ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನ ಗೆದ್ದ ಐಎಎಸ್ ಅಧಿಕಾರಿ; ವೃತ್ತಿಪರ ಶಟ್ಲರ್ ಆಗಿದ್ದೇಗೆ ಸುಹಾಸ್ ಯತಿರಾಜ್?
Asian Para Games 2023, Suhas Yathiraj: ಏಷ್ಯನ್ ಪ್ಯಾರಾ ಗೇಮ್ಸ್ನ ಎಸ್ಎಲ್4 ವಿಭಾಗದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಪ್ರತಿಭಾವಂತ ಯತಿರಾಜ್ ಮಲೇಷ್ಯಾದ ಬುರ್ಹಾನುದ್ದೀನ್ ಮೊಹಮ್ಮದ್ ಅಮೀನ್ ಅವರನ್ನು 21-13, 18-21, 21-9 ಸೆಟ್ಗಳಿಂದ ಮಣಿಸಿದರು.
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಅಭಿಯಾನದಲ್ಲಿ ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಮತ್ತೊಂದು ಚಿನ್ನದ ಪದಕವನ್ನು ಸೇರಿಸಿದ್ದಾರೆ. ಶುಕ್ರವಾರ (ಅಕ್ಟೋಬರ್ 27) ನಡೆದ ಎಸ್ಎಲ್4 ವಿಭಾಗದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಪ್ರತಿಭಾವಂತ ಯತಿರಾಜ್ ಮಲೇಷ್ಯಾದ ಬುರ್ಹಾನುದ್ದೀನ್ ಮೊಹಮ್ಮದ್ ಅಮೀನ್ ಅವರನ್ನು 21-13, 18-21, 21-9 ಸೆಟ್ಗಳಿಂದ ಮಣಿಸಿದರು.
2021ರ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ ಮಾಜಿ ವಿಶ್ವ ನಂಬರ್ 2 ಆಟಗಾರ ಯತಿರಾಜ್, ಎಸ್ಎಲ್ 4 ವಿಭಾಗದಲ್ಲಿ ಪ್ರಸ್ತುತ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ವರ್ಷ ಮೇನಲ್ಲಿ ಅವರು ಥೈಲ್ಯಾಂಡ್ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದರು. ಇದಲ್ಲದೆ, ಅವರು 2016ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.
ಹಿಂದೆ 2018 ರಲ್ಲಿ ಅವರು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ತಂಡ ಕಂಚಿನ ಪದಕವನ್ನು ಗೆದ್ದಿದ್ದರು. ಸದ್ಯ ಪ್ರಸಕ್ತ ಸಾಲಿನ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲೂ ಅದ್ಭುತ ಪ್ರದರ್ಶನದ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಮಲೇಷ್ಯಾದ ಬುರ್ಹಾನುದ್ದೀನ್ ಮೊಹಮ್ಮದ್ ಅಮೀನ್ ಎದುರು ಹೋರಾಟ ನಡೆಸಿ 21-13, 18-21, 21-9 ಸೆಟ್ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಆದರೆ ಅವರು ಐಎಎಸ್ ಅಧಿಕಾರಿ ಎಂಬುದು ಯಾರಿಗೂ ಗೊತ್ತಿಲ್ಲ.
ಸುಹಾಸ್ ಯತಿರಾಜ್ ಐಎಎಸ್ ಅಧಿಕಾರಿ
ಯತಿರಾಜ್ ಅವರು ಉತ್ತರ ಪ್ರದೇಶ ಕೇಡರ್ನ 2007ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಗೌತಮ್ ಬುದ್ಧ ನಗರ ಮತ್ತು ಪ್ರಯಾಗ್ರಾಜ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅದಕ್ಕೂ ಮೊದಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು. ಡಿಎಂ ಆಗಿ ಕೋವಿಡ್ ಸಮಯದಲ್ಲಿ ಅದ್ಭುತ ಸೇವೆ ಸಲ್ಲಿಸಿದ್ದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಉತ್ತುಂಗದಲ್ಲಿ ಕೆಲಸ ಮಾಡಿದ ಮುಂಚೂಣಿಯ ಕೆಲಸಗಾರರಲ್ಲಿ ಒಬ್ಬರಾಗಿದ್ದರು. ಅವರ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಅಸಾಧಾರಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಸುಹಾಸ್ ಯತಿರಾಜ್, ಅಪಾರ ಮೆಚ್ಚುಗೆಗೂ ಕಾರಣರಾಗಿದ್ದರು. ಆದರೆ ಅವರು ಷಟ್ಲರ್ ಆಗಿದ್ದೇಗೆ ಎಂಬುದು ಕುತೂಹಲ.
ಸುಹಾಸ್ ಯತಿರಾಜ್ ವೃತ್ತಿಪರ ಶಟ್ಲರ್ ಆಗಿದ್ದೇಗೆ?
2016 ರಲ್ಲಿ ಯತಿರಾಜ್ ಅವರು ಅಜಂಗಢ ಜಿಲ್ಲೆಯ ಡಿಸ್ಟ್ರಿಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದರು. ಬ್ಯಾಡ್ಮಿಂಟನ್ ಕಾರ್ಯಕ್ರಮದ ಉದ್ಘಾಟನೆಯೊಂದಕ್ಕೆ ಹೋಗಿದ್ದ ವೇಳೆ, ಅವರಿಗೂ ಬ್ಯಾಡ್ಮಿಂಟನ್ ಆಡುವ ಕನಸು ಚಿಗುರಿತ್ತು. ಅಲ್ಲದೆ, ಕೆಲವು ರಾಜ್ಯದ ಮಟ್ಟದ ಟೂರ್ನಿಗಳಲ್ಲೂ ಪಾಲ್ಗೊಂಡು, ರಾಜ್ಯ ಮಟ್ಟದ ಆಟಗಾರರನ್ನೇ ಸೋಲಿಸಿದ್ದರು.
ಯತಿರಾಜ್ ಆಟಕ್ಕೆ ಕೋಚ್ ಗೌರವ್ ಖನ್ನಾ ಫಿದಾ ಆಗಿದ್ದರು. ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ನೆರವಾದರು. ಪ್ಯಾರಾ ಕೋಚ್ ಗೌರವ್ ಖನ್ನಾ ಅವರ ಬಳಿ ತರಬೇತಿ ಪಡೆದ ಯತಿರಾಜ್ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರಾದರು. ಆದರೆ ಅವರು ಮೊದಲು ಇದಕ್ಕೆ ಒಪ್ಪಿರಲಿಲ್ಲ. ನಂತರ ಗೌರವ್ ಮನವೊಲಿಸಿದ ಹಿನ್ನೆಲೆ ಸಮ್ಮತಿ ಸೂಚಿಸಿದ್ದರು. ಇದೀಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
