ಕನ್ನಡ ಸುದ್ದಿ  /  Sports  /  Cricket News Go To India Win The Odi World Cup On Their Soil Would Be A Tight Slap On The Bcci Says Shahid Afridi Prs

Shahid Afridi: ಭಾರತಕ್ಕೆ ಹೋಗಿ ವಿಶ್ವಕಪ್​ ಗೆಲ್ಲಿ; ಈ ಗೆಲುವು ಬಿಸಿಸಿಐ ಮುಖಕ್ಕೆ ಬಡಿದಂತೆ ಇರಲಿ; ಪಾಕ್​ಗೆ ಸಲಹೆ ನೀಡಿದ ಶಾಹಿದ್​ ಅಫ್ರಿದಿ

ಶಾಹಿದ್ ಅಫ್ರಿದಿ ಅವರು (Shahid Afridi) ಇತ್ತೀಚೆಗೆ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ (Najam Sethi) ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅಫ್ರಿದಿ, ಪಾಕಿಸ್ತಾನ, ಭಾರತಕ್ಕೆ ಹೋಗದಿರುವುದು ಮೂರ್ಖ ಕಲ್ಪನೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಸಲಹೆ ನೀಡಿದ ಶಾಹೀದ್​ ಅಫ್ರಿದಿ
ಪಾಕಿಸ್ತಾನ ತಂಡಕ್ಕೆ ಸಲಹೆ ನೀಡಿದ ಶಾಹೀದ್​ ಅಫ್ರಿದಿ

ಏಷ್ಯಾಕಪ್​ ಟೂರ್ನಿಯ (Asia Cup 2023) ಆತಿಥ್ಯ ಪಾಕಿಸ್ತಾನಕ್ಕೆ (Pakistan) ಸಿಕ್ಕಿದೆ. ಮತ್ತೊಂದೆಡೆ ಏಕದಿನ ವಿಶ್ವಕಪ್ ಟೂರ್ನಿಯ (ODI World Cup 2023) ಆತಿಥ್ಯ​ ಭಾರತಕ್ಕೆ (India) ದೊರಕಿದೆ. ಆದರೆ ಏಷ್ಯಾಕಪ್​​ಗೆ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತ (Ind vs Pak) ಹೇಳಿದೆ. ಇದರ ಬೆನ್ನಲ್ಲೇ ಪಾಕ್​ ಕೂಡ, ಹಾಗಾದರೆ ನಾವು ಸಹ ಏಕದಿನ ವಿಶ್ವಕಪ್​ಗೆ ಬರಲ್ಲ ಎಂದು ತಿರುಗೇಟು ನೀಡಿದೆ. ಈ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನ ತಂಡ, ಭಾರತಕ್ಕೆ ಬರಲು ಐಸಿಸಿಗೆ ಒಪ್ಪಿಗೆ ಸೂಚಿಸಿದೆ.

ಏಷ್ಯಾಕಪ್​ ಆತಿಥ್ಯಕ್ಕೆ ಸಂಬಂಧಿಸಿ ಹಗ್ಗಜಗ್ಗಾಟ ಮುಂದುವರೆದಿದೆ. ಪಾಕ್​ ಬದಲಿಗೆ ಬೇರೆ ಜಾಗದಲ್ಲಿ ಆಯೋಜಿಸಲು ಭಾರತ ಪಟ್ಟು ಹಿಡಿದಿದೆ. ಭಾರತಕ್ಕೆ ಶ್ರೀಲಂಕಾ, ಬಾಂಗ್ಲಾದೇಶ (Sri Lanka and Bangladesh) ತಂಡಗಳೂ ಬೆಂಬಲ ನೀಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಪಾಕ್​, ಬೇರೆಡೆ ಸ್ಥಳಾಂತರಿಸಿದರೆ, ಟೂರ್ನಿ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ. ಟೀಮ್​ ಇಂಡಿಯಾ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವುದಾಗಿ ಹೇಳಿದೆ.

ಇಂಡೋ - ಪಾಕ್​ ವಿವಾದದ ನಡುವೆ ಮಾಜಿ ಆಲ್​ರೌಂಡರ್​ ಶಾಹೀದ್​ ಅಫ್ರಿದಿ (Former All Rounder Shahid Afridi) ಅಚ್ಚರಿ ಹೇಳಿಕೆ ನೀಡಿದ್ದಾರೆ. ಶಾಹಿದ್ ಅಫ್ರಿದಿ ಅವರು, ಇತ್ತೀಚೆಗೆ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ (PCB Najam) ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅಫ್ರಿದಿ, ಪಾಕಿಸ್ತಾನ ಭಾರತಕ್ಕೆ ಹೋಗದಿರುವುದು ಮೂರ್ಖ ಕಲ್ಪನೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (Pakistan Cricket Board)​​ ಏಕದಿನ ವಿಶ್ವಕಪ್‌ನಲ್ಲಿ ಆಡುವುದಿಲ್ಲ. ಭಾರತಕ್ಕೆ ಹೋಗುವುದಿಲ್ಲ ಎಂದು ಏಕೆ ಹೇಳುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅವರು (ಪಿಸಿಬಿ) ಷರತ್ತುಗಳನ್ನು ಸರಳಗೊಳಿಸಬೇಕು. ಪಾಕಿಸ್ತಾನ ಆಡದಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್​ (International Cricket) ನಿಲ್ಲುವುದಿಲ್ಲ ಎಂಬುದನ್ನು ಗುರುತಿಸಬೇಕು. ಈ ವಿಷಯದಲ್ಲಿ ಗಮನ ಹರಿಸಬೇಕು ಎಂದು ಅಫ್ರಿದಿ, ಪಿಸಿಬಿಗೆ ಸಲಹೆ ನೀಡಿದ್ದಾರೆ.

ಭಾರತಕ್ಕೆ ಹೋಗಿ ಏಕದಿನ ವಿಶ್ವಕಪ್ ಆಡಬೇಕು. ನಿಮ್ಮ ಆಟಗಾರರಿಗೆ ಟ್ರೋಫಿ ಗೆಲ್ಲಲು ಹೇಳಿ. ಇಡೀ ದೇಶವೇ ನಿಮ್ಮೊಂದಿಗೆ ಇರುತ್ತದೆ. ನಾವು ಅಲ್ಲಿಗೆ ಹೋಗಿ, ಟ್ರೋಪಿ ಗೆದ್ದರೆ ಅದು ನಮಗೆ ಅದು ದೊಡ್ಡ ಯಶಸ್ಸು ಅಲ್ಲ, ಇದು ಬಿಸಿಸಿಐ ಮುಖಕ್ಕೆ ಹೊಡೆದಂತಾಗುತ್ತದೆ. ಇದು ನಮಗೆ ಬೇಕಾಗಿರುವುದು ಎಂದು ಮಾಜಿ ಆಲ್​ರೌಂಡರ್​ ಹೇಳಿದ್ದಾರೆ.

ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸಿ ಅಲ್ಲಿ ಟ್ರೋಫಿ ಗೆದ್ದರೆ, ಬಿಸಿಸಿಐ ಮಾತ್ರವಲ್ಲ ಇಡೀ ವಿಶ್ವದಲ್ಲೇ ಎಲ್ಲಿ ಬೇಕಾದರೂ ಆಡುತ್ತೇವೆ. ಗೆಲ್ಲುತ್ತೇವೆ ಎಂದು ಚಾಟಿ ಬೀಸಿದಂತಾಗುತ್ತದೆ. ಪಿಸಿಬಿ ನಜಮ್ ಸೇಥಿ ಅವರು ದಿನಕ್ಕೊಂದು ಮಾತನ್ನು ಹೇಳುತ್ತಿದ್ದಾರೆ. ಇದನ್ನು ಮೊದಲು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸೇಥಿ ಅವರು ಟಿವಿ ಚಾನೆಲ್​ಗಳಿಗೆ ಸಂದರ್ಶನ ನೀಡುವ ಅಗತ್ಯವೇ ಇಲ್ಲ. ವಯಸ್ಸು ಆಗುತ್ತಿರುವ ಕಾರಣದಿಂದ ಏನೇನೋ ಮಾತನಾಡುತ್ತಿದ್ದಾರೆ. ಪಿಸಿಬಿ ಅಧ್ಯಕ್ಷ ಹುದ್ದೆ ಬಹಳ ದೊಡ್ಡದಾಗಿದ್ದು, ಅದರಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.