ಇದು ಬೇಗ ಕೊನೆಯಾಗಲಿ ಎಂದು ಆಶಿಸುವೆ ಎಂದ ಡೊನಾಲ್ಡ್ ಟ್ರಂಪ್, ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ಅಮೆರಿಕದ ಪ್ರತಿಕ್ರಿಯೆ ಹೀಗಿದೆ
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ‘ಅಪರೇಷನ್ ಸಿಂಧೂರ್‘ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿನ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಈ ಸಂಬಂಧ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದಾರೆ.
(1 / 5)
ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿನ ಭಯೋತ್ಪಾದಕ ನೆಲೆಯನ್ನು ನಾಶ ಪಡಿಸಿದ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾರ್ಯಪ್ರವೃತ್ತರಾಗಿದ್ದಾರೆ. ಭಾರತೀಯ ಸೇನೆಯ ಕಾರ್ಯಾಚರಣೆಯ ನಂತರ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಕಾರ್ಯಾಚರಣೆಗೂ ಮುನ್ನ ಅವರು ಕಳೆದ 48 ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾರ್ಕೊ ರುಬಿಯೊ ಕಾರ್ಯಾಚರಣೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
(PTI)(2 / 5)
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆಪರೇಷನ್ ಸಿಂಧೂರ್ ಬಗ್ಗೆ ವೈಯಕ್ತಿಕ ವಿಚಾರಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ‘ಇದು ಬೇಗ ಮುಗಿಯುತ್ತದೆ ಎಂದು ನಾನು ಭಾವಿಸುತ್ತೇನೆ‘ ಎಂದು ಅವರು ಹೇಳಿದ್ದಾರೆ. ಅಲ್ಲದೇ ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳ ಜೊತೆ ಮಾತುಕಡೆ ನಡೆಸಿದ್ದಾಗಿ ಅವರು ಹೇಳಿದ್ದಾರೆ. ಈ ಸಮಸ್ಯೆಯ ಶಾಂತಿಯುತ ರೀತಿಯಲ್ಲಿ ಪರಿಹಾರಕ್ಕಾಗಿ ಅಮೆರಿಕ ಕೆಲಸ ಮಾಡುತ್ತದೆ ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.
(Bloomberg)(3 / 5)
ಇದಕ್ಕೂ ಮೊದಲು ಈ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ‘ಇದು ಬಹಳ ಬೇಗ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ‘ ಎಂದು ಹೇಳಿದ್ದರು. ‘ಇದು ನಾಚಿಕೆಗೇಡಿನ ಸಂಗತಿ. ಓವಲ್ಗೆ ಹೋದಾಗ ಈ ವಿಚಾರ ತಿಳಿಯಿತು. ಕಳೆದ ಕೆಲವು ದಿನಗಳಿಂದಲೇ ಏನೋ ನಡೆಯಲಿದೆ ಎಂಬುದನ್ನು ಜನರು ಅರ್ಥಮಾಡಿಕೊಂಡಿರುತ್ತಾರೆ. ಅವರು ಭಯೋತ್ಪಾದನೆ ವಿರುದ್ಧ ಬಹುಕಾಲದಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ದಶಕಗಳ ಕಾಲದಿಂದ ನಡೆಯುತ್ತಿರುವ ಹೋರಾಟವಿದು. ಇದು ಬಹಳ ಬೇಗ ಕೊನೆಯಾಗಲಿದೆ ಎಂದು ಆಶಿಸುವೆ‘ ಎಂದಿದ್ದಾರೆ.
(Bloomberg)(4 / 5)
ಜಮ್ಮು ಕಾಶ್ಮೀರ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಉಗ್ರಗಾಮಿಗಳು ಪ್ರವಾಸಿಗರನ್ನು ಯಾವ ಧರ್ಮದವರು ಎಂದು ಕೇಳಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಭಯೋತ್ಪಾದಕ ದಾಳಿಯಲ್ಲಿ ಸುಮಾರು 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ. ಭಾರತವು ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ತಡರಾತ್ರಿ ದಾಳಿ ಮಾಡಿತು. ಭಾರತೀಯ ಸೇನೆ ತೆಗೆದುಕೊಂಡ ಕ್ರಮವು ಪಾಕಿಸ್ತಾನದ ಯಾವುದೇ ಮಿಲಿಟರಿ ಅಥವಾ ನಾಗರಿಕ ಸಂಸ್ಥೆಗೆ ಹಾನಿ ಮಾಡಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.
(5 / 5)
ವರದಿಗಳ ಪ್ರಕಾರ, ಭಾರತವು ಪಾಕಿಸ್ತಾನದ ಬಹವಾಲ್ಪುರದಲ್ಲಿ ಎರಡು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ. ಬಹವಾಲ್ಪುರದಲ್ಲಿದ್ದ ಉಗ್ರರ ತಾಣದ ಮೇಲಿನ ದಾಳಿಯಲ್ಲಿ 30 ಜನರು ಸಾವನ್ನಪ್ಪಿದ್ದಾಗಿ ಪ್ರಾಥಮಿಕ ವರದಿಗಳು ಹೇಳಿವೆ. ಮುರಿಡ್ಕೆ, ಮುಜಫರಾಬಾದ್, ಕೋಟ್ಲಿ, ಗುಲ್ಪುರ್, ಭಿಂಬರ್, ಚಕ್ ಅಮ್ರು ಮತ್ತು ಸಿಯಾಲ್ಕೋಟ್ನಲ್ಲಿಯೂ ಭಾರತ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಭಾರತವು 8 ಸ್ಥಳಗಳಲ್ಲಿ ಒಟ್ಟು 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ.
ಇತರ ಗ್ಯಾಲರಿಗಳು