇಹ ಹೆಚ್ಚಾಗಲು ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

``ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಡಯಾಬಿಟಿಸ್ ನ ಹೊರೆ ದ್ವಿಗುಣವಾಗಿದೆ. ಹಾಲಿ ಇರುವ ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು ಮೀರಿಸುವ ರೀತಿಯಲ್ಲಿ ಮಧುಮೇಹದ ಪ್ರಮಾಣ ಹೆಚ್ಚಳವಾಗಿದೆ. ಪ್ರತಿ 5 ಮಂದಿ ವಯಸ್ಕರರಲ್ಲಿ ಒಬ್ಬರಿಗೆ ಮಧುಮೇಹ ಇದೆ ಎಂದು ಅಂದಾಜು ಮಾಡಲಾಗಿದೆʼʼ ಎಂದು ಪ್ರಾಕ್ಟೊ ವೈದ್ಯಕೀಯ ಸಲಹೆಗಾರರು ಮತ್ತು ಯೂನಿವರ್ಸಿಟಿ ಹಾಸ್ಪಿಟಲ್ಸ್ ಬರ್ಮಿಂಗ್ ಹ್ಯಾಂ, ಎನ್ಎಚ್ಎಸ್ ನ ಕನ್ಸಲ್ಟೆಂಟ್ ಎಂಡೊಕ್ರಿನೋಲಾಜಿಸ್ಟ್ ಅಂಡ್ ಸೀನಿಯರ್ ಲೆಕ್ಚರರ್ ಡಾ.ಹೇಮಾ ವೆಂಕಟರಾಮನ್ ಹೇಳಿದ್ದಾರೆ.

"ದೇಶದಲ್ಲಿ ಮಧುಮೇಹದ ಕುರಿತು ಜಾಗೃತಿ ಹೆಚ್ಚಿಸಬೇಕಿದೆ. ಮಧುಮೇಹ ಆರೈಕೆ ವ್ಯವಸ್ಥೆಯ ಪೂರೈಕೆ ಬಗ್ಗೆ ಅವಲೋಕನ ಮಾಡಲು ಇದು ಸಕಾಲವಾಗಿದೆ. ಮಧುಮೇಹ ಉಪಶಮನದ ಪ್ರಗತಿಯ ಆವಿಷ್ಕಾರವು ಮಧುಮೇಹದ ಆರೈಕೆಯ ಮಾದರಿಯನ್ನು ಗ್ಲುಕೋಸೆಂಟ್ರಿಕ್ ಡ್ರಗ್ ಟ್ರೀಟ್ ಮೆಂಟ್ ಆಧಾರದಿಂದ ಮಧುಮೇಹದ ಮೂಲ ಕಾರಣವನ್ನು ಗುರಿಯಾಗಿಸುವ ಹೆಚ್ಚು ಸಮಗ್ರವಾದ ಮತ್ತು ದೊಡ್ಡ ಪ್ರಮಾಣದ ತಡೆಗಟ್ಟುವ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ದೇಶಾದ್ಯಂತ ಡಯಾಬಿಟಿಸ್ ಉಪಶಮನ ಕಾರ್ಯಕ್ರಮವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಅಭಿಯಾನ ಮತ್ತು ಜಾಹೀರಾತು ಅಭಿಯಾನವನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ (ಅಕ್ಟೋಬರ್ 2020 ರಿಂದ ಸೆಪ್ಟೆಂಬರ್ 2021 ರವರೆಗೆ vs ಅಕ್ಟೋಬರ್ 2021 ರಿಂದ ಸೆಪ್ಟಂಬರ್ 2022 ರವರೆಗೆ ) ಈ ವರ್ಷ ಮಧುಮೇಹಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಸಂಪರ್ಕಿಸಿದವರ ಪ್ರಮಾಣ ಶೇಕಡ 46ರಷ್ಟು ಹೆಚ್ಚಾಗಿದೆ. ವೈದ್ಯರನ್ನು ಸಂಪರ್ಕಿಸಿದವರ ಪೈಕಿ 18-24 ರ ವಯೋಮಾನದವರು ಶೇ.5 ರಷ್ಟಿದ್ದರೆ, ಒಟ್ಟಾರೆ ಈ ವರ್ಗದಲ್ಲಿ ಶೇ.91 ರಷ್ಟು ಹೆಚ್ಚಳವಾಗಿದೆ. ವೈದ್ಯರನ್ನು ಸಂಪರ್ಕಿಸಿದವರ ಪೈಕಿ 35-44 ರ ವಯೋಮಾನದವರು ಶೇ.33 ರಷ್ಟಿದ್ದರೆ, ಒಟ್ಟಾರೆ ಈ ವರ್ಗದಲ್ಲಿ ಶೇ.23 ರಷ್ಟು ಹೆಚ್ಚಳವಾಗಿದೆ. ವೈದ್ಯರನ್ನು ಸಂಪರ್ಕಿಸಿದವರ ಪೈಕಿ 45-54 ರ ವಯೋಮಾನದವರು ಶೇ.8 ರಷ್ಟಿದ್ದರೆ, ಒಟ್ಟಾರೆ ಈ ವರ್ಗದಲ್ಲಿ ಶೇ.18 ರಷ್ಟು ಹೆಚ್ಚಳವಾಗಿದೆ. ವೈದ್ಯರನ್ನು ಸಂಪರ್ಕಿಸಿದವರ ಪೈಕಿ 54+ ರ ವಯೋಮಾನದವರು ಶೇ.4 ರಷ್ಟಿದ್ದರೆ, ಒಟ್ಟಾರೆ ಈ ವರ್ಗದಲ್ಲಿ ಶೇ.0.41 ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಮೊದಲ ದರ್ಜೆಯ ನಗರಗಳಲ್ಲಿ ಒಟ್ಟಾರೆ ಶೇ.95 ರಷ್ಟು ಮಂದಿ ಎಲ್ಲಾ ಬಗೆಯ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿ ಮಾಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.44 ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯನ ತಿಳಿಸಿದೆ. ಬೆಂಗಳೂರಿನಲ್ಲಿ ಒಟ್ಟು ವೈದ್ಯರ ಭೇಟಿ ಶೇ.29 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.77 ರಷ್ಟು ಅಧಿಕವಾಗಿದೆ. ದೆಹಲಿಯಲ್ಲಿ ಒಟ್ಟು ವೈದ್ಯರ ಭೇಟಿ ಶೇ.40 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.46 ರಷ್ಟು ಅಧಿಕವಾಗಿದೆ. ಮುಂಬೈ ಮತ್ತು ನವಿಮುಂಬೈನಲ್ಲಿ ಒಟ್ಟು ವೈದ್ಯರ ಭೇಟಿ ಶೇ.9 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.72 ರಷ್ಟು ಅಧಿಕವಾಗಿದೆ. ಹೈದ್ರಾಬಾದ್ ನಲ್ಲಿ ಒಟ್ಟು ವೈದ್ಯರ ಭೇಟಿ ಶೇ.14 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.21 ರಷ್ಟು ಅಧಿಕವಾಗಿದೆ. ಚೆನ್ನೈನಲ್ಲಿ ಒಟ್ಟು ವೈದ್ಯರ ಭೇಟಿ ಶೇ.3 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.24 ರಷ್ಟು ಅಧಿಕವಾಗಿದೆ. ಪುಣೆಯಲ್ಲಿ ಒಟ್ಟು ವೈದ್ಯರ ಭೇಟಿ ಶೇ.5 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.35 ರಷ್ಟು ಅಧಿಕವಾಗಿದೆ.

IPL_Entry_Point