ಕ್ಯಾಪ್ಟನ್ಸಿ ನೀಡುವುದಾಗಿ ನಂಬಿಸಿ ದ್ರೋಹ ಬಗೆದರು: ಅಚ್ಚರಿ ಹೇಳಿಕೆ ನೀಡಿದ ಸೆಹ್ವಾಗ್
Virender Sehwag: ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಸುಮಾರು ವರ್ಷಗಳೇ ಕಳೆದ ಬಳಿಕ ತಮಗೆ ನಾಯಕತ್ವ ಸಿಗದಿರುವ ಬಗ್ಗೆ ಸೆಹ್ವಾಗ್ ಮೌನ ಮುರಿದಿದ್ದಾರೆ. ನಾಯಕತ್ವ ನೀಡುವುದಾಗಿ ಹೇಳಿ ಮೋಸ ಮಾಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ವೀರೇಂದ್ರ ಸೆಹ್ವಾಗ್.. (Virender Sehwag) ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಓಪನರ್.! ತನಗೆ ತಿಳಿದಿದ್ದು ಒಂದೇ ದಂಡಂ ದಶಗುಣಂ ಆಟ.! ಹೊಡಿ, ಇಲ್ಲ ಔಟಾಗು ಎಂಬ ಮಂತ್ರವನ್ನು ಪಟಿಸುತ್ತಿದ್ದ ಸೆಹ್ವಾಗ್, ಬೌಲರ್ಗಳ ಮೇಲೆ ದಂಡ ಯಾತ್ರೆ ನಡೆಸುತ್ತಿದ್ದರು. ಎಲ್ಲರೂ ಸಿಂಗಲ್ ಮೂಲಕ ಖಾತೆ ತೆರೆಯುತ್ತಿದ್ದರೆ, ಸೆಹ್ವಾಗ್ ಮಾತ್ರ ಬೌಂಡರಿ ಸಿಡಿಸಿಯೇ ಖಾತೆ ತರೆಯುತ್ತಿದ್ದರು. ಇದು ಸೆಹ್ವಾಗ್ ಸ್ಟೈಲ್.!
ಬೌಲರ್ಗಳು ಸಹ ಸೆಹ್ವಾಗ್ ಎದುರು ಬೌಲಿಂಗ್ ಮಾಡೋದಕ್ಕೆ ಹೆದರುತ್ತಿದ್ದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡುತ್ತಿದ್ದ ಸೆಹ್ವಾಗ್, ಸಿಡಿಲಬ್ಬರದ ಬ್ಯಾಟಿಂಗ್ ಮೂಲಕವೇ ಪಂದ್ಯದ ಚಿತ್ರಣವನ್ನು ಬದಲಿಸುತ್ತಿದ್ದರು. ಘರ್ಜನೆ, ಆರ್ಭಟ, ಅಬ್ಬರ, ಗುಡುಗು - ಸಿಡಿಲು.. ಹೀಗೆ ಅದೆಷ್ಟೋ ಪದಗಳಿಗೆ ಸೆಹ್ವಾಗ್ ಸಮನಾರ್ಥಕ ಪದ.
ಆರಂಭಿಕನಾಗಿ ತಂಡವನ್ನು ಧೈರ್ಯಕ್ಕೆ ತುಂಬುತ್ತಿದ್ದ ವೀರೂ, 2007 ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರೂ ಆಗಿದ್ದರು. ಓಪನರ್ ಆಗಿ ರನ್ ಶಿಖರ ನಿರ್ಮಿಸುತ್ತಿದ್ದ ಡೆಲ್ಲಿ ಆಟಗಾರ, ಪಾರ್ಟ್ ಟೈಮ್ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದಾರೆ. 12 ಏಕದಿನ, 4 ಟೆಸ್ಟ್, 1 ಟಿ20 ಪಂದ್ಯವನ್ನೂ ಮುನ್ನಡೆಸಿದ್ದಾರೆ.
T20 ಕ್ರಿಕೆಟ್ನಲ್ಲಿ ಭಾರತ ತಂಡದ ಮೊದಲ ಕ್ಯಾಪ್ಟನ್ ಎನಿಸಿದ್ದ ಸೆಹ್ವಾಗ್ ಅವರಿಗೆ ಪೂರ್ಣಾವಧಿ ನಾಯಕನಾಗುವ ಅವಕಾಶ ಸಿಗಲೇ ಇಲ್ಲ. ಈ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿವೆ. ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಸುಮಾರು ವರ್ಷಗಳೇ ಕಳೆದ ಬಳಿಕ ತಮಗೆ ನಾಯಕತ್ವ ಸಿಗದಿರುವ ಬಗ್ಗೆ ಸೆಹ್ವಾಗ್ ಮೌನ ಮುರಿದಿದ್ದಾರೆ. ನಾಯಕತ್ವ ನೀಡುವುದಾಗಿ ಹೇಳಿ ಮೋಸ ಮಾಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಇತ್ತೀಚೆಗೆ ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಯಕತ್ವ ನೀಡದಿರುವ ಕುರಿತು ಮಾತನಾಡಿರುವ ಸೆಹ್ವಾಗ್, ಅಂದು ಟೀಮ್ ಇಂಡಿಯಾದ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ (Greg Chappell) ನನಗೆ ಮೋಸ ಮಾಡಿದ್ದರು. ಸೌರವ್ ಗಂಗೂಲಿ (Sourav Ganguly) ನಾಯಕನ ತ್ಯಜಿಸಿದ ನಂತರ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ನಿಮಗೆ ಸಿಗಲಿದೆ ಎಂದು ಹೇಳಿದ್ದರು. ಆದರೆ ಅದಾಗಿ ಎರಡು 2 ತಿಂಗಳಲ್ಲಿ ನನ್ನನ್ನೇ ತಂಡದಿಂದ ಹೊರ ಗಿಟ್ಟಿದ್ದರು ಎಂದು ಅಚ್ಚರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಮೊದಲಿಗೆ ಸೌರವ್ ಗಂಗೂಲಿ ಬಳಿಕ ಸೆಹ್ವಾಗ್ಗೆ ನಾಯಕತ್ವ ನೀಡಬೇಕೆಂಬ ಕೂಗು ಜೋರಾಗಿತ್ತು. ಈ ಕೂಗಿನ ನಡುವೆಯೂ ರಾಹುಲ್ ದ್ರಾವಿಡ್ಗೆ (Rahul Dravid) ಪಟ್ಟ ಕಟ್ಟಲಾಗಿತ್ತು. ದ್ರಾವಿಡ್ರಿಂದ ಧೋನಿಗೆ ನಾಯಕತ್ವ ಹಸ್ತಾಂತರ ಮಾಡಲಾಯಿತು. ಸೆಹ್ವಾಗ್ರ ಕೋಪ ತಣ್ಣಗಾಗಿಸುವ ಲೆಕ್ಕಾಚಾರದಲ್ಲಿ ಉಪನಾಯಕತ್ವ ನೀಡಿದರಾದರೂ, ಇಲ್ಲಿಂದ ಸೆಹ್ವಾಗ್ಗೆ ತಂಡದ ಜವಾಬ್ದಾರಿ ಹೊರುವ ಅವಕಾಶ ಸಿಗಲೇ ಇಲ್ಲ. ಕೇವಲ ಪಾರ್ಟ್ ಟೈಮ್ ನಾಯಕನಾಗಿದ್ದರು.
ಇನ್ನು ಇದೇ ವೇಳೆ ವಿದೇಶಿ ಕೋಚ್ಗಳ ನೇಮಕದ ಕುರಿತು ಕೆಂಡ ಕಾರಿದ್ದಾರೆ. ಭಾರತದಲ್ಲೇ ಅನೇಕರು ಕೋಚಿಂಗ್ ಸ್ಥಾನಕ್ಕೆ ಅರ್ಹರಿದ್ದಾರೆ. ವಿದೇಶಿ ಕೋಚ್ಗಳು ನಮಗೆ ಅಗತ್ಯ ಇಲ್ಲ. ನಾನಿನ್ನೂ ತಂಡದಲ್ಲಿದ್ದಾಗ ಒಬ್ಬರನ್ನು ಕೇಳಿದ್ದೆ. ನಮಗೆ ವಿದೇಶಿ ಅಗತ್ಯ ಇದ್ಯಾ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು, ಭಾರತೀಯರೇ ಕೋಚ್ ಆದರೆ, ಪಕ್ಷಪಾತ ಹೆಚ್ಚಾಗುತ್ತದೆ. ಇಷ್ಟ ಬಂದವರಿಗೆ ಮಣೆ ಹಾಕುತ್ತಾರೆ. ಇಷ್ಟ ಬಂದವರು ಅವಕಾಶ ಪಡೆಯುತ್ತಾರೆ ಎಂದು ಹೇಳಿದ್ದರು. ನಿಜ ಹೇಳಬೇಕಂದರೆ ವಿದೇಶಿ ಕೋಚ್ಗಳೂ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ.