ಕನ್ನಡ ಸುದ್ದಿ  /  Sports  /  Cricket News Ipl 2023 Ravi Shastri Picks 3 Uncapped India Players For Odi World Cup Yashasvi Jaiswal Rinku Singh Jra

Ravi Shastri: ಏಕದಿನ ವಿಶ್ವಕಪ್‌ಗೆ ಮೂವರು ಅನ್‌ಕ್ಯಾಪ್ಡ್ ಆಟಗಾರರ ಆಯ್ಕೆ ಮಾಡಿದ ರವಿ ಶಾಸ್ತ್ರಿ

ODI World Cup: ಈ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಶಾಸ್ತ್ರಿ ಅವರು ಮೂವರು ಅನ್‌ಕ್ಯಾಪ್ಡ್‌ ಆಟಗಾರರನ್ನು ವಿಶ್ವಕಪ್‌ ತಂಡಕ್ಕೆ ಆರಿಸಿದ್ದಾರೆ.

ಮೂವರನ್ನು ಆಯ್ಕೆ ಮಾಡಿದ ರವಿ ಶಾಸ್ತ್ರಿ
ಮೂವರನ್ನು ಆಯ್ಕೆ ಮಾಡಿದ ರವಿ ಶಾಸ್ತ್ರಿ (Getty Images-PTI-AP)

ಭಾರತದ ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವಂತೆ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಈ ಹಿಂದೆಯೇ ಧ್ವನಿಯೆತ್ತಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ, ಅದರಿಂದ ದೂರ ಉಳಿಯುವಂತೆ ಅವರು ಸಲಹೆ ನೀಡಿದ್ದರು. ಈ ನಡುವೆ, ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಆವೃತಿಯಲ್ಲಿ ಹಲವು ಯುವ ಕ್ರಿಕೆಟಿಗರು ಆಕರ್ಷಕ ಪ್ರದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಮೂವರು ಅನ್‌ಕ್ಯಾಪ್ಡ್ ಆಟಗಾರರನ್ನು ರವಿ ಶಾಸ್ತ್ರಿ ಅವರು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದಾರೆ.

ಈ ವರ್ಷ ಭಾರತದಲ್ಲಿ ಮಹತ್ವದ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಶಾಸ್ತ್ರಿ ಅವರ ಈ ಆಯ್ಕೆ ಪ್ರಾಮುಖ್ಯತೆ ಪಡೆದಿದೆ. ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಭಾರತವು, 2023ರ ಐಸಿಸಿ ವಿಶ್ವಕಪ್‌ನ ಆತಿಥ್ಯ ವಹಿಸುತ್ತಿರುವುದರಿಂದ, ಭಾರತದ ಪಾಲಿಗೆ ಈ ಬಾರಿಯ ವಿಶ್ವಕಪ್ ಪ್ರತಿಷ್ಠೆಯ ಪ್ರಶ್ನೆ.

ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿರುವ ಹಲವು ಯುವ ಆಟಗಾರರು ಐಪಿಎಲ್‌ನಲ್ಲಿ ಮಿಂಚಿದವರು. ದುಬಾರಿ ಕ್ರಿಕೆಟ್‌ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಆಯ್ಕೆದಾರರ ಮನೆಗೆದ್ದು ಹಲವು ಆಟಗಾರರು ಟೀಮ್‌ ಇಂಡಿಯಾ ಸೇರಿಕೊಂಡಿದ್ದಾರೆ. ಹೀಗಾಗಿ ಯುವ ಪ್ರತಿಭೆಗಳನ್ನು ಐಪಿಎಲ್ ಹುಟ್ಟುಹಾಕುತ್ತಿದೆ ಎಂಬುದು ಸತ್ಯವಾಗಿದೆ. ಪ್ರಸ್ತುತ ಮಿಲಿಯನ್‌ ಡಾಲರ್‌ ಟೂರ್ನಿಯ 16ನೇ ಆವೃತ್ತಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಯಶಸ್ವಿ ಜೈಸ್ವಾಲ್, ರವಿ ಶಾಸ್ತ್ರಿಯವರ ಮನ ಗೆದ್ದಿದ್ದಾರೆ.

ರಾಜಸ್ಥಾನ್ ರಾಯಲ್ಸ್ (RR) ಆರಂಭಿಕ ಆಟಗಾರ ಜೈಸ್ವಾಲ್, ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಬಳಗದ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಯಶಸ್ವಿಯನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಿದ ಬಗ್ಗೆ ಶಾಸ್ತ್ರಿ ಅವರು ಹೀಗೆ ಮಾತನಾಡಿದ್ದಾರೆ.

“ನನ್ನ ಮೊದಲ ಆಯ್ಕೆ ಯಶಸ್ವಿ ಜೈಸ್ವಾಲ್. ಇದಕ್ಕೆ ಈ ಋತುವಿನಲ್ಲಿ ಅವರು ಆಡಿದ ಆಟವೇ ಕಾರಣ. ಕಳೆದ ವರ್ಷ ನಾನು ಅವನಿಂದ ನೋಡಿದ್ದಕ್ಕಿಂತ ಈ ವರ್ಷ ಗಮನಾರ್ಹ ಸುಧಾರಣೆಯಾಗಿದೆ. ಇದು ತುಂಬಾ ಸಕಾರಾತ್ಮಕ ಸಂಕೇತ. ಈ ಯುವಕ ತನ್ನ ಆಟವನ್ನು ಸುಧಾರಿಸಲು, ವಿಷಯಗಳನ್ನು ವಿಂಗಡಿಸಲು, ಹೆಚ್ಚು ಆಲ್-ರೌಂಡ್ ಆಟವನ್ನು ಆಡಲು ಸಿದ್ಧನಾಗಿದ್ದಾನೆ. ಹೀಗಾಗಿ ಈ ಋತುವಿನಲ್ಲಿ ಅವನು ಅದನ್ನು ಮಾಡಿದ್ದಾನೆ ಎಂದು ಅವನ ಆಟ ತೋರಿಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಆತ ಹೊಡೆಯುತ್ತಿರುವ ಶಾಟ್‌ಗಳು ತುಂಬಾ ಚೆನ್ನಾಗಿವೆ,” ಎಂದು ಶಾಸ್ತ್ರಿ ಐಸಿಸಿ ರಿವ್ಯೂ ವೇಳೆ ಸಂಜನಾ ಗಣೇಶನ್‌ಗೆ ಅವರೊಂದಿಗೆ ಮಾತನಾಡಿದ್ದಾರೆ.

ಇದೇ ವೇಳೆ ಭಾರತದ ಮಾಜಿ ಮುಖ್ಯ ಕೋಚ್ ಶಾಸ್ತ್ರಿ, ಪಂದ್ಯಾವಳಿಯಲ್ಲಿ ರಿಂಕು ಸಿಂಗ್ ಅವರ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಿಂಕು, ಈ ಋತುವಿನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅಲ್ಲದೆ ಪಂದ್ಯವನ್ನು ರೋಚಕವಾಗಿ ಗೆಲ್ಲುವಲ್ಲಿ ನೆರವಾದರು. ಈ ಬಗ್ಗೆ ಮತನಾಡಿದ ಶಾಸ್ತ್ರಿ, “ಇನ್ನೊಬ್ಬ ಆಟಗಾರ ರಿಂಕು ಸಿಂಗ್. ನಾನು ಅವನನ್ನು ಹೆಚ್ಚು ನೋಡುತ್ತಿದ್ದಂತೆ, ಆ ವ್ಯಕ್ತಿಯ ಅಸಾಧಾರಣ ಮನೋಧರ್ಮ ಬೆಳಕಿಗೆ ಬರುತ್ತಿದೆ. ನಾನು ಹೇಳಿದ ಈ ಇಬ್ಬರೂ ಆಟಗಾರರು ತುಂಬಾ ಬಡತನದ ಹಿನ್ನೆಲೆಯಿಂದ ಬಂದವರು. ಅವರು ತುಂಬಾ ಕಷ್ಟಪಟ್ಟಿದ್ದಾರೆ. ಹೀಗಾಗಿ ಅವರಿಗೆ ಏನೂ ಸುಲಭವಾಗಿ ಬಂದಿಲ್ಲ. ಆದ್ದರಿಂದ ಅವರಲ್ಲಿ ಆ ಹಸಿವು, ಉತ್ಸಾಹವನ್ನು ನೋಡಬಹುದು. ಉನ್ನತ ಸ್ಥಾನಕ್ಕೆ ಬರಲು ಅದು ತುಂಬಾ ಅಗತ್ಯ,” ಎಂದು ಹೇಳಿದರು.

ಯುವ ಆಟಗಾರ ಸಾಯಿ ಸುದರ್ಶನ್ ಬಗ್ಗೆಯೂ ಮಾತನಾಡಿದ ರವಿ ಶಾಸ್ತ್ರಿ, ಮೂರನೇಯ ಆಟಗಾರನಾಗಿ ಮುಂಬೈ ಇಂಡಿಯನ್ಸ್ (MI) ತಂಡದ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಿದರು. ನನ್ನ ಆಯ್ಕೆಯಲ್ಲಿ ಎಡಗೈ ಆಟಗಾರ ಸಾಯಿ ಸುದರ್ಶನ್ ಕೂಡ ಇದ್ದಾರೆ. ಆದರೆ ನಾನು ತಿಲಕ್ ವರ್ಮಾ ಅವರನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡುತ್ತೇನೆ," ಎಂದು ಅವರು ತಿಳಿಸಿದ್ದಾರೆ.