Odisha train accident: ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ಚಹಲ್ 1 ಲಕ್ಷ ದೇಣಿಗೆ; ಕೊಹ್ಲಿ 30 ಕೋಟಿ ಕೊಟ್ಟಿಲ್ಲ, ಇದು ಸುಳ್ಳು ಸುದ್ದಿ
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಹಲ್, 1 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಚಹಲ್ ಸಹಾಯಹಸ್ತ ಚಾಚಿರುವ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ (Odisha Train Accident) 270ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, 1000ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈ ಘನ ಘೋರ ದುರಂತಕ್ಕೆ ದೇಶದ ಜೊತೆಗೆ ವಿಶ್ವವೂ ಮಮ್ಮಲ ಮರುಗಿದೆ. ಈ ಘೋರ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ದೇಶ-ವಿದೇಶಗಳ ಗಣ್ಯರೇ ಸಂತಾಸ ಸೂಚಿಸಿದ್ದರು. ಅದರಂತೆ ಕ್ರಿಕೆಟಿಗರು ಕೂಡ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್... ಹೀಗೆ ಪ್ರಮುಖ ಆಟಗಾರರು ಸಂತಾಪ ಸೂಚಿಸಿದ್ದರು.
1 ಲಕ್ಷ ದೇಣಿಗೆ ಕೊಟ್ಟ ಚಹಲ್
ಈಗ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಹಲ್ (Yuzvendra Chahal), 1 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಚಹಲ್ ಸಹಾಯಹಸ್ತ ಚಾಚಿರುವ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಅವರು ಜನಪ್ರಿಯ ಆನ್ಲೈನ್ ಗೇಮಿಂಗ್ ಟೀಮ್ S8ulesports ಯೂಟ್ಯೂಬ್ ಲೈವ್ ಸ್ಟ್ರೀಮ್ ಮೂಲಕ ದೇಣಿಗೆ ಸಂಗ್ರಹಿಸಿದ್ದರು. ಈ ವೇಳೆ ಲೈವ್ ಬಂದಿದ್ದ ಯುಜುವೇಂದ್ರ ಚಹಲ್ ಒಡಿಶಾ ರೈಲು ಅಪಘಾತದ ಸಂತ್ರಸ್ತರಿಗಾಗಿ 1 ಲಕ್ಷ ರೂಪಾಯಿ ದೇಣಿಗೆ ನೀಡಿದರು.
ಇನ್ನು ಚಹಲ್ ಅವರ ಈ ಮಾನವೀಯತೆಗೆ S8UL ತಂಡದ ಸದಸ್ಯರು, ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಆದರೆ ಚಹಲ್ ನೀಡಿದ ದೇಣಿಗೆ ಮೊತ್ತಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. ಕೆಲ ನೆಟ್ಟಿಗರು ಟೀಮ್ ಇಂಡಿಯಾ ಆಟಗಾರನಾಗಿ ಕೋಟಿ ಕೋಟಿ ದುಡಿಯುವ ಚಹಲ್, ಸಂತ್ರಸ್ತರ ನೆರವಿಗೆ ನೀಡಿದ ಮೊತ್ತ ತುಂಬಾ ಕಡಿಮೆ ಎಂದು ವಾದಿಸಿದರೆ, ಇನ್ನೂ ಹಲವರು ಕೊಡುವ ಮನಸ್ಸಿದ್ದರೆ ಎಷ್ಟಾದರೂ ಸಾಕು ಎಂದು ವಾದಿಸಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ಐಪಿಎಲ್ನಲ್ಲೇ 6.5 ಕೋಟಿ ದುಡಿಮೆ
ಇನ್ನೂ ಕೆಲವರು ಐಪಿಎಲ್ನಲ್ಲಿ ಪಡೆಯುವ ಸಂಬಳಕ್ಕೆ ಸಂಬಂಧಿಸಿ ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್ನ ಪ್ರತಿ ಸೀಸನ್ಗೆ 6.5 ಕೋಟಿ ಸಂಪಾದನೆ ಮಾಡುತ್ತಾರೆ. ಇದರ ಜೊತೆಗೆ ಜಾಹೀರಾತುಗಳಲ್ಲೂ ಕೋಟಿ ಕೋಟಿ ದುಡಿಯುತ್ತಾರೆ. ಪ್ರತಿ ಪಂದ್ಯಕ್ಕೂ ವೇತನ ಪಡೆಯುತ್ತಾರೆ. ಅಂತಹ ಆಟಗಾರನಿಂದ ಈಗ ಇಷ್ಟು ಮೊತ್ತದ ದೇಣಿಗೆ ನಿರೀಕ್ಷಿಸಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಸೆಹ್ವಾಗ್ ಅವರಿಂದ ಉಚಿತ ಶಿಕ್ಷಣ
ಒಂದೆಡೆ ಚಹಲ್ ಒಂದು ಲಕ್ಷ ದೇಣಿಗೆ ಕೊಟ್ಟಿದ್ದರೆ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag), ಅಪಘಾತದಲ್ಲಿ ಸಾವನ್ನಪ್ಪಿದ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಪಘಾತದ ಸ್ಥಳದ ಫೋಟೋದೊಂದಿಗೆ ಟ್ವೀಟ್ ಮಾಡಿರುವ ವೀರು, ಈ ಚಿತ್ರವು ನಮ್ಮನ್ನು ದೀರ್ಘಕಾಲ ಕಾಡುತ್ತದೆ. ಇಂತಹ ದುಃಖದ ಸಮಯದಲ್ಲಿ, ಈ ದುರಂತ ಅಪಘಾತದಲ್ಲಿ ಜೀವ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಬಲ್ಲೆ. ಅಂತಹ ಮಕ್ಕಳಿಗೆ ನಾನು ಸೆಹ್ವಾಗ್ ಇಂಟರ್ನ್ಯಾಶನಲ್ ಸ್ಕೂಲ್ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತೇನೆ ಎಂದು ಉದಾರತೆ ಮೆರೆದಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಕೊಹ್ಲಿ 30 ಕೋಟಿ ನೀಡಿರುವುದು ಸುಳ್ಳು
ಒಡಿಶಾದಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), 30 ಕೋಟಿ ರೂಪಾಯಿ ಸಹಾಯಹಸ್ತ ಚಾಚಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗುತ್ತಿವೆ. ಆದರೆ ಇದು ಸುಳ್ಳು ಸುದ್ದಿ. ಕೊಹ್ಲಿ ಈವರೆಗೂ ಅಂತಹ ಹೇಳಿಕೆ ನೀಡಿಲ್ಲ. ಇದೊಂದು ಸುಳ್ಳು ಸುದ್ದಿ. ಕೊಹ್ಲಿಯಾಗಲಿ ಅಥವಾ ಪತ್ನಿ ಅನುಷ್ಕಾ ಶರ್ಮಾ ಆಗಲಿ ಹೇಳಿಕೆ ಅಥವಾ ಪ್ರಕಟಣೆಯನ್ನಾಗಲಿ ನೀಡಿಲ್ಲ. ಸದ್ಯ ಇಂಗ್ಲೆಂಡ್ನಲ್ಲಿ ಡಬ್ಲ್ಯುಟಿಸಿ ಫೈನಲ್ ಆಡುತ್ತಿರುವ ಕೊಹ್ಲಿ, ಭಾರತಕ್ಕೆ ಮರಳಿದ ಬಳಿಕ ದೇಣಿಗೆ ಕೊಟ್ಟರೂ ಅಚ್ಚರಿ ಇಲ್ಲ. ಏಕೆಂದರೆ ಕೋವಿಡ್ ಸೇರಿದಂತೆ ಈ ಹಿಂದೆ ಹಲವಾರು ಬಾರಿ ಸಹಾಯ ಮಾಡಿದ್ದಾರೆ.