ಕನ್ನಡ ಸುದ್ದಿ  /  Sports  /  Dont Compare Suryakumar Yadav With Sanju Samson Kapil Dev Shuts Critics

Kapil Dev: ಸೂರ್ಯ-ಸ್ಯಾಮ್ಸನ್​ ನಡುವೆ ಹೋಲಿಕೆ ಬೇಡ: ಟೀಕಾಕಾರರ ಬಾಯಿ ಮುಚ್ಚಿಸಿದ ಕಪಿಲ್ ದೇವ್​

ಸಂಜು ಸ್ಯಾಮ್ಸನ್​​​ಗೆ ಸಿಕ್ಕಿರುವ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ. ಆದರೂ ತಂಡದಲ್ಲಿಲ್ಲ. ಆದರೆ, ಏಕದಿನದಲ್ಲಿ SKYಗಿಂತ ಸಂಜು ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಚರ್ಚೆ ಮುಂದುವರೆದಿದೆ. ಆದರೀಗ ಕಪಿಲ್​ ದೇವ್​​, ಸೂರ್ಯ ಮತ್ತು ಸ್ಯಾಮ್ಸನ್​ ಅವರ ಹೋಲಿಕೆ ಸಲ್ಲದು ಎಂದಿದ್ದಾರೆ.

ಸೂರ್ಯಕುಮಾರ್​​​​ ಮತ್ತು ಸಂಜು ಸ್ಯಾಮ್ಸನ್​
ಸೂರ್ಯಕುಮಾರ್​​​​ ಮತ್ತು ಸಂಜು ಸ್ಯಾಮ್ಸನ್​

ಟೀಮ್​ ಇಂಡಿಯಾ - ಆಸ್ಟ್ರೇಲಿಯಾ (India vs Australia) ತಂಡಗಳ ನಡುವಿನ ಏಕದಿನ ಸರಣಿ ಪೂರ್ಣಗೊಂಡು ಮೂರು ದಿನಗಳು ಕಳೆದಿವೆ. ಆದರೂ ಸೂರ್ಯಕುಮಾರ್​​​​​​​ ಯಾದವ್​ (Suryakumar Yadav) ಕೆಟ್ಟ ಪ್ರದರ್ಶನ ಕುರಿತ ಚರ್ಚೆಗಳು ಮಾತ್ರ ಇನ್ನೂ ನಿಂತಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ಅವರೇ ಟಾಪ್​​ ಟ್ರೆಂಡಿಂಗ್​ನಲ್ಲಿದ್ದಾರೆ. ಟಿ20 ಕ್ರಿಕೆಟ್​ಗೆ ಯೋಗ್ಯರಷ್ಟೆ, ಏಕದಿನ ಕ್ರಿಕೆಟ್​ಗೆ ಅವರು ಬೇಡ ಎಂಬುದು ಫ್ಯಾನ್ಸ್​, ಮಾಜಿ ಕ್ರಿಕೆಟರ್​​​ಗಳದ್ದು ಒಂದೇ ವಾದ.

ಆಸಿಸ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೂರ್ಯ ಒಂದೇ ಒಂದು ರನ್​ ಗಳಿಸಲಿಲ್ಲ. 3 ಪಂದ್ಯಗಳಲ್ಲೂ ಗೋಲ್ಡನ್​​ ಡಕ್​​ ಆಗುವ ಮೂಲಕ ಕೆಟ್ಟ ದಾಖಲೆ ಬರೆದ ಅಪಖ್ಯಾತಿಗೂ ಒಳಗಾಗಿದ್ದಾರೆ. ಏಕದಿನದಲ್ಲಿ ಸಿಕ್ಕ ಅವಕಾಶದ ಲಾಭ ಪಡೆಯದ ಸೂರ್ಯರನ್ನು ಸಂಜು ಸ್ಯಾಮ್ಸನ್​​ಗೆ (Sanju Samson) ಹೋಲಿಸಿ, ಕೇರಳ ಕ್ರಿಕೆಟರ್​ಗೆ ಅನ್ಯಾಯ ಮಾಡಲಾಗಿದೆ ಎಂದು ಫ್ಯಾನ್ಸ್​ ಕಿಡಿಕಾರುತ್ತಿದ್ದಾರೆ.

ಸ್ಯಾಮ್ಸನ್​​​ಗೆ ಸಿಕ್ಕಿರುವ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ. ಆದರೂ ತಂಡದಲ್ಲಿಲ್ಲ. ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಕಾರಣಕ್ಕೆ ಸೂರ್ಯರನ್ನು ಬೆಂಬಲಿಸಲಾಗುತ್ತಿದೆ. ಆದರೆ ಏಕದಿನ ಕ್ರಿಕೆಟ್​​ನಲ್ಲಿ ಸ್ಯಾಮ್ಸನ್​​​​​​, SKYಗಿಂತ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಚರ್ಚೆ ಮುಂದುವರೆದಿದೆ. ಈಗ ಚರ್ಚೆಗೆ ಫುಲ್​​ಸ್ಟಾಪ್​​ ಇಟ್ಟಿರುವ ಲೆಜೆಂಡರಿ ಕ್ರಿಕೆಟಿಗ ಕಪಿಲ್​ ದೇವ್​​, ಸೂರ್ಯ ಮತ್ತು ಸ್ಯಾಮ್ಸನ್​ ಅವರ ಹೋಲಿಕೆ ಸಲ್ಲದು ಎಂದಿದ್ದಾರೆ.

ಸೂರ್ಯಕುಮಾರ್​ಗೆ ಬೆಂಬಲ ನೀಡಿರುವ 1983ರ ವಿಶ್ವಕಪ್ ವಿಜೇತ ತಂಡದ ಭಾರತದ ನಾಯಕ, ಸ್ಕೈ ಕ್ಯಾಲಿಬರ್‌ ಅನ್ನು ಹಾಡಿ ಹೊಗಳಿದ್ದಾರೆ. ಸಾಕಷ್ಟು ಟೀಕೆಗಳ ನಡುವೆಯೂ ಸೂರ್ಯ ಅವರಿಗೆ ಬೆಂಬಲ ನೀಡಿದ್ದಾರೆ. ಚೆನ್ನಾಗಿ ಆಡಿದ ಕ್ರಿಕೆಟಿಗನಿಗೆ ಯಾವಾಗಲೂ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಸೂರ್ಯ ಅವರನ್ನು ಸಂಜು ಸ್ಯಾಮ್ಸನ್ ಜೊತೆ ಹೋಲಿಕೆ ಮಾಡಬೇಡಿ, ಅದು ಸರಿಯೆನಿಸುವುದಿಲ್ಲ ಎಂದು ಹೇಳಿದ್ದಾರೆ.

ಸಂಜು ಸ್ಯಾಮ್ಸನ್​​ ಕೂಡ ಪ್ರತಿಭಾವಂತ ಕ್ರಿಕೆಟಿಗನೇ. ಒಂದು ವೇಳೆ ಸೂರ್ಯ ಸ್ಥಾನದಲ್ಲಿ, ಸಂಜು ಸ್ಯಾಮ್ಸನ್​ ಇದ್ದಿದ್ದರೆ ಆಗಲೂ ಹೀಗೆ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಸಂಜು ಅವಕಾಶ ಪಡೆದು ಕೆಟ್ಟ ಪ್ರದರ್ಶನ ತೋರಿದ್ದರೆ, ಇನ್ನೊಬ್ಬರ ಬಗ್ಗೆ ಮಾತನಾಡುತ್ತೀರಿ. ಇದು ಯಾವತ್ತೂ ಆಗಬಾರದು. ಪ್ರತಿ ಆಟಗಾರರಿಗೂ ಕೆಟ್ಟ ದಿನಗಳು ಇರುತ್ತವೆ. ಹಾಗಂತ ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.

ಕಳಪೆ ಪ್ರದರ್ಶನ ತೋರಿದ ಸಂದರ್ಭದಲ್ಲಿ ಜನರು ಮಾತನಾಡುತ್ತಾರೆ. ಅವರವರ ಅಭಿಪ್ರಾಯ ಹೊರ ಹಾಕುತ್ತಾರೆ. ಅವಕಾಶ ನೀಡದಂತೆ ಮನವಿ ಮಾಡುತ್ತಾರೆ. ಆದರೆ ಟೀಮ್​ ಮ್ಯಾನೇಜ್​ಮೆಂಟ್​ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಮ್ಯಾನೇಜ್​ಮೆಂಟ್ ಸೂರ್ಯರನ್ನು​​​ ಬೆಂಬಲಿಸುತ್ತಿರುವ ಕಾರಣಕ್ಕೆ ಹೆಚ್ಚೆಚ್ಚು ಅವಕಾಶ ನೀಡಲಾಗುತ್ತಿದೆ ಎಂದು ಕಪಿಲ್​​ ದೇವ್​ ಹೇಳಿದ್ದಾರೆ.

4ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಿದ ಸೂರ್ಯ, ಮೊದಲೆರಡು ಏಕದಿನ ಪಂದ್ಯಗಳಲ್ಲೂ ಒಂದೇ ಶೈಲಿಯಲ್ಲಿ ಗೋಲ್ಡನ್​ ಡಕ್​ ಆದರು. ಹಾಗಾಗಿ 3ನೇ ಪಂದ್ಯದಲ್ಲಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವಂತೆ ಕಳುಹಿಸಲಾಗಿತ್ತು. ಆಗಲೂ ಕೂಡ ಮೊದಲ ಎಸೆತದಲ್ಲೇ ವಿಕೆಟ್​​​ ಒಪ್ಪಿಸಿ ಹೊರ ನಡೆದರು. ಈ ಬಗ್ಗೆ ಮಾತನಾಡಿದ ಕಪಿಲ್​ ದೇವ್​, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಹೊಸದೇನಲ್ಲ ಎಂದಿದ್ದಾರೆ.

ಪಂದ್ಯ ಮುಗಿದ ನಂತರ ಮಾತನಾಡುವುದು ತುಂಬಾ ಸುಲಭ. ಬಹುಶಃ ಫಿನಿಷರ್​​ ಪಾತ್ರವನ್ನು ನಿಭಾಯಿಸಲಿ ಎಂಬ ಕಾರಣಕ್ಕೆ ಸೂರ್ಯ ಅವರನ್ನು 7ನೇ ಕ್ರಮಾಂಕದಲ್ಲಿ ಕಳುಹಿಸಿರುವ ಉದ್ದೇಶ ಹೊಂದಿರಬಹುದು. ಸೂರ್ಯ ಮಾತ್ರವಲ್ಲ, ಈ ಹಿಂದೆಯೂ ಅನೇಕ ಬಾರಿ ನಡೆದಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನಾಯಕ ಮತ್ತು ಕೋಚ್​​ ತೆಗೆದುಕೊಂಡ ಖಡಕ್​ ನಿರ್ಧಾರವೂ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.