ಕನ್ನಡ ಸುದ್ದಿ  /  Sports  /  Former Pakistan Spinner Danish Kaneria Fires Huge Starc Threat To Virat Kohli

Danish Kaneria: 'ಕೊಹ್ಲಿ ಸರಿಯಾಗಿ ಆಡುತ್ತಿಲ್ಲ; ನಟರಾಜನ್ ನೆಟ್ ಬೌಲಿಂಗ್‌ಗೆ ಅಭ್ಯಾಸ ಮಾಡಲಿ'; ಪಾಕ್ ಮಾಜಿ ಬೌಲರ್ ಸಲಹೆ

“ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ವಿರಾಟ್‌ ಅಭ್ಯಾಸ ಮಾಡಬೇಕಾಗುತ್ತದೆ. ತಂಡದ ಮ್ಯಾನೇಜ್‌ಮೆಂಟ್‌ ಟಿ ನಟರಾಜನ್‌ರಂತಹ ಎಡಗೈ ವೇಗಿಗಳನ್ನು ನೆಟ್ ಬೌಲರ್‌ ರೂಪದಲ್ಲಿ ಕರೆತರಬೇಕು” ಎಂದು ಕನೇರಿಯಾ ಸಲಹೆ ನೀಡಿದ್ದಾರೆ.

ವಿರಾಟ್‌ ವಿಕೆಟ್‌ ಪಡೆದ ಸ್ಟಾರ್ಕ್
ವಿರಾಟ್‌ ವಿಕೆಟ್‌ ಪಡೆದ ಸ್ಟಾರ್ಕ್ (ANI)

ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ 186 ರನ್ ಗಳಿಸುವ ಮೂಲಕ ತಮ್ಮ ಶತಕದ ಬರ ನೀಗಿಸಿದರು. ಆದರೆ, ಭಾರತದ ಮಾಜಿ ನಾಯಕ ಶುಕ್ರವಾರ ನಡೆದ ಏಕದಿನ ಪಂದ್ಯದಲ್ಲಿ ಇದೇ ರೀತಿಯ ಪ್ರದರ್ಶನ ಮುಂದುವರೆಸಲು ವಿಫಲರಾದರು. ಭಾರತವು ಆಸೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದರೆ ಅಗ್ರ ಕ್ರಮಾಂಕದ ಕುಸಿತದಿಂದಾಗಿ ಭಾರತವು ಕೇವಲ 189 ರನ್‌ ಗುರಿ ಬೆನ್ನತ್ತುವ ವೇಳೆಗೆ ಸುಸ್ತು ಬಿದ್ದಿತು.

ಎಂದಿನಂತೆ ವನ್‌ ಡೌನ್‌ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್‌, ಕೇವಲ 4 ರನ್ ಗಳಿಸಿದ್ದಾಗ ಔಟಾದರು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆ ಸಂದರ್ಭದಲ್ಲಿ ಕೊಹ್ಲಿ ಸೇರಿದಂತೆ ಯಾವುದೇ ಬ್ಯಾಟರ್ ಇದ್ದಿದ್ದರೂ, ಸ್ಟಾರ್ಕ್ ತಮ್ಮ ಚಾಕಚಕ್ಯಯಿಂದ ಅದೇ ರೀತಿಯ ಪ್ರದರ್ಶನ ನೀಡುತ್ತಿದ್ದರು. ಆದರೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಇದು ಕೊಹ್ಲಿಯ ದೌರ್ಬಲ್ಯ ಎಂದು ಜರಿದಿದ್ದಾರೆ.

ಕೊಹ್ಲಿ ಔಟಾಗಿದ್ದನ್ನು ನೋಡಿ, ಅವರು ಭಾರತದ ಮಾಜಿ ನಾಯಕನಿಗೆ ಎಚ್ಚರಿಕೆಯ ಕರೆಗಂಟೆಯನ್ನು ಕೊಟ್ಟಿದ್ದಾರೆ. ಸ್ಟಾರ್ಕ್‌ ಕೊಹ್ಲಿಯನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ನಲ್ಲಿಯೂ ಕಾಡಬಹುದು. ಹೀಗಾಗಿ ಕೊಹ್ಲಿ ಇನ್ನಷ್ಟು ಎಚ್ಚರಿಕೆಯಿಂದ ಬ್ಯಾಟ್‌ ಬೀಸಬೇಕು. ಸೂಕ್ತ ನೆಟ್‌ ಬೌಲರ್‌ ಬೌಲಿಂಗ್‌ಗೆ ಬ್ಯಾಟ್‌ ಬೀಸಬೇಕು ಎಂದು ಬಿಟ್ಟಿ ಸಲಹೆ ಕೊಟ್ಟಿದ್ದಾರೆ.

“ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ವಿರಾಟ್‌ ಅಭ್ಯಾಸ ಮಾಡಬೇಕಾಗುತ್ತದೆ. ತಂಡದ ಮ್ಯಾನೇಜ್‌ಮೆಂಟ್‌ ಟಿ ನಟರಾಜನ್‌ರಂತಹ ಎಡಗೈ ವೇಗಿಗಳನ್ನು ನೆಟ್ ಬೌಲರ್‌ ರೂಪದಲ್ಲಿ ಕರೆತರಬೇಕು” ಎಂದು ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ.

ಇದೇ ವೇಳೆ ಕೆಎಲ್ ರಾಹುಲ್ ಬಗ್ಗೆಯೂ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ತಂಡದಿಂದ ಕೈಬಿಡಲ್ಪಟ್ಟ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್, ಈ ಪಂದ್ಯವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆತಿಥೇಯರು 10.2 ಓವರ್‌ಗಳಲ್ಲಿ 39 ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಅಜೇಯ 75 ರನ್ ಗಳಿಸಿದರು. ಆ ಮೂಲಕ ಭಾರತವನ್ನು ಸುಲಭವಾಗಿ 189 ರನ್‌ಗಳತ್ತ ಮುನ್ನಡೆಸಿದರು. ಇವರಿಗೆ ಸಾಥ್‌ ನೀಡಿದ ಜಡೇಜಾ, 69 ಎಸೆತಗಳಲ್ಲಿ 45 ರನ್ ಗಳಿಸಿ ಅಜೇಯರಾಗಿ ಉಳಿದರು.

ರಾಹುಲ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಮಾಜಿ ಸ್ಪಿನ್ನರ್, “ಕೆಎಲ್ ರಾಹುಲ್ ಪ್ರಮುಖ ಹಿನ್ನಡೆಯನ್ನು ಎದುರಿಸಿದ್ದಾರೆ. ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ತಾನು ಉತ್ತಮವಾಗಿ ಆಡಬೇಕು ಮತ್ತು ಬಹಳ ಸಂವೇದನಾಶೀಲರಾಗಿರಬೇಕು ಎಂದು ಅವರಿಗೆ ತಿಳಿದಿದೆ. ಆಟಗಾರ ಫಾರ್ಮ್‌ ಕಳೆದುಕೊಂಡಾಗ ಅವರನ್ನು ತಂಡದಿಂದ ಕೈಬಿಡುವುದು ಸರಿಯಲ್ಲ. ನೀವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ,” ಎಂದು ಕನೇರಿಯಾ ಸಲಹೆ ನೀಡಿದ್ದಾರೆ.