ಖೋ ಖೋ ವಿಶ್ವಕಪ್ ಗೆದ್ದ ಕನ್ನಡತಿ ಚೈತ್ರಾ ಸಾಧನೆಗೆ ತಂದೆ-ತಾಯಿ, ಕೋಚ್ ಸಂತಸ; ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ
ಖೋ ಖೋ ವಿಶ್ವಕಪ್ ಗೆದ್ದ ಆಟಗಾರ್ತಿ ಚೈತ್ರಾ ಸ್ವಾಗತಕ್ಕೆ ಹುಟ್ಟೂರು ತಿ.ನರಸೀಪುರದಲ್ಲಿ ಸಿದ್ಧತೆ ನಡೆಯುತ್ತಿದೆ. ಜನವರಿ 21ರ ಮಂಗಳವಾರ ಚೈತ್ರಾ ತಮ್ಮ ಹುಟ್ಟೂರಿಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಚೈತ್ರೋತ್ಸವ' ಕಾರ್ಯಕ್ರಮ ನಡೆಸಲಾಗುತ್ತಿದೆ.

ಮೈಸೂರು: ಚೊಚ್ಚಲ ಖೋ ಖೋ ವಿಶ್ವಕಪ್ನಲ್ಲಿ ಭಾರತ ಮಹಿಳೆಯರ ಖೋ ಖೋ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ನಲ್ಲಿ ನೇಪಾಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ತಂಡವು ಹೊಸ ಸಾಧನೆ ಮಾಡಿದೆ. ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡತಿ ಚೈತ್ರಾ, ಅಮೋಘ ಪ್ರದರ್ಶನ ನೀಡಿದರು. ಆ ಮೂಲಕ ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಮೈಸೂರಿನವರಾದ ಚೈತ್ರಾ ಪ್ರದರ್ಶನಕ್ಕೆ ಕರ್ನಾಟಕದ ಕ್ರೀಡಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೀಗಾಗಿ ಅವರ ಹುಟ್ಟೂರಾದ ತಿ.ನರಸೀಪುರದಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ತಿ.ನರಸೀಪುರದಲ್ಲಿ 'ಚೈತ್ರೋತ್ಸವ' ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಜನವರಿ 21ರ ಮಂಗಳವಾರ ಚೈತ್ರಾ ತಮ್ಮ ಹುಟ್ಟೂರಿಗೆ ಬರುತ್ತಿದ್ದಾರೆ. ಈ ವೇಳೆ ಅವರಿಗೆ ಅದ್ದೂರಿ ಸ್ವಾಗತ ಕೋರಲು ತಾಲೂಕಿನ ಸರ್ವ ಸಂಘಟನೆಗಳು ಯೋಜಿಸಿವೆ.
ಭಾರತ ಮಹಿಳಾ ಖೋ ಖೋ ತಂಡದಲ್ಲಿ ತಾಲೂಕಿನ ಕ್ರೀಡಾಪಟು ಚೈತ್ರಾ ಆಡಿರುವುದು ತಾಲೂಕಿಗೆ ಹೆಮ್ಮೆಯ ವಿಷಯ. ಭಾರತ ಮಹಿಳಾ ಖೋ ಖೋ ತಂಡಕ್ಕೆ ವಿಶ್ವಕಪ್ ಸಿಕ್ಕಿದೆ. ಜನವರಿ 21ರಂದು ಅವರು ತಿ.ನರಸೀಪುರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ತಾಲೂಕಿನ ಸರ್ವ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ ಎಂದು ಮುಖಂಡರು ಹೇಳಿದ್ದಾರೆ.
ಮನೆಯಲ್ಲಿ ಸಂಭ್ರಮ
ಭಾರತದ ಚೊಚ್ಚಲ ವಿಶ್ವಕಪ್ ಸಾಧನೆಯಲ್ಲಿ ಮಹೋನ್ನತ ಸೇವೆ ಸಲ್ಲಿಸಿದ ಕರ್ನಾಟಕದ ಆಟಗಾರ್ತಿ ಚೈತ್ರಾ, ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದವರು. ಮಗಳ ಸಾಧನೆಗೆ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗಳ ಹಳೆಯ ಟ್ರೋಪಿಗಳನ್ನು ಇಟ್ಟು ಪೋಷಕರು ಪ್ರದರ್ಶನ ಮಾಡುತ್ತಿದ್ದಾರೆ. ತಂದೆ ಬಸವಣ್ಣ, ತಾಯಿ ನಾಗರತ್ನ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.
ತಾಯಿ ನಾಗರತ್ನ ಖುಷಿ
ಹಳ್ಳಿಯ ಮಗಳು ಇಂತಹ ಸಾಧನೆ ಮಾಡಿರೋದು ನಮಗೆ ಹೆಮ್ಮೆ. ನಮ್ಮ ಮಗಳು ಓದುವಾಗ ಅವಳ ಇಷ್ಟದಂತೆ ನಾವು ಸಪೋರ್ಟ್ ಮಾಡಿದ್ದೇವೆ. ನನ್ನ ಮಗಳು ಓದು ಮತ್ತು ಆಟ ಎರಡರಲ್ಲೂ ಮುಂದು. ಆರಂಭದಲ್ಲಿ ಹಳ್ಳಿಯಲ್ಲಿ ಜನ ಸಾಕಷ್ಟು ಮಾತನಾಡಿದ್ರು. ನಾವು ಯಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಈಗ ಮಗಳ ಸಾಧನೆ ನೋಡಿದಾಗ ಜನರ ಮಾತನ್ನು ನಾನು ಆಶೀರ್ವಾದ ಅಂತ ತಿಳಿದುಕೊಂಡೆ. ಮುಂದೆ ನಮ್ಮ ಮಗಳು ಏನು ಮಾಡಬೇಕು ಅಂದುಕೊಂಡಿದ್ದಾಳೋ ಅದಕ್ಕೆ ಮುಕ್ತ ಅವಕಾಶ ಕೊಡುತ್ತೇವೆ ಎಂದು ತಾಯಿ ನಾಗರತ್ನ ಹೇಳಿದ್ದಾರೆ.
ಕೊಟ್ಟ ಮಾತನ್ನು ಉಳಿಸಿದ ಮಗಳು
ನನ್ನ ಮಗಳಿಗೆ ಕೋಚ್ ಮಂಜುನಾಥ್ ಎರಡನೇ ತಂದೆಯಂತೆ. ನಾವು ಜನ್ಮ ಕೊಟ್ಟ ತಂದೆ-ತಾಯಿ, ಅವರು ನಮ್ಮ ಹುಡುಗಿಗೆ ಒಳ್ಳೆಯ ದಾರಿ ತೋರಿಸಿದ್ದಾರೆ. ಮಗಳ ಸಾಧನೆ ನೋಡಿ ತುಂಬಾ ಖುಷಿ ಆಗುತ್ತಿದೆ. ನನ್ನ ಮಗಳು ಟೂರ್ನಿಗೆ ಹೋಗುವಾಗಲೇ ನಾನು ವಿಶ್ವಕಪ್ ಗೆದ್ದೇ ಬರುತ್ತೇನೆ ಎಂದಿದ್ದಳು. ಅದರಂತೆ ಗೆದ್ದು ಬಂದಿದ್ದಾಳೆ ಎಂದು ತಂದೆ ಬಸವರಾಜು ಹೇಳಿದ್ದಾರೆ.
ಚೈತ್ರಾ ಸಾಧನೆ ಕೊಂಡಾಡಿದ ತರಬೇತುದಾರ ಮಂಜುನಾಥ್
ಚೈತ್ರಾ 4ನೇ ತರಗತಿಯಲ್ಲಿ ಇದ್ದಾಗಿನಿಂದಲೂ ಖೋಖೋ ಹೇಳಿಕೊಟ್ಟಿದ್ದ ಶಿಕ್ಷಕ ಮಂಜುನಾಥ್, ಚೈತ್ರಾ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಚೈತ್ರಾ ಇತರ ಮಕ್ಕಳಿಗೂ ಸ್ಪೂರ್ತಿ ಆಗಬೇಕು. ಆ ಮಗು ಕೂಡ ಇದೇ ಗ್ರಾಮದ ಖೋಖೋ ಆಟಗಾರ್ತಿ ವೀಣಾ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಳು. ಫೈನಲ್ ಪಂದ್ಯ ನೋಡಿ ಬಹಳ ಖುಷಿ ಆಯ್ತು. ಕಣ್ಣು ತುಂಬಿ ಬಂತು. ಹೂವಿನೊಂದಿಗೆ ನಾರು ಸ್ವರ್ಗ ಸೇರಿತು ಎಂಬಂತೆ ನನ್ನ ಬದುಕು ಆಗಿದೆ. ಗಣಿತ ಶಿಕ್ಷಕನಾಗಿ ಬಂದವನು ಮಕ್ಕಳ ಸಾಮರ್ಥ್ಯ ನೋಡಿ ಖೋಖೋ ಕಲಿಸಿದೆ. ಇದೇ ಶಾಲೆಯಲ್ಲಿ ಶಿಕ್ಷಕನೂ ಆಗಿದ್ದೇನೆ. ಚೈತ್ರಾ ಯಾವಾಗಲೂ ಕುರುಬೂರು ಶಾಲಾ ಕ್ರೀಡಾಂಗಣದಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದಳು. ವಿಶ್ವಕಪ್ಗೆ ಆಯ್ಕೆಯಾದ ನಂತರ ದಿನಕ್ಕೆ ಮೂರು ಬಾರಿ ಅಭ್ಯಾಸ ಮಾಡುತ್ತಿದ್ದಳು ಎಂದು ತರಬೇತುದಾರ ಮಂಜುನಾಥ್ ಹೇಳಿದ್ದಾರೆ.
