ಕರ್ನಾಟಕದಲ್ಲಿ ಅತ್ಯಧಿಕ ಮಳೆಯಾಗುವ ಪಶ್ಚಿಮ ಘಟ್ಟಗಳ ಸೆರಗಿನ ಈ 10 ಜಿಲ್ಲೆಗಳಲ್ಲಿ ಮುಂಗಾರು ಪ್ರವಾಸಕ್ಕೆ ಅಣಿಯಾಗಿ
ಮುಂಗಾರು ಆರಂಭಕ್ಕೆ ಕರ್ನಾಟಕದಲ್ಲಿ ದಿನಗಣನೆ ಶುರುವಾಗಿದೆ. ಮೇ ನಾಲ್ಕನೇ ವಾರದಲ್ಲಿಯೇ ಮುಂಗಾರು ಶುರುವಾಗುವುದರಿಂದ ಇದಕ್ಕೆ ಪೂರಕವಾಗಿ ಮುಂಗಾರು ಪ್ರವಾಸವೂ ಶುರುವಾಗಲಿದೆ. ಕರ್ನಾಟಕದಲ್ಲಿ ಮಳೆಯೊಂದಿಗೆ ಪ್ರವಾಸ ಕೈಗೊಳ್ಳಬಹುದಾದ ಜಿಲ್ಲೆಗಳ ಮಾಹಿತಿ ಇಲ್ಲಿದೆ.
(1 / 11)
ಕರ್ನಾಟಕದಲ್ಲಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ, ಮಳೆ ಚೆನ್ನಾಗಿ ಆಗುವ ಉತ್ತರ ಕನ್ನಡ ಜಿಲ್ಲೆಯು ಮುಂಗಾರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿನ ಜಲಪಾತಗಳು, ಅರಣ್ಯದ ಹಸಿರು ಎಂಥವರಿಗೂ ಮುದ ನೀಡಬಲ್ಲದು.ಉತ್ತರ ಕನ್ನಡ ವಾರ್ಷಿಕ 2,835 ಮಿ.ಮೀ ನಷ್ಟು ಮಳೆಯಾಗುವ ಅಂದಾಜಿದೆ.
(2 / 11)
ದೇಗುಲ, ಬೀಚ್ಗಳ ಜತೆಗೆ ದಟ್ಟ ಹಸುರಿನ ಕಾಡು ಇರುವ ಉಡುಪಿ ಜಿಲ್ಲೆಯು ಕೂಡ ಮುಂಗಾರು ಹಂಗಾಮಿಗೆ ಅತ್ಯುತ್ತಮ ಪ್ರವಾಸಿ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕುಂದಾಪುರ, ಉಡುಪಿ, ಕಾರ್ಕಳ ತಾಲ್ಲೂಕುಗಳ ದಟ್ಟಾರಣ್ಯ,ಮಳೆ ಇದಕ್ಕೆ ಕಾರಣ. ಉಡುಪಿ ಜಿಲ್ಲೆಯ ಕೊಲ್ಲೂರು ಸುತ್ತಮುತ್ತಲ ಪ್ರದೇಶ ಸೇರಿ 4,119 ಮಿ.ಮೀ ಮಳೆ ವಾರ್ಷಿಕವಾಗಿ ಆಗುವ ಅಂದಾಜಿದೆ.
(Lohith rao)(3 / 11)
ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ವನ್ಯಜೀವಿಗಳಿಗೆ ಹೇಳಿ ಮಾಡಿಸಿದ ತಾಣ. ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಮಲೈಮಹದೇಶ್ವರ ಬೆಟ್ಟ,ಕಾವೇರಿ ವನ್ಯಧಾಮಗಳಲ್ಲಿ ಸಾಕಷ್ಟು ವನ್ಯಸಂತತಿ ಇದೆ. ಇಲ್ಲಿಯೂ ಉತ್ತಮ ಮಳೆಯಾಗುವುದರಿಂದ ಪ್ರವಾಸಿಗರು ಕಾಡಿನ ಜತೆಗೆ ವನ್ಯಜೀವಿಗಳನ್ನು ಹತ್ತಿರದಿಂದ ಸಫಾರಿ ಮೂಲಕ ನೋಡಲು ಆಗಮಿಸಬಹುದು. ಚಾಮರಾಜನಗರ ಜಿಲ್ಲೆಯಲ್ಲಿ 751 ಮಿ.ಮೀ ಸರಾಸರಿ ಮಳೆ ಸುರಿಯುವ ಅಂದಾಜಿದೆ.
(pavan prasad)(4 / 11)
ಕರ್ನಾಟಕದ ಕಾಶ್ಮೀರ, ಸ್ಕಾಟ್ಲೆಂಡ್ ಎಂದೇ ಕರೆಯಿಸಿಕೊಳ್ಳುವ ಕಾವೇರಿ ಉಗಮದ ಕೊಡಗು ಜಿಲ್ಲೆಯೂ ಮುಂಗಾರು ಪ್ರವಾಸಕ್ಕೆ ಬೆಸ್ಟ್ ತಾಣಗಳಲ್ಲಿ ಒಂದು. ಕೊಡಗಿನ ಮಳೆ, ಹಸಿರು, ಕಣಿವೆ ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ತಾಲ್ಲೂಕಿನ ಕೆಲವು ಜಲಪಾತಗಳೂ ಕೂಡ ಪ್ರವಾಸಿಗರ ನೆಚ್ಚಿನ ಸ್ಥಳಗಳೇ. ಕೊಡಗಿನಲ್ಲಿ2,718 ಮಿ.ಮೀ ಸರಾಸರಿ ಮಳೆಯಾಗುವ ಮಾಹಿತಿಯಿದೆ.
(5 / 11)
ಮಲೆನಾಡಿನ ಹೆಬ್ಬಾಗಿಲು ಎನ್ನಿಸಿರುವ ಶಿವಮೊಗ್ಗ ಜಿಲ್ಲೆಯೂ ಮುಂಗಾರು ಪ್ರವಾಸಿ ಜಿಲ್ಲೆಗಳಲ್ಲಿ ಪ್ರಮುಖವಾದದ್ದು. ಕರ್ನಾಟಕದಲ್ಲೇ ಅತ್ಯಧಿಕ ಮಳೆಯಾಗುವ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪ್ರಮುಖ ಆಕರ್ಷಣೆ. ಇದಲ್ಲದೇ ಸಾಗರ, ಹೊಸನಗರ ತಾಲ್ಲೂಕುಗಳ ಅರಣ್ಯವೂ ಮೈಮನ ಪುಳಕಗೊಳಿಸುವ ಭಾಗ. ಇಲ್ಲಿನ ಹಲವು ಜಲಪಾತಗಳು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳೇ ಹೌದು. ಶಿವಮೊಗ್ಗ ಜಿಲ್ಲೆಯಲ್ಲಿ 1,813 ಮಿ.ಮೀ ಮಳೆಯಾಗುವ ಅಂದಾಜಿದೆ.
(Dp Satish)(6 / 11)
ಮಲೆನಾಡಿನ ಬೆಟ್ಟಗಳ ತಾಣ ಚಿಕ್ಕಮಗಳೂರು ಕೂಡ ಮಳೆಗೆ ಹೆಸರುವಾಸಿ. ಮೂಡಿಗೆರೆ, ಕಳಸ, ಶೃಂಗೇರಿ, ನರಸಿಂಹರಾಜಪುರ, ಚಿಕ್ಕಮಗಳೂರು ಭಾಗದಲ್ಲಿ ಮಳೆ ಯಥೇಚ್ಚವಾಗಿರಲಿದ್ದು, ಇಲ್ಲಿನ ಬೆಟ್ಟ ತಾಣಗಳು ಪ್ರವಾಸಿಗರನ್ನು ಸೆಳೆಯಲಿವೆ. ಹಲವು ನದಿಗಳ ಉಗಮ ತಾಣವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾರ್ಷಿಕ 1,925 ಮಿ.ಮೀ. ಮಳೆಯಾಗುವ ಮಾಹಿತಿಯಿದೆ.
(7 / 11)
ಮಲೆನಾಡಿನ ಸೆರಗಿನ ಹಾಸನ ಜಿಲ್ಲೆಯ ಸಕಲೇಶಪುರ. ಬೇಲೂರು, ಆಲೂರು ತಾಲ್ಲೂಕುಗಳು ಮಳೆಯ ಜತೆಗೆ ಅರಣ್ಯದ ನಂಟಿರುವ ಪ್ರದೇಶಗಳು. ಇಲ್ಲಿಯೂ ಮುಂಗಾರು ಮಳೆ ಸವಿಯುವ ಹಲವು ತಾಣಗಳಿವೆ. ಸಕಲೇಶಪುರವಂತೂ ಎಲ್ಲರೂ ಇಷ್ಟಪಡುವ ಪ್ರದೇಶ. ಹಾಸನ ಜಿಲ್ಲೆಯಲ್ಲಿ ಸರಾಸರಿ 1,031 ಮಿ.ಮೀ ಮಳೆಯಾಗುವ ಅಂದಾಜಿದೆ.
(Lohith rao)(8 / 11)
ಕರ್ನಾಟಕ ಹಾಗೂ ಗೋವಾದ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯೂ ಪಶ್ಚಿಮ ಘಟ್ಟದ ಭಾಗ, ಇಲ್ಲಿಯೂ ದಟ್ಟ ಅರಣ್ಯ, ಮುಂಗಾರು ಮಳೆಯ ಮಜಾ ನೀಡುವ ಹಲವು ತಾಣಗಳಿವೆ. ಖಾನಾಪುರ, ಬೆಳಗಾವಿ ತಾಲ್ಲೂಕಿನಲ್ಲಿ ಅರಣ್ಯ, ಜಲಪಾತಗಳು ಕೂಡ ಇದರಲ್ಲಿ ಸೇರಿವೆ.
(9 / 11)
ಉತ್ತರ ಕನ್ನಡದಂತೆ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದ ಪ್ರಮುಖ ಜಿಲ್ಲೆ. ಇಲ್ಲಿನ ಸುಳ್ಯ, ಪುತ್ತೂರು, ಕಡಬ ಸಹಿತ ಹಲವು ಭಾಗದಲ್ಲಿ ಈಗಲೂ ದಟ್ಟ ಅರಣ್ಯವಿದೆ.ಮಳೆಯೂ ಯಥೇಚ್ಚವಾಗಿ ಸುರಿಯಲಿದೆ. ದೇಗುಲಗಳ ಜತೆಯಲ್ಲಿಯೇ ಮುಂಗಾರು ಪ್ರವಾಸೋದ್ಯಮ, ಚಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಕಾಶಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,975 ಮಿ.ಮೀ ಮಳೆಯಾಗುವ ಅಂದಾಜಿದೆ.
(10 / 11)
ಮೈಸೂರು ಜಿಲ್ಲೆಯ ಕೆಲವು ಭಾಗವೂ ಪಶ್ಚಿಮ ಘಟ್ಟದೊಂದಿಗೆ ಸೇರಿಕೊಂಡಿದೆ. ನಾಗರಹೊಳೆ ಸೇರಿದಂತೆ ಪ್ರಮುಖ ಅರಣ್ಯವೂ ಇರುವ ಮೈಸೂರಿನಲ್ಲಿ ಮುಂಗಾರು ಪ್ರವಾಸೋದ್ಯಮ ಜೂನ್ನಲ್ಲಿ ಚುರುಕಾಗಲಿದೆ. ಕಾಡು, ವನ್ಯಜೀವಿಗಳು, ಕಬಿನಿ ಜಲಾಶಯದ ವೀಕ್ಷಣೆಯೊಂದಿಗೆ ಮುಂಗಾರು ಪ್ರವಾಸ ಖುಷಿಪಡಿಸಬಹುದು.ಮೈಸೂರು ಜಿಲ್ಲೆಯಲ್ಲಿ 798 ಮಿ.ಮೀ. ಮಳೆಯಾಗುವ ಅಂದಾಜಿದೆ.
ಇತರ ಗ್ಯಾಲರಿಗಳು