CSK vs GT Final: ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್; 5ನೇ ಬಾರಿಗೆ ಟ್ರೋಫಿ ಗೆದ್ದ ಧೋನಿ ಪಡೆ; ಕೊನೆಯ ಎಸೆತದಲ್ಲಿ ಜಯಿಸಿದ ಸಿಎಸ್ಕೆ
16ನೇ ಆವೃತ್ತಿಯ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊನೆಯ ಥ್ರಿಲ್ಲಿಂಗ್ ಓವರ್ನಲ್ಲಿ ಗೆದ್ದು ಬೀಗಿದ ಚೆನ್ನೈ ಐಪಿಎಲ್ನಲ್ಲಿ 5ನೇ ಟ್ರೋಫಿಗೆ ಮುತ್ತಿಕ್ಕಿತು.

ಮಳೆಯ ಹಗ್ಗಜಗ್ಗಾಟ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಂದು ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದೆ. ಹೊಸ ಚರಿತ್ರೆ ಬರೆದಿದೆ. 16ನೇ ಆವೃತ್ತಿಯ ಐಪಿಎಲ್ ಫೈನಲ್ ಕದನದಲ್ಲಿ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿ, 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಐಪಿಎಲ್ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಯಾಗಿದ್ದ ಚೆನ್ನೈ, ಈ ಬಾರಿ ಪ್ರಶಸ್ತಿ ಗೆದ್ದು ಹೊಸ ಮನ್ವಂತರ ಸೃಷ್ಟಿಸಿದೆ. ಸಿಎಸ್ಕೆ 2021ರಲ್ಲಿ ಕೊನೆಯದಾಗಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತು.
2022ರಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಗುಜರಾತ್ ಟೈಟಾನ್ಸ್ ಈ ಬಾರಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಹಾರ್ದಿಕ್ ಪಡೆ, ಫೈನಲ್ನಲ್ಲಿ ಮಳೆಯ ಅಡಚಣೆಯಿಂದ ಪಂದ್ಯವನ್ನು ಕೈಚೆಲ್ಲುವಂತಾಯಿತು. ಅಧಿಕ ಗೆಲುವು ಟೇಬಲ್ ಟಾಪ್ ಆಗಿದ್ದ ಗುಜರಾತ್ ಸತತ 2ನೇ ಪ್ರಶಸ್ತಿ ಕನಸು ಭಗ್ನವಾಯಿತು. ರನ್ನರ್ಅಪ್ ಆಗಿದೆ. ಚೆನ್ನೈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ.
ಸಿಎಸ್ಕೆ ಪ್ರಶಸ್ತಿ ಗೆದ್ದ ವರ್ಷ
2010, 2011, 2018, 2021, 2023
ಐಪಿಎಲ್ನಲ್ಲಿ ಪ್ರಶಸ್ತಿ ಗೆದ್ದ ತಂಡಗಳು
- ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ ಚಾಂಪಿಯನ್
- ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್
- ಕೋಲ್ಕತ್ತಾ ನೈಟ್ ರೈಡರ್ಸ್ 2 ಬಾರಿ ಚಾಂಪಿಯನ್
- ಗುಜರಾತ್ ಟೈಟಾನ್ಸ್ 1 ಬಾರಿ ಚಾಂಪಿಯನ್
- ರಾಜಸ್ಥಾನ್ ರಾಯಲ್ಸ್ 1 ಬಾರಿ ಚಾಂಪಿಯನ್
- ಡೆಕ್ಕನ್ ಚಾರ್ಜಸ್ 1 ಬಾರಿ ಚಾಂಪಿಯನ್
- ಸನ್ರೈಸರ್ಸ್ ಹೈದರಾಬಾದ್ 1 ಬಾರಿ ಚಾಂಪಿಯನ್
ಮಳೆಯಿಂದ ಓವರ್, ರನ್ ಕಡಿತ
ಮೀಸಲು ದಿನದಾಟದಲ್ಲೂ ಫೈನಲ್ ಪಂದ್ಯಕ್ಕೆ ಮಳೆ ಕಾಟ ಕೊಟ್ಟಿತು. ಟಾಸ್ ಪ್ರಕ್ರಿಯೆ, ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ಹಾಗೂ ಮೊದಲ ಇನ್ನಿಂಗ್ಸ್ ಬಳಿಕ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಇದರ ನಂತರ ಮಳೆರಾಯನ ದರ್ಶನವಾಯಿತು. ಪರಿಣಾಮ 9.30ಕ್ಕೆ ಆರಂಭವಾಗಿದ್ದ 2ನೇ ಇನ್ನಿಂಗ್ಸ್ 12.10ಕ್ಕೆ ಶುರುವಾಯಿತು. ಹಾಗಾಗಿ ಪಂದ್ಯವನ್ನು 15 ಓವರ್ಗಳಿಗೆ ಕಡಿತಗೊಳಿಸಿ ಚೆನ್ನೈಗೆ 171 ರನ್ಗಳ ಗುರಿ ನೀಡಲಾಯಿತು.
ಭರ್ಜರಿ ಆರಂಭ ಪಡೆದ ಸಿಎಸ್ಕೆ
12.10ರಲ್ಲಿ ಈ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್, ಭರ್ಜರಿ ಆರಂಭ ಪಡೆಯಿತು. 4 ಓವರ್ಗಳ ಪವರ್ ಪ್ಲೇನಲ್ಲಿ ತಂಡ 50 ರನ್ಗಳ ಗಡಿ ದಾಟಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಮತ್ತು ಡೆವೋನ್ ಕಾನ್ವೆ ಆರಂಭದಿಂದಲೇ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. ಇದರೊಂದಿಗೆ ನೆರೆದಿದ್ದ ಸಿಎಸ್ಕೆ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಪರಿಣಾಮ ಮೊದಲ ವಿಕೆಟ್ಗೆ 74 ರನ್ಗಳು ಹರಿದು ಬಂದವು.
ನೂರ್ ಅಹ್ಮದ್ ದಾಳಿ
ಅಬ್ಬರದ ಬ್ಯಾಟಿಂಗ್ ಮೂಲಕ ಮುನ್ನುಗ್ಗುತ್ತಿದ್ದ ಚೆನ್ನೈ ಆರಂಭಿಕರಿಗೆ ಸ್ಪಿನ್ನರ್ ನೂರ್ ಅಹ್ಮದ್ ಗೇಟ್ಪಾಸ್ ನೀಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಗುಜರಾತ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಋತುರಾಜ್ ಗಾಯಕ್ವಾಡ್ 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಮತ್ತೊಂದೆಡೆ ಡೆವೊನ್ ಕಾನ್ವೆ 25 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 47 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು.
ರಹಾನೆ ಆರ್ಭಟ
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ತಂಡವನ್ನು ಸಂಕಷ್ಟಕ್ಕೆ ಸಿಲುದಂತೆ ನೋಡಿಕೊಂಡರು ಅಜಿಂಕ್ಯ ರಹಾನೆ. ವೇಗವಾಗಿ ಬ್ಯಾಟ್ ಬೀಸಿದರು. ಕ್ರೀಸ್ನಲ್ಲಿ ಅಲ್ಪ ಅವಧಿಯಲ್ಲೇ ರನ್ ತೇರು ಎಳೆದರು. 12 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿಗಳ ನೆರವಿನಿಂದ 27 ರನ್ ಗಳಿಸಿ ಔಟಾದರು. ಆಗ ತಂಡದ ಗೆಲುವಿಗೆ ಕೊನೆಯ 25 ಎಸೆತಗಳಲ್ಲಿ 54 ರನ್ ಗಳ ಅಗತ್ಯ ಇತ್ತು.
ಶಿವಂ ದುಬೆ-ರಾಯುಡು ಅಬ್ಬರದ ನಡುವೆ ಆಘಾತ
ರಹಾನೆ ಔಟಾದ ಬೆನ್ನಲ್ಲೇ ಶಿವಂ ದುಬೆ ಮತ್ತು ಅಂಬಟಿ ರಾಯುಡು ರಾಕ್ಷಸ ರೂಪ ತಾಳಿದರು. ಮತ್ತೊಂದೆಡೆ ಶಿವಂ ದುಬೆ ಸಿಕ್ಸರ್ಗಳ ಸುರಿಮಳೆಗೈದರು. ತಮ್ಮ ವಿದಾಯದ ಪಂದ್ಯದಲ್ಲಿ ಸಿಕ್ಸರ್, ಬೌಂಡರಿ, ಸಿಕ್ಸರ್ ಸಿಡಿಸಿ ಔಟಾದರು. 8 ಎಸೆತಗಳಲ್ಲಿ 19 ರನ್ ಗಳಿಸಿದರು. ರಾಯುಡು ಔಟಾದಾಗ ಚೆನ್ನೈ ಗೆಲುವಿಗೆ 14 ಎಸೆತಗಳಲ್ಲಿ 22 ರನ್ ಅಗತ್ಯ ಇತ್ತು. ಈ ವೇಳೆ ಬ್ಯಾಟಿಂಗ್ಗೆ ಬಂದ ಎಂಎಸ್ ಧೋನಿ ನಿರಾಸೆ ಮೂಡಿಸಿದರು. ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗಿ ಹೊರ ನಡೆದರು. ಮೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದರು.
ಕೊನೆಯ ಓಬರ್ನ ಕೊನೆಯ ಎಸೆತದಲ್ಲಿ ಗೆಲುವು
ಇದರೊಂದಿಗೆ ಕೊನೆಯ 2 ಓವರ್ಗಳಲ್ಲಿ ಸಿಎಸ್ಕೆಗ 21 ರನ್ ಬೇಕಿತ್ತು. ಆದರೆ 14ನೇ ಓವರ್ನಲ್ಲಿ ಶಮಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಕೇವಲ 8 ರನ್ ನೀಡಿದರು. ಇನ್ನು ಕೊನೆಯ ಓವರ್ನಲ್ಲಿ ಜಯಿಸಲು 13 ರನ್ಗಳ ಅಗತ್ಯ ಇತ್ತು. ಅಂತಿಮ ಓವರ್ ಅನ್ನು ಬೌಲಿಂಗ್ ಮಾಡಿದ ಮೋಹಿತ್ ಶರ್ಮಾ, ಕ್ರೀಸ್ನಲ್ಲಿದ್ದ ಶಿವಂ ದುಬೆಗೆ ಮೊದಲ ಎಸೆತವನ್ನೇ ಡಾಟ್ ಮಾಡಿದರು. 2ನೇ ಎಸೆತದಲ್ಲಿ 1 ರನ್ ನೀಡಿದರು. 3ನೇ ಎಸೆತದಲ್ಲೂ 1 ರನ್ ನೀಡಿದರು. 4ನೇ ಎಸೆತದಲ್ಲೂ 1 ನೀಡುವಲ್ಲಿ ಯಶಸ್ವಿಯಾದರು. 5ನೇ ಜಡೇಜಾ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಗೆಲುವಿಗೆ ಕೊನೆಯ ಎಸೆತಕ್ಕೆ 4 ರನ್ ಬೇಕಿತ್ತು. ಆದರೆ ಕೊನೆಯ ಎಸೆತದಲ್ಲಿ ಜಡೇಜಾ ಬೌಂಡರಿ ಸಿಡಿಸುವ ಮೂಲಕ ಚೆನ್ನೈ ತಂಡಕ್ಕೆ ರೋಚಕ ಗೆಲುವಿನ ಜೊತೆಗೆ ಮತ್ತೊಂದು ಟ್ರೋಫಿ ತಂದುಕೊಟ್ಟರು.
ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಪ್ರದರ್ಶನ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಕಲೆ ಹಾಕಿತು. ಭರ್ಜರಿ ಆರಂಭ ಪಡೆದಿದ್ದ ಗುಜರಾತ್, ಮೊದಲ ವಿಕೆಟ್ಗೆ 67 ರನ್ ಕಲೆ ಹಾಕಿತು. ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹ ಭರ್ಜರಿ ಪ್ರದರ್ಶನ ನೀಡಿದರು. ಗಿಲ್ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಮಹತ್ವದ ಪಂದ್ಯದಲ್ಲಿ ಸಾಹ ಅರ್ಧಶತಕ ಸಿಡಿಸಿ ಗಮನ ಸೆಳೆದರು.
ಶತಕ ವಂಚಿತ ಸಾಯಿ ಸುದರ್ಶನ್
ಗಿಲ್, ಸಾಹ ಆರ್ಭಟದ ಬಳಿಕ ಸಾಯಿ ಸುದರ್ಶನ್ ಚೆನ್ನೈ ಬೌಲರ್ಗಳಿಗೆ ಕಾಟ ಕೊಟ್ಟರು. ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿದರು. ನೋಡ ನೋಡುತ್ತಿದ್ದಂತೆ ಅರ್ಧಶತಕ ಪೂರೈಸಿದ ಸಾಯಿ ಸುದರ್ಶನ್ ಶತಕದತ್ತ ಹೆಜ್ಜೆ ಹಾಕಿದರು. ಆದರೆ, 96 ರನ್ಗಳಿಸಿದ ವೇಳೆ ಎಲ್ಬಿಡಬ್ಲ್ಯೂ ಆದರು. ಆದರೆ ಗುಜರಾತ್ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. 47 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ 96 ರನ್ ಗಳಿಸಿದರು.
214 ರನ್ ಕಲೆ ಹಾಕಿದ ಗುಜರಾತ್
ಮತ್ತೊಂದೆಡೆ ಸಾಯಿ ಸುದರ್ಶನ್ಗೆ ನಾಯಕ ಹಾರ್ದಿಕ್ ಪಾಂಡ್ಯ ಅದ್ಭುತ ಸಾಥ್ ನೀಡಿದರು. 12 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಸಿಎಸ್ಕೆ ಪರ ಮತೀಷ ಪತಿರಾಣ 2 ವಿಕೆಟ್, ರವೀಂದ್ರ ಜಡೇಜಾ, ದೀಪಕ್ ಚಹರ್ ತಲಾ 1 ವಿಕೆಟ್ ಪಡೆದರು.

ವಿಭಾಗ