ಕನ್ನಡ ಸುದ್ದಿ  /  Sports  /  Rohit, Bouchers Mixed Signals On Whether Arjun Tendulkar Will Make Mumbai Indians Debut In Ipl 2023

IPL 2023: ಈ ವರ್ಷವಾದ್ರೂ ಸಚಿನ್​ ಪುತ್ರನಿಗೆ ಸಿಗುತ್ತಾ ಅವಕಾಶ? ರೋಹಿತ್​ ಹೇಳಿದ್ದೇನು?

ಐಪಿಎಲ್​ ಟೂರ್ನಿಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​ ಶರ್ಮಾ (Rohit Sharma), ಅರ್ಜುನ್​ ತೆಂಡೂಲ್ಕರ್​ ಈ ಆವೃತ್ತಿಯಲ್ಲಿ ಪದಾರ್ಪಣೆ ಮಾಡುವ ಕುರಿತು ಸುಳಿವು ನೀಡಿದ್ದಾರೆ.

ಅರ್ಜುನ್​ ತೆಂಡೂಲ್ಕರ್​
ಅರ್ಜುನ್​ ತೆಂಡೂಲ್ಕರ್​

16ನೇ ಆವೃತ್ತಿಯ ಐಪಿಎಲ್​ (IPL) ಆರಂಭಕ್ಕೆ ಇನ್ನೊಂದು ರಾತ್ರಿ ಮುಗಿದರೆ ಸಾಕು, ಸುದೀರ್ಘ 58 ದಿನಗಳ ಕ್ರಿಕೆಟ್​​​​ ಜಾತ್ರೆಗೆ ಚಾಲನೆ ಸಿಗಲಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್​ ತಂಡದಲ್ಲಿ (Mumbai Indians) ಬೆಂಚ್​ ಕಾದಿದ್ದ ದಿಗ್ಗಜ ಸಚಿನ್​ ತೆಂಡೂಲ್ಕರ್​ (Sachin Tendulkar)​​ ಪುತ್ರ ಅರ್ಜುನ್​ ತೆಂಡೂಲ್ಕರ್ (Arjun Tendulkar)​ ಅವರಿಗೆ ಈ ಬಾರಿಯಾದರೂ ಅವಕಾಶ ಸಿಗುತ್ತಾ ಎಂಬ ಚರ್ಚೆ ಮತ್ತೆ ಜೋರಾಗಿದೆ. ಕೇವಲ ನೆಟ್​​​ ಬೌಲಿಂಗ್​ಗೆ ಸೀಮಿತವಾಗಿರುವ ಅರ್ಜುನ್​, ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವುದು ಯಾವಾಗ ಎಂದು ಮುಂಬೈ ಇಂಡಿಯನ್ಸ್​ ಮ್ಯಾನೇಜ್​ಮೆಂಟ್​​​ಗೆ​ ಪ್ರಶ್ನೆಗಳು ಕೇಳಿ ಬರುತ್ತಿವೆ.

ಐಪಿಎಲ್​ ಟೂರ್ನಿಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​ ಶರ್ಮಾ (Rohit Sharma), ಅರ್ಜುನ್​ ತೆಂಡೂಲ್ಕರ್​ ಈ ಐಪಿಎಲ್​ನಲ್ಲಿ ಪದಾರ್ಪಣೆ ಮಾಡುವ ಕುರಿತು ಸುಳಿವು ನೀಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್​ಪ್ರಿತ್​​ ಬೂಮ್ರಾ (Jasprit Bumrah) ಮತ್ತು ಆಸೀಸ್ ವೇಗದ ಬೌಲರ್ ಜೇ ರಿಚರ್ಡ್ಸನ್ (Jhye Richardson) ಅವರ ಅಲಭ್ಯತೆ ಕಾಡುತ್ತಿದೆ. ಈ ಹಂತದಲ್ಲಿ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಅರ್ಜುನ್, ತಂಡವನ್ನು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ರೋಹಿತ್​, ಅರ್ಜುನ್ ಪದಾರ್ಪಣೆ ಮಾಡುವ ಬಗ್ಗೆ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.

ಅರ್ಜುನ್​​​ ತಮ್ಮ ಬೌಲಿಂಗ್‌ನಿಂದ ಅನೇಕರನ್ನು ಮೆಚ್ಚಿಸಿದ್ದಾರೆ. ಆತನ ಸ್ವಿಂಗ್​, ಯಾರ್ಕರ್​​ ಬೌಲಿಂಗ್​ ಅದ್ಭುತವಾಗಿದೆ. ಆಡಲು ಸಿದ್ಧರಿದ್ದರೆ, ಖಂಡಿತವಾಗಿಯೂ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು. ಅರ್ಜುನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕೆ ಬರಲಿದ್ದಾರೆ. ನೆಟ್ಸ್​​​ನಲ್ಲಿ ಬೌಲಿಂಗ್​ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ 6 ತಿಂಗಳಲ್ಲಿ ಅರ್ಜುನ್ ಉತ್ತಮ ಕ್ರಿಕೆಟ್ ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂಬ ಉತ್ತರ ನೀಡಿದ್ದಾರೆ.

ಅರ್ಜುನ್​​ ತಂಡದಲ್ಲಿ ಆಡುವ ಸಾಮರ್ಥ್ಯವನ್ನು ತೋರಿಸಿದರೆ, ನಾವು ಅವರನ್ನು ಆಯ್ಕೆಗೆ ಲಭ್ಯಗೊಳಿಸಬಹುದು. ಇದು ನಮಗೆ ಒಳ್ಳೆಯದು ಎಂದು ಮುಖ್ಯ ಕೋಚ್ ಮಾರ್ಕ್​ ಬೌಚರ್ (Head Coach Mark Boucher) ಹೇಳಿದ್ದಾರೆ. ಮತ್ತೊಂದೆಡೆ ಈ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೌಚರ್ ಕೂಡ ಐಪಿಎಲ್ ಟೂರ್ನಿಯ ವೇಳೆ ರೋಹಿತ್‌ಗೆ ವಿಶ್ರಾಂತಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಇನ್ನು ರೋಹಿತ್ ಅವರೇ ತಂಡದ ನಾಯಕ. ಅವರು ವಿಶ್ರಾಂತಿ ಪಡೆಯಲು ಬಯಸುವುದಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಅದ್ಭುತ ಯಾರ್ಕರ್​​​ಗಳ ಮೂಲಕ ಗಮನ ಸೆಳೆದಿರುವ ಅರ್ಜುನ್​, ಈವರೆಗೂ ಒಂದು ಅವಕಾಶ​ ಪಡೆಯಲಿಲ್ಲ. ಅಲ್ಲದೆ ಪದೆಪದೇ ಬೆಂಚ್​​​ ಕಾಯುತ್ತಿರುವ ಅರ್ಜುನ್,​ ನೆಟ್​​ ಬೌಲರ್ ಆಗಿಯೇ ಖರೀದಿ ಮಾಡಲಾಗಿದೆಯೇ ಎಂಬ ಪ್ರಶ್ನೆ ಕೂಡ ಹುಟ್ಟಿದೆ. ಇದು ಆಕ್ರೋಶಕ್ಕೂ ಕಾರಣವಾಗಿತ್ತು. ಮುಂಬೈ ತಂಡಕ್ಕೆ ಕಾಲಿಟ್ಟ ಯುವ ಆಟಗಾರರೆಲ್ಲರೂ ಮುಂಬೈ ಪರ ಪದಾರ್ಪಣೆ ಮಾಡುತ್ತಿದ್ದಾರೆ. ಪರಿಚಯ ಇಲ್ಲದ ಆಟಗಾರರೇ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅರ್ಜುನ್​​ಗೆ ಮಾತ್ರ ಅವಕಾಶ​​​​​ ಎಂಬುದು ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿಯಾದರೂ ಅವಕಾಶ ಸಿಗುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕು.