ಒಟಿಟಿ ಸಿನಿಮಾ ವಿಮರ್ಶೆ: ಯೋಗರಾಜ್ ಭಟ್ರು ಹೇಳಿದ ತ್ರಿಕೋನ ಪ್ರೇಮಕಥೆ; ಮನದ ಕಡಲಲ್ಲಿ ಈಜೋಣ ಬನ್ನಿ
ಮನದ ಕಡಲು ಎಂಬ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಹೇಳಿದ ಈ ಸಿನಿಮಾ ಹೇಗಿದೆ? ಮನೆಯಲ್ಲಿಯೇ (ಅಥವಾ ಎಲ್ಲಿ ಬೇಕಾದರೂ) ಕುಳಿತು ಹೊಸ ಒಟಿಟಿ ಕನ್ನಡ ಸಿನಿಮಾ ನೋಡಲು ಬಯಸುವವರು ಈ ಸಿನಿಮಾ ನೋಡಬಹುದು. ಅದಕ್ಕಿಂತ ಮೊದಲು ಈ ಸಿನಿಮಾದ ರಿವ್ಯೂ ಓದಿಕೊಳ್ಳಿ. (ವಿಮರ್ಶೆ: ಚೇತನ್ ನಾಡಿಗೇರ್)
(1 / 11)
ಹೇಗಿದೆ ಮನದ ಕಡಲ ಸಿನಿಮಾ?: ಯುವ ಮನಸ್ಸುಗಳನ್ನು ಅರ್ಥ ಮಾಡಿಕೊಂಡು, ಅವರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುವವರ ಪೈಕಿ ಯೋಗರಾಜ್ ಭಟ್ ಪ್ರಮುಖರು. ಅವರ ಹೊಸ ಚಿತ್ರ ‘ಮನದ ಕಡಲು’ ಸಹ ಅಂತಹ ಪ್ರಯತ್ನಗಳಲ್ಲೊಂದು. ಮನದ ಕಡಲು ಈಗ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
(2 / 11)
ಮನದ ಕಡಲು ಲವ್ ಡ್ರಾಮಾ ಜಾನರ್ನ ಸಿನಿಮಾ. ಇ. ಕೃಷ್ಣಪ್ಪ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಈ ಸಿನಿಮಾ 154 ನಿಮಿಷಗಳ ಅವಧಿಯದ್ದು.
(3 / 11)
ಮನದ ಕಡಲು ಕಥೆ ಏನು?: ಸುಮುಖ ಒಬ್ಬ ಮೆಡಿಕಲ್ ವಿದ್ಯಾರ್ಥಿ. ಒಂದು ದುರ್ಘಟನೆಯ ನಂತರ ವೈದ್ಯಕೀಯ ವೃತ್ತಿ ಬಗ್ಗೆ ತಿರಸ್ಕಾರ ಬಂದು ಓದುವುದನ್ನೇ ನಿಲ್ಲಿಸುತ್ತಾನೆ. ಹೀಗಿರುವಾಗಲೇ ರಾಶಿಕಾ ಎಂಬ ಕ್ರಿಕೆಟ್ ಆಟಗಾರ್ತಿಯ ಮೇಲೆ ಮೊದಲ ನೋಟದಲ್ಲೇ ಅವನಿಗೆ ಪ್ರೀತಿಯಾಗುತ್ತದೆ. ಆರು ತಿಂಗಳ ನಂತರ ನೋಡೋಣ ಎಂದು ಹೇಳಿಕಳುಹಿಸುವ ಅವಳು, ಆರು ತಿಂಗಳು ಮುಗಿಯುವುದರೊಳಗೆ ಮಾಯವಾಗಿರುತ್ತಾಳೆ.
(4 / 11)
ಅವಳನ್ನು ಹುಡುಕಿಕೊಂಡು ದೋಣಿದುರ್ಗ ಎಂಬ ಊರಿಗೆ ಹೋಗುವ ಸುಮುಖನಿಗೆ ಅಂಜಲಿ ಎಂಬ ಇನ್ನೊಂದು ಹುಡುಗಿಯ ಪರಿಚಯವಾಗುತ್ತಾಳೆ. ಸುಮುಖನಿಗೆ ರಾಶಿಕಾಳ ಮೇಲೆ ಪ್ರೀತಿಯಾದರೆ, ಅಂಜಲಿಗೆ ಸುಮುಖನ ಮೇಲೆ ಪ್ರೀತಿಯಾಗುವುದರ ಮೂಲಕ ತ್ರಿಕೋನ ಪ್ರೇಮಕಥೆಯಾಗುತ್ತದೆ. ಮುಂದೇನಾಗುತ್ತದೆ ಎಂಬುದಕ್ಕೆ ಚಿತ್ರ ನೋಡಬೇಕು.
(5 / 11)
ಯೋಗರಾಜ್ ಭಟ್ ಸ್ಟೈಲ್ನ ಚಿತ್ರ: ಇದೊಂದು ಟಿಪಿಕಲ್ ಯೋಗರಾಜ್ ಭಟ್ ಚಿತ್ರ. ಅವರ ಚಿತ್ರಗಳಲ್ಲಿ ಕಾಣಸಿಗುವ ಅಪರೂಪದ ಪಾತ್ರಗಳು ಇಲ್ಲೂ ಮುಂದವರೆದಿವೆ. ಎಲ್ಲರನ್ನೂ ಬೈದುಕೊಂಡು ಓಡಾಡುವ ನಾಯಕ, ಉತ್ಸಾಹದ ಚಿಲುಮೆಯಂತಿರುವ ನಾಯಕಿಯರು, ಒಂದಿಷ್ಟು ವಿಚಿತ್ರ ಪಾತ್ರಗಳು ಇಲ್ಲೂ ಮುಂದುವರೆದಿವೆ. ಜೊತೆಗೆ ಆಧುನಿಕತೆ ಮತ್ತು ಬುಡಕಟ್ಟು ಜನಾಂಗ, ಆಧುನಿಕ ಮತ್ತು ಪುರಾತನ ವೈದ್ಯಕೀಯ ಪದ್ಧತಿ ಎಲ್ಲವೂ ಇದೆ.
(6 / 11)
ಪಂಚ್ ಇಲ್ಲ: ಕಥೆಯಲ್ಲಿ ಹಲವು ಮಜಲುಗಳಿವೆಯಾದರೂ, ಯಾವುದರಲ್ಲೂ ತೀವ್ರತೆ ಇಲ್ಲ. ಯಾವುದರಲ್ಲೂ ಗಟ್ಟಿತನ ಇಲ್ಲ. ಕೊನೆಯ 10 ನಿಮಿಷದಲ್ಲಿ ಚಿತ್ರ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲೊಂದು ಫೀಲ್ ಇಲ್ಲ. ಇದರ ಜೊತೆಗೆ ಚಿತ್ರವನ್ನು ಒಂದಿಷ್ಟು ಕತ್ತರಿಸುವ ಸಾಧ್ಯತೆಯೂ ಇತ್ತು. ಚಿತ್ರದಲ್ಲಿ ಒಂದಿಷ್ಟು ಮಜವಾದ ಸಂಭಾಷಣೆಗಳಿವೆಯಾದರೂ ಪಂಚ್ ಕೊಡುವುದಿಲ್ಲ.
(7 / 11)
ಟೆಕ್ನಿಕಲಿ ಚೆನ್ನಾಗಿದೆ: ಚಿತ್ರದಲ್ಲಿ ಕಥೆ-ಚಿತ್ರಕಥೆ ಮೈನಸ್ ಆದರೂ, ಇದೊಂದು ತಾಂತ್ರಿಕವಾಗಿ ಶ್ರೀಮಂತವಾದ ಚಿತ್ರ. ಯೋಗರಾಜ್ ಭಟ್ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್ನ ಚಿತ್ರವೆಂದರೆ, ಅಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಒಂದೆರಡು ಹಾಡುಗಳನ್ನು ಹೊರತುಪಡಿಸಿದರೆ, ಚಿತ್ರದ ಹಾಡುಗಳು ಅಷ್ಟೇನೂ ಗಮನಸೆಳೆಯುವುದಿಲ್ಲ.
(8 / 11)
ಹಾಡುಗಳು ಕೇಳುವುದಕ್ಕೆ ಸುಮಾರಾದರೂ, ಅದನ್ನ ಬಹಳ ಸುಂದರವಾಗಿ ಸೆರೆಹಿಡಿದಿದ್ದಾರೆ ಸಂತೋಷ್ ರೈ ಪಾತಾಜೆ. ಬರೀ ಹಾಡುಗಳಷ್ಟೇ ಅಲ್ಲ, ಇಡೀ ಚಿತ್ರವನ್ನು ಸಂತೋಷ್ ಕ್ಯಾಮೆರಾ ಕಣ್ಣುಗಳಲ್ಲಿ ನೋಡುವುದೇ ಚೆಂದ. ಕಲಾ ನಿರ್ದೇಶನವೂ ಚೆನ್ನಾಗಿದೆ.
(9 / 11)
ನಟನೆ ಉತ್ತಮ: ಇಡೀ ಚಿತ್ರ ಸುಮುಖ, ರಾಶಿಕಾ ಮತ್ತು ಅಂಜಲಿ ಸುತ್ತ ಸುತ್ತತ್ತದೆ. ಮೂವರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸುಮುಖ ಕೆಲವೊಮ್ಮೆ ದಿಗಂತ್ ಅವರನ್ನು ನೆನಪಿಸುತ್ತಾರೆ. ಹುಡುಗಿಯರ ಬಾಯಲ್ಲಿ ರಂಡೆ, ಮುಂಡೆ ಪದಗಳನ್ನು ಕೇಳುವುದು ಕಿರಿಕಿರಿ ಎನ್ನುವುದು ಬಿಟ್ಟರೆ, ಇಬ್ಬರೂ ಲವಲವಿಕೆಯಿಂದ ಅಭಿನಯಿಸಿದ್ದಾರೆ.
(10 / 11)
ಒಟಿಟಿಯಲ್ಲಿ ನೋಡಿ ಮನದ ಕಡಲು: ರಂಗಾಯಣ ರಘು ಇಡೀ ಚಿತ್ರದಲ್ಲಿ ಇದ್ದಾರಾದರೂ ನಟನೆಗೆ ಅವಕಾಶ ಕಡಿಮೆಯೇ. ದತ್ತಣ್ಣ ಅವರ ಪಾತ್ರ ತೂಕದ್ದಾಗಿದ್ದು, ಅವರು ಅಷ್ಟೇ ಚೆನ್ನಾಗಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು