ಕನ್ನಡ ಸುದ್ದಿ  /  Sports  /  Hardik Pandya Remembered Ms Dhoni In Huge Remark

Hardik Pandya: 'ಧೋನಿ ಹೋದ ನಂತರ ಆ ಜವಾಬ್ದಾರಿ ನನ್ನ ಮೇಲಿದೆ'; ಮಾಹಿ ಕುರಿತು ಪಾಂಡ್ಯ ಹೇಳಿದ್ದೇನು?

ಟೀಮ್ ಇಂಡಿಯಾದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ವಹಿಸುತ್ತಿದ್ದ ಪಾತ್ರವನ್ನು ತಾನು ವಹಿಸಿಕೊಳ್ಳುತ್ತಿದ್ದೇನೆ ಎಂದು ಪಾಂಡ್ಯ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ
ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (BCCI/File)

ಅಹಮದಾಬಾದ್‌ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 168 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಭಾರಿ ರನ್‌ಗಳ ಅಂತರದಿಂದ ಗೆದ್ದು ಹೊಸ ದಾಖಲೆ ಸೃಷ್ಟಿಸಿದೆ. ಶುಬ್ಮನ್ ಗಿಲ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಬೌಲಿಂಗ್‌ನಲ್ಲಿ ವೇಗಿಗಳು ದಾಖಲೆ ನಿರ್ಮಿಸಿದರು. ಕಿವೀಸ್‌ ಪಾಳಯದ ಎಲ್ಲಾ 10 ವಿಕೆಟ್‌ಗಳನ್ನು ಕಿತ್ತು ವೇಗಿಗಳು ಹೊಸ ರೆಕಾರ್ಡ್‌ ಮಾಡಿದರು.

ಭಾರತದ ನಾಯಕ ಹಾರ್ದಿಕ್ ಪಾಂಡ್ಯ, ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು. ನಾಲ್ಕು ಓವರ್‌ಗಳನ್ನು ಎಸೆದ ಪಾಂಡ್ಯ, 16 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರು. ಮತ್ತೊಂದೆಡೆ ಬ್ಯಾಟಿಂಗ್‌ನಲ್ಲಿ 17 ಎಸೆತಗಳಲ್ಲಿ 30 ರನ್ ಗಳಿಸಿದರು. ಎಲ್ಲಾ ಮೂರು ಪಂದ್ಯಗಳಲ್ಲಿ ಬ್ಯಾಟ್ ಮತ್ತು ಬಾಲ್, ಎರಡರಲ್ಲೂ ಸಮಯೋಚಿತ ಕೊಡುಗೆ ನೀಡಿದ ನಾಯಕನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯ್ತು.

ಇತ್ತೀಚೆಗೆ ಪಾಂಡ್ಯ ಅವರ ಬ್ಯಾಟಿಂಗ್‌ನಲ್ಲಿನ ದೊಡ್ಡ ಮಟ್ಟದ ಬದಲಾವಣೆಗಳಾಗಿದ್ದನ್ನು ಗಮನಿಸಲಬಹುದು. ಅದರಲ್ಲೂ, ಕಳೆದ ವರ್ಷ ಗಾಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ನಂತರ, ಬ್ಯಾಟಿಂಗ್‌ನಲ್ಲಿ ಬದಲಾವಣೆ ಎದ್ದು ಕಾಣುತ್ತದೆ. ಅದುವೇ ಸ್ಟ್ರೈಕ್ ಬದಲಾಯಿಸುವ ಮತ್ತು ಹೆಚ್ಚು ಸ್ಫೋಟಕವಾಗಿ ಆಡದ ಪ್ರವೃತ್ತಿ. ಹೇಳಿಕೇಳಿ ಪಾಂಡ್ಯ ಪವರ್‌ ಹಿಟ್ಟರ್. ಸ್ಫೋಟಿಸುವುದು ಅವರ ನೈಸರ್ಗಿಕ ಗುಣ. ಆದರೆ, ಆವೇಶಭರಿತ ಆಟ ಅವರಲ್ಲಿ ಈಗ ಕಾಣಿಸುತ್ತಿಲ್ಲ. ಬದಲಾಗಿ ಸಮಯೋಚಿತವಾಗಿ ಬ್ಯಾಟ್‌ ಬೀಸುತ್ತಿದ್ದಾರೆ. ಈ ಬಗ್ಗೆ ಖುದ್ದು ಆಲ್ ರೌಂಡರ್ ಒಪ್ಪಿಕೊಂಡಿದ್ದಾರೆ. ತಮ್ಮ ಆಟವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಬೇಕಾಯ್ತು ಎಂದು ಅವರು ಹೇಳಿದ್ದಾರೆ.

“ನಾನು ಯಾವಾಗಲೂ ಸಿಕ್ಸರ್‌ಗಳನ್ನು ಸಿಡಿಸಲು ಆನಂದಿಸುತ್ತೇನೆ. ಆದರೆ ಪ್ರತಿಬಾರಿ ಹಾಗೆಯೇ ಮಾಡಲಾಗುವುದಿಲ್ಲ. ಇದು ಜೀವನವಾಗಿರುವುದರಿಂದ ನಾನು ವಿಕಸನಗೊಳ್ಳಬೇಕು. ನಾನು ಜೊತೆಯಾಟವನ್ನು ನಂಬಿದ್ದೇನೆ. ನನ್ನ ಬ್ಯಾಟಿಂಗ್ ಜೊತೆಗಾರನೊಂದಿಗೆ ನಾನಿದ್ದೇನೆ ಎಂಬ ಭರವಸೆಯನ್ನು ನೀಡಲು ಬಯಸುತ್ತೇನೆ. ತಂಡದ ಒತ್ತಡವನ್ನು ಸ್ವೀಕರಿಸಲು ಮತ್ತು ಅದನ್ನು ನಿಭಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ಕಲಿತಿದ್ದೇನೆ,” ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಪಾಂಡ್ಯ ಹೇಳಿದ್ದಾರೆ.

“ಬಹುಶಃ ಅದೇ ಕಾರಣಕ್ಕಾಗಿ ನಾನು ನನ್ನ ಸ್ಟ್ರೈಕ್ ರೇಟ್ ಅನ್ನು ಕಡಿಮೆ ಮಾಡಬೇಕಾಗಬಹುದು. ಹೊಸ ಪಾತ್ರಗಳನ್ನು ನಿಭಾಯಿಸಲು ನಾನು ಯಾವಾಗಲೂ ಎದುರು ನೋಡುತ್ತಿದ್ದೇನೆ. ನಾನು ಹೊಸ ಚೆಂಡಿನೊಂದಿಗೆ ಇನ್ನಿಂಗ್ಸ್‌ ಆರಂಭಿಸಲು ಬಯಸುತ್ತೇನೆ(ಇನ್ನಿಂಗ್‌ ಮೊದಲ ಓವರ್‌ ಬೌಲಿಂಗ್‌ ಮಾಡುವುದು). ಏಕೆಂದರೆ ಆ ಕಷ್ಟಕರವಾದ ಪಾತ್ರವನ್ನು ಬೇರೆ ಯಾರೋ ತೆಗೆದುಕೊಳ್ಳುವುದನ್ನು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಅವರು ಒತ್ತಡದಲ್ಲಿರುತ್ತಾರೆ. ಹೀಗಾಗಿ ನಾನು ನನ್ನ ತಂಡವನ್ನು ಮುಂದೆ ನಿಂತು ಮುನ್ನಡೆಸಲು ಬಯಸುತ್ತೇನೆ. ನಾನು ಮೊದಲ ಓವರ್‌ ಬೌಲಿಂಗ್‌ ಮಾಡುವ ಕೌಶಲ್ಯಗಳ ಮೇಲೆ ಗಮನ ಹರಿಸುತ್ತಿದ್ದೇನೆ,” ಎಂದು ಪಾಂಡ್ಯ ಹೇಳಿದ್ದಾರೆ.

ಟೀಮ್ ಇಂಡಿಯಾದ ಕೊನೆಯ ಕೆಲವು ವರ್ಷಗಳಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ವಹಿಸುತ್ತಿದ್ದ ಪಾತ್ರವನ್ನು ತಾನು ವಹಿಸಿಕೊಳ್ಳುತ್ತಿದ್ದೇನೆ ಎಂದು ಪಾಂಡ್ಯ ಹೇಳಿದ್ದಾರೆ. ಅದರಲ್ಲೂ, ಧೋನಿ ಸ್ಟ್ರೈಕ್ ಬದಲಾಯಿಸುವುದರ ಮೇಲೆ ಅವಲಂಬಿತರಾಗಿದ್ದರು. ಅವರ ಬ್ಯಾಟಿಂಗ್ ಜೊತೆಗಾರರು ಹೆಚ್ಚು ಆಕ್ರಮಣಕಾರಿ ಹೊಡೆತಗಳನ್ನಾಡಲು ಧೋನಿ ಅವಕಾಶ ನೀಡುತ್ತಿದ್ದರು.

“ಎಲ್ಲೋ ಒಂದು ಕಡೆ ಮಾಹಿ ಮಾಡುತ್ತಿದ್ದ ಪಾತ್ರವನ್ನು ನಿಭಾಯಿಸಲು ನನಗಿಷ್ಟವಿರಲಿಲ್ಲ. ಆದರೆ, ಆಗ ನಾನು ಚಿಕ್ಕವನಾಗಿದ್ದೆ. ಹೀಗಾಗಿ ಮೈದಾನದ ಸುತ್ತಲೂ ಹೊಡೆಯುತ್ತಿದ್ದೆ. ಈಗ ಅವರು ತಂಡದಲ್ಲಿ ಇಲ್ಲದ ಕಾರಣ ಆ ಜವಾಬ್ದಾರಿ ನನ್ನ ಮೇಲಿದೆ. ಅವರದೇ ದಾರಿಯಲ್ಲಿ ಹೋಗಿ, ನಾವು ಈಗ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. ತಂಡಕ್ಕಾಗಿ ನಾನು ಸ್ವಲ್ಪ ನಿಧಾನವಾಗಿ ಆಡಬೇಕಾದರೂ ಪರವಾಗಿಲ್ಲ,” ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.