ಮನ್ವಿರ್ ಸಿಂಗ್ ನಿರ್ಣಾಯಕ ಗೋಲು; ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ಮಣಿಸಿದ ಭಾರತ
ಕನ್ನಡ ಸುದ್ದಿ  /  ಕ್ರೀಡೆ  /  ಮನ್ವಿರ್ ಸಿಂಗ್ ನಿರ್ಣಾಯಕ ಗೋಲು; ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ಮಣಿಸಿದ ಭಾರತ

ಮನ್ವಿರ್ ಸಿಂಗ್ ನಿರ್ಣಾಯಕ ಗೋಲು; ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ಮಣಿಸಿದ ಭಾರತ

India vs Kuwait: ಕುವೈತ್‌ ವಿರುದ್ಧ ಗೆದ್ದು ಭಾರತ‌ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ 2026ರ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಕುವೈತ್ ವಿರುದ್ಧ ಗೋಲು ಗಳಿಸಿದ ಮನ್ವಿರ್ ಸಿಂಗ್
ಕುವೈತ್ ವಿರುದ್ಧ ಗೋಲು ಗಳಿಸಿದ ಮನ್ವಿರ್ ಸಿಂಗ್

ಫಿಫಾ ವಿಶ್ವಕಪ್‌ 2026ಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವುದರ ಮೇಲೆ ಚಿತ್ತ ಹರಿಸಿರುವ ಭಾರತ ಫುಟ್ಬಾಲ್‌ ತಂಡವು, ಆರಂಭಿಕ ಯಶಸ್ಸು ಗಳಿಸಿದೆ. ಕುವೈತ್ ನಗರದಲ್ಲಿ ನವೆಂಬರ್‌ 16ರ ಗುರುವಾರ ನಡೆದ 2026ರ ಫಿಫಾ ವಿಶ್ವಕಪ್ (2026 FIFA World Cup) ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ, ಕುವೈತ್ ತಂಡವನ್ನು 1-0 ಗೋಲುಗಳಿಂದ ರೋಚಕವಾಗಿ ಸೋಲಿಸಿದೆ. ಮನ್ವಿರ್ ಸಿಂಗ್ (Manvir Singh) ಅವರ ಏಕೈಕ ನಿರ್ಣಾಯಕ ಗೋಲು ಛೆಟ್ರಿ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಜಾಬರ್ ಅಲ್-ಅಹ್ಮದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಇನ್ನೇನು ಡ್ರಾಗೊಳ್ಳುವ ಹಂತದಲ್ಲಿತ್ತು. ಆದರೆ 75ನೇ ನಿಮಿಷದಲ್ಲಿ ಮನ್ವಿರ್ ಅವರು ಎಡಗಾಲಿನ ಹೊಡೆತದಿಂದ ಲಾಲಿಯನ್ಜುವಾಲಾ ಚಾಂಗ್ಟೆ ನೀಡಿದ ಕ್ರಾಸ್ ಅನ್ನು ಗೋಲಿನತ್ತ ಅಟ್ಟಿದರು. ಆ ಮೂಲಕ ಭಾರತಕ್ಕೆ ಗೆಲುವು ಒಲಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ತಂಡವು ಮುಂದೆ ನವೆಂಬರ್ 21ರಂದು ಭುವನೇಶ್ವರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಬಲಿಷ್ಠ ಕತಾರ್ ತಂಡದ ವಿರುದ್ಧ ಆಡಲಿದೆ.

ಇದನ್ನೂ ಓದಿ : ವಿಶ್ವಚಾಂಪಿಯನ್‌ ಅರ್ಜೆಂಟೀನಾಗೆ ಅಚ್ಚರಿಯ ಸೋಲುಣಿಸಿದ ಉರುಗ್ವೆ; ವಿಶ್ವಕಪ್‌ ಬಳಿಕ ಮೊದಲ ಸೋಲು

ಭಾರತ ತಂಡವು ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಕತಾರ್, ಕುವೈತ್ ಮತ್ತು ಅಫ್ಘಾನಿಸ್ತಾನ ತಂಡಗಳ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳ ಮೂರನೇ ಸುತ್ತಿಗೆ ಲಗ್ಗೆ ಹಾಕಲಿವೆ.

ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು 2027ರ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯುತ್ತವೆ. ಭಾರತ ತಂಡವು ಇದುವರೆಗೂ ಎಎಫ್‌ಸಿಯ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಅರ್ಹತೆ ಪಡೆದಿಲ್ಲ. ಇದೇ ಮೊದಲ ಬಾರಿಗೆ ಈ ಮಾನ್ಯತೆ ಪಡೆಯುವ ನಿರೀಕ್ಷೆಯಲ್ಲಿ ತಂಡವಿದೆ.

ವಿಶ್ವ ಫುಟ್ಬಾಲ್‌ ರ‍್ಯಾಂಕಿಂಗ್‌ನಲ್ಲಿ ಪ್ರಸ್ತುತ 106ನೇ ಸ್ಥಾನದಲ್ಲಿರುವ ಭಾರತ ತಂಡವು, ಕಳೆದ ಜುಲೈ ತಿಂಗಳಲ್ಲಿ ನಡೆದ ಸ್ಯಾಫ್‌ (SAFF) ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಕುವೈತ್ (149ನೇ) ತಂಡವನ್ನು ಸೋಲಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಹಿಂದಿಗಿಂತ ಬಲಿಷ್ಠರಾಗಿದ್ದೇವೆ; ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಸಿದ್ಧರಾಗಿದ್ದೇವೆ: ಸುನಿಲ್‌ ಛೆಟ್ರಿ

ಫಿಫಾ ವಿಶ್ವಕಪ್ 2026ರ ಅರ್ಹತಾ ಸುತ್ತಿನ ಮುಂದಿನ ಸುತ್ತಿಗೆ ಪ್ರವೇಶಿಸಲು ಭಾರತ ಫುಟ್ಬಾಲ್‌ ತಂಡ ಸಜ್ಜಾಗಿದೆ. ಆಟಗಾರರು ಸಾಕಷ್ಟು ಸಮಯ ಹೊಂದಿರುವುದರಿಂದ, ತಂಡವು ಈ ಹಿಂದಿನ ಆವೃತ್ತಿಗಿಂತ ಹೆಚ್ಚು ಬಲಿಷ್ಠವಾಗಿದೆ. ಅಲ್ಲದೆ ಹೆಚ್ಚು ಸಿದ್ಧತೆ ನಡೆಸಿದೆ ಎಂದು ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್ ಛೆಟ್ರಿ ಭರವಸೆ ವ್ಯಕ್ತಪಡಿಸಿದ್ದಾರೆ.

ಕಳೆದ 6-8 ತಿಂಗಳುಗಳಲ್ಲಿ ತಂಡವು ಸ್ಥಿರ ಪ್ರದರ್ಶನ ನೀಡುತ್ತಿದೆ ಎಂದು ನಾನು ಭಾವಿಸುತ್ತೇನೆ. ಬಹಳಷ್ಟು ಹುಡುಗರು ತಂಡದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿಯೇ ಬಹುಶಃ ನಾವು ಎಲ್ಲಾ ಪಂದ್ಯಗಳಿಗೂ ಸಿದ್ಧರಾಗಿದ್ದೇವೆ ಅನಿಸುತ್ತಿದೆ ಎಂದು ಛೆಟ್ರಿ ಇತ್ತೀಚೆಗೆ ಮಾತನಾಡಿದ್ದಾರೆ.

ಕ್ರೀಡೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.