CSK vs GT Final: ಫೈನಲ್ನಲ್ಲಿ ಸಾಯಿ ಸುದರ್ಶನ್ ಆರ್ಭಟಕ್ಕೆ ಬೆದರಿದ ಚೆನ್ನೈ; ಬೃಹತ್ ಮೊತ್ತ ಕಲೆ ಹಾಕಿದ ಗುಜರಾತ್ ಟೈಟಾನ್ಸ್
16ನೇ ಆವೃತ್ತಿಯ ಐಪಿಎಲ್ನ 74ನೇ ಹಾಗೂ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಕಲೆ ಹಾಕಿದೆ. ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಸಾಯಿ ಸುದರ್ಶನ್ ಅವರ ಅದ್ಭುತ, ಅಮೋಘ ಆಟದ ಮೂಲಕ ಚೆನ್ನೈ ಬೌಲರ್ಗಳನ್ನು ಕಾಡಿದರು.
ಕಳೆದೆರಡು ತಿಂಗಳಿನಿಂದ ಸಖತ್ ಮನರಂಜನೆ ಕೊಟ್ಟಿದ್ದ ರಂಗುರಂಗಿನ 16ನೇ ಆವೃತ್ತಿಯ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಹಾರ್ದಿಕ್ ನೇತೃತ್ವದ ತಂಡವು ಬೃಹತ್ ಮೊತ್ತವನ್ನು ಕಲೆ ಹಾಕಿದೆ. ಚೆನ್ನೈ ಸೂಪರ್ ಕಿಂಗ್ಸ್ ಐದನೇ ಟ್ರೋಫಿ ಗೆಲ್ಲಬೇಕೆಂದರೆ 215 ರನ್ಗಳ ಟಾರ್ಗೆಟ್ ಬೆನ್ನತ್ತಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳ ಮಾರಕ ಬೌಲಿಂಗ್ ದಾಳಿಯನ್ನು ಧ್ವಂಸ ಮಾಡಿದ ಗುಜರಾತ್ ಬ್ಯಾಟರ್ಗಳು, ಧೋನಿ ಲೆಕ್ಕಾಚಾರ ತಲೆಕೆಳಗು ಮಾಡಿದ್ದಾರೆ. ಅದರಲ್ಲೂ ಶುಭ್ಮನ್ ಗಿಲ್ ಭರ್ಜರಿ ಆರಂಭ, ವೃದ್ದಿಮಾನ್ ಸಾಹ, ಸಾಯಿ ಸುದರ್ಶನ್ ತಲಾ ಅರ್ಧಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣಕರ್ತರಾದರು. ಅಂತಿಮವಾಗಿ ಗುಜರಾತ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ಗಳಿಸಿತು.
ಭರ್ಜರಿ ಆರಂಭ ಪಡೆದ ಗುಜರಾತ್
ಪ್ರಶಸ್ತಿ ಸುತ್ತಿನ ಹೋರಾಟದ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್, ಮೊದಲು ಬ್ಯಾಟಿಂಗ್ ನಡೆಸಿತು. ನಿರೀಕ್ಷೆಯಂತೆ ಭರ್ಜರಿ ಆರಂಭವೂ ಪಡೆಯಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ ಶುಭ್ಮನ್ ಗಿಲ್, ಫೈನಲ್ನಲ್ಲೂ ನೆರವಾಗುವ ಭರವಸೆ ಮೂಡಿಸಿದರು. ಆದರೆ ಆರಂಭದ 2ನೇ ಓವರ್ನಲ್ಲೇ ಗಿಲ್ ಜೀವದಾನ ಪಡೆದರು. ಇದರ ಲಾಭ ಪಡೆದ ಶುಭ್ಮನ್ ಬೌಲರ್ಗಳಿಗೆ ಮನಬಂದಂತೆ ದಂಡಿಸಿದರು. ವೃದ್ಧಿಮಾನ್ ಸಾಹ ಜೊತೆಗೂಡಿ ಮೊದಲ ವಿಕೆಟ್ 67 ರನ್ ಕಲೆ ಹಾಕಿದರು. ಆದರೆ 39 ರನ್ ಗಳಿಸಿದ್ದಾಗ ಎಂಎಸ್ ಧೋನಿ ಅವರ ಚಾಣಾಕ್ಷ ವಿಕೆಟ್ ಕೀಪಿಂಗ್ನಿಂದ ಸ್ಟಂಪ್ಔಟ್ ಆದರು.
ಅರ್ಧಶತಕ ಸಿಡಿಸಿ ಮಿಂಚಿದ ಸಾಹ
ಪವರ್ ಪ್ಲೇನಲ್ಲಿ ಆಗಾಗ ಅಬ್ಬರಿಸುತ್ತಿದ್ದ ಅನುಭವಿ ಆಟಗಾರ ವೃದ್ಧಿಮಾನ್ ಸಾಹ, ಮಹತ್ವದ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಗಿಲ್ ಔಟಾದ ಬಳಿಕ ವೇಗವಾಗಿ ಬ್ಯಾಟ್ ಬೀಸಿದ ಸಾಹ ಚೆನ್ನೈ ಬೌಲರ್ಗಳಿಗೆ ಬಲವಾಡಿ ಕಾಡಿದರು. ಇದರೊಂದಿಗೆ ಭರ್ಜರಿ ಅರ್ಧಶತಕ ಸಿಡಿಸಿದರು. ಇದರ ಬೆನ್ನಲ್ಲೇ 39 ಎಸೆತಗಳಿಗೆ 54 ರನ್ ಗಳಿಸಿ ಔಟಾದರು. ಅಲ್ಲದೆ, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಜೊತೆ ಸೇರಿ ಮತ್ತೊಂದು ಅರ್ಧಶತಕಕ್ಕೆ ಸಾಥ್ ನೀಡಿದರು. 42 ಎಸೆತಗಳಲ್ಲಿ 64 ರನ್ ಪೇರಿಸಿದರು.
ಸಾಯಿ ಸುದರ್ಶನ್ ಪ್ರದರ್ಶನ ಸೂಪರ್
ಮತ್ತೊಂದೆಡೆ ಸಾಯಿ ಸುದರ್ಶನ್ ಅದ್ಭುತ ಪ್ರದರ್ಶನ ತೋರಿದರು. ಜವಾಬ್ದಾರಿಯುತ ಆಟದ ಮೂಲಕ ಗಮನ ಸೆಳೆದ ಯುವ ಆಟಗಾರ, ಓವರ್ಗಳು ಸಾಗುತ್ತಿದ್ದಂತೆ ಅಬ್ಬರಿಸಲು ಯತ್ನಿಸಿದರು. ಅದರಲ್ಲೂ ಸಾಹ ವಿಕೆಟ್ ಒಪ್ಪಿಸಿದ ಬಳಿಕ ಸಿಕ್ಸರ್ಗಳ ಸುರಿಮಳೆಗೈದರು. ಇದೇ ವೇಳೆ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆ ಮೂಲಕ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಮುನ್ಸೂಚನೆ ನೀಡಿದರು. ಜೊತೆಗೆ ಚೆನ್ನೈ ಕಳಪೆ ಫೀಲ್ಡಿಂಗ್ನಿಂದಲೂ ರನ್ ಸೋರಿಕೆ ಮಾಡಿತು.
ಶತಕದ ಅಂಚಿನಲ್ಲಿ ಎಡವಿದ ಯುವ ಕ್ರಿಕೆಟಿಗ
ಡೆತ್ ಓವರ್ಗಳಿಗೂ ಮುನ್ನವೇ ಕ್ರೀಸ್ನಲ್ಲಿ ಸೆಟಲ್ ಆಗಿ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್, ಡೆತ್ ಓವರ್ಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾದರು. ಬೆಂಕಿ-ಬಿರುಗಾಳಿ ಆಟಕ್ಕೆ ಮುಂದಾದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಚೆನ್ನೈ ಬೌಲರ್ಗಳ ಮಾರಕ ಬೌಲಿಂಗ್ ದಾಳಿ ಪುಡಿಗಟ್ಟಿದರು. 19ನೇ ಓವರ್ನಲ್ಲಿ 18 ರನ್ ಕಲೆ ಹಾಕಿದರು. ಇದರೊಂದಿಗೆ ತಂಡದ ಮೊತ್ತ 200 ದಾಟಿತು.
20ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಸಾಯಿ ಸುದರ್ಶನ್, ಅನ್ಕ್ಯಾಪ್ಡ್ ಪ್ಲೇಯರ್ ಆಗಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. ಇದರೊಂದಿಗೆ ಶತಕದ ಅಂಚಿಗೆ ತಲುಪಿದರು. ಆದರೆ 96 ರನ್ ಗಳಿಸಿದ್ದಾಗ ಮತೀಷ ಪತಿರಾಣ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. 47 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ 96 ರನ್ ಸಿಡಿಸಿದರು.
ಬೌಲರ್ಗಳು ಮೇಲುಗೈ ಸಾಧಿಸಲೇ ಇಲ್ಲ
ತನ್ನ ತವರಿನ ಪಿಚ್ನಲ್ಲಿ ಗುಜರಾತ್ ಬ್ಯಾಟಿಂಗ್ನಲ್ಲಿ ಮತ್ತೆ ಖದರ್ ತೋರಿಸಿತು. ಆದರೆ ಬೌಲರ್ಗಳು ಆರಂಭದಿಂದ ಕೊನೆಯವರೆಗೂ ಗುಜರಾತ್ ಮೇಲೆ ಹಿಡಿತ ಸಾಧಿಸಲು ಪರದಾಡಿದರು. ಪ್ರತಿ ವಿಕೆಟ್ಗೂ ಅರ್ಧಶತಕದ ಜೊತೆಯಾಟ ಹರಿದು ಬಂತು. ಪಡೆದಿದ್ದು 2 ವಿಕೆಟ್. ಆದರೆ ಯಾವ ಹಂತದಲ್ಲೂ ಬ್ಯಾಟರ್ಗಳ ಮೇಲೆ ಒತ್ತಡ ಹಾಕಲು ಸಾಧ್ಯವಾಗಲಿಲ್ಲ. ಚೆನ್ನೈ ಪರ ಮತೀಷ ಪತಿರಾಣ 2 ವಿಕೆಟ್, ದೀಪಕ್ ಚಹರ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.