Mohit Sharma: ಆ ರಾತ್ರಿ ನಿದ್ದೆಯೇ ಬರಲಿಲ್ಲ, ನನ್ನಿಂದಲೇ ಪಂದ್ಯ ಸೋತಿದ್ದು; ಸಿಎಸ್ಕೆ ವಿರುದ್ಧದ ಫೈನಲ್ ಬಳಿಕ ಮೋಹಿತ್ ಶರ್ಮಾ ಬೇಸರ
ಫೈನಲ್ನಲ್ಲಿ ಚೆನ್ನೈ ವಿರುದ್ಧ ಪಂದ್ಯದ ಬಳಿಕ ತಾನು ಅನುಭವಿಸಿದ ಮಾನಸಿಕ ವೇದನೆ ಕುರಿತು ಗುಜರಾತ್ ಟೈಟಾನ್ಸ್ ವೇಗದ ಬೌಲರ್ ಮೋಹಿತ್ ಶರ್ಮಾ ಮಾತನಾಡಿದ್ದಾರೆ. ಫೈನಲ್ ಓವರ್ನಲ್ಲಿ ತಾನು ಹಾಕಿಕೊಂಡಿದ್ದ ಗೇಮ್ ಪ್ಲಾನ್ ಬಗ್ಗೆ ಹೇಳಿಕೊಂಡಿದ್ದಾರೆ.
ಕ್ರಿಕೆಟ್ನಲ್ಲಿ ಯಾವಾಗ ಯಾರು ಹೀರೋ ಆಗುತ್ತಾರೆ, ಯಾರು ವಿಲನ್ ಆಗುತ್ತಾರೆ ಎಂಬುದು ನಮಗೆ ತಿಳಿದಿರುವುದಿಲ್ಲ. ಕ್ರಿಕೆಟ್ನಲ್ಲಿ ಸೋಲು ಗೆಲುವು ಸಹಜ. ಇತ್ತೀಚೆಗೆ ಮುಕ್ತಾಯವಾದ 16ನೇ ಆವೃತ್ತಿಯ ಐಪಿಎಲ್ನಲ್ಲಿ ಇಂತಹ ಘಟನೆಗಳು ನಡೆದಿದ್ದೂ ಇದೆ. ರಿಂಕು ಸಿಂಗ್ (Rinku Singh) ಅವರು ಯಶ್ ದಯಾಳ್ (Yash Dayal) ಬೌಲಿಂಗ್ನಲ್ಲಿ 5 ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟು ಹೀರೋ ಆದರೆ, ಬೌಲರ್ ಮಾತ್ರ ವಿಲನ್ ಆದರು.
ಇಂತಹದ್ದೇ ಘಟನೆ ಐಪಿಎಲ್ ಫೈನಲ್ ಪಂದ್ಯದಲ್ಲೂ (IPL Final Match) ನಡೆಯಿತು. ಚೆನ್ನೈ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja), ಅಂತಿಮ 2 ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ, ಫ್ಯಾನ್ಸ್ ಪಾಲಿನ ಹೀರೋ ಆದರು. ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ವೇಗಿ ಮೋಹಿತ್ ಶರ್ಮಾ (Gujarat Titans bowler Mohit Sharma) ಕೊನೆಯ 2 ಬಾಲ್ಗಳಲ್ಲಿ ಬೌಂಡರಿ ನೀಡಿ, ವಿಲನ್ ಆದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ಕೊಟ್ಟಿದ್ದರು. ಆದರೆ ಗೆದ್ದೇ ಬಿಟ್ಟರು ಎನ್ನುವ ಸಂದರ್ಭದಲ್ಲಿ ಮೋಹಿತ್ ಶರ್ಮಾ ಬೌಂಡರಿ-ಸಿಕ್ಸರ್ ನೀಡಿ ಫ್ಯಾನ್ಸ್ ವಿಲನ್ ಆದರು.
ಮೌನ ಮುರಿದ ಮೋಹಿತ್ ಶರ್ಮಾ
ರೋಚಕ ಹಣಾಹಣಿಯಲ್ಲಿ ಕೊನೆಯ 2 ಎಸೆತಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆದರೆ ರವೀಂದ್ರ ಜಡೇಜಾ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿಬಿಟ್ಟರು. ನಿಖರ ಯಾರ್ಕರ್ಗಳನ್ನು ಎಸೆದಿದ್ದ ವೇಗಿ ಮೋಹಿತ್ ಶರ್ಮಾ, ಕೊನೆ ಎಸೆತಗಳಲ್ಲಿ ಆತ್ಮವಿಶ್ವಾಸ ಕಳೆದುಕೊಂಡರು. ಇದರ ಲಾಭ ಪಡೆದ ಜಡ್ಡು, ಒತ್ತಡ ನಿಭಾಯಿಸಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು. ಸದ್ಯ ಈ ಬಗ್ಗೆ ಮೌನ ಮುರಿದಿರುವ ಮೋಹಿತ್ ಶರ್ಮಾ, ಫೈನಲ್ ಪಂದ್ಯದ ನಂತರ ನಿದ್ದೆ ಬರಲಿಲ್ಲ ಎಂದಿದ್ದಾರೆ.
ನನ್ನಿಂದಲೇ ಪಂದ್ಯ ಸೋತಿದ್ದು
ಫೈನಲ್ನಲ್ಲಿ ಚೆನ್ನೈ ವಿರುದ್ಧ ಪಂದ್ಯದ ಬಳಿಕ ತಾನು ಅನುಭವಿಸಿದ ಮಾನಸಿಕ ವೇದನೆ ಕುರಿತು ಮಾತನಾಡಿದ್ದಾರೆ. ಫೈನಲ್ ಓವರ್ನಲ್ಲಿ ತಾನು ಹಾಕಿಕೊಂಡಿದ್ದ ಗೇಮ್ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. ಅಂತಿಮ ಓವರ್ನಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಗೊಂದಲ ಇರಲಿಲ್ಲ. ನೆಟ್ಸ್ನಲ್ಲೂ ಲೆಕ್ಕಾಚಾರ ಹಾಕಿಕೊಂಡು ಅಭ್ಯಾಸ ಮಾಡಿದ್ದೆ. ಈ ಹಿಂದೆಯೂ ಇಂತಹ ಒತ್ತಡಗಳಲ್ಲಿ ಬೌಲಿಂಗ್ ಮಾಡಿದ ಅನುಭವ ನನಗಿತ್ತು. ನಾಯಕ ಹಾರ್ದಿಕ್ ಪಾಂಡ್ಯಗೆ ಓವರ್ನ ಎಲ್ಲಾ ಬಾಲ್ಗಳನ್ನೂ ಯಾರ್ಕರ್ ಹಾಕುತ್ತೇನೆ ಎಂದು ಹೇಳಿದ್ದೆ. ನನ್ನ ಬಲವಾದ ನಂಬಿಕೆಯಿಂದ ಬೌಲಿಂಗ್ ಮಾಡಿದ್ದೆ ಎಂದು ಹೇಳಿದ್ದಾರೆ.
ಆದರೆ ನನ್ನಿಂದ ಸೋಲಾಗಿದ್ದು, ಬೇಸರ ಉಂಟು ಮಾಡಿತು. ಸೋತ ನಂತರ ನನಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಸೋತಿದ್ದನ್ನೇ ಹೆಚ್ಚು ಯೋಚಿಸುತ್ತಿದ್ದೆ. ಕೊನೆಯಲ್ಲಿ ಆ ಎಸೆತ ಎಸೆದಿದ್ದರೆ ನಾವು ಗೆಲ್ಲುತ್ತಿದ್ದೆವಾ? ಹೀಗೆ ಮಾಡಿದ್ದರೆ, ಗೆಲ್ಲುತ್ತಿದ್ದೆವಾ ಎಂಬುದನ್ನೇ ಹೆಚ್ಚು ಯೋಚಿಸುತ್ತಿದ್ದೆ. ಇದು ನಿಜವಾಗಿಯೂ ಒಳ್ಳೆಯ ಭಾವನೆ ಅಲ್ಲ. ಆದರೆ ಎಲ್ಲೋ ಒಂದು ಕಡೆ ನನ್ನಿಂದಲೇ ಸೋತಿದ್ದು, ಎನಿಸುತ್ತಿದೆ. ಸದ್ಯ ಅದರಿಂದ ಹೊರ ಬರಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೋಹಿತ್ ಶರ್ಮಾ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದರು. 14 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದರು. ಇದರೊಂದಿಗೆ 1 ವಿಕೆಟ್ ಅಂತರದಿಂದ ಪರ್ಪಲ್ ಕ್ಯಾಪ್ನಿಂದ ವಂಚಿತರಾದರು. ಫೈನಲ್ ಪಂದ್ಯದಲ್ಲೂ ಪ್ರಮುಖ 3 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.