Kannada News  /  Sports  /  Chetan Sharma To Continue As Chairman Of Selection Committee
ಚೇತನ್ ಶರ್ಮಾ
ಚೇತನ್ ಶರ್ಮಾ (Twitter)

BCCI Selection committee: ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ಮರುಆಯ್ಕೆ; ಐವರು ಸದಸ್ಯರ ಸಮಿತಿ ಪ್ರಕಟಿಸಿದ ಬಿಸಿಸಿಐ

07 January 2023, 20:04 ISTHT Kannada Desk
07 January 2023, 20:04 IST

ಈ ಹಿಂದೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಅವರನ್ನೇ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಮತ್ತೆ ಶಿಫಾರಸು ಮಾಡಲಾಗಿದೆ. ಉಳಿದಂತೆ ಶಿವಸುಂದರ್ ದಾಸ್, ಸುಬ್ರೋತೋ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಕೂಡ ಸಮಿತಿಯ ಭಾಗವಾಗಲಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು ಇಂದು (ಶನಿವಾರ) ಚೇತನ್ ಶರ್ಮಾ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮರುನೇಮಕ ಮಾಡಿ, ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ ಹಿರಿಯ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಗೆ ನಾಲ್ಕು ಹೆಸರುಗಳನ್ನು ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಈ ಹಿಂದೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಅವರನ್ನೇ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಮತ್ತೆ ಶಿಫಾರಸು ಮಾಡಲಾಗಿದೆ. ಉಳಿದಂತೆ ಶಿವಸುಂದರ್ ದಾಸ್, ಸುಬ್ರೋತೋ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಕೂಡ ಸಮಿತಿಯ ಭಾಗವಾಗಲಿದ್ದಾರೆ.

ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬೆಳವಣಿಗೆಯ ಬಗ್ಗೆ ಖಚಿತಪಡಿಸಿದೆ. “ಬಿಸಿಸಿಐ ಅಖಿಲ ಭಾರತ ಹಿರಿಯ ಪುರುಷರ ಆಯ್ಕೆ ಸಮಿತಿಯ ನೇಮಕಾತಿಗಳನ್ನು ಪ್ರಕಟಿಸಿದೆ. ಚೇತನ್ ಶರ್ಮಾ ಅವರು ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರ ಪಾತ್ರಕ್ಕೆ ಶಿಫಾರಸು ಮಾಡಲಾಗಿದೆ,” ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಐವರು ಸದಸ್ಯರ ಆಯ್ಕೆ ಸಮಿತಿಯನ್ನು ಅಂತಿಮಗೊಳಿಸುವ ಮುನ್ನ, ಕ್ರಿಕೆಟ್ ಸಲಹಾ ಸಮಿತಿಯು 11 ಅಭ್ಯರ್ಥಿಗಳ ಸಂದರ್ಶನ ಮಾಡಿದೆ.

ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (CAC) ಅಖಿಲ ಭಾರತೀಯ ಹಿರಿಯ ಆಯ್ಕೆ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲು ಸುದೀರ್ಘ ಪ್ರಕ್ರಿಯೆಯನ್ನು ಕೈಗೊಂಡಿದೆ. ಈ ಐದು ಹುದ್ದೆಗಳಿಗೆ ಬಿಸಿಸಿಐ ಜಾಹೀರಾತು ಪ್ರಕಟಿಸಿದ ಬಳಿಕ, ಐದು ಹುದ್ದೆಗಳಿಗೆ ಬರೋಬ್ಬರಿ 600 ಅರ್ಜಿಗಳನ್ನು ಸ್ವೀಕರಿಸಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಕಳೆದ ವರ್ಷ ನವೆಂಬರ್ 18ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿತ್ತು.

“ಸರಿಯಾದ ಚರ್ಚೆ ಮತ್ತು ಎಚ್ಚರಿಕೆಯಿಂದ ಎಲ್ಲಾ ಅಭ್ಯರ್ಥಿಗಳನ್ನು ಪರಿಗಣಿಸಿದ ಬಳಿಕ, ವೈಯಕ್ತಿಕ ಸಂದರ್ಶನಗಳಿಗಾಗಿ 11 ವ್ಯಕ್ತಿಗಳ ಅಂತಿಮ ಪಟ್ಟಿಯನ್ನು ಕ್ರಿಕೆಟ್ ಸಲಹಾ ಸಮಿತಿಯು ಸಿದ್ಧಪಡಿಸಿದೆ. ಸಂದರ್ಶನಗಳ ಆಧಾರದ ಮೇಲೆ, ಸಮಿತಿಯು ಈ ಕೆಳಗಿನ ಅಭ್ಯರ್ಥಿಗಳನ್ನು ಹಿರಿಯ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಗೆ ಶಿಫಾರಸು ಮಾಡಿದೆ”ಎಂದು ಬಿಸಿಸಿಐ ತಿಳಿಸಿದೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಫೈನಲ್‌ಗೆ ತಲುಪಲು ವಿಫಲವಾದ ಬಳಿಕ, ಮಂಡಳಿಯು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಚೇತನ್ ಅವರ ಅವಧಿಯಲ್ಲಿ ಭಾರತವು ಏಷ್ಯಾ ಕಪ್‌ನ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿತ್ತು.

ಚೇತನ್ ಶರ್ಮಾ ಅವರು ಮುಖ್ಯ ಆಯ್ಕೆಗಾರನಾಗಿ ಎರಡನೇ ಬಾರಿಗೆ ನೇಮಕವಾಗುತ್ತಿದ್ದು, ಅವರ ಮುಂದೆ ಹೊಸ ಹೊಸ ಸವಾಲುಗಳಿವೆ. 2023ರಲ್ಲಿ ದೇಶವು ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ ಕಾರಣ, ಭಾರತದ ಮಾಜಿ ಬೌಲರ್‌ಗೆ ಈ ವರ್ಷ ತುಂಬಾ ಮುಖ್ಯವಾಗಲಿದೆ. ಈ ಹಿಂದೆ ತಂಡದ ಆಯ್ಕೆ ವಿಚಾರವಾಗಿ ಹಲವು ಟೀಕೆಗಳನ್ನು ಎದುರಿಸಿದ್ದ ಅವರು, ಈ ವರ್ಷ ಅದರಿಂದ ಹೇಗೆ ಹೊರ ಬರುತ್ತಾರೆ ಎಂಬುದೇ ಸದ್ಯದ ಪ್ರಶ್ನೆ.

ಭಾರತವು ಕೊನೆಯದಾಗಿ 2011ರಲ್ಲಿ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ.‌ 2013ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದು, ಆ ಬಳಿಕ ಯಾವುದೇ ಐಸಿಸಿ ಕಪ್‌ ಗೆದ್ದಿಲ್ಲ. ಹೀಗಾಗಿ ಟೀಂ ಇಂಡಿಯಾ ಮೇಲೆ ಈ ವರ್ಷ ನಿರೀಕ್ಷೆಗಳು ಹೆಚ್ಚಿವೆ.