ಕನ್ನಡ ಸುದ್ದಿ  /  Sports  /  Shreyas Iyer To Miss Entire Odi Series Against Australia

India vs Australia ODI: ಆಸೀಸ್ ವಿರುದ್ಧದ ಏಕದಿನ ಸರಣಿಗೆ ಅಯ್ಯರ್ ಅಲಭ್ಯ; ಫೀಲ್ಡಿಂಗ್ ಕೋಚ್ ಸ್ಪಷ್ಟನೆ

ಟೀಮ್‌ ಇಂಡಿಯಾ ಕಾಯಂ ನಾಯಕ ರೋಹಿತ್ ಅನುಪಸ್ಥಿತಿಯಲ್ಲಿ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಶ್ರೇಯಸ್‌ ಅಯ್ಯರ್
ಶ್ರೇಯಸ್‌ ಅಯ್ಯರ್ (ANI)

ಆಸ್ಟ್ರೇಲಿಯಾ ವಿರುದ್ಧದ ಸಂಪೂರ್ಣ ಏಕದಿನ ಸರಣಿಯಿಂದ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದಾರೆ. ಟೀಮ್ ಇಂಡಿಯಾಗೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬುತ್ತಿದ್ದ ಅಯ್ಯರ್‌ ಅನುಪಸ್ಥಿತಿಯು ಭಾರತಕ್ಕೆ ಕೊಂಚ ಮಟ್ಟಿಗೆ ಹಿನ್ನಡೆಯಾಗಲಿದೆ. ಆದರೆ, ತಂಡದಲ್ಲಿ ಬದಲಿ ಆಟಗಾರರು ಹಲವರು ಇರುವುದರಿಂದ ಇದು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇಲ್ಲ.

ಮಧ್ಯಮ ಕ್ರಮಾಂಕದ ಬ್ಯಾಟರ್ ಅಯ್ಯರ್ ಅವರು ತಮ್ಮ ಬೆನ್ನಿನ ಕೆಳಭಾಗದಲ್ಲಿನ ನೋವಿನಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿರಲಿಲ್ಲ. ಅದಾದ ಬಳಿಕ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿತ್ತು. ಬಿಸಿಸಿಐ ವೈದ್ಯಕೀಯ ತಂಡದ ಮುತುವರ್ಜಿಯಲ್ಲಿ ಅವರಿದ್ದರು. ಆದರೆ, ಏಕದಿನ ಸರಣಿಗೆ ಅವರ ಉಪಸ್ಥಿತಿ ಕುರಿತ ಖಚಿತ ಮಾಹಿತಿ ಇರಲಿಲ್ಲ. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಅವರು ಹೊರಗುಳಿದಿರುವುದು ಸ್ಪಷ್ಟವಾಗಿದೆ.

ಮುಂಬೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಭಾರತವು ನಾಯಕ ರೋಹಿತ್ ಶರ್ಮಾ ಇಲ್ಲದೆ ಕಣಕ್ಕಿಳಿಯಲಿದೆ. ಇದನ್ನೂ ಸೇರಿ ಎಲ್ಲಾ ಮೂರು ಪಂದ್ಯಗಳಲ್ಲಿ ಅಯ್ಯರ್‌ ಆಡುತ್ತಿಲ್ಲ. ಟೀಮ್‌ ಇಂಡಿಯಾ ಕಾಯಂ ನಾಯಕ ರೋಹಿತ್ ಅನುಪಸ್ಥಿತಿಯಲ್ಲಿ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಉಭಯ ತಂಡಗಳ ನಡುವಿನ ಮೊದಲನೇ ಏಕದಿನ ಪಂದ್ಯಕ್ಕೂ ಮುಂಚಿತವಾಗಿ ನಡೆದ ಸಾಂಪ್ರದಾಯಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಆಸ್ಟ್ರೇಲಿಯಾ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಅಯ್ಯರ್ ಅವರ ಸೇವೆಯನ್ನು ಆತಿಥೇಯರು ಕಳೆದುಕೊಳ್ಳಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ಗಾಯಗಳು ಆಟದ ಒಂದು ಭಾಗವಾಗಿದೆ. ನಮ್ಮಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿವೆ ಮತ್ತು ಅವುಗಳು ಸುಸಜ್ಜಿತವಾಗಿವೆ. ನಾವು ಎನ್‌ಸಿಎ ಜೊತೆಗೆ ಸಮನ್ವಯದಲ್ಲಿದ್ದೇವೆ. ಶ್ರೇಯಸ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಮುಂದೆ ಮತ್ತಷ್ಟು ಅಪ್‌ಡೇಟ್ ಮಾಡುತ್ತೇವೆ,” ಎಂದು ಭಾರತದ ಫೀಲ್ಡಿಂಗ್ ಕೋಚ್ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಅಯ್ಯರ್‌ಗೆ ಬದಲಿ ಆಟಗಾರನಾಗಿ ಬಿಸಿಸಿಐ ಇನ್ನೂ ಯಾರನ್ನೂ ಹೆಸರಿಸಿಲ್ಲ. ಅಯ್ಯರ್ ಇತ್ತೀಚೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೆಸ್ಟ್ ತಂಡಕ್ಕೆ ಮರಳಿದ್ದರು. ಆದಾಗ್ಯೂ, 4ನೇ ಟೆಸ್ಟ್‌ನಲ್ಲಿ ಅಯ್ಯರ್ ಅವರ ಬೆನ್ನಿನ ಕೆಳಭಾಗದಲ್ಲಿ ಸಮಸ್ಯೆಗಳು ಮತ್ತೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ಆತಿಥೇಯರ ಪರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಿರಲಿಲ್ಲ.

ಇದಕ್ಕೂ ಮೊದಲು, ಅಯ್ಯರ್ ಇದೇ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಅಯ್ಯರ್ ಟೀಮ್ ಇಂಡಿಯಾ ಪರ 42 ಏಕದಿನ ಪಂದ್ಯಗಳಲ್ಲಿ 1631 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ 2017ರಲ್ಲಿ ದೆಹಲಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಪಂದ್ಯದ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜಯದೇವ್ ಉನದ್ಕತ್.