ಕನ್ನಡ ಸುದ್ದಿ  /  Sports  /  India Vs South Africa 3rd T20i South Africa Won By 49 Runs

India vs South Africa 3rd T20I: 3ನೇ ಟಿ20ಯಲ್ಲಿ ದ.ಆಫ್ರಿಕಾಗೆ 49 ರನ್ ಗಳ ಭರ್ಜರಿ ಗೆಲುವು; ಭಾರತಕ್ಕೆ ಸರಣಿ ಜಯ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಯಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. 229 ರನ್‌ಗಳ ಗುರಿ ಬೆನ್ನತ್ತಿದ ಭಾರತ 49 ರನ್‌ಗಳಿಂದ ಪರಾಭವಗೊಂಡಿತು. ದಿನೇಶ್ ಕಾರ್ತಿಕ್ 46 ರನ್ ಗಳಿಸಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಟೀಂ ಇಂಡಿಯಾದ ವಿಕೆಟ್ ಪಡೆದಾಗ ದಕ್ಷಿಣ ಆಫ್ರಿಕಾ ತಂಡದ ಕೇಶವ್ ಮಹಾರಾಜ್ ಸಂಭ್ರಮಿಸಿದರು. (ಫೋಟೋ-ICC)
ಟೀಂ ಇಂಡಿಯಾದ ವಿಕೆಟ್ ಪಡೆದಾಗ ದಕ್ಷಿಣ ಆಫ್ರಿಕಾ ತಂಡದ ಕೇಶವ್ ಮಹಾರಾಜ್ ಸಂಭ್ರಮಿಸಿದರು. (ಫೋಟೋ-ICC)

ಇಂದೋರ್: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಹಾಗೂೂ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. 228 ರನ್‌ಗಳ ಗುರಿ ಬೆನ್ನತ್ತಿ ರೋಹಿತ್ ಪಡೆ 18.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 178 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಅಗ್ರಮಾನ್ಯ ಬ್ಯಾಟರ್ ಗಳು ಬ್ಯಾಟಿಂಗ್ ವಿಫಲತೆ ಅನುಭವಿಸಿದರು.

ದಿನೇಶ್ ಕಾರ್ತಿಕ್ (46) ಮತ್ತು ದೀಪಕ್ ಚಹಾರ್ (31) ಹೊರತುಪಡಿಸಿ ಉಳಿದವರು ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ದಕ್ಷಿಣ ಆಫ್ರಿಕಾ 49 ರನ್‌ಗಳ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಹರಿಣಗಳ ಬೌಲರ್‌ಗಳ ಪೈಕಿ ಪ್ರಿಟೋರಿಯಸ್ 3 ವಿಕೆಟ್ ಪಡೆದರು. ವೇನ್ ಪಾರ್ನೆಲ್, ಲುಂಗಿ ಎನ್ಗಿಡಿ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು. ಕೊನೆಯ ಪಂದ್ಯ ಸೋತಪು ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.

228 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಭಾರತದ ರನ್ ಖಾತೆ ತೆರೆಯುವ ಮುನ್ನವೇ ಆರಂಭಿಕ ಆಟಗಾರ, ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಳ್ಳಬೇಕಾಯಿತು. ರಬಾಡ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದ ರೋಹಿತ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಪಾರ್ನೆಲ್ ಎಸೆದ ಮುಂದಿನ ಓವರ್ ನಲ್ಲಿ ಒನ್ ಡೌನ್ ಬ್ಯಾಟರ್ ಶ್ರೇಯಸ್(1) ಅಯ್ಯರ್ ಬ್ಯಾಕ್ ಎಲ್ ಬಿ ಬಲೆಗೆ ಬಿದ್ದರು.

ಈ ವೇಳೆ ರಿಷಬ್ ಪಂತ್ (27) ಮತ್ತು ದಿನೇಶ್ ಕಾರ್ತಿಕ್ (46) ಭಾರತದ ಇನ್ನಿಂಗ್ಸ್ ಅನ್ನು ಮುನ್ನಡೆಸಲು ಪ್ರಯತ್ನಿಸಿದರು. ಲುಂಗಿ ಎಂಗಿಡಿ ಈ ಅಪಾಯಕಾರಿ ಜೋಡಿಯನ್ನು ಬೇರ್ಪಡಿಸಿದರು. ಪಂತ್ ಅವರ ಔಟಾಗುವ ಮೂಲಕ ಇವರ 41 ರನ್‌ಗಳ ಜೊತೆಯಾಟ ಕೊನೆಗೊಂಡಿತು.

ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ (8) ಅವರ ನೆರವಿನಿಂದ ದಿನೇಶ್ ಕಾರ್ತಿಕ್ ಕೆಲಕಾಲ ವಿಕೆಟ್ ಪತನ ತಡೆಯಲು ಯತ್ನಿಸಿದರು. ಅಪಾಯಕಾರಿಯಾಗುತ್ತಿದ್ದ ಕಾರ್ತಿಕ್ ಅವರನ್ನು ಕೇಶವ್ ಮಹಾರಾಜ್ ಬೌಲ್ಡ್ ಮಾಡುತ್ತಿದ್ದಂತೆ ಭಾರತದ ಕ್ಲೀನ್ ಸ್ವೀಪ್ ಕನಸು ಭಗ್ನಗೊಂಡಿತು. ಇದು ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಯಿತು.

ಇದಾದ ಕೆಲವೇ ಓವರ್ ಗಳಲ್ಲಿ ಅಂದರೆ ಎಂಡನೇ ಓವರ್ ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಿಟೋರಿಯಸ್ ಔಟ್ ಮಾಡಿದರು. ಇದು ಟೀಂ ಇಂಡಿಯಾಗೆ ಹೊಡೆತದ ಮೇಲೆ ಹೊಡೆತ ಬಿದ್ದಂತಾಯಿತು. ಅಲ್ಲಿಂದ ವೇಗವಾಗಿ ವಿಕೆಟ್‌ಗಳು ಬೀಳಲಾರಂಭಿಸಿದವು. ಮೊದಲು ಹರ್ಷಲ್ ಪಟೇಲ್ (17) ರನ್ ಗಳಿಸಿ ಸ್ಫೋಟಕ ಆಟದ ಮುನ್ಸೂಚನೆ ಕೊಟ್ಟು ಔಟಾದರು. ನಂತರ ಅಕ್ಷರ್ ಪಟೇಲ್ (9) ಅವರನ್ನು ಪಾರ್ನೆಲ್ ಬೇಗನೆ ಪೆವಿಲಿಯನ್ ಸೇರಿಸಿದರು.

ಇದಾದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ (2) ಅವರ ವಿಕೆಟ್ ಅನ್ನು ಕೇಶವ್ ಮಹಾರಾಜ್ ಕಿತ್ತರು. ಆದರೆ ಈ ವೇಳೆ ದೀಪಕ್ ಚಾಹರ್ ಕೆಲಕಾಲ ಸ್ಥಿರವಾಗಿ ಆಡಿದರು. ದಕ್ಷಿಣ ಆಫ್ರಿಕಾದ ಬೌಲರ್ ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಅಲ್ಲದೆ, ರನ್ ಗಳ ವೇಗವನ್ನು ಹೆಚ್ಚಿಸಿದರು. ದೀಪಕ್ 17 ಎಸೆತಗಳಲ್ಲಿ 31 ರನ್ ಗಳಿಸಿದರು. ಇದರಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿವೆ.

ಆದರೆ ಆಕ್ರಮಣಕಾರಿ ಚಾಹರ್ ಅವರನ್ನು ಪ್ರಿಟೋರಿಯಸ್ ಔಟ್ ಮಾಡಿದಾಗ, ಟೀಂ ಇಂಡಿಯಾ ಆಟ ಅಲ್ಲಿಗೆ ಮುಗಿಯಿತು. ಬ್ಯಾಟಿಂಗ್‌ನಲ್ಲಿ ಸ್ಥಿರತೆಯ ಕೊರತೆಯಿಂದ ಭಾರತ ಈ ಪಂದ್ಯದಲ್ಲಿ ಸೋಲನುಭವಿಸಿತು. 18.3 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು.

ಇದಕ್ಕೂ ಮುನ್ನ ಹರಿಣಗಳ ತಂಡ ಟಾಸ್ ಸೋತು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 227 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ ಬ್ಯಾಟ್ಸ್ ಮನ್ ರಿಲೆ ರಾಸೊ (100) ಶತಕ ಗಳಿಸಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (68) ಅರ್ಧಶತಕದೊಂದಿಗೆ ಮಿಂಚಿದರು. ಈಗಾಗಲೇ ಸರಣಿ ಸೋಲಿನಿಂದ ತತ್ತರಿಸಿರುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಬೃಹತ್ ಗುರಿ ನೀಡಿತ್ತು. ಭಾರತದ ಬೌಲರ್‌ಗಳಲ್ಲಿ ಉಮೇಶ್ ಯಾದವ್ ಮತ್ತು ದೀಪಕ್ ಚಹಾರ್ ತಲಾ ಒಂದು ವಿಕೆಟ್ ಪಡೆದರು. ಇಂದೋರ್ ನಲ್ಲಿ ಈ ಪಂದ್ಯ ನಡೆದಿತ್ತು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ