MS Dhoni Fan: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಫೋಟೋ ಮತ್ತು ಜೆರ್ಸಿ ಸಂಖ್ಯೆ ಮುದ್ರಿಸಿದ ಅಭಿಮಾನಿ
MS Dhoni Photo and jersey: ಛತ್ತೀಸ್ಗಢದ ವ್ಯಕ್ತಿಯೊಬ್ಬರು, ವಿಶಿಷ್ಠ ರೀತಿಯಲ್ಲಿ ಧೋನಿ ಮೇಲಿನ ತಮ್ಮ ಅಭಿಮಾನವನ್ನು ತೋರಿಸಿಕೊಂಡಿದ್ದಾರೆ. ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಿಎಸ್ಕೆ ನಾಯಕನ ಫೋಟೋ ಮತ್ತು ಅವರ ಜೆರ್ಸಿ ಸಂಖ್ಯೆಯನ್ನು ಮುದ್ರಿಸಿ ಸುದ್ದಿಯಾಗಿದ್ದಾರೆ.
ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ (MS Dhoni) ಅವರ ಅಭಿಮಾನಿಗಳ ಸಂಖ್ಯೆ ಅನಂತ. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳು ಆರಾಧಿಸುವ ಕ್ರಿಕೆಟಿಗರಲ್ಲಿ ಮಾಹಿ ಅಗ್ರಗಣ್ಯರು. ಇತ್ತೀಚೆಗೆ ನಡೆದ ಐಪಿಎಲ್ 16ನೇ ಆವೃತ್ತಿಯಲ್ಲೂ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯ ನಡೆದು ವಾರ ಉರುಳಿದ್ದರೂ, ಧೋನಿ ಕ್ರೇಝ್ ಮಾತ್ರ ಕಡಿಮೆಯಾಗಿಲ್ಲ. ಅವರ ಅಭಿಮಾನಿಗಳ ಅಭಿಮಾನ ನಿರಂತರವಾಗಿ ಹೆಚ್ಚುತ್ತಿದೆ.
ಈ ಬಾರಿಯ ಐಪಿಎಲ್ ಪಂದ್ಯಗಳ ವೇಳೆ, ಸಿಎಸ್ಕೆ ಮತ್ತು ಧೋನಿ ಅಭಿಮಾನಿಗಳೇ ಬಹುಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದರು. ಹಳದಿ ಆರ್ಮಿಯ ಪಂದ್ಯಗಳು ನಡೆದಲ್ಲೆಲ್ಲಾ ಬೃಹತ್ ಸಂಖ್ಯೆಯಲ್ಲಿ ಮಾಹಿ ಅಭಿಮಾನಿಗಳು ಮೈದಾನಕ್ಕೆ ಹಾಜರಾಗಿದ್ದರು. ಈಗ ಐಪಿಎಲ್ ಮುಗಿದಿದೆ. ಆದರೂ ಧೋನಿ ಅಭಿಮಾನಿಗಳ ಅಭಿಮಾನ ಮಾತ್ರ ತುಂಬಿದ ಕೊಡದಂತಿದೆ. ಇದಕ್ಕೆ ಈ ವ್ಯಕ್ತಿ ಮತ್ತೊಂದು ಸಾಕ್ಷಿ.
ಛತ್ತೀಸ್ಗಢದ ವ್ಯಕ್ತಿಯೊಬ್ಬರು, ವಿಶಿಷ್ಠ ರೀತಿಯಲ್ಲಿ ಧೋನಿ ಬಗೆಗಿನ ತಮ್ಮ ಅಭಿಮಾನವನ್ನು ತೋರಿಸಿಕೊಂಡಿದ್ದಾರೆ. ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಿಎಸ್ಕೆ ನಾಯಕನ ಫೋಟೋ ಮತ್ತು ಅವರ ಜೆರ್ಸಿ ಸಂಖ್ಯೆಯನ್ನು ಮುದ್ರಿಸುವ ಮೂಲಕ ಮಾಹಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಜೆರ್ಸಿ ಸಂಖ್ಯೆ 7ನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವುದು ಮಾತ್ರವಲ್ಲದೆ, ಪತ್ರಿಕೆಯ ಎರಡೂ ಬದಿಗಳಲ್ಲಿ ಮಾಹಿಯ ಹೆಸರನ್ನು 'ತಲಾ' ಎಂದು ಬರೆಸಿದ್ದಾರೆ. ಈ ಪತ್ರಿಕೆ ಇಂಟರ್ನೆಟ್ನಲ್ಲಿ ಸದ್ದು ಮಾಡಿದೆ.
ಈ ಆಮಂತ್ರಣ ಪತ್ರಿಕೆಯನ್ನು ಟ್ವಿಟರ್ ಬಳಕೆದಾರನೊಬ್ಬ ಶೇರ್ ಮಾಡಿಕೊಂಡಿದ್ದಾರೆ. “ಸಿಎಸ್ಕೆ ಮೇಲಿನ ಅಭಿಮಾನ ಇನ್ನೂ ಮುಗಿದಿಲ್ಲ. ಛತ್ತೀಸ್ಗಢದ ಧೋನಿ ಅಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಅವರ ಫೋಟೋ ಹಾಗೂ ಅವರ ಜೆರ್ಸಿ ಸಂಖ್ಯೆ 7ನ್ನು ಮುದ್ರಿಸಿದ್ದಾರೆ. ಆ ಮೂಲಕ ಚೆನ್ನೈ ಸೂಪರ್ಕಿಂಗ್ಸ್ ನಾಯಕನನ್ನು ಮದುವೆಗೆ ಆಹ್ವಾನಿಸಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ.
ಐಪಿಎಲ್ ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಎಸ್ ಧೋನಿ ಟ್ರೋಫಿ ಗೆಲ್ಲುವತ್ತ ಮುನ್ನಡೆಸಿದರು. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದ ಸಿಎಸ್ಕೆ, ಐದನೇ ಐಪಿಎಲ್ ಟ್ರೋಫಿಯನ್ನು ಗೆದ್ದಿತು. ಪಂದ್ಯ ಮುಗಿದ ತಕ್ಷಣವೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಮಾಹಿ ಒಳಗಾದರು. ಐಪಿಎಲ್ನ ಪ್ರಸಕ್ತ ಆವೃತ್ತಿಯ ಉದ್ದಕ್ಕೂ ಧೋನಿ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರು ಎಂಬುದು ಆ ಮೂಲಕ ಬಹಿರಂಗವಾಯ್ತು. ಆದರೂ, ಪ್ರತಿ ಪಂದ್ಯದಲ್ಲೂ ಆಡಿದ ಧೋನಿಯ ಬದ್ಧತೆಯನ್ನು ಅಭಿಮಾನಿಗಳು ಮೆಚ್ಚಿಕೊಂಡರು.
ಐಪಿಎಲ್ ಫೈನಲ್ ಪಂದ್ಯದ ಬೆನ್ನಲ್ಲೇ, ಧೋನಿ ಅಹಮದಾಬಾದ್ನಿಂದ ನೇರವಾಗಿ ಮುಂಬೈಗೆ ತೆರಳಿದರು. ಅಲ್ಲಿ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ.ದಿನ್ಶಾ ಪಾರ್ದಿವಾಲಾ ಅವರೊಂದಿಗೆ ಸಮಾಲೋಚನೆಗೆ ಒಳಗಾದರು.
ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ಎಂಎಸ್ ಧೋನಿ ಅವರು ವಿದಾಯದ ಮಾತನ್ನು ತಳ್ಳಿ ಹಾಕಿದ್ದರು. ಮತ್ತೊಂದು ಆವೃತ್ತಿಯೂ ಆಡುವ ಬಯಕೆಯನ್ನು ಹೊರಹಾಕಿರುವ ಧೋನಿ, ಫಿಟ್ನೆಸ್ ವಿಚಾರ ಗಮನ ಇಟ್ಟುಕೊಂಡು ನಿರ್ಧರಿಸುತ್ತೇನೆ ಎಂದಿದ್ದರು. ನಿವೃತ್ತಿ ಘೋಷಿಸಲು ಇದೇ ಸರಿಯಾದ ಸಮಯ. ಆದರೆ ಅಭಿಮಾನಿಗಳಿಗಾಗಿ ಆಡಬೇಕು ಎನಿಸುತ್ತದೆ. ಮುಂದಿನ ಐಪಿಎಲ್ಗೆ ಇನ್ನೂಗೆ 8-9 ತಿಂಗಳು ಉಳಿದಿದೆ. ಅದಕ್ಕೂ ಮುಂಚೆ ಯೋಚಿಸಲು ಸಮಯವಿದೆ ಎಂದು ಮಾಹಿ ಹೇಳಿದ್ದಾರೆ.