ಕನ್ನಡ ಸುದ್ದಿ  /  Sports  /  Gautam Gambhir On Sri Lanka Captain Shanaka

Gambhir on Shanaka: 'ಆತ ಅಷ್ಟು ದುಬಾರಿ; ಒಂದು ವೇಳೆ ಹಾಗಾಗಿದ್ರೆ ಆತನ ಖರೀದಿಗೆ ಫ್ರಾಂಚೈಸಿಗಳ ಬಳಿ ಹಣವೇ ಇರುತ್ತಿರಲಿಲ್ಲ'

ಲಂಕಾ ನಾಯಕ ಶನಕ ಅವರು ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್
ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (file photo)

ಶ್ರೀಲಂಕಾ ನಾಯಕ ದಸುನ್ ಶನಕ ಸದ್ಯಕ್ಕೆ ಟಿ20ಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರ ಆಟ ಹಾಗೂ ನಾಯಕತ್ವ ನೋಡಿ, ಇವರಿನ್ನೂ ಐಪಿಎಲ್‌ ಆಡದಿರುವುದು ಅಚ್ಚರಿಯ ವಿಚಾರ ಎಂದು ಹಲವರು ಹೇಳುತ್ತಿದ್ದಾರೆ. ಭಾರತ ವಿರುದ್ಧದ ಎರಡನೇ ಟಿ20ಯಲ್ಲಿ ಅವರು 22 ಎಸೆತಗಳಲ್ಲಿ ಬಿರುಸಿನ 56 ರನ್ ಸಿಡಿಸಿದ್ದರು. ಅಲ್ಲದೆ ಎರಡು ವಿಕೆಟ್‌ಗಳನ್ನು ಕೂಡಾ ಪಡೆದು ಪಂದ್ಯಶ್ರೇಷ್ಠ ಆಟಗಾರ ಎನಿಸಿಕೊಂಡರು. ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಲಂಕಾ ಕಳೆದ ಪಂದ್ಯದಲ್ಲಿ ಗೆದ್ದಿತ್ತು. ಅಲ್ಲದೆ ಇಂದು (ಶನಿವಾರ) ನಡೆಯುವ ಮೂರನೇ ಮತ್ತು ಅಂತಿಮ ಟಿ20ಗಿಂತ ಮೊದಲೇ ಸರಣಿಯನ್ನು ಸಮಬಲಗೊಳಿಸಲು ಅವರ ಪ್ರದರ್ಶನ ನೆರವಾಯಿತು.

ಶನಕ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ, ಐಪಿಎಲ್‌ ಫ್ರಾಂಚೈಸಿಗಳ ಕಣ್ಣಿಗೆ ಬೀಳದಿರುವುದು ನಿಜಕ್ಕೂ ದುರ್ದೈವ ಎಂಬ ಅಭಿಪ್ರಾಯಗಳು, ಕ್ರಿಕೆಟ್‌ ಲೋಕದಲ್ಲಿ ಕೇಳಿಸತೊಡಗಿವೆ. ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಆಲ್‌ರೌಂಡರ್‌ಗಳು ಹೆಚ್ಚು ಬೇಡಿಕೆಯಲ್ಲಿದ್ದರು. ಅದರಂತೆಯೇ, ಸ್ಯಾಮ್ ಕರನ್, ಕ್ಯಾಮರೂನ್ ಗ್ರೀನ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಪ್ರತಿಭಾನ್ವಿತ ಆಲ್‌ರೌಂಡರ್‌ಗಳು ಭಾರಿ ಮೊತ್ತಕ್ಕೆ ಬಿಕರಿಯಾದರು.

ಆದರೆ, ಅಚ್ಚರಿಯೆಂಬಂತೆ ಶನಕ ಮಾರಾಟವಾಗಲಿಲ್ಲ. ತಮ್ಮ ಮೂಲ ಬೆಲೆಯಾದ 50 ಲಕ್ಷ ರೂಪಾಯಿಗೂ ಯಾವ ತಂಡವೂ ಶನಕ ಅವರನ್ನು ಖರೀದಿಸುವ ಆಸಕ್ತಿ ತೋರಲಿಲ್ಲ. ಇದು ಕ್ರೀಡಾಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಶನಕ ಮಾತ್ರ ಅಬ್ಬರದ ಫಾರ್ಮ್‌ ಅನ್ನು ಮುಂದುವರೆಸಿದ್ದಾರೆ. ಅಲ್ಲದೆ, ಪ್ರಸ್ತುತ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಎರಡು ಪಂದ್ಯಗಳಲ್ಲಿ 31 ವರ್ಷದ ಆಟಗಾರ ಬರೋಬ್ಬರಿ 206.12ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 101 ರನ್ ಗಳಿಸಿದ್ದಾರೆ. ಅಲ್ಲದೆ ಎರಡು ವಿಕೆಟ್‌ಗಳನ್ನು ಕೂಡಾ ಪಡೆದಿದ್ದಾರೆ.

ಇಷ್ಟೆಲ್ಲಾ ಆದರೂ, ಶನಕ ಅವರು ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ ಹರಾಜಿನಲ್ಲಿ ಶನಕಾ ಅವರ ಭವಿಷ್ಯದ ಬಗ್ಗೆ ಗಂಭೀರ್‌ ಮಹತ್ವದ ಮಾತುಗಳನ್ನಾಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಒಂದು ವೇಳೆ ಐಪಿಎಲ್‌ ಹರಾಜು ಪ್ರಕ್ರಿಯೆಯು ಭಾರತ ಮತ್ತು ಶ್ರೀಲಂಕಾ ಸರಣಿಯ ಸಮಯದಲ್ಲಿ ನಡೆದಿದ್ದರೆ, ಶ್ರೀಲಂಕಾ ನಾಯಕ ಭಾರಿ ಮೊತ್ತಕ್ಕೆ ಬಿಡ್‌ ಆಗುತ್ತಿದ್ದರು ಎಂದು ಗಂಭೀರ್‌ ಹೇಳಿದ್ದಾರೆ.

“ಶನಕ ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ, ನಮ್ಮ ಬಳಿ ಅವರನ್ನು ಖರೀದಿಸುವಷ್ಟು ಹಣವಿರುತ್ತಿರಲಿಲ್ಲ. ಅವರು ಅಷ್ಟು ದುಬಾರಿಯಾಗುತ್ತಾರೆ. ಒಂದು ವೇಳೆ ಈ ಸರಣಿಯು ಹರಾಜಿನ ಮುಂಚೆಯೇ ನಡೆದಿದ್ದರೆ, ಕೆಲವು ಫ್ರಾಂಚೈಸಿಗಳ ಬಳಿ ಬಹುಶಃ ಇವರನ್ನು ಖರೀದಿಸುವಷ್ಟು ಪರ್ಸ್‌ ಮೊತ್ತ ಇರುತ್ತಿರಲಿಲ್ಲ,” ಎಂದು ಗಂಭೀರ್ ಹೇಳಿದರು.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಹೋರಾಟ ಇಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಕಂಡಿತ್ತು. ಎರಡನೇ ಪೈಪೋಟಿಯಲ್ಲಿ ಸೋಲುವ ಮೂಲಕ ಸರಣಿಯಲ್ಲಿ 1-1 ಅಂತರದ ಸಮಬಲದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಹಾರ್ದಿಕ್ ಪಾಂಡ್ಯ ಬಳಗ ಇದೆ.

ತವರು ನೆಲದಲ್ಲಿ ಟೀಂ ಇಂಡಿಯಾ ಕಳೆದ 11 ಸರಣಿಗಳಲ್ಲಿ ಸೋಲು ಕಂಡಿಲ್ಲ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದು ಸರಣಿಯ ಗೆಲುವಿನ ನಾಗಾಲೋಟವನ್ನು ಮುಂದುವರೆಸಲು ಟೀಂ ಇಂಡಿಯಾ ತಂತ್ರ ರೂಪಿಸಿದೆ.