KL Rahul: ಲಕ್ನೋ ತಂಡಕ್ಕೆ ಡಬಲ್ ಆಘಾತ; ಕೆಎಲ್ ರಾಹುಲ್, ಜಯದೇವ್ ಉನಾದ್ಕತ್ ಐಪಿಎಲ್ನಿಂದ ಔಟ್; ಡಬ್ಲ್ಯುಟಿಸಿ ಫೈನಲ್ಗೂ ಡೌಟ್
16ನೇ ಆವೃತ್ತಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಘಾತವಾಗಿದೆ. ತಂಡದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ಜಯದೇವ್ ಉನಾದ್ಕತ್ ಗಾಯದ ಸಮಸ್ಯೆಯಿಂದ ಇಡೀ ಐಪಿಎಲ್ನಿಂದಲೇ ಹೊರ ಬಿದ್ದಿದ್ದಾರೆ. ಈ ಬಗ್ಗೆ ಪಿಟಿಐಗೆ ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
ಐಪಿಎಲ್ (IPL 2023) ತಂಡಗಳ ನಡುವೆ ಪ್ಲೇ ಆಫ್ ಪೈಪೋಟಿ ಜೋರಾಗಿದೆ. ಇದರ ನಡುವೆ ತಂಡಗಳಿಗೆ ಗಾಯದ ಬರೆ ಬೀಳುತ್ತಿದೆ. ಪ್ರಮುಖ ಆಟಗಾರರೇ ಶ್ರೀಮಂತ ಲೀಗ್ನಿಂದ ಹೊರ ಬೀಳುತ್ತಿದ್ದಾರೆ. ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೂ (Lucknow Super Giants) ಇದೇ ಆಘಾತ ಎದುರಾಗಿದೆ. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ಸೋತಿದ್ದ ಲಕ್ನೋ ತಂಡಕ್ಕೆ ಡಬಲ್ ಆಘಾತ ಎದುರಾಗಿದೆ.
ಮೇ 1ರಂದು ನಡೆದ ಆರ್ಸಿಬಿ ಎದುರಿನ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಗಂಭೀರ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಇಡೀ ಐಪಿಎಲ್ನಿಂದಲೇ ಹೊರ ಬಿದ್ದಿದ್ದಾರೆ. ತೊಡೆಯ ಗಾಯದ ಸಮಸ್ಯೆಗೆ ತುತ್ತಾದ ಲಕ್ನೋ ತಂಡದ ನಾಯಕ ರಾಹುಲ್ ಐಪಿಎಲ್ನಲ್ಲಿ ಇನ್ನು ಮುಂದೆ ಪಾಲ್ಗೊಳ್ಳುವುದಿಲ್ಲ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship FInal) ಪಂದ್ಯಕ್ಕಾಗಿ ರಾಹುಲ್ರನ್ನು ಹೊರಗಿಡಲಾಗಿದೆ ಎಂದು ವರದಿಯಾಗಿದೆ.
ಅಲ್ಲದೆ, ಲಕ್ನೋ ತಂಡದ ಹಿರಿಯ ವೇಗದ ಬೌಲರ್ ಜಯದೇವ್ ಉನಾದ್ಕತ್ (Jaydev Unadkat) ಅವರೂ ಶ್ರೀಮಂತ ಲೀಗ್ನಿಂದ ಹೊರ ಬಿದ್ದಿದ್ದಾರೆ. ಅವರ ಭುಜದ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಜಯದೇವ್ ಉನಾದ್ಕತ್ ಕೂಡ ಜೂನ್ 7 ರಿಂದ 11 ರವರೆಗೆ ಲಂಡನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಆಯ್ಕೆ ಆಗಿದ್ದು, ಈ ಪಂದ್ಯಕ್ಕೂ ಅನುಮಾನ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫೈನಲ್ಗೆ ಫಿಟ್ ಆಗ್ತಾರಾ ರಾಹುಲ್?
ಹಿರಿಯ ಅನುಭವಿ ಆಟಗಾರ ಹಾಗೂ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಸಿದ್ಧಪಡಿಸುವುದು ಬಿಸಿಸಿಐ ಗುರಿಯಾಗಿದೆ. ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡಕ್ಕೆ ಬಿಸಿಸಿಐ ಸೂಚಿಸಿದೆ. ಮಾರ್ಕಸ್ ಸ್ಟೊಯ್ನಿಸ್ ಅವರ ಬೌಲಿಂಗ್ನಲ್ಲಿ ಫಾಫ್ ಡು ಪ್ಲೆಸಿಸ್ ಕವರ್ ಡ್ರೈವ್ಗೆ ಬೌಂಡರಿ ಕಡೆಗೆ ಓಡುತ್ತಿರುವಾಗ, ರಾಹುಲ್ ಅವರ ಬಲ ತೊಡೆಗೆ ಗಾಯವಾಗಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಲಕ್ನೋ ಕ್ಯಾಂಪ್ನಿಂದ ಹೊರ ಬರಲಿದ್ದಾರೆ. ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ರಾಹುಲ್ಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ ಎಂದೂ ತಿಳಿದು ಬಂದಿದೆ. ರಾಹುಲ್ ಹಾಗೂ ಜಯದೇವ್ ಉನಾದ್ಕತ್ ಗಾಯದ ಪ್ರಕರಣ ಶೀಘ್ರವೇ ಇತ್ಯರ್ಥಗೊಳಿಸಲು ಬಿಸಿಸಿಐ ಹೆಚ್ಚು ಮುತುವರ್ಜಿ ವಹಿಸಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆಟಗಾರನೊಬ್ಬ ಇಂತಹ ಗಾಯಕ್ಕೆ ಸಮಸ್ಯೆಗೆ ಅನುಭವಿಸಿದಾಗ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ನೋವು ಮತ್ತು ಊತ ಹೆಚ್ಚಾಗುತ್ತದೆ. ಊತವು ಕಡಿಮೆಯಾಗಲು ಸುಮಾರು 24 ರಿಂದ 48 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಊತ ಕಡಿಮೆಯಾದ ನಂತರವೇ ಸ್ಕ್ಯಾನ್ ಮಾಡಲಾಗುತ್ತದೆ. ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿರುವ ಅವರು, ಐಪಿಎಲ್ನಲ್ಲಿ ಭಾಗವಹಿಸುವುದು ಅನುಮಾನ ಎಂದಿದ್ದಾರೆ.
ಸ್ಕ್ಯಾನ್ಗಳಲ್ಲಿ ಗಾಯದ ಮಟ್ಟ ಯಾವ ರೀತಿ ಎಂದು ಖಚಿತಪಡಿಸಿದ ನಂತರವೇ ಬಿಸಿಸಿಐ ವೈದ್ಯಕೀಯ ತಂಡ ಅದರಂತೆ ಚಿಕಿತ್ಸೆ ನೀಡಲಿದೆ. ಜಯದೇವ್ ಅವರ ಇಂಜುರಿ ಸಮಸ್ಯೆಯೂ ಗಂಭೀರವಾಗಿದೆ. ಈ ಋತುವಿನ ಮಟ್ಟಿಗೆ ಅವರು ಇನ್ನು ಮುಂದೆ ಐಪಿಎಲ್ ಆಡಲು ಸಾಧ್ಯವಿಲ್ಲ. ಆದರೆ ಡಬ್ಲ್ಯುಟಿಸಿ ಫೈನಲ್ಗೆ ಸಮಯಕ್ಕೆ ಸರಿಯಾಗಿ ಸಿದ್ಧರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಗಾಯಗೊಂಡಿದ್ದರು.