IPL 2023: ವಿರಾಟ್ ಕೊಹ್ಲಿ ಟ್ರೋಫಿ ಕನಸು ಈ ಬಾರಿ ನನಸಾಗಲಿದೆ: ಸಂಜಯ್ ಮಂಜ್ರೇಕರ್ ಭವಿಷ್ಯ
ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ (Sanjay Manjrekar) ಅವರು 15 ವರ್ಷಗಳಿಂದ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಿರುವ ಆರ್ಸಿಬಿ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲಿದ್ದು, ಟ್ರೋಫಿ ಬರ ನೀಗಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ
16ನೇ ಆವೃತ್ತಿಯ ಐಪಿಎಲ್ (IPL) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು (CSK vs GT) ಕಾದಾಟ ನಡೆಸಲಿವೆ. ಅದರಲ್ಲೂ ಪ್ರತಿ ವರ್ಷದಂತೆ ಈ ವರ್ಷವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ (Royal Challengers Bangalore) ನಿರೀಕ್ಷೆ ಹೆಚ್ಚಾಗಿದೆ. ಕಪ್ ಗೆಲ್ಲುವ ಫೇವರಿಟ್ ತಂಡವೂ ಎನಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಏಪ್ರಿಲ್ 2ರಂದು IPLನಲ್ಲಿ ಏಪ್ರಿಲ್ 2ರಂದು ತಮ್ಮ ಅಭಿಯಾನ ಆರಂಭಿಸಲಿದೆ. ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು (Mumbai Indians) ಎದುರಿಸಲಿದೆ. ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ ತಂಡವೇ ಮೇಲುಗೈ ಸಾಧಿಸಿದೆ. ಮುಂಬೈ 17 ಗೆಲುವು ದಾಖಲಿಸಿದ್ದರೆ, ಬೆಂಗಳೂರು 13 ಗೆಲುವು ಸಾಧಿಸಿದೆ.
ಇದೀಗ ಈ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆರ್ಸಿಬಿ ಅಭಿಮಾನಿಗಳಿಗೆ ಶುಭಸುದ್ದಿಯೊಂದನ್ನು ನೀಡಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ (Sanjay Manjrekar) ಅವರು 15 ವರ್ಷಗಳಿಂದ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಿರುವ ಆರ್ಸಿಬಿ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲಿದ್ದು, ಟ್ರೋಫಿ ಬರ ನೀಗಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ 15 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದಿಲ್ಲ. ಮೂರು ಫೈನಲ್ಗೇರಿದರೂ, ರನ್ನರ್ಅಪ್ಗಷ್ಟೇ ತೃಪ್ತಿಪಟ್ಟುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಮಂಜ್ರೇಕರ್, ಆರ್ಸಿಬಿ ಈ ಸಲ ಪ್ರಶಸ್ತಿ ಗೆಲ್ಲುವ ಅತ್ಯುತ್ತಮ ಅವಕಾಶ ಹೊಂದಿದೆ. ಆ ಮೂಲಕ ವಿರಾಟ್ ಕೊಹ್ಲಿ ಅವರ ಟ್ರೋಫಿ ಕನಸು ನನಗಾಗಲಿದೆ. ಆದರೆ ಇದು ಸಾಧ್ಯವಾಗಬೇಕೆಂದರೆ ಅದು ಪರಿಣಾಮಕಾರಿ ಪ್ರದರ್ಶನದಿಂದ ಮಾತ್ರ ಎಂದು ಮಂಜ್ರೇಕರ್ ಹೇಳಿದ್ದಾರೆ.
ಅದ್ಭುತ ಫಾರ್ಮ್ನಲ್ಲಿದ್ದಾರೆ ಕೊಹ್ಲಿ!
ಕಳೆದ ವರ್ಷದ ಸೆಪ್ಟೆಂಬರ್ವರೆಗೂ ಅಂದರೆ ಮೂರು ವರ್ಷಗಳ ಕಾಲ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ತೀವ್ರ ವೈಫಲ್ಯ ಅನುಭವಿಸಿದ್ದರು. ರನ್ಗಳಿಸಲು ಪರದಾಟ ನಡೆಸಿದ್ದರು. ಆದರೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಕೊಹ್ಲಿ, ಅದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಈಗ ಐಪಿಎಲ್ನಲ್ಲೂ ಅದೇ ಲಯ ಮುಂದುವರೆಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಳೆಯ ಲಯಕ್ಕೆ ಮರಳಿದ ನಂತರ 3 ವರ್ಷಗಳ ನಂತರ ಶತಕ ಸಿಡಿಸಿದರು. ಏಷ್ಯಕಪ್-ಟಿ20 ವಿಶ್ವಕಪ್ನಲ್ಲಿ ಅಬ್ಬರದ ಆಟವಾಡಿದರು. ಏಕದಿನ ಕ್ರಿಕೆಟ್ನಲ್ಲೂ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದರು. ಟೆಸ್ಟ್ ಕ್ರಿಕೆಟ್ನಲ್ಲೂ ಫಾರ್ಮ್ಗೆ ಬಂದರು. ಸದ್ಯ ಕೊಹ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಪ್ರದರ್ಶನ ಆರ್ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊಹ್ಲಿಯ ಜೊತೆಗೆ ಉಳಿದವರ ಪ್ರದರ್ಶನವೂ ಅಗತ್ಯ ಎಂದು ಹೇಳಿದ್ದಾರೆ.
ಆರ್ಸಿಬಿ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಅನುಜ್ ರಾವತ್, ಆಕಾಶ್ ದೀಪ್, ಜೋಶ್ ಹ್ಯಾಜಲ್ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಕರಣ್ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್ವೆಲ್.