ವಿಶ್ವನಾಥ್ ಸುವರ್ಣ ಛಾಯಾಗ್ರಹಣ: ಕರ್ನಾಟಕದ ಹೆಮ್ಮೆಯ ಪಾರಂಪರಿಕ ತಾಣ ಹಂಪಿ, ಮಳೆ ಬಂದ ನಂತರದ ಛಾಯಾ ನೋಟ
ಕರ್ನಾಟಕದ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಹಂಪಿಯನ್ನು ವಿಭಿನ್ನವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ. ಅದೂ ಮಳೆ ನಿಂತ ಮೇಲಿನ ಪಾರಂಪರಿಕ ತಾಣಗಳ ಚಿತ್ರಣವಿದು. ಇಂದು ವಿಶ್ವ ಪರಂಪರೆಯ ದಿನ ಇರುವುದರಿಂದ ಅವರು ಸೆರೆ ಹಿಡಿದ ಚಿತ್ರಗಳ ನೋಟ ಇಲ್ಲಿದೆ.
(1 / 13)
ಹಂಪಿ ಎಂದ ತಕ್ಷಣ ನೆನಪಿಗೆ ಬರೋದು ಕಲ್ಲಿನ ಕಲಾಕೃತಿಗಳು. ಅದೂ ದೇಗುಲ, ಕಟ್ಟಡಗಳು. ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿರುವ ಪಟ್ಟಿಯಲ್ಲಿರುವ ತಾಣ ಹಂಪಿಯನ್ನು ನೋಡುವುದೇ ಚಂದ.
(2 / 13)
ಹಂಪಿಗೆ ಸಂಬಂಧಿಸಿ ಅತ್ಯಂತ ಹಳೆಯ ದಾಖಲೆಗಳು ನಮ್ಮನ್ನು ಒಂದನೇ ಶತಮಾನಕ್ಕೆ ಕರೆದೊಯ್ಯುತ್ತವೆ. ಇದಕ್ಕಿಂತಲ್ಲೂ ಹಿಂದೆ, ಕ್ರಿಸ್ತ ಪೂರ್ವ ಯುಗದಲ್ಲಿ, ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲಿ ಇದು ಅಶೋಕ ಚಕ್ರವರ್ತಿಯ ರಾಜ್ಯಪಾಲರ ಅಡಿಯಲ್ಲಿದ್ದ ನಗರ ಎಂಬ ಬಗ್ಗೆ ದಾಖಲೆಗಳಿವೆ.
(3 / 13)
ಹಂಪಿಯ ದೇಗುಲಗಳು, ಕಟ್ಟಡಗಳು, ಕಲಾಕೃತಿಗಳ ಸಮೂಹವನ್ನು ವೀಕ್ಷಿಸುತ್ತಾ ಹೋದಂತೆ ಇತಿಹಾಸದ ಹಾದಿಯಲ್ಲಿ ಹೆಜ್ಜೆ ಹಾಕಿದ ಅನುಭವ ನಮಗೆ ಆಗುತ್ತದೆ. ಅಂತಹ ಕಟ್ಟಡಗಳನ್ನು ಮಳೆ ಬಂದ ನೋಟದಲ್ಲಿ ನೋಡುವುದು ಇನ್ನೂ ಚೆಂದ.
(4 / 13)
ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎನ್ನುವ ದೊಡ್ಡರಂಗೇಗೌಡರ ಸಾಲುಗಳು ಹಾಡಿನ ರೂಪ ಪಡೆದು ಜನ ಮಾನಸದಲ್ಲಿ ನೆಲೆಗೊಂಡಿದೆ. ಅಂತಹ ಸಾಲುಗಳಿಗೆ ಜೀವ ತುಂಬುವ ನೋಟವಿದು.
(5 / 13)
ಹಂಪಿಯು ಭಾರತದ ಅತ್ಯಂತ ಪ್ರಸಿದ್ಧ ಪುರಾತತ್ವ ಕೇಂದ್ರಗಳಲ್ಲಿ ಒಂದಾಗಿದ್ದು ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಇತಿಹಾಸ ಪ್ರಿಯರು ಭೇಟಿ ನೀಡುತ್ತಾರೆ. ಈಗಂತೂ ಬೇಸಿಗೆ ರಜೆ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಹಂಪಿ ತಾಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
(6 / 13)
ಹಂಪಿ ಎಂದ ಕೂಡಲೇ ನಮ್ಮ ಕಣ್ಮುಂದೆ ಸುಳಿಯುವುದು ಅಲ್ಲಿನ ಪ್ರಸಿದ್ಧ ವಿಜಯ ನಗರ ರಾಜಮನೆತನ, ಕಲ್ಲಿನಲ್ಲಿ ಅರಳಿ ನಿಂತ ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ ಗೋಪುರಗಳು, ವಿಶಾಲ ರಸ್ತೆಗಳು ಮತ್ತು ಪ್ರತಿಮೆಗಳು. ಇವೆಲ್ಲವೂ ಈ ನಗರದಾದ್ಯಂತ ಪಸರಿಸಿ ನಿಂತಿವೆ
(7 / 13)
ಹಂಪಿಯನ್ನು ಕರ್ನಾಟಕದಲ್ಲಿ ಕೆಲವೊಮ್ಮೆ ಹಾಳು ಹಂಪಿ ಎಂದು ಕೂಡ ಕರೆಯುತ್ತಾರೆ. ಕಾರಣ, ವಿಜಯ ನಗರ ಅರಸರ ರಾಜಧಾನಿಯಾಗಿದ್ದ ಈ ನಗರ ಈಗ ನಾಶಗೊಳಿಸಲ್ಪಟ್ಟ ಅವಶೇಷಗಳ ಒಂದು ಪಟ್ಟಣವಾಗಿ ಉಳಿದುಕೊಂಡು ಬದಿದೆ. ಆದರೆ ಇಲ್ಲಿನ ಕರಕುಶಲತೆ, ಶಿಲ್ಪಿ ಕಲಾ ಸೌಂದರ್ಯ ಎಷ್ಟೊಂದು ಪ್ರಸಿದ್ಧವಾಗಿದೆಯೆಂದರೆ, ಇದಕ್ಕೆ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಮಾನ್ಯತೆ ಯೂ ಸಿಕ್ಕಿದೆ
(8 / 13)
ಹಂಪಿ ಒಂದು ಸ್ಮಾರಕ ಪ್ರದೇಶ. ಈ ಪಟ್ಟಣದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ದೈತ್ಯಾಕಾರದ ಕಲ್ಲು ಬಂಡೆಗಳಿವೆ. ಈ ಹಂಪಿ ಸ್ಮಾರಕಗಳನ್ನು ಕೂಡ ಈ ಕಲ್ಲು ಬಂಡೆಗಲ್ಲಿಯೇ ಕೆತ್ತಲಾಗಿದೆ. ಆ ಕಾಲದ ವಾಸ್ತುಶಿಲ್ಪಿಗಳು ಈ ದೈತ್ಯಾಕಾರದ ಕಲ್ಲುಗಳನ್ನು ಕತ್ತರಿಸಿ ಅವುಗಳಿಗೆ ನಾನಾ ರೂಪ ನೀಡಿ, ಅವುಗಳಿಗೆ ಜೀವ ತುಂಬಿದ್ದಾರೆ. ಹೀಗೆ ಕೆತ್ತನೆ ಸಂದರ್ಭದಲ್ಲೂ ಒಂದು ಕುತೂಹಲಕಾರಿ ತಂತ್ರವನ್ನು ಅನುಸರಿಸಲಾಗಿದೆ.
(9 / 13)
ದೊಡ್ಡ ದೊಡ್ಡ ಬಂಡೆಗಳನ್ನು ಕತ್ತರಿಸಿ ಇಂತಹ ಅಮೂಲ್ಯ ಕಲಾಕುಸುರಿ ಕೆಲಸ ನಿರ್ವಹಿಸುವುದು ಸುಲಭದ ಸಂಗತಿಯಲ್ಲ. ಅದಕ್ಕಾಗಿ ಮೊದಲಿಗೆ, ಬಂಡೆಗಳನ್ನು ಕತ್ತರಿಸಲಾಯಿತು. ಬಳಿಕ, ಈ ಕಲ್ಲುಗಳ ಮೇಲ್ಮೈಯಲ್ಲಿ ರಂಧ್ರಗಳನ್ನು ಮಾಡಲಾಯಿತು. ನಂತರ ಒಣಗಿದ ಮರದ ತುಂಡುಗಳನ್ನು ಈ ಕಲ್ಲಿಗೆ ಹಾಕಲಾಯಿತು. ಮರದ ಗೂಟಗಳು ನೀರಿನಿಂದ ಸಂಪೂರ್ಣವಾಗಿ ಮುಳುಗುವುದರಿಂದ, ಅವುಗಳ ಗಾತ್ರವು ವಿಸ್ತರಿಸಲ್ಪಡುತ್ತದೆ ಇದರಿಂದ ಕಲ್ಲುಗಳು ಒಡೆಯುತ್ತವೆ. ಬಳಿಕ ಅಗತ್ಯವಾದ ಆಕೃತಿಗೆ ಅನುಗುಣವಾಗಿ ಕೆತ್ತನೆ ಕೆಲಸ ಮಾಡಲಾಗುತ್ತಿತ್ತು ಎನ್ನುವ ಐತಿಹ್ಯಗಳಿವೆ.
(10 / 13)
ಹಂಪಿಯ ಇತಿಹಾಸ ಓದುವಾಗ ಅಲ್ಲಿ, ವರ್ತಕರು ಚಿನ್ನ- ವಜ್ರಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ. ಇಂತಹ, ಹಂಪಿ ಬಜಾರ್ ಅಲ್ಲಿನ ಪ್ರಸಿದ್ಧ ವಿರೂಪಾಕ್ಷ ದೇವಾಲಯದ ಮುಂಭಾಗದಲ್ಲಿ ಸುಮಾರು ಒಂದು ಕಿಲೋಮೀಟರ್ ಹರಡಿಕೊಂಡಿದೆ. ಈ ಸಂತೆ ರಸ್ತೆಯ ಎರಡೂ ಬದಿಗಳಲ್ಲಿ ಹಳೆಯ ಮಂಟಪಗಳಿವೆ. ಈ ಮಂಟಪಗಳನ್ನು ಮೊದಲು ವರ್ತಕರು ಬಳಸುತ್ತಿದ್ದರು
(11 / 13)
ಹಂಪಿಯ ಇತರ ದೇವಾಲಯಗಳಿಗಿಂತ ಭಿನ್ನವಾಗಿ, ಈ ದೇವಾಲಯವು ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶ ದ್ವಾರಗಳನ್ನು ಹೊಂದಿರುವ ಒಂದೇ ಒಂದು ಆವರಣವನ್ನು ಹೊಂದಿದೆ. ಪೂರ್ವ ದ್ವಾರದ ಎದುರು, ಅಂಗಳದ ಮಧ್ಯದಲ್ಲಿ ಕಲ್ಲಿನ ರಥವನ್ನು ನಾವು ನೋಡಬಹುದು. ಇದೇ ಈಗಲೂ ಹಂಪಿಯ ವಿಶೇಷ ಆಕರ್ಷಣೆ.
(12 / 13)
ಹಂಪಿಯಲ್ಲಿ ಒಂದು ದೇಗುಲಕ್ಕಿಂತ ಮತ್ತೊಂದು ದೇಗುಲ, ಕಟ್ಟಡ ವಿಭಿನ್ನವಾಗಿದೆ. ಆ ರೀತಿಯಲ್ಲಿ ಇವುಗಳನ್ನು ಶತಮಾನಗಳ ಹಿಂದೆಯೇ ನಿರ್ಮಿಸಲಾಗಿದೆ. ಅವುಗಳ ನೋಟ ಎಂದೆಂದಿಗೂ ಚೆನ್ನವೇ.ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸೋಣ. ಅವುಗಳನ್ನು ಸಂರಕ್ಷಿಸೋಣ ಅನ್ನೋದೇ ಕಾಳಜಿ.
ಇತರ ಗ್ಯಾಲರಿಗಳು