ಮೈಸೂರು ಮಿನಿ ದಸರಾ ಎಂದೇ ಹೆಸರಾದ ಕರಗ ಮಹೋತ್ಸವ ಸಡಗರ, ರಾತ್ರಿಯಿಡೀ ಮೆರವಣಿಗೆ ಬಳಿಕ ಉತ್ಸವಕ್ಕೆ ತೆರೆ
ಶತಮಾನದ ಹಿನ್ನೆಲೆ ಇರುವ ಮೈಸೂರು ಕರಗ ಮಹೋತ್ಸವವು ಶನಿವಾರ ರಾತ್ರಿ ಆರಂಭಗೊಂಡು ಸಡಗರದಿಂದ ನಡೆದು ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡಿತು. ಇದರ ಚಿತ್ರನೋಟ ಇಲ್ಲಿದೆ.ಚಿತ್ರಗಳು: ರವಿಕೀರ್ತಿಗೌಡ, ಮೈಸೂರು
(1 / 9)
ಮಿನಿ ದಸರಾ ಎಂದೇ ಖ್ಯಾತಿಯಾಗಿರುವ ಮೈಸೂರು ಕರಗ ಮಹೋತ್ಸವ ಶನಿವಾರ ಆರಂಭಗೊಂಡು ಭಾನುವಾರ ಬೆಳಿಗ್ಗೆ ಅಂತ್ಯಗೊಂಡಿತು.
(ರವಿಕೀರ್ತಿಗೌಡ)(2 / 9)
ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸುತ್ತಾ ಬಂದಿರುವ ಕರಗ ಮಹೋತ್ಸವವು ಕಳೆದ ವರ್ಷ ನೂರು ವರ್ಷ ಪೂರೈಸಿತ್ತು,
(3 / 9)
ಶತಮಾನಗಳ ಹಿಂದೆ ಮೈಸೂರಿಗೆ ಸಾಂಕ್ರಾಮಿಕ ರೋಗರುಜಿನಗಳು ಹರಡಿದ ಪರಿಣಾಮ ಪ್ರತಿನಿತ್ಯ ಹತ್ತಾರು ಮಂದಿ ಸಾವನ್ನಪ್ಪುತ್ತಿದ್ದರು. ಮನೆ ಮಂದಿಯೆಲ್ಲಾ ರೋಗದಿಂದ ಬಳಲುತ್ತಿದ್ದರೇ ಮಳೆಯೂ ಇಲ್ಲದೇ ಕ್ಷಾಮ ಕೂಡ ಆವರಿಸಿತ್ತು. ಈ ಎಲ್ಲಾ ಜಂಜಾಟಗಳ ನಡುವೆ ಪ್ರತಿನಿತ್ಯ ಸಾವನ್ನಪ್ಪುತ್ತಿದ್ದವರ ಅಂತ್ಯ ಸಂಸ್ಕಾರ ನಡೆಸುವುದು ಸವಾಲಿನ ಕೆಲಸವಾಗಿತ್ತು. ಇದರಿಂದ ದಿಕ್ಕು ತೋಚದಾದ ಜನರೆಲ್ಲರೂ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಮೊರೆ ಹೋದರು
(4 / 9)
ಅಂದಿನಿಂದ ಆರಂಭವಾದ ಮೈಸೂರು ಕರಗ ಮಹೋತ್ಸವಕ್ಕೆ ಈ ಬಾರಿ 101ನೇ ವರ್ಷದ ಸಂಭ್ರಮ. ಮೈಸೂರು ಕರಗ ಮಹೋತ್ಸವಕ್ಕೆ ಒಂದು ತಿಂಗಳಿರುವಂತಯೇ ಯುಗಾದಿಯ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಶ್ರೀ ಮಾರಿಯಮ್ಮ ದೇವಿಗೆ ಊರಿನ ಸಕಲರೂ ಅರಿಶಿನ ನೀರಿನ ಅಭಿಷೇಕ ನೆರವೇರಿಸಿ ದೇವಿಗೆ ತಂಪನ್ನೆರೆದು ಸಂಜೆ ದೇವಿಯ ತವರು ಮನೆಯಾದ ಮಡಿವಾಳರ ಮನೆಯಲ್ಲಿ ಸಾಂಪ್ರದಾಯಿಕ ವಿಭೂತಿ ಪೂಜೆ ನೆರವೇರಿಸಿ ಎಲ್ಲರಿಗೂ ವಿಭೂತಿ ಪ್ರಸಾದ ವಿನಿಯೋಗದೊಂದಿಗೆ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡುವುದು ವಾಡಿಕೆಯಾಗಿದೆ
(5 / 9)
ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲೆ ನಿಂತಿರುವ ಚಾಮುಂಡಿ ಬೆಟ್ಟದಿಂದ ಹಸಿ ಕರಗ ತರುವ ಮೂಲಕ ಕರಗ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ ನೀಡಲಾಗಿತ್ತು. ಚಾಮುಂಡಿಬೆಟ್ಟದಿಂದ ಹೊರಟ ಹಸಿಕರಗ ಇಟ್ಟಿಗೆಗೂಡಿಗೆ ಆಗಮಿಸುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಯಿತು. ಅಂದಿನಿಂದ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿತ್ತು.
(6 / 9)
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಇಟ್ಟಿಗೆಗೂಡಿನಿಂದ ಮೆರವಣಿಗೆ ಆರಂಭವಾಗಿ ಬಳಿಕ ಚಾಮರಾಜ ಜೋಡಿ ರಸ್ತೆ, ನಾರಾಯಣ ಶಾಸ್ತ್ರಿರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮನಗುಡಿ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕರಸ್ತೆ, ನಜರ್ ಬಾದ್, ಚಾಮರಾಜೇಂದ್ರ ಮೃಗಾಲಯ ರಸ್ತೆ ಮಾರ್ಗವಾಗಿ ಮೇ 4 ರ ಭಾನುವಾರ ಬೆಳಿಗ್ಗೆ ದೇಗುಲಕ್ಕೆ ಬಂದ ನಂತರ ಮೆರವಣಿಗೆ ಅಂತ್ಯವಾಯಿತು,
(7 / 9)
ಕರಗವು ಇಟ್ಟಿಗೆಗೂಡಿನ ಎಲ್ಲಾ ರಸ್ತೆಗಳಲ್ಲೂ ಸಂಚರಿಸಿ ಹರಕೆ ಹೊತ್ತ ಭಕ್ತರ ಮನೆಗೆ ಬಂದಾಗ ಭಕ್ತರು ತಮ್ಮ ಮನೆಯಲ್ಲಿ ದೇವಿಯನ್ನು ಕೂರಿಸಿ ಹಾಲು ಮಜ್ಜಿಗೆ ಪಾನಕ ಕೋಸಂಬರಿ ಸೇರಿದಂತೆ ನಾನಾ ಬಗೆಯ ಪ್ರಸಾದಗಳನ್ನು ನೈವೇದ್ಯ ಮಾಡಿ ಪೂಜಿಸುತ್ತಾರೆ. ಹರಕೆ ಹೊತ್ತಿರುವ ಎಲ್ಲರ ಮನೆಯಲ್ಲೂ ಕರಗ ಇಳಿಸಲಾಗುತ್ತದೆ. ಕರಗ ಮಹೋತ್ಸವದ ಮೆರವಣಿಗೆ ಆರಂಭವಾಗುವವರೆಗೂ ಪ್ರತಿನಿತ್ಯ ಇಟ್ಟಿಗೆಗೂಡಿನ ಹರಕೆ ಹೊತ್ತ ಭಕ್ತರ ಮನೆಗೆ ಕರಗವನ್ನು ಕೊಂಡೊಯ್ಯಲಾಗುತ್ತದೆ.
(8 / 9)
ಮೈಸೂರು ಕರಗದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸ್ಥಳೀಯರು ವಿಶೇಷವಾದ ಉಡುಪಿನೊಂದಿಗೆ ಭಾಗವಹಿಸುತ್ತಾರೆ. ಕರಗ ಮೆರವಣಿಗೆಯುದ್ದಕ್ಕೂ ಭಾಗಿಯಾಗುತ್ತಾರೆ.
ಇತರ ಗ್ಯಾಲರಿಗಳು