KKR vs PBKS: ಪಂಜಾಬ್ ವಿರುದ್ಧ ಟ್ರಿಪಲ್ ಆರ್ ಅಬ್ಬರ; ತವರು ಮೈದಾನದಲ್ಲಿ ರೋಚಕ ಜಯ ಗಳಿಸಿದ ಕೆಕೆಆರ್
ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲುವಿಗೆ ಎರಡು ರನ್ ಬೇಕಿದ್ದಾಗ, ರಿಂಕು ಸಿಂಗ್ ಮ್ಯಾಜಿಕ್ ಮಾಡಿದರು. ಬೌಂಡರಿ ಸಿಡಿಸಿ ತಂಡಕ್ಕೆ ಮತ್ತೊಂದು ರೋಚಕ ಗೆಲುವು ತಂದುಕೊಟ್ಟರು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದ ಮತ್ತೊಂದು ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಮಾಡಿದ ಮ್ಯಾಜಿಕ್ ನೆರವಿನಿಂದ ತಂಡ ತವರು ಮೈದಾನದಲ್ಲಿ ಅಪರೂಪದ ಗೆಲುವಿಗೆ ಮುತ್ತಿಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ನಾಯಕ ಶಿಖರ್ ಧವನ್ ಅಮೋಘ ಅರ್ಧಶತಕದ ನೆರವಿನಿಂದ 7ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು. 180 ರನ್ಗಳ ಸವಾಲಿನ ಗುರಿ ಪಡೆದ ಕೋಲ್ಕತ್ತಾ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಜಯ ಗಳಿಸಿತು.
ಕೊನೆಯ ಓವರ್ ಎಸೆದ ಅರ್ಷದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಕೊನೆಯ ಓವರ್ನಲ್ಲಿ ಕೆಕೆಆರ್ ಗೆಲುವಿಗೆ ಆರು ರನ್ಗಳು ಬೇಕಿತ್ತು. ಮೊದಲ ಐದು ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ನೀಡದ ಅರ್ಷದೀಪ್. ಕೊನೆಯ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರು. ಕೆಕೆಆರ್ ಗೆಲುವಿಗೆ ಎರಡು ರನ್ ಬೇಕಿದ್ದಾಗ, ರಿಂಕು ಸಿಂಗ್ ಮ್ಯಾಜಿಕ್ ಮಾಡಿದರು. ಬೌಂಡರಿ ಸಿಡಿಸಿ ತಂಡಕ್ಕೆ ಮತ್ತೊಂದು ರೋಚಕ ಗೆಲುವು ತಂದುಕೊಟ್ಟರು.
ಸವಾಲಿನ ಗುರಿ ಪಡೆದ ಕೆಕೆಆರ್, ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜೇಸನ್ ರಾಯ್ ಮತ್ತು ಗುರ್ಬಾಜ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 15 ರನ್ ಗಳಿಸಿ ಗುರ್ಬಾಜ್ ಔಟಾದರೆ, 8 ಬೌಂಡರಿ ಸಹಿತ ರಾಯ್ 38 ರನ್ ಸಿಡಿಸಿದರು. ಈ ವೇಳೆ ಒಂದಾದ ನಾಯಕ ನಿತೀಶ್ ರಾಣಾ ಮತ್ತು ವೆಂಕಟೇಶ್ ಅಯ್ಯರ್, ಅರ್ಧಶತಕದ ಜತೆಯಾಟವಾಡಿದರು. ಈ ನಡುವೆ 11 ರನ್ ಗಳಿಸಿದ್ದ ಅಯ್ಯರ್, ಲಿವಿಂಗ್ಸ್ಟನ್ಗೆ ಕ್ಯಾಚ್ ನೀಡಿ ಔಟಾದರು. ಮತ್ತೊಂದೆಡೆ ನಾಯಕ ರಾಣಾ ಆಕರ್ಷಕ ಅರ್ಧಶತಕ ಗಳಿಸಿದರು. 51 ರನ್ ಗಳಿಸಿದ ಅವರು, ವೇಗದ ರನ್ ಗಳಿಕೆಗೆ ಮುಂದಾಗಿ ಕ್ಯಾಚ್ ನೀಡಿ ಔಟಾದರು. ರಾಹುಲ್ ಚಹರ್ ಮೇಲಿಂದ ಮೇಲೆ ಎರಡು ಪ್ರಮುಖ ವಿಕೆಟ್ಗಳನ್ನು ಕಬಳಿಸಿ ಮಿಂಚಿದರು.
ಕೊನೆಯ ಓವರ್ಗಳಲ್ಲಿ ರಿಂಕು ಸಿಂಗ್ ಹಾಗೂ ರಸೆಲ್ ಒಂದಾಗಿ ಅಬ್ಬರಿಸಿದರು. ಮೇಲಿಂದ ಮೇಲೆ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸಿಡಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಪ್ರಭ್ಸಿಮ್ರಾನ್ ಸಿಂಗ್ 12 ರನ್ಗಳಿಗೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ಸ್ಫೋಟಕ ಬ್ಯಾಟರ್ ಭಾನುಕಾ ರಾಜಪಕ್ಸೆ ಡಕೌಟ್ ಆಗಿ ನಿರ್ಗಮಿಸಿದರು. ಈ ವೇಳೆ ನಾಯಕ ಶಿಖರ್ ಧವನ್ ಜೊತೆಗೂಡಿ ಬ್ಯಾಟ್ ಬೀಸಿದ ಲಿವಿಂಗ್ಸ್ಟನ್, 15 ರನ್ ಗಳಿಸಿ ಚಕ್ರವರ್ತಿ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಅತ್ತ ವಿಕೆಟ್ಗಳು ಉರುಳುತ್ತಿದ್ದರೂ ನಾಯಕನಾಟವಾಡಿದ ಧವನ್, ಅರ್ಧಶತಕ ಸಿಡಿಸಿದರು. 47 ಎಸೆತಗಳನ್ನು ಎದುರಿಸಿದ ಅವರು 57 ರನ್ ಗಳಿಸಿ ನಿತೀಶ್ ರಾಣಾಗೆ ವಿಕೆಟ್ ಒಪ್ಪಿಸಿದರು.
ಜಿತೇಶ್ ಶರ್ಮಾ 21 ರನ್ಗಳಿಗೆ ಔಟಾದರೆ, ರಿಷಿ ಧವನ್ 19 ರನ್ ಗಳಿಸಿ ನಿರ್ಗಮಿಸಿದರು. ಐಪಿಎಲ್ನ ದುಬಾರಿ ಆಟಗಾರ ಸ್ಯಾಮ್ ಕರನ್ ಕೇವಲ 4 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಡೆತ್ ಓವರ್ಗಳಲ್ಲಿ ಒಂದಾದ ಶಾರುಖ್ ಖಾನ್ ಮತ್ತು ಹರ್ಪ್ರೀತ್ ಬ್ರಾರ್, ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಕೊನೆಯ ಓವರ್ನಲ್ಲಿ ಬೌಂಡರಿ ಸಿಕ್ಸರ್ಗಳನ್ನು ಸಿಡಿಸಿದ ಉಭಯ ಆಟಗಾರರು, 21 ರನ್ ಕದ್ದರು. ಹೀಗಾಗಿ ತಂಡದ ಮೊತ್ತ ಹೆಚ್ಚಿತು.