6 ದಿನ ಹಿಂದಷ್ಟೇ ಮದುವೆಯಾಗಿದ್ದ ವಿನಯ್ ನರವಾಲ್ ಹನಿಮೂನ್ಗೆ ಸ್ವಿಜರ್ಲ್ಯಾಂಡ್ ಹೋಗಬಯಸಿದ್ದರು, ಪಹಲ್ಗಾಮ್ನಲ್ಲಿ ಹುತಾತ್ಮ, ಚಿತ್ರನೋಟ
ಪಹಲ್ಗಾಮ್ನ ಬೈಸಾರನ್ ಕಣಿವೆ ಪ್ರದೇಶ ಮಿನಿ ಸ್ವಿಜರ್ಲ್ಯಾಂಡ್ ಎಂದೇ ಜನಪ್ರಿಯ. ಹನಿಮೂನ್ಗೆ ಸ್ವಿಜರ್ಲ್ಯಾಂಡ್ಗೆ ಹೋಗಬೇಕಾಗಿದ್ದ ಲೆಫ್ಟಿನೆಂಟ್ ವಿನಯ್ ನರವಾಲ್ ಪಹಲ್ಗಾಮ್ಗೆ ಬಂದು ಹುತಾತ್ಮರಾದರು. ಇಲ್ಲಿದೆ ಚಿತ್ರನೋಟ.
(1 / 10)
ಕೇವಲ 6 ದಿನ ಹಿಂದಷ್ಟೇ ಮದುವೆಯಾಗಿದ್ದ ವಿನಯ್ ನರವಾಲ್ ಹನಿಮೂನ್ಗೆ ಸ್ವಿಜರ್ಲ್ಯಾಂಡ್ ಹೋಗಬಯಸಿದ್ದರು. ದುರದೃಷ್ಟವೋ ಏನೋ ಸಾಧ್ಯವಾಗಲಿಲ್ಲ. ಅವರು ಮಿನಿ ಸ್ವಿಜರ್ಲ್ಯಾಂಡ್ ಎಂದೇ ಜನಪ್ರಿಯವಾಗಿದ್ದ ಪಹಲ್ಗಾಮ್ನ ಬೈಸಾರನ್ಗೆ ಬಂದರು. ಉಗ್ರರ ಗುಂಡಿನ ದಾಳಿಗೆ ಸಿಲುಕಿ ಹುತಾತ್ಮರಾದರು.
(2 / 10)
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ಅಪರಾಹ್ನ ನಡೆದ ಭಯೋತ್ಪಾದಕ ದಾಳಿ ಇಡೀ ದೇಶವನ್ನು ಬೆಚ್ಚಿಬೀಳಿಸಿತು. ಭಾರತೀಯ ನೌಕಾಪಡೆಯ ಅಧಿಕಾರಿ, ಹೊಸದಾಗಿ ಮದುವೆಯಾದ ಲೆಫ್ಟಿನೆಂಟ್ ವಿನಯ್ ನರವಾಲ್ ಸೇರಿದಂತೆ ಈ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಲೆಫ್ಟಿನೆಂಟ್ ವಿನಯ್ ನರವಾಲ್ ಹರಿಯಾಣದ ಕರ್ನಾಲ್ ಮೂಲದವರು. ಏಪ್ರಿಲ್ 16 ರಂದು ವಿವಾಹಿತರಾದ ಅವರು ಪತ್ನಿ ಹಿಮಾನ್ಶಿ ಜತೆಗೆ ಮಧುಚಂದ್ರಕ್ಕಾಗಿ ಪಹಲ್ಗಾಮ್ಗೆ ಬಂದಿದ್ದರು.
(3 / 10)
ಕೊಚ್ಚಿಯ ನೌಕಾಪಡೆಯಲ್ಲಿ 26 -ವರ್ಷದ ವಿನಯ್ ನಾರ್ವಾಲ್ ಅವರನ್ನು ನಿಯೋಜಿಸಲಾಗಿತ್ತು.. ಅವರು ಎರಡು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಗೆ ಸೇರಿದ್ದರು. ಮದುವೆಯ ಬಳಿಕ ಸ್ವಿಜರ್ಲ್ಯಾಂಡ್ಗೆ ಹನಿಮೂನ್ಗೆ ಹೋಗಬೇಕು ಎಂದು ಬಯಸಿದ್ದ ಅವರು, 'ಮಿನಿ ಸ್ವಿಟ್ಜರ್ಲೆಂಡ್' ಎಂದು ಕರೆಯಲ್ಪಡುವ ಪಹಲ್ಗಮ್ನ ಬೆಸಾರನ್ ಕಣಿವೆಗೆ ತೆರಳಿದ್ದರು. ಅಲ್ಲಿ ಭಯೋತ್ಪಾದಕರು ದಿಢೀರ್ ದಾಳಿ ನಡೆಸಿದ ವೇಳೆ, 28 ಪ್ರವಾಸಿಗರು ಹತರಾದರು. ಈ ಪೈಕಿ ವಿನಯ್ ನರ್ವಾಲ್ ಹುತಾತ್ಮರಾದರು.
(4 / 10)
ಹಿಮಾನ್ಶಿ ಅವರ ಕಣ್ಣೆದುರಲ್ಲೇ ಉಗ್ರರು ಪತಿ ವಿನಯ್ ನರವಾಲ್ ಅವರನ್ನು ಹತ್ಯೆ ಮಾಡಿದ್ದಾರೆ. ಇದರಿಂದಾಗಿ ದಿಕ್ಕೆಟ್ಟು ಪತಿಯ ಮೃತದೇಹದ ಬಳಿ ಕುಳಿತ ಹಿಮಾನ್ಶಿಯ ಚಿತ್ರ ಭಾರತೀಯರ ಕಣ್ಣು ಮಂಜಾಗುವಂತೆ ಮಾಡಿತು. ಹಿಮಾನ್ಶಿ ಅವರ ಕೈಗಳ ಮೆಹಂದಿಯ ಬಣ್ಣ ಮಾಸಿಲ್ಲ. ಕೆಂಪುಗಾಜುಗಳು ಅವರು ಈಗಷ್ಟೇ ಮದುವೆಯಾದವರು ಎಂಬುದನ್ನು ಸೂಚಿಸುತ್ತಿತ್ತು. ಮಧುಚಂದ್ರದ ವೇಳೆ ನಡೆದ ಈ ಆಘಾತ ಬಹುದೊಡ್ಡದು.
(5 / 10)
ವಿನಯ್ ಅವರ ಅಜ್ಜ ಹವಾ ಸಿಂಗ್ ಅವರು, ದಂಪತಿಯನ್ನು ಹನಿಮೂನ್ಗೆ ಸ್ವಿಜರ್ಲ್ಯಾಂಡ್ಗೆ ಕಳುಹಿಸಲು ಬಯಸಿದ್ದರು. ಆದರೆ, ಅವರಿಗೆ ವೀಸಾ ಸಿಗದ ಕಾರಣ, ಕಾಶ್ಮೀರ ಪ್ರವಾಸಕ್ಕೆ ಹೊರಟಿದ್ದರು. ದುರದೃಷ್ಟ ಕಾಡಿತ್ತು.
(6 / 10)
ಪಹಲ್ಗಾಮ್ ಉಗ್ರರ ದಾಳಿಯು ಹೇಡಿತನದ ಪರಮಾವಧಿ ಎಂದು ಹರಿಯಾಣ ಮುಖ್ಯಮಂತ್ರಿ ನೈಬ್ ಸಿಂಗ್ ಸೈನಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಬುಧವಾರ ವಿನಯ್ ನರವಾಲ್ ಅವರ ಅಜ್ಜನಿಗೆ ವಿಡಿಯೋ ಕರೆ ಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ಹವಾಸಿಂಗ್ ಅವರು ಉಗ್ರರನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು.
(7 / 10)
ಭಾರತೀಯ ನೌಕಾಪಡೆಯು ವಿನಯ್ ನರವಾಲ್ ಅವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿತು. ಪಹಲ್ಗಾಮ್ ಉಗ್ರರ ದಾಳಿಯು ಹೇಡಿತನದ ದಾಳಿ. ಲೆಫ್ಟಿನೆಂಟ್ ವಿನಯ್ ನರವಾಲ್ ಅವರ ಸಾವು ಭಾರಿ ದುಃಖವನ್ನು ಉಂಟುಮಾಡಿದೆ. ಈ ದಾಳಿಯಿಂದಾಗಿ ದೇಶಕ್ಕೆ ಭಾರಿ ನಷ್ಟ ಉಂಟಾಗಿದೆ. ನಾಗರಿಕರು ಅನೇಕರು ಮೃತಪಟ್ಟರು. ಈ ದಾಳಿಯಿಂದಾಗಿ ಭಾರಿ ಆಘಾತ ಉಂಟಾಗಿದೆ. ಸಂತ್ರಸ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿದರು.
(8 / 10)
ವಿನಯ್ ನರವಾಲ್ ಅವರ ವಿವಾಹ ಅದ್ದೂರಿಯಾಗಿ ನಡೆಯಿತು. ಅವರ ಮನೆಯಲ್ಲಿ ಸಂಭ್ರಮ ಸಡಗರ ತುಂಬಿ ತುಳುಕಿತ್ತು. ಇದೀಗ ದಿಢೀರ್ ಹೀಗಾಗಿದೆ. ಮನೆಯಲ್ಲಿ ನೀರವ ಮೌನ ತುಂಬಿಕೊಂಡುಬಿಟ್ಟಿದೆ ಎಂದು ಕರ್ನಾಲ್ನಲ್ಲಿ ಅವರ ನೆರೆಮನೆಯ ನರೇಶ್ ಬನ್ಸಾಲ್ ಮಾಧ್ಯಮದವರಿಗೆ ಹೇಳಿದ್ದಾರೆ. ನರವಾಲ್ ಅವರು ಎಂಜಿನಿಯರಿಂಗ್ ಮಾಡಿ ನೌಕಾಪಡೆ ಸೇರಿದ್ದರು. ಮದುವೆಯ ಸಂಭ್ರಮ ಸಡಗರದಲ್ಲಿದ್ದರು. ಸ್ವಿಜರ್ಲೆಂಡ್ನಲ್ಲಿ ಹನಿಮೂನ್ ಆಚರಿಸಬೇಕು ಎಂದು ಬಯಸಿದ್ದರು. ರಜಾದಿನಗಳು ಹಾಗೂ ವೀಸಾ ಸಮಸ್ಯೆಯಾದ ಕಾರಣ ಅಲ್ಲಿಗೆ ಹೋಗುವ ಬದಲು ಕಾಶ್ಮೀರಕ್ಕೆ ಹೋದರು. ಅವರ ಕುಟುಂಬದ ಸದ್ಯದ ಸನ್ನಿವೇಶ ನಮ್ಮ ಊಹೆಗೆ ನಿಲುಕದ ವಿಚಾರ. ಆ ದುಃಖವನ್ನು ಸಹಿಸುವ ಶಕ್ತಿ ಅವರಿಗೆ ಸಿಗಲಿ ಎಂದು ನೆರೆಮನೆಯ ಸೀಮಾ ಹೇಳಿದ್ದಾಗಿ ಮಾಧ್ಯಮಗಳು ವರದಿಮಾಡಿವೆ.
(9 / 10)
ಪಹಲ್ಗಾಮ್ ಉಗ್ರರ ದಾಳಿಯನ್ನು ಲಷ್ಕರ್-ಎ ತೊಯ್ಬಾದ ಸೋದರ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹೊತ್ತುಕೊಂಡಿದೆ. 2019 ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಇದು ಎಂದು ಪರಿಗಣಿಸಲಾಗಿದೆ.
(10 / 10)
ಈ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಬಾರತಕ್ಕೆ ಬಂದರು. ಪಹಲ್ಗಾಮ್ ಉಗ್ರರ ದಾಳಿಗೆ ತಕ್ಕ ಪ್ರತಿ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು. ದೇಶಾದ್ಯಂತ ಜನರೂ ಉಗ್ರರನ್ನು ಮಟ್ಟಹಾಕಲು ಬಯಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ, ಜನರು ಭಯೋತ್ಪಾದನೆ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
(Narendra Modi)ಇತರ ಗ್ಯಾಲರಿಗಳು