‘ಭಾರತ ಮಾರಾಟಕ್ಕಿಲ್ಲ’; ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್​ಗೆ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದೇಕೆ ಹಿಟ್ಲರ್​?
ಕನ್ನಡ ಸುದ್ದಿ  /  ಕ್ರೀಡೆ  /  ‘ಭಾರತ ಮಾರಾಟಕ್ಕಿಲ್ಲ’; ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್​ಗೆ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದೇಕೆ ಹಿಟ್ಲರ್​?

‘ಭಾರತ ಮಾರಾಟಕ್ಕಿಲ್ಲ’; ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್​ಗೆ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದೇಕೆ ಹಿಟ್ಲರ್​?

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್​ಗೆ ಜರ್ಮನ್ ಪೌರತ್ವ ನೀಡಲು ಮತ್ತು ತಮ್ಮ ಸೈನ್ಯದಲ್ಲಿ ಮಹತ್ವದ ಹುದ್ದೆ ನೀಡುವುದಾಗಿ ಅಡಾಲ್ಫ್ ಹಿಟ್ಲರ್ ಆಫರ್ ಕೊಟ್ಟಿದ್ದರು. ಆದರೆ, ಅದಕ್ಕೆ ಧ್ಯಾನ್ ಚಂದ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದರು.

‘ಭಾರತ ಮಾರಾಟಕ್ಕಿಲ್ಲ’; ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್​ಗೆ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದ ಹಿಟ್ಲರ್​
‘ಭಾರತ ಮಾರಾಟಕ್ಕಿಲ್ಲ’; ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್​ಗೆ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದ ಹಿಟ್ಲರ್​

ಮೇಜರ್​ ಧ್ಯಾನ್ ಚಂದ್.. ಭಾರತದ ಹಾಕಿ ದಿಗ್ಗಜ. ಇವರು ಹುಟ್ಟಿದ್ದು ಆಗಸ್ಟ್​ 29ರಂದು. ಹಾಕಿ ಮಾಂತ್ರಿಕನ ಜನ್ಮದಿನದ ನೆನಪಿನಾರ್ಥವಾಗಿ ಆ ದಿನವನ್ನು 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಎಂದು ಆಚರಣೆ ಮಾಡಲಾಗುತ್ತದೆ. ವಿಶ್ವಶ್ರೇಷ್ಠ ಕ್ರೀಡಾಪಟುವಾಗಿದ್ದ ಧ್ಯಾನ್ ಚಂದ್​ನನ್ನು ಸರಿಗಟ್ಟುವ ಆಟಗಾರ ಇಂದಿಗೂ ಯಾರೂ ಇಲ್ಲ. 1905ರ ಆಗಸ್ಟ್​ 29ರಂದು ಅಹ್ಮದಾಬಾದ್​​ನಲ್ಲಿ ಜನಿಸಿದ ಈತನಿಗೆ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್​​ ಜರ್ಮನ್​ ಪೌರತ್ವ ನೀಡಲು ಮುಂದಾಗಿದ್ದರು! ಏಕೆ?

1928, 1932 ಹಾಗೂ 1936ರ ಒಲಿಂಪಿಕ್​ಗಳಲ್ಲಿ ಭಾರತಕ್ಕೆ ಸತತ ಮೂರು ಹಾಕಿ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದ ಈತನ ಆಟಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್​​ ಅವರೇ ಬೆರಗುಗೊಂಡಿದ್ದರು. ಪ್ರೀತಿಯಿಂದ ಎಲ್ಲರಿಂದ ದಾದಾ ಎಂದು ಕರೆಸಿಕೊಳ್ಳುತ್ತಿದ್ದ ಧ್ಯಾನ್ ಚಂದ್​ಗೆ 1956ರಲ್ಲಿ ಭಾರತ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರು ಅಂತಾರಾಷ್ಟ್ರೀಯ ಹಾಕಿಯಲ್ಲಿ 400ಕ್ಕೂ ಅಧಿಕ ಗೋಲು ಸಿಡಿಸಿದ್ದಾರೆ. ಇದೊಂದು ಅದ್ಭುತ ಸಾಧನೆಯೂ ಹೌದು.

ಅಪ್ಪಟ ದೇಶಪ್ರೇಮಿ

ಅದು 1936ರ ಬರ್ಲಿನ್ ಒಲಿಂಪಿಕ್ಸ್​. ಇದಕ್ಕೂ ಮುನ್ನ ನಡೆದಿದ್ದ ಎರಡು ಒಲಿಂಪಿಕ್ಸ್​​ಗಳಲ್ಲಿ ಭಾರತ ಸತತ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು. ಧ್ಯಾನ್ ಚಂದ್ ಅವರೇ ನಾಯಕನಾಗಿದ್ದರು. ಬರ್ಲಿನ್ ಒಲಿಂಪಿಕ್ಸ್​ಗೂ ಅವರೇ ಮುಂದಾಳತ್ವ ವಹಿಸಿದ್ದರು. ಈ ಕ್ರೀಡಾಕೂಟವು ಜರ್ಮನ್​ನ ಬರ್ಲಿನ್​ನಲ್ಲಿ ನಡೆಯಿತು. ಫೈನಲ್​ನಲ್ಲಿ ಜರ್ಮನ್​ ವಿರುದ್ಧ ಭಾರತವು 8-1 ಗೋಲುಗಳಿಂದ ಗೆದ್ದು ಬೀಗುವುದರ ಜೊತೆಗೆ ಚಿನ್ನದ ಪದಕಕ್ಕೂ ಮುತ್ತಿಕ್ಕಿತು. ಈ ಪಂದ್ಯವು ಆಗಸ್ಟ್ 15, 1936 ರಂದು ನಡೆಯಿತು. ಇದು ಭಾರತದ ಇತಿಹಾಸದಲ್ಲಿ ನಂತರ ಮಹತ್ವದ್ದಾಗುವ ದಿನಾಂಕವಾಗಿದೆ.

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಭಾರತಕ್ಕಾಗಿ ಎಂಟು ಗೋಲುಗಳಲ್ಲಿ ಆರು ಗೋಲುಗಳನ್ನು ಗಳಿಸಿದ್ದರು. ಜರ್ಮನ್-ಭಾರತ ನಡುವಿನ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಹಿಟ್ಲರ್​, ಧ್ಯಾನ್ ಚಂದ್ ಆಟಕ್ಕೆ ಪ್ರಭಾವಿತರಾದರು. ಧ್ಯಾನ್ ಚಂದ್ ಅವರ ಸಾಧಾರಣ ಆಟ ನೋಡಿ ಬೆಕ್ಕಸ ಬೆರಗಾಗಿದ್ದರು. ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಿದ ಬಳಿಕ ಧ್ಯಾನ್​ ಚಂದ್​ರನ್ನು ಭೇಟಿಯಾದ ಹಿಟ್ಲರ್​​ ಆತನ ಆಟವನ್ನು ಅಭಿನಂದಿಸುತ್ತಾ ಒಂದು ಆಫರ್​​ ಕೂಡ ಕೊಟ್ಟಿದ್ದರು.

ನೀವು ಜರ್ಮನ್​ಗೆ ಬರುತ್ತೀರಾ? ನಮ್ಮ ಸೇನೆಯಲ್ಲಿ ದೊಡ್ಡ ಹುದ್ದೆ ನೀಡುತ್ತೇವೆ, ಜರ್ಮನ್ ಪೌರತ್ವ ಕೊಡುತ್ತೇವೆ ಎಂದು ಘೋಷಿಸಿದ್ದರು. ಆದರೆ ಧ್ಯಾನ್ ಚಂದ್ ಅವರು ಕಡ್ಡಿ ಮುರಿದಂತೆ ಹಿಟ್ಲರ್ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಅಪ್ಪಟ ದೇಶಪ್ರೇಮಿ ಧ್ಯಾನ್ ಚಂದ್, ಭಾರತ ತೊರೆದು ಎಲ್ಲೂ ಬರುವುದಿಲ್ಲ ಎಂದು ನಯವಾಗಿಯೇ ತಿರಸ್ಕರಿಸಿದ್ದರು. ಧ್ಯಾನ್ ಚಂದ್ ಹೆಮ್ಮೆಯಿಂದ ಹೇಳಿದ್ದರಂತೆ ‘ಭಾರತ ಮಾರಾಟಕ್ಕಿಲ್ಲ’ ಎಂದು. ಈ ಮಾಹಿತಿಯನ್ನು ಅಂದಿನ ಭಾರತದ ಮಾಜಿ ಹಾಕಿ ತರಬೇತುದಾರ ಸಯ್ಯದ್ ಅಲಿ ಸಿಬ್ಟೈನ್ ನಖ್ವಿ ನಿರೂಪಿಸಿದ್ದರು. ಧ್ಯಾನ್ ಚಂದ್ ಅವರಿಗೆ 'ಹಾಕಿ ಮಾಂತ್ರಿಕ' ಎಂಬ ಬಿರುದನ್ನು ಅಡಾಲ್ಫ್ ಹಿಟ್ಲರ್ ನೀಡಿದ್ದಾನೆಂದು ಹೇಳಲಾಗುತ್ತದೆ.

ಭಾರತ ಎರಡು ಬಾರಿ ಹ್ಯಾಟ್ರಿಕ್ ಚಿನ್ನದ ಪದಕ

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಹಾಕಿ ತಂಡ ಎರಡು ಬಾರಿ ಹ್ಯಾಟ್ರಿಕ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. 1928, 1932, 1936ರಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ಚಿನ್ನ ಜಯಿಸಿತ್ತು. ಧ್ಯಾನ್ ಚಂದ್ ನಾಯಕತ್ವದಲ್ಲಿ ಭಾರತ ಅತ್ಯಂತ ಯಶಸ್ವಿಯಾಗಿತ್ತು. ಸತತ ಮೂರು ಸಲ ಬಂಗಾರ ಗೆಲ್ಲಲು ಧ್ಯಾನ್ ಚಂದ್ ಪ್ರಮುಖ ಪಾತ್ರ ವಹಿಸಿದ್ದರು. 1948, 1952 ಮತ್ತು 1956ರಲ್ಲಿ ಮತ್ತೊಮ್ಮೆ ಭಾರತ ಹ್ಯಾಟ್ರಿಕ್ ಚಿನ್ನ ಜಯಿಸಿತ್ತು. ಆದರೆ ಈ ಅವಧಿಗೆ ಧ್ಯಾನ್ ಚಂದ್ ನಾಯಕನಾಗಿರಲಿಲ್ಲ.

1926ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಕಾಲಿಟ್ಟ ಧ್ಯಾನ್ ಚಂದ್ 1948ರ ತನಕ ಆಡಿದರು. ಅಂದರೆ 22 ವರ್ಷಗಳ ತನಕ ದೇಶಕ್ಕೆ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು 400ಕ್ಕೂ ಹೆಚ್ಚು ಗೋಲುಗಳ ಸಾಧನೆ ಮಾಡಿದ್ದರು. ನಿವೃತ್ತಿ ಹೊಂದಿದ 31 ವರ್ಷಗಳ ನಂತರ ಅಂದರೆ 1979ರ ಡಿಸೆಂಬರ್​ 3ರಂದು ನಿಧನರಾದರು. ಬಳಿಕ ಪ್ರತಿ ವರ್ಷ ಆತನ ಸ್ಮರಣಾರ್ಥ ಆಗಸ್ಟ್​ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.