ಕನ್ನಡ ಸುದ್ದಿ  /  Sports  /  Ethically Not Go Well Hardik Pandya Rules Himself Out From The Wtc Finals

WTC Final: ಟೆಸ್ಟ್​​ಗೆ​ ಮರಳುವ ಬಗ್ಗೆ ಸುಳಿವು ಕೊಟ್ಟ ಹಾರ್ದಿಕ್​.. ಆದರೆ ಫೈನಲ್​ ಆಡಲ್ಲ ಎಂದ ಆಲ್​ರೌಂಡರ್​​​​

WTC Final: ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ (Twitter)

ಜೂನ್ 7ರಂದು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ (ICC World Test Championship Final) ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು, ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಆ ಮೂಲಕ ಹತ್ತು ವರ್ಷಗಳ ಐಸಿಸಿ ಟ್ರೋಫಿ ಬರ ಕೊನೆಗಳಿಸಲು ಟೀಮ್​ ಇಂಡಿಯಾ ಯೋಜನೆ ರೂಪಿಸುತ್ತಿದೆ. ಈ ಪಂದ್ಯದ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಕಾರಣ, ಸ್ಪಿನ್ನರ್​​ಗಳಿಗಿಂತ ವೇಗದ ಬೌಲರ್​​ಗಳಿಗೆ ಮಣೆ ಹಾಕಲು ಭಾರತ ಚಿಂತಿಸಿದೆ.

ಇಂಗ್ಲೆಂಡ್​ ಪಿಚ್​ಗಳಲ್ಲಿ ಬೌಲಿಂಗ್​ ಆಲ್​ರೌಂಡರ್​ಗಳು ಅದ್ಭುತ ಪ್ರದರ್ಶನ ನೀಡಿರುವ ಉದಾಹರಣೆ ಇದೆ. ಹಾಗಾಗಿ ಈ ಸ್ಥಾನವನ್ನು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ನೀಡಲು ಬಿಸಿಸಿಐ, ಸೆಲೆಕ್ಟರ್ಸ್​​ ಮತ್ತು ಟೀಮ್​ ಮ್ಯಾನೇಜ್​ಮೆಂಟ್​​​ ಯೋಜನೆ ರೂಪಿಸಿದೆ. 2018ರ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಮರಳುವಂತೆ ಹೇಳಲು ಬಿಸಿಸಿಐ ಹಾರ್ದಿಕ್​ ಜೊತೆಗೆ ಮಾತುಕತೆ ನಡೆಸಲೂ ಚಿಂತನೆ ನಡೆಸಿತ್ತು.

ಬಿಸಿಸಿಐ ಚರ್ಚೆಗೆ ಸಿದ್ಧವಾಗಿದೆ ಎಂದರೆ, ಹಾರ್ದಿಕ್​ ಟೆಸ್ಟ್​​ ತಂಡಕ್ಕೆ ಕಂಬ್ಯಾಕ್​ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯಿತು. ಈ ಹಿಂದೆಯೂ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್​ ಪಾಂಡ್ಯ (Hardik Pandya), ಟೆಸ್ಟ್​​​ನಲ್ಲಿ ಅವಕಾಶ ಸಿಕ್ಕರೆ ಆಡುತ್ತೇನೆ ಎಂದು ಸುಳಿವು ನೀಡಿದ್ದರು. ಆದರೀಗ ಅದಕ್ಕೆ ಸ್ಪಷ್ಟನೆ ನೀಡಿರುವ ಹಾರ್ದಿಕ್​, ಇದು ಅಸಮಂಜಸ ಎಂದು ಹೇಳಿದ್ದಾರೆ.

ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಅದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.

WTC ಫೈನಲ್‌ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡ್ಯ, 'ಇಲ್ಲ, ನೈತಿಕವಾಗಿ ನಾನು ತುಂಬಾ ಬಲವಾದ ವ್ಯಕ್ತಿ. ಫೈನಲ್​ ಆಡುವ ಅರ್ಹತೆ ನನಗಿಲ್ಲ. ಅದಕ್ಕಾಗಿ ನಾನು ಶೇ 10 ರಷ್ಟು ಕೊಡುಗೆ ನೀಡಲಿಲ್ಲ. ವಾಸ್ತವವಾಗಿ ನಾನು ಭಾರತ WTC ಅನ್ನು ಫೈನಲ್​ಗೇರಲು ನನ್ನಿಂದ ಯಾವುದೇ ಕಾಣಿಕೆ ಬಂದಿಲ್ಲ. ಹಾಗಾಗಿ ನಾನೀಗ ಬೇರೆಯವರ ಜಾಗಕ್ಕೆ ಹೋಗುವುದು ನೈತಿಕವಾಗಿ ಸರಿಯಲ್ಲ ಎಂದು ಉತ್ತರಿಸಿದ್ದಾರೆ.

ನಾನು ಟೆಸ್ಟ್ ಕ್ರಿಕೆಟ್ ಆಡಬೇಕು ಎಂದುಕೊಂಡರೆ, ಮಾನಸಿಕವಾಗಿ ನನ್ನನ್ನು ಸಿದ್ಧಪಡಿಸಿಕೊಂಡು ಸ್ಥಾನ ಪಡೆದುಕೊಂಡ ನಂತರವೇ ಆಡುತ್ತೇನೆ. ನಾನು ನನ್ನನ್ನು ಸಾಬೀತುಪಡಿಸುವವರೆಗೆ ಭವಿಷ್ಯದಲ್ಲಿ ನಾನು ಟೆಸ್ಟ್‌ಗಳನ್ನು ಆಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಟೆಸ್ಟ್​ ಕ್ರಿಕೆಟ್​​ಗೆ ಲಭ್ಯವಿದ್ದೇನೆ ಎಂಬುದನ್ನು ಈ ಮೂಲಕ ಸುಳಿವು ನೀಡಿದ್ದಾರೆ.

ಉಪಖಂಡದ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಭಾವ ಬೀರಿದರೆ, ಇಂಗ್ಲೆಂಡ್‌ ಪಿಚ್​​​ಗಳು ಫಾಸ್ಟ್​​ ಬೌಲರ್​​ಗಗೆ ಸೂಕ್ತವಾಗಿವೆ. ಭಾರತದ ನೆಲದಲ್ಲಿ ಇಬ್ಬರು ವೇಗಿಗಳು, ಮೂವರು ಸ್ಪಿನ್ನರ್‌ಗಳಿದ್ದರೆ ಸಾಕು. ಆದರೆ ಇಂಗ್ಲೆಂಡ್‌ನಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳು ತಂಡಕ್ಕೆ ಹೆಚ್ಚಿನ ಯಶಸ್ಸು ತಂದುಕೊಡುತ್ತಾರೆ. WTC ಫೈನಲ್ ಆಡುವುದಿಲ್ಲ ಎಂದು ಹಾರ್ದಿಕ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಜಸ್​ಪ್ರಿತ್​ ಬೂಮ್ರಾ ಮತ್ತು ರಿಷಭ್​​ ಪಂತ್ ಅನುಪಸ್ಥಿತಿಯಲ್ಲಿ ಗೆಲುವು ಸಾಧಿಸುವುದು ಭಾರತಕ್ಕೆ ದೊಡ್ಡ ಸವಾವಾಗಿದೆ. ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಆಸೀಸ್ ತಂಡವನ್ನು 2-1 ಅಂತರದಿಂದ ಸೋಲಿಸಿತು. ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದಿರುವ ಟೀಮ್​ ಇಂಡಿಯಾ 2ನೇ ಏಕದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಮೊದಲ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ 2ನೇ ಏಕದಿನ ಪಂದ್ಯಕ್ಕೆ ರೋಹಿತ್​ ಮರಳಲಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ.