R Ashwin: ನನಗೆ 48 ಗಂಟೆಗಳ ಮೊದಲೇ ಗೊತ್ತಿತ್ತು; ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲಿ ಆಡಿಸದ ಕುರಿತು ಮೌನ ಮುರಿದ ಆರ್​ ಅಶ್ವಿನ್
ಕನ್ನಡ ಸುದ್ದಿ  /  ಕ್ರೀಡೆ  /  R Ashwin: ನನಗೆ 48 ಗಂಟೆಗಳ ಮೊದಲೇ ಗೊತ್ತಿತ್ತು; ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲಿ ಆಡಿಸದ ಕುರಿತು ಮೌನ ಮುರಿದ ಆರ್​ ಅಶ್ವಿನ್

R Ashwin: ನನಗೆ 48 ಗಂಟೆಗಳ ಮೊದಲೇ ಗೊತ್ತಿತ್ತು; ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲಿ ಆಡಿಸದ ಕುರಿತು ಮೌನ ಮುರಿದ ಆರ್​ ಅಶ್ವಿನ್

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್​ ಪಂದ್ಯದಲ್ಲಿ (WTC final 2023) ಅವಕಾಶ ಸಿಗದಿರುವ ಬಗ್ಗೆ ಟೀಮ್​ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್​ ಅಶ್ವಿನ್ (Ravichandran Ashwin)​ ಮೌನ ಮುರಿದಿದ್ದಾರೆ. ಫೈನಲ್​​ನಲ್ಲಿ ಆಡುವ ಅವಕಾಶ ಸಿಗುವುದಿಲ್ಲ ಎಂಬ ವಿಚಾರ ನನಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ.

ಟೀಮ್​ ಇಂಡಿಯಾ ಆಫ್​ ಸ್ಪಿನ್ನರ್ ಆರ್​ ಅಶ್ವಿನ್​
ಟೀಮ್​ ಇಂಡಿಯಾ ಆಫ್​ ಸ್ಪಿನ್ನರ್ ಆರ್​ ಅಶ್ವಿನ್​

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ (WTC final 2023) ತನ್ನನ್ನು ಆಡುವ ಹನ್ನೊಂದರ ಬಳಗದಿಂದ ಟೀಮ್​ ಇಂಡಿಯಾ (Team India) ಕೈಬಿಡುವ ಬಗ್ಗೆ ಎಂದು ಆಫ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್ ((Ravichandran Ashwin)​)​ ಮೌನ ಮುರಿದಿದ್ದಾರೆ. ಫೈನಲ್​ ಪಂದ್ಯಕ್ಕೆ ನನಗೆ ಸ್ಥಾನ ಸಿಗುವುದಿಲ್ಲ ಎಂಬ ವಿಷಯ ಎರಡು ದಿನಗಳ ಮೊದಲೇ ಗೊತ್ತಿತ್ತು ಎಂದು ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್‌ ಬಹಿರಂಗಪಡಿಸಿದ್ದಾರೆ.

ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಮ್​ ಇಂಡಿಯಾ ಎದುರಿಸಿತು. ಜೂನ್ 7ರಿಂದ 11ರವರೆಗೆ ಜರುಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತು. ಇದಕ್ಕೆ ಭಾರಿ ಬೆಲೆತೆತ್ತ ರೋಹಿತ್​ ಪಡೆ, 209 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ ಸತತ 2ನೇ ಬಾರಿಯೂ ಐಪಿಎಲ್​ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು.

48 ಗಂಟೆಗಳ ಮೊದಲೇ ತಿಳಿದಿತ್ತೆಂದ ಅಶ್ವಿನ್

ಆಸ್ಟ್ರೇಲಿಯಾ ತಂಡದ ವಿರುದ್ಧ ತವರಿನಲ್ಲಿ ಮತ್ತು ತವರಿನಾಚೆಯ ಮೈದಾನದಲ್ಲೂ ಅದ್ಭುತ ಪ್ರದರ್ಶನ ಬೌಲಿಂಗ್‌ ಪ್ರದರ್ಶನದ ದಾಖಲೆ ಹೊಂದಿದ್ದ ಅನುಭವಿ ಆಫ್​ ಸ್ಪಿನ್ನರ್​ ಆರ್‌ ಅಶ್ವಿನ್‌ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಟೀಮ್​ ಇಂಡಿಯಾದ ಈ ನಿರ್ಧಾರ ಕಂಡು ಹಲವು ಮಾಜಿ ಆಟಗಾರರು ಅಚ್ಚರಿ ಜೊತೆ ಆಕ್ರೋಶ ಕೂಡ ಹೊರಹಾಕಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನ್​, 48 ಗಂಟೆಗಳ ಮೊದಲೇ ನನಗೆ ತಿಳಿದಿತ್ತು ಎಂದಿದ್ದಾರೆ.

ಆಡಬೇಕೆಂಬ ಆಸೆ ಇತ್ತು

ನಿಜ ಹೇಳಬೇಕೆಂದರೆ ಫೈನಲ್​ ಪಂದ್ಯದಲ್ಲಿ ಆಡಬೇಕೆಂಬ ಆಸೆ ನನಗೂ ಇತ್ತು. ಟೀಮ್​ ಇಂಡಿಯಾ ಫೈನಲ್​ ಪ್ರವೇಶಿಸಲು ನನ್ನ ಕೊಡುಗೆಯೂ ಇದೆ. ಕೊನೆಯ ಬಾರಿ ಆಡಿದ್ದ ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲೂ ನಾನು 4 ವಿಕೆಟ್​ ಪಡೆದಿದ್ದೆ. 2018-19ರ ನಂತರ ಫಾರಿನ್​ ಪಿಚ್​ಗಳಲ್ಲಿ ನಾನು ಬೌಲಿಂಗ್​ ಅನ್ನು ಉತ್ತಮವಾಗಿ ಮಾಡುತ್ತಿದ್ದೇನೆ. ನನ್ನ ಕೊಡುಗೆಯಿಂದಲೂ ಹಲವು ಪಂದ್ಯಗಳು ಗೆದ್ದಿವೆ. ಜೀವನದಲ್ಲಿ ನೀವು ಯಾವುದೇ ಅನುಭವಗಳನ್ನು ಎದುರಿಸಿದರೂ, ನೀವು ಅವುಗಳನ್ನು ಜಯಿಸಬೇಕು ಎಂದು ಅಶ್ವಿನ್ ಹೇಳಿದ್ದಾರೆ.

ಪ್ರಶಸ್ತಿ ಗೆಲ್ಲುವುದು ನನ್ನ ಗುರಿಯಾಗಿತ್ತು

ಸದ್ಯ ನನಗೆ 36 ವರ್ಷ. ಈ ವಯಸ್ಸಿನಲ್ಲಿ ನಾನು ನನಗೆ ಸಂತೋಷವನ್ನು ನೀಡುವ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಲು ಬಯಸುತ್ತೇನೆ. ಹಿರಿಯರು ಮತ್ತು ಮಾಜಿ ಕ್ರಿಕೆಟಿಗರು ನನಗೆ ಸಂದೇಶ ಕಳುಹಿಸುತ್ತಲೇ ಇರುತ್ತಾರೆ. ನಾನು ಅವರಿಗೆ ಶೀಘ್ರದಲ್ಲೇ ಉತ್ತರಿಸುತ್ತೇನೆ. ಯಾಕೆಂದರೆ ಅವರ ದೃಷ್ಟಿಯಲ್ಲಿ ನಾನು ಇನ್ನೂ ಚಿಕ್ಕವನೇ. ಆ ಭಾವನೆ ತುಂಬಾ ಚೆನ್ನಾಗಿದೆ. ಅವರ ಸಲಹೆ ಮತ್ತು ಸಲಹೆಗಳು ನನಗೆ ಬೇಕು ಎಂದು ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

ನಾಲ್ವರು ವೇಗಿಗಳಿಗೆ ಮಣೆ

ಫೈನಲ್​ನಲ್ಲಿ ಅಶ್ವಿನ್​ರನ್ನು ಕೈಬಿಟ್ಟು ನಾಲ್ವರು ವೇಗಿಗಳಿಗೆ ಮಣೆ ಹಾಕಿತ್ತು. ಒಬ್ಬರು ಮಾತ್ರ ಸ್ಪಿನ್ನರ್ ಇದ್ದರು. ಆದರೆ ಅಶ್ವಿನ್ ಜಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವೇಗಿ ಉಮೇಶ್‌ ಯಾದವ್‌, 2 ವಿಕೆಟ್ ಮಾತ್ರ ಕಬಳಿಸಿದರು. ಇದೇ ವರ್ಷ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಬಾರ್ಡರ್‌-ಗವಾಸ್ಕರ್‌ ಟೆಸ್ಟ್ ಸರಣಿಯಲ್ಲಿ 25 ವಿಕೆಟ್‌ ಉರುಳಿಸಿದ್ದ ಅಶ್ವಿನ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರು. ದುರಾದೃಷ್ಟವಶಾತ್ ಎಂದರೆ ಫೈನಲ್​ನಲ್ಲಿ ಆಡುವ ಅವಕಾಶ ಸಿಗಲಿಲ್ಲ.

ಟಿಎನ್‌ಪಿಎಲ್‌ನಲ್ಲಿ ಅಶ್ವಿನ್​ ಕಣಕ್ಕೆ

ಡಬ್ಲ್ಯಟಿಸಿ ಫೈನಲ್​ ಮುಗಿಸಿದ ಬೆನ್ನಲ್ಲೆ ತಾಯ್ನಾಡಿಗೆ ಬಂದಿಳಿದ ಆರ್‌ ಅಶ್ವಿನ್‌, ನೇರವಾಗಿ ತಮಿಳುನಾಡು ಪ್ರೀಮಿಯರ್ ಲೀಗ್​​ನಲ್ಲಿ ಪಾಲ್ಗೊಂಡರು. ಪ್ರಸ್ತುತ ನಡೆಯುತ್ತಿರುವ ಟಿಎನ್‌ಪಿಎಲ್‌ ಲೀಗ್​ನಲ್ಲಿ ದಿಂಡುಗಲ್ ಡ್ರಾಗನ್ಸ್ ತಂಡವನ್ನು ಅಶ್ವಿನ್​ ಮುನ್ನಡೆಸಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಅಶ್ವಿನ್‌ ಎರಡು ವಿಕೆಟ್‌ ಪಡೆದು ಗಮನ ಸೆಳೆದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.