Sourav Ganguly: ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಗೆ ಭದ್ರತೆ ಹೆಚ್ಚಿಸಿದ ಸರ್ಕಾರ; ಇನ್ಮುಂದೆ 8-10 ಪೊಲೀಸರು ದಾದಾ ಮನೆ ಮುಂದೆ ಕಾವಲು
ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರವು ಮೇಲ್ದರ್ಜೆಗೇರಿಸಿದೆ. ಇಲ್ಲಿಯವರೆಗೆ ಗಂಗೂಲಿಗಿದ್ದ ಸೆಕ್ಯುರಿಟಿಯನ್ನು 'Y' ವರ್ಗದಿಂದ 'Z' ವರ್ಗಕ್ಕೆ ಹೆಚ್ಚಿಸಲಾಗಿದೆ.
ಭಾರತೀಯ ಕ್ರಿಕೆಟ್ನಲ್ಲಿ (Indian Cricket) ಹೊಸದೊಂದು ಪರ್ವ ಹುಟ್ಟು ಹಾಕಿದ್ದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹಾಗೂ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಿರ್ದೇಶಕ ಸೌರವ್ ಗಂಗೂಲಿ (Sourav Ganguly) ಅವರ ಭದ್ರತಾ ಕೆಟಗರಿಯನ್ನು ಹೆಚ್ಚಿಸಲಾಗಿದೆ. ಗಂಗೂಲಿ ಅವರಿಗೆ ಭದ್ರತೆಯನ್ನು ಮೇಲ್ದರ್ಜೆಗೇರಿಸಿರುವ ಕುರಿತು ಪಶ್ಚಿಮ ಬಂಗಾಳ ಸರ್ಕಾರ (west bengal government) ಆದೇಶ ಹೊರಡಿಸಿದೆ. ಇನ್ನು ಮುಂದೆ ಅವರಿಗೆ ಝೆಡ್ (Z) ಕೆಟಗರಿ ಭದ್ರತೆ ನೀಡುವಂತೆ ಸೂಚಿಸಿದೆ.
ಈ ಹಿಂದೆ ಸೌರವ್ ಗಂಗೂಲಿ ಅವರಿಗೆ ವೈ (Y) ಕೆಟಗರಿ ಭದ್ರತೆಯನ್ನು ಪಡೆಯುತ್ತಿದ್ದರು. ಇದೀಗ ಅದರ ಅವಧಿ ಮುಗಿದಿದೆ. ಪ್ರೋಟೋಕಾಲ್ ಪ್ರಕಾರ ಗಂಗೂಲಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿ, Z ಕೆಟಗರಿಗೆ ಉನ್ನತ್ತೀಕರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾದಾ ಅವರ ಭದ್ರತೆಯನ್ನು ಹೆಚ್ಚಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರ್ಕಾರ ಮೇ 16ರಂದು ತೆಗೆದುಕೊಂಡಿದೆ.
ಝೆಡ್ ಕೆಟಗರಿಯಲ್ಲಿ ಪೊಲೀಸರ ಸಂಖ್ಯೆ ಹೆಚ್ಚಳ
ನೂತನ ಭದ್ರತಾ ವ್ಯವಸ್ಥೆಯ ಪ್ರಕಾರ, ಸೌರವ್ ಜೊತೆಗೆ 8 ರಿಂದ 10 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. 'ವೈ' ಕೆಟಗರಿ ಭದ್ರತೆಯ ಅಡಿಯಲ್ಲಿ, ಮೂವರು ಪೊಲೀಸರು ಮತ್ತು ವಿಶೇಷ ವಿಭಾಗದ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಂಗಾಳದ ಮಹಾರಾಜ ಗಂಗೂಲಿ ಅವರ ಬೆಹಾಲಾ ನಿವಾಸದ ಭದ್ರತೆಗೆ ನಿಯೋಜಿಸಲಾಗಿತ್ತು. ವಿವಿಐಪಿಯ ಭದ್ರತಾ ಅವಧಿ ಮುಕ್ತಾಯದ ನಂತರ, ಸ್ಥಾಪಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಗ್ರ ಮೌಲ್ಯಮಾಪನ ಕೈಗೊಂಡು ಮಮತಾ ಬ್ಯಾನರ್ಜಿ ಅವರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಮೇ 21ರಿಂದ ಜಾರಿ
ಸೌರವ್ ಗಂಗೂಲಿ ಅವರ ಬೆಹಾಲಾ ಕಚೇರಿಗೆ ಪಶ್ಚಿಮ ಬಂಗಾಳ ಸಚಿವಾಲಯದ ಪ್ರತಿನಿಧಿಗಳು ಆಗಮಿಸಿದ್ದರು. ಕೋಲ್ಕತ್ತಾ ಪೊಲೀಸ್ ಹೆಡ್ ಕ್ವಾರ್ಟರ್ಸ್ ಲಾಲ್ಬಜಾರ್ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಯಾವ ರೀತಿ ಭದ್ರತೆ ನೀಡಬೇಕು ಎಂಬುದರ ಕುರಿತು ವಿವರಿಸಿದರು. ಸದ್ಯ ಗಂಗೂಲಿ ತಮ್ಮ ಐಪಿಎಲ್ನ ಡೆಲ್ಲಿ ತಂಡದ ಜೊತೆಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಂಗೂಲಿ ಈ ವಾರ ಅಂದರೆ ಮೇ 21ರಂದು ಕೋಲ್ಕತ್ತಾಗೆ ಮರಳಲಿದ್ದು, ತಕ್ಷಣವೇ 'Z' ಕೆಟಗರಿ ಭದ್ರತೆಯನ್ನು ಪಡೆಯಲಿದ್ದಾರೆ.
ಸಚಿವರಿಗೆ ಸಿಕ್ಕ ಸ್ಥಾನಮಾನ ಗಂಗೂಲಿಗೂ ಸಿಕ್ತು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಸಿವಿ ಆನಂದ್ ಬೋಸ್ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಮಾತ್ರ 'ಝಡ್ ಪ್ಲಸ್' ಕೆಟಗರಿ ಭದ್ರತೆ ಒದಗಿಸಲಾಗಿದೆ. ರಾಜ್ಯದ ಕೆಲ ಸಚಿವರೂ ‘ಝಡ್’ ಕೆಟಗರಿ ಭದ್ರತೆಗೆ ಅರ್ಹರು. ಇದೀಗ ಈ ಸಾಲಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಗಂಗೂಲಿ ಕೂಡ ಈ ಭದ್ರತೆಗೆ ಅರ್ಹರಾಗಿದ್ದಾರೆ.
ಕಾಲಿನ ಗಾಯದ ನಂತರ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿ ಪುನಃಶ್ಚೇತನ ತರಬೇತಿಗೆ ಒಳಗಾಗಲಿದ್ದಾರೆ. ಇದರ ನಡುವೆ 'ರಣ್ವೀರ್ ಶೋ'ನಲ್ಲಿ ಭಾಗವಹಿಸಿದ ಕೆಎಲ್ ರಾಹುಲ್, ಎಂಎಸ್ ಧೋನಿ (MS Dhoni), ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ನಾಯಕತ್ವದ ಕುರಿತು ಮಾಡನಾಡಿದ್ದಾರೆ. ನಾಯಕತ್ವದಲ್ಲಿ ಒಬ್ಬರಿಗೊಬ್ಬರು ಹೇಗೆ ಭಿನ್ನ ಎಂಬುದನ್ನು ರಾಹುಲ್ ವಿವರಿಸಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.