Rishabh Pant: ಭಾರತ ತಂಡಕ್ಕೆ ಮತ್ತೆ ಆಘಾತ; ಏಷ್ಯಾಕಪ್, ಏಕದಿನ ವಿಶ್ವಕಪ್ ಟೂರ್ನಿಗೂ ರಿಷಭ್ ಪಂತ್ ಅನುಮಾನ
ಕಾರು ಅಪಘಾತಕ್ಕೆ ಒಳಗಾಗಿ ಕಳೆದ ನಾಲ್ಕು ತಿಂಗಳಿಂದ ಕ್ರಿಕೆಟ್ ಸೇವೆಯಿಂದ ದೂರವಾಗಿರುವ ರಿಷಭ್ ಪಂತ್ ಅವರ ಇಂಜುರಿ ಅಪ್ಡೇಟ್ ಸಿಕ್ಕಿದೆ.
ಟೀಮ್ ಇಂಡಿಯಾ (Team India) ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ವಿಕೆಟ್ ಕೀಪರ್ ರಿಷಭ್ ಪಂತ್ (Wicket Keeper Rishabh Pant) ಇಂಜುರಿ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪಂತ್, ಮುಂಬರುವ ಏಷ್ಯಾಕಪ್ (Asia Cup) ಮತ್ತು ಏಕದಿನ ವಿಶ್ವಕಪ್ (ODI World Cup) ಟೂರ್ನಿಗೆ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಐಪಿಎಲ್ (IPL) ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship Final) ಪಂದ್ಯದಿಂದ ಹೊರ ಬಿದ್ದಿದ್ದು, ಇದೀಗ ಮುಂದಿನ ಪ್ರಮುಖ ಟೂರ್ನಿಗಳಿಗೂ ಅಲಭ್ಯರಾಗಲಿದ್ದಾರೆ.
ಈ ಬಗ್ಗೆ ಕ್ರಿಕ್ಬಜ್ ವರದಿ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರಂಭಿಕ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಸೋಲಿಗೆ ಶರಣಾಗಿತ್ತು. ಈ ವೇಳೆ ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದ ಪಂತ್, ಊರುಗೋಲು ಸಹಾಯದೊಂದಿಗೆ ತಂಡಕ್ಕೆ ಅಗತ್ಯ ಸಲಹೆ ನೀಡಿದ್ದರು. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy) ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ 7 ರಿಂದ 8 ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ ಎಂದು ವರದಿ ಹೇಳುತ್ತಿದೆ.
ರಿಷಭ್ ಪಂತ್ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಫಿಟ್ ಆಗಲು ಏಳೆಂಟು ತಿಂಗಳ ಸಮಯ ಬೇಕಾಗುತ್ತದೆ. ಅಲ್ಲದೆ ವಿಕೆಟ್ ಕೀಪಿಂಗ್ ಮಾಡಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಏಳೆಂಟು ತಿಂಗಳ ಬಳಿಕ ಕಣಕ್ಕಿಳಿದರೆ ಕೇವಲ ಬ್ಯಾಟರ್ ಆಗಿರಬೇಕಾಗುತ್ತದೆ. ಕೀಪಿಂಗ್ ಮಾಡಲು ಸಾಧ್ಯ ಆಗುವುದಿಲ್ಲ.ಇದೇ ಕಾರಣಕ್ಕೆ ರಿಷಭ್ ಅವರು ಏಷ್ಯಾಕಪ್, ಏಕದಿನ ವಿಶ್ವಕಪ್ ಅನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ವಾಕ್ ಸ್ಟಿಕ್ ಸಹಾಯವಿಲ್ಲದೆ ನಡೆದಾಡಲು ಕನಿಷ್ಠ ಒಂದೆರಡು ವಾರಗಳು ಬೇಕಾಗುತ್ತದೆ ಎಂದು ಪಂತ್ ಅವರ ನಿಕಟವರ್ತಿಗಳು ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್ನಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಈಗ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಗುಣಮುಖರಾಗಲು ಹೆಚ್ಚಿನ ಸಮಯ ಹಿಡಿಯಲಿದ್ದು, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ. ಈ ಮೊದಲು 2024ರ ಮೊದಲು ಕ್ರಿಕೆಟ್ಗೆ ಮರಳಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೀಗ ಅದು ಕೂಡ ಸಾಧ್ಯವಾಗುವುದಿಲ್ಲ. ಹಾಗಾಗಿ ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ವಿಶ್ವಕಪ್ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ, ಪಂತ್ ಗಾಯದ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟವಾಗಿದ್ದು, ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ಮತ್ತು ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ. ಡಿಸೆಂಬರ್ 30ರಂದು ದೆಹಲಿಯಿಂದ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಅಪಘಾತಕ್ಕೆ ಪಂತ್ ಕಾರು ಒಳಗಾಗಿತ್ತು. ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಬಳಿಕ ಪಂತ್ ಅವರನ್ನು ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಬೆನ್ನಲ್ಲೇ ಪಂತ್ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದಿದ್ದರು. ಅವರು ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ರಿಷಭ್ ಪಂತ್ ಅಲಭ್ಯತೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.