MS Dhoni: ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಧೋನಿ ಮೊಣಕಾಲಿಗೆ ಸರ್ಜರಿ; ಮಾಹೀ ನಿವೃತ್ತಿ ಬಗ್ಗೆ ಅಪ್ಡೇಟ್ ಕೊಟ್ಟ ಕಾಸೀ ವಿಶ್ವನಾಥನ್
ಮೊಣಕಾಲು ನೋವಿನಿಂದ ಬಳಲಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ (CSK Captain MS Dhoni) ವೈದ್ಯರ ಸಲಹೆಯಂತೆ ಮಂದಿನ ವಾರ ಆಸ್ಪತ್ರೆ ದಾಖಲಾಗಲಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಕೊಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯವೇ ಎಂಎಸ್ ಧೋನಿ (MS Dhoni) ಪಾಲಿಗೆ ಕೊನೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಪಂದ್ಯ ಮುಗಿದ ನಂತರ ನಿವೃತ್ತಿ ಮಾತನ್ನು ತಳ್ಳಿ ಹಾಕಿದ್ದರು. ಇದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ.
ಆದರೆ, 16ನೇ ಆವೃತ್ತಿಯ ಟೂರ್ನಿಯುದ್ದಕ್ಕೂ ಧೋನಿ ನೋವಿನಲ್ಲೇ ಆಡಿದ್ದರು. ಮೊಣಕಾಲು ಗಾಯದ ಸಮಸ್ಯೆಗೆ ತುತ್ತಾಗಿದ್ದ ಧೋನಿ (MS Dhoni knee injury), ತಂಡ ಮತ್ತು ಅಭಿಮಾನಿಗಳಿಗೋಸ್ಕರ ನೋವಿನಲ್ಲೂ ಮೈದಾನಕ್ಕೆ ಇಳಿದಿದ್ದರು. ಮೇ 29ರಂದು ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಧೋನಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ವರದಿಯಾಗಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸರ್ಜರಿಗೆ ಮುಂದಾಗಿದ್ದಾರೆ.
ಆಸ್ಪ್ರತ್ರೆಗೆ ದಾಖಲು
ಮೊಣಕಾಲು ನೋವಿನಿಂದ ಬಳಲಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ವೈದ್ಯರ ಸಲಹೆಯಂತೆ ಆಸ್ಪತ್ರೆ ದಾಖಲಾಗಲಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಕೊಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ. ಟೂರ್ನಿಯುದ್ದಕ್ಕೂ ಅವರು ಕಾಲಿನ ಗಾಯದಿಂದಲೇ ಆಡಿದ್ದು, ಕಂಡು ಫ್ಯಾನ್ಸ್ ಇದೇ ಅವರಿಗೆ ಕೊನೆಯ ಐಪಿಎಲ್ ಎಂದುಕೊಂಡಿದ್ದರು. ಇದೀಗ ಶಸ್ತ್ರಚಿಕಿತ್ಸೆಗೆ ಮುಂದಾಗಲಿದ್ದಾರೆ.
ನಿವೃತ್ತಿ ತಳ್ಳಿ ಹಾಕಿದ ಧೋನಿ
ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ಎಂಎಸ್ ಧೋನಿ ಅವರು ವಿದಾಯದ ಮಾತನ್ನು ತಳ್ಳಿ ಹಾಕಿದ್ದರು. ಮತ್ತೊಂದು ಆವೃತ್ತಿಯೂ ಆಡುವ ಬಯಕೆಯನ್ನು ಹೊರಹಾಕಿರುವ ಧೋನಿ, ಫಿಟ್ನೆಸ್ ವಿಚಾರ ಗಮನ ಇಟ್ಟುಕೊಂಡು ನಿರ್ಧರಿಸುತ್ತೇನೆ ಎಂದಿದ್ದರು. ನಿವೃತ್ತಿ ಘೋಷಿಸಲು ಇದೇ ಸರಿಯಾದ ಸಮಯ. ಆದರೆ ಅಭಿಮಾನಿಗಳಿಗಾಗಿ ಆಡಬೇಕು ಎನಿಸುತ್ತದೆ. ಮುಂದಿನ ಐಪಿಎಲ್ಗೆ 8-9 ತಿಂಗಳು, ಕಾಲಾವಕಾಶ ಇದೆ ಎಂದು ಹೇಳಿದ್ದಾರೆ.
‘ಅವರ ನಿರ್ಧಾರಕ್ಕೆ ಬಿಟ್ಟಿದ್ದೇವೆ’
17ನೇ ಆವೃತ್ತಿಗೂ ಅವರೇ ಸಿಎಸ್ಕೆ ತಂಡವನ್ನು ಮುನ್ನಡೆಸುತ್ತಾರೆಯೇ ಎಂಬ ಪ್ರಶ್ನೆಗೆ ಫ್ರಾಂಚೈಸ್ ಸಿಇಒ ಕಾಸಿ ವಿಶ್ವನಾಥನ್, ಅವರು ಮಾಜಿ ಭಾರತ ನಾಯಕನ ಭವಿಷ್ಯದ ಬಗ್ಗೆ ಮೌನ ಮುರಿದಿದ್ದಾರೆ. ಜೊತೆಗೆ 41 ವರ್ಷ ವಯಸ್ಸಿನ ಧೋನಿ ಅವರ ಮೊಣಕಾಲಿನ ಗಾಯದ ಬಗ್ಗೆ ನಿರ್ಣಾಯಕ ಅಪ್ಡೇಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಸಿಎಸ್ಕೆ ತಂಡದ ಪರ ಆಡುತ್ತಾರೆ ಇಲ್ಲವೇ ಎಂಬ ಭವಿಷ್ಯವನ್ನು ನಿರ್ಧರಿಸುವ ಮೊದಲು ಧೋನಿ ವೈದ್ಯಕೀಯ ಸಲಹೆ ತೆಗೆದುಕೊಳ್ಳುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
ಧೋನಿ ಅವರು ಎಡ ಮೊಣಕಾಲಿನ ಗಾಯಕ್ಕೆ ವೈದ್ಯಕೀಯ ಸಲಹೆ ತೆಗೆದುಕೊಳ್ಳುತ್ತಾರೆ. ಅದಕ್ಕೆ ಅನುಗುಣವಾಗಿ ನಿರ್ಧರಿಸುತ್ತಾರೆ. ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರೆ, ವರದಿಗಳು ಬಂದ ನಂತರವೇ ಅದನ್ನು ಖಚಿತಪಡಿಸಿಕೊಳ್ಳಬಹುದು. ತಂಡವನ್ನು ಮುನ್ನಡೆಸುತ್ತಾರೆ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ವಿಶ್ವನಾಥನ್ ಹೇಳಿದ್ದಾರೆ.
ತಿರುಪತಿಯಲ್ಲಿ ಟ್ರೋಫಿಗೆ ಪೂಜೆ
ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಟೀಮ್ ಮ್ಯಾನೇಜ್ಮೆಂಟ್ ಟ್ರೋಫಿಯನ್ನು ತಿರುಪತಿಯಲ್ಲಿ ವೆಂಕಟೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿಸಿದೆ. ಅದಕ್ಕೂ ಮುನ್ನ ಚೆನ್ನೈ ತಂಡ ಟ್ರೋಫಿ ಗೆದ್ದ ವರ್ಷಗಳನ್ನು ಬರೆದಿದ್ದ ಕೇಕ್ವೊಂದನ್ನು ಧೋನಿ ಕತ್ತರಿಸಿದ್ದರು. ಬುಧವಾರ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಉಪಸ್ಥಿತಿಯಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಸಿಎಸ್ಕೆ ಮಾಲೀಕರು ಆಯೋಜಿಸಿದ್ದಾರೆ.