WPL 2023: ಕೊಹ್ಲಿಯಿಂದ RCBಗೆ ಗೆಲುವು.. ಮೆಂಟರ್ ಆಗಿ ಏನ್ ಮಾಡ್ತಿದ್ದೀರಾ? ಸಾನಿಯಾ ಮಿರ್ಜಾ ಫುಲ್ ಟ್ರೋಲ್!
Saniya Mirza Troll: ಸತತ ಐದು ಸೋಲುಗಳಿಂದ ಹೊರ ಬಂದಿರುವ RCB, ಮುಂದಿನ ಪಂದ್ಯಗಳಲ್ಲೂ ಅದೇ ಗೆಲುವು ಮುಂದುವರೆಸುವ ವಿಶ್ವಾಸದಲ್ಲಿದೆ. ಆದರೆ ಯುಪಿ ವಿರುದ್ಧ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಆರ್ಸಿಬಿ ಮೆಂಟರ್ ಆಗಿ ನೇಮಕಗೊಂಡಿರುವ ಸಾನಿಯಾ ಮಿರ್ಜಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಸತತ ಸೋಲುಗಳಿಂದ ಹೊರ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore), ಗೆಲುವಿನ ಲಯಕ್ಕೆ ಮರಳಿದೆ. ಮಾರ್ಚ್ 15ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ (UP Warriorz) ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಕನಸನ್ನೂ ಜೀವಂತವಾಗಿಟ್ಟುಕೊಂಡಿದೆ. ಆದರೆ, ಆರ್ಸಿಬಿ ಮೆಂಟರ್ ಸಾನಿಯಾ ಮಿರ್ಜಾ (Sania Mirza) ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಪ್ರೇರಣೆಯ ಮಾತುಗಳನ್ನಾಡಿ, ತಂಡದ ಗೆಲುವಿಗೆ ಕಾರಣರಾಗಿದ್ದರು. IPLನಲ್ಲಿ ತನಗಾದ ಅನುಭವ ಹಂಚಿಕೊಂಡ ಕೊಹ್ಲಿ, ಮಂಧಾನ ಬಳಗವನ್ನು ಹುರಿದುಂಬಿಸಿದ್ದರು. ಐದು ಪಂದ್ಯಗಳಲ್ಲಿ ಸೋತಿದ್ದೇವೆ ಎಂದು ಕುಗ್ಗಬಾರದು. ತಲೆ ಎತ್ತಿ ಆಡಬೇಕು. ನಾವು ವಿಶ್ವದ ಅತ್ಯದ್ಭುತ ಫ್ಯಾನ್ ಬೇಸ್ ಹೊಂದಿದ್ದೇವೆ. ಅವರಿಗಾಗಿ ಕಠಿಣ ಪರಿಶ್ರಮ ಹಾಕಬೇಕು ಎಂದು ಕೊಹ್ಲಿ ಹೇಳಿದರು.
ಕೊಹ್ಲಿ ಸ್ಪೂರ್ತಿಯ ಮಾತುಗಳಿಂದ ಪ್ರೇರಿತಗೊಂಡ ಆರ್ಸಿಬಿ ಮಹಿಳಾ ತಂಡ, ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿದೆ. ಸತತ ಐದು ಸೋಲುಗಳಿಂದ ಹೊರ ಬಂದಿರುವ RCB, ಮುಂದಿನ ಪಂದ್ಯಗಳಲ್ಲೂ ಅದೇ ಗೆಲುವು ಮುಂದುವರೆಸುವ ವಿಶ್ವಾಸದಲ್ಲಿದೆ. ಆದರೆ ಯುಪಿ ವಿರುದ್ಧ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಭಾರತದ ಟೆನಿಸ್ ತಾರೆ, ಆರ್ಸಿಬಿ ಮೆಂಟರ್ ಆಗಿ ನೇಮಕಗೊಂಡಿರುವ ಸಾನಿಯಾ ಮಿರ್ಜಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
15 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನಾಗಿ ಸಿಹಿ ಕಹಿ ದಿನಗಳನ್ನು ಕಂಡಿರುವ ವಿರಾಟ್ ಕೊಹ್ಲಿ, ಸ್ಪೂರ್ತಿದಾಯಕ ಮಾತುಗಳನ್ನಾಡಿ ಆರ್ಸಿಬಿ ಗೆಲುವಿನ ರುವಾರಿಯಾಗಿದ್ದಾರೆ. ಆದರೆ ಮೆಂಟರ್ ಆಗಿ ನೇಮಕಗೊಂಡ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.
ಇನ್ನೂ ಭರವಸೆ ಇದೆ. ಶೇ.1ರಷ್ಟು ಅವಕಾಶವಿದೆ. ಕೆಲವೊಮ್ಮೆ ಅದು ಸಾಕಷ್ಟು ಒಳ್ಳೆಯದು. ಈ ಮೂರು ಪಂದ್ಯಗಳಲ್ಲಿ ಏನೂ ಆಗದಿದ್ದರೂ, ಮುಂಬರುವ ಟೂರ್ನಿಯಲ್ಲಿ ಗೆದ್ದು ನಾಕೌಟ್ ಹಂತವನ್ನು ತಲೆಎತ್ತಿ ನಡೆಯುವಂತೆ ಮಾಡುವುದು ಮುಖ್ಯ ಎಂದು ಹೇಳಿದ್ದರು. ಆದರೆ ಈ ಕೆಲಸ ಮಾಡಬೇಕಿದ್ದ ಸಾನಿಯಾ ಮಿರ್ಜಾ ಏನು ಮಾಡುತ್ತಿದ್ದಾರೆ.? ಸುಮ್ಮನೆ ದುಡ್ಡು ಕೊಟ್ಟು ಕರೆತರಲಾಗಿದ್ಯಾ? ಅಂತೆಲ್ಲಾ ತರಾಟೆ ತೆಗೆದುಕೊಂಡಿದ್ದಾರೆ.
20 ದಿನಗಳಿಂದ ತಂಡದಲ್ಲಿರುವ ಸಾನಿಯಾ ಮಿರ್ಜಾ 1 ಪಂದ್ಯವನ್ನೂ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಆದರೆ ಕೊಹ್ಲಿ ಜಸ್ಟ್ 20 ನಿಮಿಷಗಳಲ್ಲಿ ಒಂದು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ, ನಿಮ್ಮ ಕೆಲಸವೇನು? ಏನು ಮಾಡುತ್ತಿದ್ದೀರಾ.? ಎಲ್ಲಿದ್ದೀರಾ ಎಂದೆಲ್ಲಾ ಟ್ವಿಟರ್ನಲ್ಲಿ ಫುಲ್ರೋಸ್ಟ್ ಮಾಡುತ್ತಿದ್ದಾರೆ. ಟೆನಿಸ್ ಪ್ಲೇಯರ್ನ ಮೆಂಟರ್ ಆಗಿ ನೇಮಿಸಿದರೆ ಹೀಗೆಯೇ ಆಗುತ್ತದೆ. ಕ್ರಿಕೆಟ್ನಲ್ಲಿ ಅದ್ಭುತ ಸಾಧನೆ ಮಾಡಿದ ಮಾಜಿ ಕ್ರಿಕೆಟರ್ಗಳನ್ನು ಮೆಂಟರ್ ಆಗಿ ನೇಮಕ ಮಾಡುವ ಅಗತ್ಯ ಇರಲಿಲ್ಲವೇ ಎಂದು ಫ್ರಾಂಚೈಸಿಯನ್ನೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಟ್ರೋಲ್ಗೆ ಒಳಗಾಗಿದ್ದ ಮಂಧಾನ!
ಸತತ ಐದು ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದಂತೆ ನಾಯಕಿ ಸ್ಮೃತಿ ಮಂಧಾನ ಕೂಡ ಟ್ರೋಲ್ ದಾಳಿಗೆ ಒಳಗಾಗಿದ್ದರು. ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್ ಕಳಪೆ ಪ್ರದರ್ಶನ ನೀಡುತ್ತಿದ್ದೀರಾ.? 3.40 ಕೋಟಿ ನೀರಲ್ಲಿ ಹೋಮ ಮಾಡಿದ್ದೀರಾ.? ಹೀಗೆ ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿಯ ಕೆಲ ಅಭಿಮಾನಿಗಳು ನಾಯಕಿ ಸ್ಮೃತಿ ಮಂಧಾನಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದರು.
ಸ್ಮೃತಿ ಮಂಧಾನಾ ತುಂಬಾ ಕೆಟ್ಟ ನಾಯಕಿ. ಅವರ ನಿರ್ಧಾರಗಳು ಕಳಪೆಯಾಗಿವೆ. ಅವರಿಗೆ ನಾಯಕತ್ವದ ಯಾವುದೇ ಅರ್ಹತೆಗಳಿಲ್ಲ. ಯಾವ ಆಟಗಾರ್ತಿಯರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎನ್ನುವ ತಿಳುವಳಿಕೆಯೇ ಇಲ್ಲ. ಅವರಿಗೆ ನೀಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.