Tushar Deshpande: ಇವನು ನಿಜವಾದ ರನ್ಮಷಿನ್ ಎಂದು ವ್ಯಂಗ್ಯವಾಡಿದ ನೆಟ್ಟಿಗ; ಧಮ್ ಇದ್ರೆ ಮೈದಾನಕ್ಕೆ ಬಾ ಎಂದ ವೇಗಿ ತುಷಾರ್ ದೇಶಪಾಂಡೆ
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದುಬಾರಿ ಬೌಲರ್ ಎನಿಸಿರುವ ತುಷಾರ್ ದೇಶಪಾಂಡೆ (Fast Bowler Tushar Deshpande) ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಹೀಗೆ ಟ್ರೋಲ್ ಮಾಡಿದ್ದ ನೆಟ್ಟಿಗನೊಬ್ಬನಿಗೆ ತುಷಾರ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಫೈನಲ್ಗೇರಿದೆ. ಐಪಿಎಲ್ನಲ್ಲಿ 10 ಬಾರಿ ಪ್ರಶಸ್ತಿ ಸುತ್ತಿಗೇರಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಮೇ 23 ರಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 15 ರನ್ಗಳಿಂದ ಸಿಎಸ್ಕೆ ಮಣಿಸಿತು. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ಶಿಷ್ಯ ಹಾರ್ದಿಕ್ ಪಾಂಡ್ಯ ವಿರುದ್ಧ ಐಪಿಎಲ್ನಲ್ಲಿ ಗುರು ಎಂಎಸ್ ಧೋನಿ ಮೊದಲ ಗೆಲುವಿನ ನಗೆ ಬೀರಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸ್ಪಿನ್ ಪಿಚ್ನಲ್ಲಿ ರನ್ ಗಳಿಸಲು ಪರದಾಡಿದ ಸಿಎಸ್ಕೆಗೆ ಋತುರಾಜ್ ಗಾಯಕ್ವಾಡ್ ಮತ್ತು ಡೆವೋನ್ ಕಾನ್ವೆ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಾಯಿತು. ಗಾಯಕ್ವಾಡ್ 60 ರನ್, ಕಾನ್ವೆ 40 ರನ್ ಗಳಿಸಿದರು. ಆದರೆ ಉಳಿದ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ದಾರಿ ಹಿಡಿದರು. ಅಂತಿಮವಾಗಿ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಈ ಗುರಿ ಬೆನ್ನತ್ತಿದ ಗುಜರಾತ್ಗೆ ಯಾರೊಬ್ಬರೂ ನೆರವಾಗಲಿಲ್ಲ. ಸಿಎಸ್ಕೆ ಬೌಲರ್ಗಳು ಆರಂಭದಿಂದಲೂ ದಾಳಿ ನಡೆಸಿದರು. ಪಂದ್ಯವನ್ನು ಎಲ್ಲೂ ಕೈ ಜಾರದಂತೆ ನೋಡಿಕೊಂಡರು. ಇದರ ನಡುವೆಯೂ ವೇಗದ ಬೌಲರ್ ತುಷಾರ್ ದೇಶಪಾಂಡೆ ಅತಿ ದುಬಾರಿ ಬೌಲರ್ ಎನಿಸಿದರು. ಶುಭ್ಮನ್ ಗಿಲ್ ಮತ್ತು ರಶೀದ್ ಖಾನ್ ಹೋರಾಟ ನಡೆಸಿದರೂ ಗೆಲುವು ಗುಜರಾತ್ ತಂಡಕ್ಕೆ ಸಿಗಲಿಲ್ಲ. ಅಂತಿಮ ಗುಜರಾತ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು.
ದುಬಾರಿ ಬೌಲಿಂಗ್ ತುಷಾರ್ ದೇಶಪಾಂಡೆ
ಸಿಎಸ್ಕೆ ಬೌಲರ್ಗಳು ಗುಜರಾತ್ ತಂಡಕ್ಕೆ ಕಡಿವಾಣ ಹಾಕಿದರೆ, ಮತ್ತೊಂದೆಡೆ ವೇಗಿ ತುಷಾರ್ ದೇಶಪಾಂಡೆ ರನ್ ಲೀಕ್ ಮಾಡಿದರು. ತಂಡದಲ್ಲಿ ಕೊಂಚ ಆತಂಕವನ್ನೂ ಹೆಚ್ಚಿಸಿದರು. 4 ಓವರ್ಗಳಲ್ಲಿ 43 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಇದರಿಂದ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು ನಿಂದಿಸುತ್ತಿದ್ದಾರೆ. ಹೀಗೆ ಟ್ರೋಲ್ ಮಾಡಿದ ನೆಟ್ಟಿಗನೊಬ್ಬನಿಗೆ ತುಷಾರ್ ದೇಶಪಾಂಡೆ ಸವಾಲು ಹಾಕಿದ್ದಾರೆ. ಧಮ್ ಇದ್ದರೆ ಮೈದಾನಕ್ಕೆ ಬಾ ಎಂದು ತಿರುಗೇಟು ನೀಡಿದ್ದಾರೆ.
ನೆಟ್ಟಿಗನ ಪೋಸ್ಟ್ ಏನು?
ಗುಜರಾಜ್ ಟೈಟಾನ್ಸ್ ವಿರುದ್ಧ ನೀಡಿದ ತುಷಾರ್ ಕಳಪೆ ಪ್ರದರ್ಶನವನ್ನು ರಾಕ್ ಲೇ ಎಂಬ ಹೆಸರಿನ ಟ್ವಿಟರ್ ಅಕೌಂಟ್ನಲ್ಲಿ ಟೀಕಿಸಲಾಗಿದೆ. ಪ್ರತಿ ಪಂದ್ಯದಲ್ಲೂ 40+ ರನ್ ಬಿಟ್ಟು ಕೊಡುತ್ತಾನೆ. ಇವನು ರನ್ ಮೆಷಿನ್ ಎಂದು ಪಂದ್ಯದ ಬೌಲಿಂಗ್ ಕಾರ್ಡ್ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಆ ಮೂಲಕ ವ್ಯಂಗ್ಯವಾಡಿದ್ದಾರೆ.
ತಿರುಗೇಟು ಹೀಗಿತ್ತು?
ವ್ಯಂಗ್ಯದ ಪೋಸ್ಟ್ ಮಾಡಿದ್ದ ನೆಟ್ಟಿಗನಿಗೆ ತುಷಾರ್ ದೇಶಪಾಂಡೆ ಖಡಕ್ ತಿರುಗೇಟು ನೀಡಿದ್ದಾರೆ. ಆಟಗಾರನಾಗಿ ಮೈದಾನಕ್ಕೆ ಬರುವ ಧಮ್ ಬರುವ ಕಮೆಂಟ್ ಮಾಡಿ. ನಿನ್ನ ಕೈಯಲಿ ಬೌಂಡರಿ ಲೈನ್ ಕ್ರಾಸ್ ಮಾಡೋಕು ಆಗಲ್ಲ. ಬೇಕಾದರೆ ಬೆಟ್ ಕಟ್ಟುತ್ತೇನೆ ಎಂದು ಸರಿಯಾಗಿ ಮುಟ್ಟಿನೋಡುಕೊಳ್ಳುವಂತೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಫ್ಯಾನ್ಸ್ ಬೆಂಬಲ ಸೂಚಿಸಿದ್ದಾರೆ. ಇಂತಹವರನ್ನೆಲ್ಲಾ ನೋಡಿಯೂ ನೋಡದಂತೆ ಮುಂದೆ ಸಾಗಿ ಎಂದು ಸಲಹೆ ನೀಡಿದ್ದಾರೆ.