ಕನ್ನಡ ಸುದ್ದಿ  /  Sports  /  Gautam Gambhir Response To Venkatesh Prasad For Taking Jibe At Kl Rahul

Gautam Gambhir: 'ಕೆಲ ಮಾಜಿ ಕ್ರಿಕೆಟಿಗರಿಗೆ ತಮ್ಮ ಇರುವಿಕೆ ತೋರಿಸಲು ಮಸಾಲ ಹಾಕ್ತಾ ಇರ್ಬೇಕು': ಕೆಎಲ್ ಟೀಕಿಸಿದವರಿಗೆ ಗೌತಿ ಪರೋಕ್ಷ ಟಾಂಗ್

ನಮ್ಮಲ್ಲಿ ಟೀಕಿಸಲೆಂದೇ ಕೆಲ ಜನರು ಇರುತ್ತಾರೆ. ಕೆಲವೊಮ್ಮೆ ಮಾಜಿ ಕ್ರಿಕೆಟಿಗರಿಗೆ ಸಕ್ರಿಯವಾಗಿರಲು ಸ್ವಲ್ಪ ಮಸಾಲೆ ಹಾಕುವ ಅಗತ್ಯವಿರುತ್ತದೆ. ಅದಕ್ಕಾಗಿಯೇ ಅವರು ಜನರನ್ನು ಟೀಕಿಸುತ್ತಾರೆ. ನನ್ನ ಪ್ರಕಾರ, ಕೆಎಲ್ ಯಾವ ರೀತಿಯ ಆಟಗಾರನೆಂದರೆ, ಅವರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಗಂಭೀರ್‌ ಹೇಳಿದ್ದಾರೆ.

ಕೆಎಲ್ ರಾಹುಲ್, ವೆಂಕಟೇಶ್ ಪ್ರಸಾದ್, ಗೌತಮ್ ಗಂಭೀರ್
ಕೆಎಲ್ ರಾಹುಲ್, ವೆಂಕಟೇಶ್ ಪ್ರಸಾದ್, ಗೌತಮ್ ಗಂಭೀರ್ (Getty Images-AP-ANI)

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕನ್ನಡಿಗ ಕೆಎಲ್‌ ರಾಹುಲ್ ಬ್ಯಾಟಿಂಗ್ ಬಗ್ಗೆ ಪ್ರಶ್ನಿಸಿದ ಟೀಕಾಕಾರರಿಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 2023ರ ಆವೃತ್ತಿಯಲ್ಲಿ ಸ್ಟಾರ್ ಓಪನರ್ ಅನ್ನು ಉಪನಾಯಕ ಹುದ್ದೆಯಿಂದ ತೆಗೆದುಹಾಕಲಾಯ್ತು. ಆ ಬಳಿಕ ಇದೀಗ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿಕೆಟ್‌ ಕೀಪರ್ ಆಡುವ ಬಳಗಕ್ಕೆ ಮರಳಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆಸ್ಟ್ರೇಲಿಯಾ ಸರಣಿ‌ ಮುಕ್ತಾಯವಾದ ಬಳಿಕ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ಸೂಪರ್ ಜೈಂಟ್ಸ್ ತಂಡಕ್ಕೆ ಜಾಗತಿಕ ಮೆಂಟರ್ ಆಗಿ ನೇಮಕಗೊಂಡ ಗಂಭೀರ್, ಹೊಸ ಋತುವಿಗೆ ಮುಂಚಿತವಾಗಿ ಭಾರತೀಯ ಆರಂಭಿಕ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರನ್‌ ಬರ ಎದುರಿಸಿದ ಬಳಿಕ, ಐಪಿಎಲ್‌ನಲ್ಲಿ ರಾಹುಲ್ ಮತ್ತೆ ಅಬ್ಬರಿಸುತ್ತಾರೆಯೇ ಎಂಬ ಬಗ್ಗೆ ಗಂಭೀರ್ ಹೇಳಿಕೆ ನೀಡಿದ್ದಾರೆ. ಕಳೆದ ಋತುವಿನಲ್ಲಿ ಎಲ್‌ಎಸ್‌ಜಿ ತಂಡವನ್ನು ಪ್ಲೇಆಫ್ ಹಂತಕ್ಕೆ ಸ್ಟಾರ್ ಬ್ಯಾಟರ್ ಕೊಂಡೊಯ್ದಿದ್ದರು. ಇದೇ ವಿಚಾರವನ್ನು ಗಂಭೀರ್‌ ವಿಮರ್ಶಕರಿಗೆ ನೆನಪಿಸಿದ್ದಾರೆ.

“ಯಾವ ರೀತಿಯ ಒತ್ತಡ? ಕಳೆದ ಬಾರಿ ನಾವು (ಲಖನೌ ಸೂಪರ್ ಜೈಂಟ್ಸ್) ಐಪಿಎಲ್‌ ಅನ್ನು ಮೂರನೇ ಸ್ಥಾನಿಯಾಗಿ ಯಶಸ್ವಿಯಾಗಿ ಮುಗಿಸಿದ್ದೇವೆ. ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ನಮ್ಮ ನಡುವೆ ಕಠಿಣ ಹೋರಾಟ ನಡೆದಿತ್ತು. ನಿಸ್ಸಂಶಯವಾಗಿ ಕೇವಲ ಒಂದು ತಂಡ ಮಾತ್ರ ಟ್ರೋಫಿ ಎತ್ತಲು ಸಾಧ್ಯ. ಅಂತಿಮವಾಗಿ ಗುಜರಾತ್ ಐಪಿಎಲ್ ಟ್ರೋಫಿ ಗೆದ್ದಿತು. ನೀವು ಚೊಚ್ಚಲ ಋತುವಿನಲ್ಲೇ ಲಖನೌ ತಂಡದ ಪ್ರದರ್ಶನವನ್ನು ಗಮನಿಸಿದರೆ, ನಾವು ನೆಟ್‌ ರನ್‌ ರೇಟ್‌ ಆಧಾರದಲ್ಲಿ 3ನೇ ಸ್ಥಾನ ಗಳಿಸಿದೆವು. ಒಂದು ವೇಳೆ 2ನೇ ಸ್ಥಾನ ಗಳಿಸಿದ್ದರೆ, ಪ್ಲೇಆಫ್‌ನಲ್ಲಿ 2 ಅವಕಾಶಗಳನ್ನು ಪಡೆಯುತ್ತಿದ್ದೆವು” ಎಂದು ಗಂಭೀರ್ ಸ್ಪೋರ್ಟ್ಸ್‌ಟಾಕ್‌ಗೆ ತಿಳಿಸಿದರು.

“ಕೆಎಲ್ ರಾಹುಲ್ ಯಾವುದೇ ರೀತಿಯ ಒತ್ತಡದಲ್ಲಿದ್ದಾರೆ ಎಂದು ನನಗನಿಸುತ್ತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಒಂದಕ್ಕೊಂದು ಭಿನ್ನ. ಐಪಿಎಲ್‌ನಲ್ಲಿ 1000 ರನ್ ಗಳಿಸಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ ಮಾಡದಿದ್ದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಅಂದರೆ ಅದೇ. ಅಷ್ಟಕ್ಕೂ ಭಾರತದ ಪರ ಆಡುವ ಅವಕಾಶ ಕೇವಲ 15 ಆಟಗಾರರಿಗೆ ಮಾತ್ರ ಸಿಗುತ್ತದೆ. ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚು ಆಟಗಾರರು ಆಯ್ಕೆಯಾಗುತ್ತಾರೆ. ಹೀಗಾಗಿ, ನೀವು ಈ ಎರಡನ್ನೂ (ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್) ಹೋಲಿಕೆ ಮಾಡಬಾರದು ಎಂದು ಗಂಭೀರ್ ಹೇಳಿದ್ದಾರೆ.

ಕಳೆದ ವರ್ಷ ಲಖನೌ ಆಡಿದ ಚೊಚ್ಚಲ ಐಪಿಎಲ್ ಋತುವಿನಲ್ಲಿ ಎಲ್ಎಸ್‌ಜಿ ನಾಯಕ ರಾಹುಲ್ 616 ರನ್‌ ಸಿಡಿಸಿದ್ದರು. ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ರಾಹುಲ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ಗಂಭೀರ್, ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹಿರಿಯ ಬ್ಯಾಟರ್ ಸಾಧಾರಣ ಮೊತ್ತ ದಾಖಲಿಸಿದ ನಂತರ ಭಾರತದ ಮಾಜಿ ವೇಗಿ ಪ್ರಸಾದ್ ರಾಹುಲ್ ಮೇಲೆ ಕಟು ವಾಗ್ದಾಳಿ‌ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ, ಎಲ್ಲಾ ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರಿಸಿದರು. 75 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಟ್ಟರು.

“ರಾಹುಲ್ ಐಪಿಎಲ್‌ನಲ್ಲಿ ಹೇಗೆ ಆಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಟೂರ್ನಿಯಲ್ಲಿ 4-5 ಶತಕ ಸಿಡಿಸಿದ್ದಾರೆ. ನೀವು ಈಗಾಗಲೇ 4-5 ಶತಕಗಳನ್ನು ಸಿಡಿಸಿರುವ ಆಟಗಾರನ ಬಗ್ಗೆ ಮಾತನಾಡುತ್ತಿದ್ದೀರಿ. ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸಿದ್ದರು. ನಮ್ಮಲ್ಲಿ ಟೀಕಿಸಲೆಂದೇ ಕೆಲ ಜನರು ಇರುತ್ತಾರೆ. ಕೆಲವೊಮ್ಮೆ ಮಾಜಿ ಕ್ರಿಕೆಟಿಗರಿಗೆ ಸಕ್ರಿಯವಾಗಿರಲು ಸ್ವಲ್ಪ ಮಸಾಲೆ ಹಾಕುವ ಅಗತ್ಯವಿರುತ್ತದೆ. ಅದಕ್ಕಾಗಿಯೇ ಅವರು ಜನರನ್ನು ಟೀಕಿಸುತ್ತಾರೆ. ನನ್ನ ಪ್ರಕಾರ, ಕೆಎಲ್ ಯಾವ ರೀತಿಯ ಆಟಗಾರನೆಂದರೆ, ಅವರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗುವುದಿಲ್ಲ. ಕೇವಲ ಒಬ್ಬ ಆಟಗಾರನಿಂದ ಒಂದು ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ 25 ಆಟಗಾರರು ಕೂಡಾ ಪಂದ್ಯಾವಳಿಯನ್ನು ಗೆಲ್ಲಲು ತಂಡಕ್ಕೆ ಸಹಾಯ ಮಾಡುತ್ತಾರೆ,” ಎಂದು ಗಂಭೀರ್ ಹೇಳಿದರು.