WTC Final 2023: ಡಬ್ಲ್ಯುಟಿಸಿ ಫೈನಲ್ಗೆ ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಬೇಕು; ಮಾಜಿ ಕೋಚ್ ರವಿಶಾಸ್ತ್ರಿ ಸಂಚಲನ ಹೇಳಿಕೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕನನ್ನಾಗಿ ನೇಮಕ ಮಾಡಬೇಕು ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಆದರೆ ಹೀಗೆ ಯಾಕೆ ಹೇಳಿದ್ದಾರೆ ಎಂಬುದನ್ನು ಈ ವರದಿಯಲ್ಲಿ ನೋಡಿ.
ಪ್ರಸಕ್ತ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಲಾ 4ರಲ್ಲಿ ಗೆಲುವು - ಸೋಲು ಕಂಡಿದೆ. ಕಳೆದ ಮೂರು ಪಂದ್ಯಗಳಿಂದ ಫಾಫ್ ಡು ಪ್ಲೆಸಿಸ್ (Faf Du Plessis), ಇಂಜುರಿ ಕಾರಣ ನಾಯಕತ್ವ ವಹಿಸಿಲ್ಲ. ಹಂಗಾಮಿ ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ಅಖಾಡದಲ್ಲಿ ಎದುರಾಳಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ಸಿಗೂ ನಿವೃತ್ತಿ ಹೇಳಿರುವ ಕೊಹ್ಲಿ, 556 ದಿನಗಳ ಬಳಿಕ ಐಪಿಎಲ್ ಕ್ಯಾಪ್ಟನ್ಸಿ ಜವಾಬ್ದಾರಿ ಹೊತ್ತರು. ಸದ್ಯ ಅವರ ಮುಂದಾಳತ್ವದಲ್ಲಿ ಆರ್ಸಿಬಿ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ಬೀಗಿದೆ.
ಆರ್ಸಿಬಿ ಕ್ಯಾಪ್ಟನ್ ಆಗಿ ವಿರಾಟ್ ಮತ್ತೆ ಮರಳಿದ ಬೆನ್ನಲ್ಲೇ ಟೀಮ್ ಇಂಡಿಯಾ ಜವಾಬ್ದಾರಿಯನ್ನು ಮತ್ತೆ ವಹಿಸಿಕೊಳ್ಳುವಂತೆ ಫ್ಯಾನ್ಸ್ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಕ್ರಿಕೆಟರ್ಸ್ ಇದೇ ಮಾತನ್ನು ಉಲ್ಲೇಖಿಸಿದ್ದಾರೆ. ಈಗ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ಕೂಡ ಇದನ್ನೇ ಹೇಳಿದ್ದಾರೆ. ಭಾರತದ ಮುಂದಿನ ಸಿರೀಸ್ಗಳಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಅಲಭ್ಯರಾದರೆ ವಿರಾಟ್ ಕೊಹ್ಲಿ ಆ ಜವಾಬ್ದಾರಿ ವಹಿಸಬೇಕು ಎಂದು ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship) ಈ ವರ್ಷ ಜೂನ್ 7 ರಿಂದ 12 ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಪ್ರಕಟಿಸಿದೆ. ಆದರೆ, ಇತ್ತೀಚೆಗಷ್ಟೇ ರವಿಶಾಸ್ತ್ರಿ, ರೋಹಿತ್ ಇಲ್ಲದಿದ್ದರೆ ಕೊಹ್ಲಿಯನ್ನೇ ನಾಯಕರನ್ನಾಗಿ ನೇಮಿಸಬೇಕು ಎಂದು ಹೇಳಿದ್ದಾರೆ. ಆದರೆ ಯಾವಾಗ ವಿರಾಟ್ ಅವರನ್ನು ಕ್ಯಾಪ್ಟನ್ ಮಾಡಬೇಕು ಎಂದು ಕೂಡ ತಿಳಿಸಿದ್ದಾರೆ.
ಇಎಸ್ಪಿಎನ್ ಕ್ರಿಕ್ಇನ್ಫೋದಲ್ಲಿ ರವಿಶಾಸ್ತ್ರಿ ಮಾತನಾಡಿದ್ದು, ಭಾರತಕ್ಕೆ ಈ ಟೆಸ್ಟ್ (ಡಬ್ಲ್ಯೂಟಿಸಿ ಫೈನಲ್ ಪಂದ್ಯ) ಅತ್ಯಂತ ಮಹತ್ವದ್ದು. ರೋಹಿತ್ ಈ ಪಂದ್ಯಕ್ಕೆ ಫಿಟ್ ಆಗಬೇಕೆಂದು ನಾನು ಬಯಸುತ್ತೇನೆ. ಆದರೆ ಏನಾದರೂ ಸಂಭವಿಸಿ ಗಾಯಗೊಂಡು ತಂಡವನ್ನು ತೊರೆದರೆ, ನಾವು ಪರ್ಯಾಯವನ್ನು ಯೋಚಿಸಬೇಕು. ಅಂತಹ ಸಮಯದಲ್ಲಿ ಕೊಹ್ಲಿಗೆ ಸಾರಥ್ಯವನ್ನು ವಹಿಸಬೇಕು. ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಆಲೋಚನೆಯೂ ಹೀಗೆ ಇರುತ್ತದೆ ಎಂಬುದು ನನ್ನ ಭಾವನೆ ಎಂದಿದ್ದಾರೆ.
ಕಳೆದ ವರ್ಷ ಕೊರೊನಾ ಕಾರಣದಿಂದ ಮುಂದೂಡಲಾಗಿದ್ದ ಏಕೈಕ ಪಂದ್ಯಕ್ಕೆ ಭಾರತ ತಂಡವು ಪ್ರವಾಸ ಕೈಗೊಂಡಿತ್ತು. 2021ರಲ್ಲಿ ಈ ಟೆಸ್ಟ್ ಸರಣಿಯ 5ನೇ ಪಂದ್ಯವನ್ನು 2022ಕ್ಕೆ ಮುಂದೂಡಲಾಗಿತ್ತು. ಆದರೆ ಕೊರೊನಾ ಕಾರಣ ನಾಯಕ ರೋಹಿತ್ ಈ ಪಂದ್ಯವನ್ನು ಆಡಿರಲಿಲ್ಲ. ಅವರ ಅಲಭ್ಯತೆಯಲ್ಲಿ ಜಸ್ಪ್ರಿತ್ ಬೂಮ್ರಾ ಜವಾಬ್ದಾರಿ ಹೊತ್ತಿದ್ದರು. ಆದರೆ ಈ ಪಂದ್ಯವನ್ನು ಭಾರತ ಕೈಚೆಲ್ಲಿತು. ಪಂದ್ಯಕ್ಕೂ ಮುನ್ನ ಕೊಹ್ಲಿಯನ್ನು ನಾಯಕನನ್ನಾಗಿ ನೇಮಿಸಬೇಕೆಂದುಸಲಹೆ ನೀಡಿದ್ದೆವು ಎಂದು ಶಾಸ್ತ್ರಿ ಹೇಳಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಸರಣಿ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಕೊನೆಯ ಪಂದ್ಯವನ್ನು ಕೈಚೆಲ್ಲಿ ಸರಣಿ ಡ್ರಾಗೆ ಕಾರಣವಾಯಿತು. ನಾಯಕತ್ವವನ್ನು ಕೊಹ್ಲಿ ವಹಿಸಿದ್ದರೆ ಖಂಡಿತ ಭಾರತ ಗೆಲ್ಲುತ್ತಿತ್ತು. ಇದೀಗ ಇದೇ ಪರಿಸ್ಥಿತಿ ಮರುಕಳಿಸಿದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೊಹ್ಲಿ ಖಂಡಿತಾ ನಾಯಕರಾಗಬೇಕು ಎಂದು ಸಲಹೆ ನೀಡಿದ್ದಾರೆ.
WTC ಫೈನಲ್ಗೆ ಭಾರತೀಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಶಮಿ, ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.