Hardik Pandya: ಕೊನೆಯ ಓವರ್ನಲ್ಲಿ ಮೋಹಿತ್ ಶರ್ಮಾ ರಿದಂ ಕಳೆದುಕೊಳ್ಳಲು ಕಾರಣವಾಗಿದ್ದೇ ಹಾರ್ದಿಕ್ ಪಾಂಡ್ಯ; ಗವಾಸ್ಕರ್, ಸೆಹ್ವಾಗ್ ಕಿಡಿ
ಉತ್ತಮ ಬೌಲಿಂಗ್ ಮಾಡುತ್ತಿದ್ದಾಗ ಮೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಸಲಹೆ ನೀಡಿದ್ದೇ ಸೋಲಿಗೆ ಕಾರಣ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಹಾಗೂ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಚಾಂಪಿಯನ್ ಆಗಿದೆ. ಇದರೊಂದಿಗೆ ಐದು ಬಾರಿ ಟ್ರೋಫಿ ಗೆದ್ದಿದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ಆದರೆ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸು ಹೊಂದಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದೆ.
ಗುಜರಾತ್ ಸೋತ ವಿಚಾರವಾಗಿಯೇ ಚರ್ಚೆಗಳು ಇನ್ನೂ ಮುಂದುವರೆದಿವೆ. ಗೆಲ್ಲಬಹುದಾಗಿದ್ದ ಪಂದ್ಯವನ್ನು ಗುಜರಾತ್ ಕೈ ಚೆಲ್ಲಿದೆ ಎಂದು ಮಾಜಿ ಕ್ರಿಕೆಟರ್ಗಳು ಕಿಡಿಕಾರುತ್ತಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಮತ್ತು ವಿರೇಂದ್ರ ಸೆಹ್ವಾಗ್ (Virender Sehwag) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಯ 2 ಎಸೆತಗಳಲ್ಲಿ ಸೋಲು
16ನೇ ಆವೃತ್ತಿಯ ಐಪಿಎಲ್ ಫೈನಲ್ನಲ್ಲಿ ಮುಖಾಮುಖಿಯಾದ ಗುಜರಾತ್ ಮತ್ತು ಚೆನ್ನೈ ನಡುವಿನ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕೊನೆಯ ಓವರ್ಗಳ ಚೆನ್ನೈ ಗೆಲುವಿಗೆ 13 ರನ್ಗಳ ಅವಶ್ಯಕತೆ ಇತ್ತು. ಕ್ರೀಸ್ನಲ್ಲಿ ರವೀಂದ್ರ ಜಡೇಜಾ (Ravindra Jadeja) ಮತ್ತು ಶಿವಂ ದುಬೆ (Shivam Dube) ಇದ್ದರು. ಬೌಲರ್ ಆಗಿ ಕಣಕ್ಕಿಳಿದಿದ್ದ ಮೋಹಿತ್ ಶರ್ಮಾ (Mohit Sharma), ಮೊದಲ 4 ಎಸೆತಗಳಲ್ಲಿ 3 ರನ್ ನೀಡಿದ್ದರು.
ಮೊದಲ ನಾಲ್ಕು ಎಸೆತಗಳನ್ನು ಯಾರ್ಕರ್ ಹಾಕಿದ ಮೋಹಿತ್, ಕೊನೆಯ ಎರಡು ಎಸೆತಗಳಲ್ಲಿ ಆತ್ಮ ವಿಶ್ವಾಸ ಕಳೆದುಕೊಂಡರು. ಕ್ರೀಸ್ನಲ್ಲಿದ್ದ ಜಡೇಜಾ, ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಚೆನ್ನೈ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಆದರೆ, ಕೊನೆಯ ಎಸೆತದವರೆಗೂ ಗುಜರಾತ್ ಗೆಲುವು ಸಾಧಿಸುತ್ತದೆ ಎನ್ನಲಾಗಿದ್ದ ಲೆಕ್ಕಾಚಾರಗಳು ಉಲ್ಟಾ ಆದವು.
ಕೆಂಗಣ್ಣಿಗೆ ಗುರಿಯಾದ ಹಾರ್ದಿಕ್
ಮೊದಲ ನಾಲ್ಕು ಎಸೆತಗಳನ್ನು ಎಸೆದಾಗ ಹಾರ್ದಿಕ್ ಪಾಂಡ್ಯ (Hardik Pandya) ಮೋಹಿತ್ ಶರ್ಮಾಗೆ ಯಾವುದೇ ರೀತಿಯ ಸಲಹೆ ಕೊಟ್ಟಿರಲಿಲ್ಲ. ಆದರೆ ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿದ್ದಾಗ ಮೋಹಿತ್ಗೆ ಹಾರ್ದಿಕ್ ಸಲಹೆ ನೀಡಿದರು. ಆಗ ಉಳಿದೆರಡೂ ಎಸೆತಗಳಲ್ಲಿ ಸಿಕ್ಸ್ ಮತ್ತು ಫೋರ್ ಚಚ್ಚಿಸಿಕೊಂಡು ಸೋಲಿಗೆ ಕಾರಣರಾದರು. ಇದೇ ನೋಡಿ ಹಾರ್ದಿಕ್ ಪಾಂಡ್ಯ ಮಾಜಿ ಕ್ರಿಕೆಟರ್ಗಳ ಕೆಂಗಣ್ಣಿಗೆ ಕಾರಣವಾಗಿರೋದು. ಈ ಕುರಿತು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು, ಸೋಲಿಗೆ ಹಾರ್ದಿಕ್ ಪಾಂಡ್ಯ ಕಾರಣ ಎಂದು ಆರೋಪಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚರ್ಚಿಸುವ ಅಗತ್ಯವೇ ಇರಲಿಲ್ಲ
ಫೈನಲ್ ಪಂದ್ಯದ ಫೈನಲ್ ಓವರ್ನಲ್ಲಿ ಮೋಹಿತ್ ಶರ್ಮಾ ಅದ್ಭುತ ಬೌಲಿಂಗ್ ಮಾಡುತ್ತಿದ್ದರು. ಯೋಜನಗೆ ತಕ್ಕಂತೆ ಬೌಲಿಂಗ್ ಹಾಕುತ್ತಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3ರನ್ ನೀಡಿದ್ದರು. ಆದರೆ ಕೊನೆಯ ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ, ಮೋಹಿತ್ ಶರ್ಮಾ ಬಳಿಕ ಚರ್ಚಿಸುವ ಅಗತ್ಯವೇ ಇರಲಿಲ್ಲ. ಸಲಹೆ ಕೊಟ್ಟಿದ್ದಲ್ಲದೆ, ನೀರು ತರಿಸಿಕೊಟ್ಟರು. ಇದು ನನಗೆ ಅಚ್ಚರಿ ಮೂಡಿಸಿತು ಎಂದು ಗವಾಸ್ಕರ್ ಹೇಳಿದ್ದಾರೆ.
ಬೌಲರ್ ಉತ್ತಮ ಲಯದಲ್ಲಿದ್ದಾಗ ಅವರು ಮಾನಸಿಕವಾಗಿ ದೃಢವಾಗಿರುತ್ತಾರೆ. ಹಾಗಂತ ಯಾರೂ ಏನನ್ನೂ ಹೇಳಿಕೊಡಬಾರದು. ಅಂದರೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಬೌಲರ್ ಬಳಿ ಹೋಗಿ ಹಾರ್ದಿಕ್ ಪಾಂಡ್ಯ ಚರ್ಚಿಸಿ ಸಲಹೆ ನೀಡಿದರು. ಅವರ ಲಯ ತಪ್ಪಲು ಕಾರಣವಾಯಿತು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಸಲಹೆ ಕೊಟ್ಟ ಬಳಿಕ 5ನೇ ಸಿಕ್ಸರ್, 6ನೇ ಎಸೆತದಲ್ಲಿ ಜಡೇಜಾ ಫೋರ್ ಬಾರಿಸಿದರು.
ಸಮಯ ಹಾಳು ಮಾಡಿದ್ದೇ ಹಾರ್ದಿಕ್
ಸುನಿಲ್ ಗವಾಸ್ಕರ್ ಮಾತ್ರವಲ್ಲ, ಕ್ರಿಕ್ಬಜ್ನಲ್ಲಿ ಚಾಟ್ನಲ್ಲಿ ಪಾಲ್ಗೊಂಡಿದ್ದ ವಿರೇಂದ್ರ ಸೆಹ್ವಾಗ್ ಕೂಡ ಹಾರ್ದಿಕ್ ಪಾಂಡ್ಯರನ್ನು ದೂಷಿಸಿದ್ದಾರೆ. ಮೋಹಿತ್ ತಮ್ಮ ಯೋಜನೆಗಳನ್ನು ಪರಿಪೂರ್ಣತೆಗೆ ತಕ್ಕಂತೆ ಕಾರ್ಯಗತಗೊಳಿಸಲು ಯಶಸ್ವಿಯಾಗಿದ್ದರು. ಆದರೆ ಮಧ್ಯ ಪ್ರವೇಶಿಸಿದ ನಾಯಕ ಹಾರ್ದಿಕ್ ಪಾಂಡ್ಯ ಸಮಯ ಹಾಳು ಮಾಡಿದರು ಎಂದು ಸೆಹ್ವಾಗ್ ಕಿಡಿ ಕಾರಿದ್ದಾರೆ.
ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದ ಮೋಹಿತ್ ಶರ್ಮಾಗೆ ನೀವು ಯಾಕೆ ಹೋಗಿ ಮಾತನಾಡಿದ್ದು. ನೀವು ಅವರ ಸಮಯ ವ್ಯರ್ಥ ಮಾಡಿದ್ದೇಕೆ? ರನ್ಗಳಿಗೆ ನಿಯಂತ್ರಣ ಹಾಕುತ್ತಿದ್ದಾಗ ಅಡ್ಡ ಹೋಗಬಾರದಿತ್ತು. ಒಂದು ವೇಳೆ ನಾನು ಮೈದಾನದಲ್ಲಿದ್ದು, ನಾಯಕನಾಗಿದ್ದರೆ ನಾನು ಆತನಿಗೆ ತೊಂದರೆ ಕೊಡುತ್ತಿರಲಿಲ್ಲ ಎಂದು ಪಂದ್ಯದ ನಂತರ ಸೆಹ್ವಾಗ್ ಹೇಳಿದ್ದಾರೆ.