ತಾಯಿ ಕೂಲಿ ಕೆಲಸ; ಬಡ ಪ್ರತಿಭೆಯ ಬೆನ್ನಿಗೆ ನಿಂತ ಸಚಿವ ಎಂಬಿ ಪಾಟೀಲ್, ಏಷ್ಯನ್ ಗೇಮ್ಸ್ ತಯಾರಿಗಾಗಿ 4.60 ಲಕ್ಷ ಆರ್ಥಿಕ ನೆರವು
MB Patil: ವಿಜಯಪುರದ ಬಡ ಪ್ರತಿಭಾವಂತ ಕ್ರೀಡಾಪಟು ಹೆಚ್ಚಿನ ತರಬೇತಿಗಾಗಿ ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂಬಿ ಪಾಟೀಲ್ ಅವರು ಆರ್ಥಿಕ ನೆರವು ನೀಡಿದ್ದಾರೆ.

ವಿಜಯಪುರ: 2026ರಲ್ಲಿ ನಡೆಯುವ ಏಷ್ಯನ್ ಗೇಮ್ಸ್ಗೆ ತಯಾರಿ ನಡೆಸುತ್ತಿರುವ ಬಡ ಪ್ರತಿಭಾವಂತ ಕ್ರೀಡಾಪಟುವಿಗೆ ಹೆಚ್ಚಿನ ತರಬೇತಿಗೆ ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂಬಿ ಪಾಟೀಲ್ ಅವರು ಆರ್ಥಿಕ ನೆರವು ನೀಡುವ ಮೂಲಕ ಓಟಗಾರರ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ಧಾರೆ. ಸಂಸ್ಥೆಯ ಅಧ್ಯಕ್ಷರ ಆಶಯದಂತೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್ ಇಂದು (ಏಪ್ರಿಲ್ 17) ನಗರದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ಯುವ ಕ್ರೀಡಾಪಟು ಎಂಡಿ ಪೈಗಂಬರ್ ಗೌಂಡಿ ಅವರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದ್ದಾರೆ.
ಈ ಕ್ರೀಡಾಪಟು ಏಷಿಯನ್ ಗೇಮ್ಸ್ಗೆ ತಯಾರಿ ನಡೆಸುತ್ತಿದ್ದು, ಹೆಚ್ಚಿನ ತರಬೇತಿಗಾಗಿ ಕೇರಳದಲ್ಲಿರುವ ಅಂತಾರಾಷ್ಟ್ರೀಯ ಸಲೀಂ ಶೇಕ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಸೇರ್ಪಡೆಯಾಗಿದ್ದಾರೆ. ಇವರಿಗೆ ಅಥ್ಲೇಟಿಕ್ ತರಬೇತಿಗೆ ಅಗತ್ಯವಾಗಿರುವ ಕ್ರೀಡಾ ಸಲಕರಣೆ, ವಸತಿ ಮತ್ತಿತರ ಶುಲ್ಕಕ್ಕೆ ಒಟ್ಟು 4.60 ಲಕ್ಷ ಅಗತ್ಯವಿದ್ದು, ಇದರ ಮೊದಲ ಕಂತಾದ 2.30 ಲಕ್ಷ ರೂಪಾಯಿ ಚೆಕನ್ನು ಶಾಸಕರು ವಿತರಿಸಿದ್ದಾರೆ. ಈ ವೇಳೆ ಮಾತನಾಡಿದ ಸುನೀಲ್ ಗೌಡ ಪಾಟೀಲ್, ನಿಮ್ಮ ಕನಸು ನನಸಾಗಲಿ. ಏಷ್ಯನ್ ಗೇಮ್ಸ್-2026ನಲ್ಲಿ ಉತ್ತಮ ಸಾಧನೆ ಮಾಡಿ ಬಸವ ನಾಡು ವಿಜಯಪುರ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಶುಭ ಹಾರೈಸಿದ್ದಾರೆ.
‘ಅಮ್ಮ ಕೂಲಿ ಕೆಲಸ ಮಾಡುತ್ತಾರೆ’
ಈ ವೇಳೆ ಮಾತನಾಡಿದ ಯುವ ಕ್ರೀಡಾಪಟು ಎಂಡಿ ಪೈಗಂಬರ್ ಗೌಂಡಿ ಮಾತನಾಡಿ ನಮ್ಮಂಥ ಬಡ ಕ್ರೀಡಾಪಟುಗಳ ಕನಸು ನನಸಾಗಲು ಸಚಿವ ಎಂಬಿ ಪಾಟೀಲ ಮತ್ತು ಶಾಸಕ ಸುನೀಲ್ ಗೌಡ ಪಾಟೀಲ್ ಅವರು ನೆರವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ನಮ್ಮ ತಾಯಿ ಸಾಹೇಬಿ ಗೌಂಡಿ ಬಾಬಾನಗರದಲ್ಲಿ ಕೂಲಿ ಕೆಲಸ ಮಾಡುತ್ತಾರೆ. ತಂದೆ ಅಲ್ಲಾಭಕ್ಷಿ ಗೌಂಡಿ ನಿಧನರಾಗಿದ್ದು, ಸಹೋದರಿಯರಾದ ಬಿಬಿಜಾನ ಬಾರಿಕಟ್ಟಿ ಮತ್ತು ಜರೀನಾ ಮುಲ್ಲಾ ಅವರು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಶ್ರಮಿಸುವೆ, ಪದಕ ಗೆಲ್ಲುವೆ ಎಂದ ಪೈಗಂಬರ್ ಗೌಂಡಿ
ನಾನು ಒಂದರಿಂದ 4ನೇ ತರಗತಿವರೆಗೆ ತೆಲಸಂಗದಲ್ಲಿ 5 ರಿಂದ 10ನೇ ತರಗತಿವರೆಗೆ ಮತ್ತು ತಿಕೋಟಾದ ಎಬಿ ಜತ್ತಿ ಪಿಯು ಕಾಲೇಜಿನಲ್ಲಿ ವಿದ್ಯಾಭಾಷ ಈಗ ಮೂಡುಬಿದರೆ ಆಳ್ವಾಸ್ ಕಾಲೇಜಿನಲ್ಲಿ ಬಿಎ ಮೂರನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದೇನೆ. ರಾಜ್ಯ ಮಟ್ಟದ 100 ಮತ್ತು 200 ಮಿಟರ್ ಓಟದಲ್ಲಿ ಮೂರನೇ ಸ್ಥಾನ ಪಡೆದಿದ್ದೇನೆ. ಮೈಸೂರು ದಸರಾ ಕ್ರೀಡಾಕೂಟದಲ್ಲಿ 2017 ರಿಂದ 2025 ರವರೆಗೆ ಸತತವಾಗಿ ಪಾಲ್ಗೊಂಡು ಜಯ ಗಳಿಸಿದ್ದೇನೆ. ರಾಷ್ಟ್ರೀಯ ಮಟ್ಟದಲ್ಲಿ 7 ಅಥ್ಲೆಟಿಕ್ಸ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಇನ್ನು ಮುಂದೆ ಮತ್ತಷ್ಟು ಕಷ್ಟಪಟ್ಟು ತಯಾರಿ ನಡೆಸಿ ಮುಂಬರುವ ಏಷ್ಯನ್ ಗೇಮ್ನಲ್ಲಿ 100 ಮತ್ತು 200 ಮೀಟರ್ ಓಟದಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿ ಪದಕ ಗೆಲ್ಲಲು ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಎಲ್ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿವಿ ಕುಲಸಚಿವ ಡಾ ಆರ್ವಿ ಕುಲಕರ್ಣಿ, ಕ್ರೀಡಾಪಟುವಿನ ತಾಯಿ ಸಾಹೇಬಿ, ಬಿಎಲ್ಡಿಇ ಸಂಸ್ಥೆಯ ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್ಎಸ್ ಪಾಟೀಲ್, ಬಾಬಾನಗರದ ಮುಖಂಡರಾದ ಸಂಜುಕುಮಾರ ಆಯತವಾಡ, ಹರೀಶ ಬಿರಾದಾರ್, ವಿದ್ಯಾನಂದ ನಂದಗಾಂವ, ಶಂಕರ್ ಹೊನವಾಡ, ಮುತ್ತಪ್ಪ ನಾವಿ, ಗುರುಗೌಡ ಬಿರಾದಾರ, ಚಂದ್ರಶೇಕರ ರುದ್ರಗೌಡರ ಮುಂತಾದವರು ಉಪಸ್ಥಿತರಿದ್ದರು.