Sourav Ganguly: ಭಾರತ ICC ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ಕೊಟ್ಟ ಗಂಗೂಲಿ!
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly), ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಐಸಿಸಿ ಟೂರ್ನಮೆಂಟ್ಗಳಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದಿರುವ ಮಾಜಿ ನಾಯಕ, ಟ್ರೋಫಿಯನ್ನು ಭಾರತ ಹೇಗೆ ಗೆಲ್ಲಲಿದೆ ಎಂಬುದನ್ನೂ ಹೇಳಿದ್ದಾರೆ.
ಟೀಮ್ ಇಂಡಿಯಾ (Team India) ಕೊನೆಯದಾಗಿ 2013ರಲ್ಲಿ ಎಂ.ಎಸ್ ಧೋನಿ (MS Dhoni) ನಾಯಕತ್ವದ ಅಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆ ಬಳಿಕ ಅಂದರೆ 10 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿ ಜಯಿಸಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್ ಪಡೆ, ಐಸಿಸಿ ಟೂರ್ನಿಗಳಲ್ಲಿ ಪದೇ ಪದೇ ಎಡವುತ್ತಲೇ ಬಂದಿದೆ. ಫೈನಲ್, ಸೆಮಿಫೈನಲ್ ಪಂದ್ಯಗಳಲ್ಲೇ ಹೆಚ್ಚು ಮುಗ್ಗರಿಸಿದೆ. ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly), ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ನೀಡಿದ್ದಾರೆ.
ಆಕ್ರಮಣಕಾರಿ ಆಟವಾಡಬೇಕು
ಐಸಿಸಿ ಟೂರ್ನಮೆಂಟ್ಗಳಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದಿರುವ ಮಾಜಿ ನಾಯಕ, ಟ್ರೋಫಿಯನ್ನು ಭಾರತ ಹೇಗೆ ಗೆಲ್ಲಬಹುದು ಎಂಬುದನ್ನೂ ಹೇಳಿದ್ದಾರೆ. ಗಂಗೂಲಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು, ಭಾರತ ತಂಡದಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಆದರೆ, ರೋಹಿತ್ ಪಡೆ ಹೇಗೆ ತಯಾರಿ ನಡೆಸುತ್ತದೆ ಎಂಬುದೇ ಸಮಸ್ಯೆ. ಭಾರತ ಆಕ್ರಮಣಕಾರಿ ಆಟವಾಡಬೇಕು. ಅದೇ ತಂಡದ ಗೆಲುವಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಯಾರಿಯೇ ಮುಖ್ಯವಾದದ್ದು
ಭಾರತದ ಬ್ಯಾಟಿಂಗ್ ಡೆಪ್ತ್ ತುಂಬಾ ಅದ್ಭುತವಾಗಿದೆ. ವೈಟ್ಬಾಲ್ ಕ್ರಿಕೆಟ್ನಲ್ಲಿ 9ನೇ ಕ್ರಮಾಂಕದವರೆಗೂ ಬ್ಯಾಟ್ ಬೀಸುವ ಆಟಗಾರರು ಇದ್ದಾರೆ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕ್ರಮವಾಗಿ 6, 7ನೇ ಕ್ರಮಾಂಕದಲ್ಲಿ ಧೂಳೆಬ್ಬಿಸುತ್ತಾರೆ. ಆದರೆ ಒತ್ತಡಕ್ಕೆ ಸರಿ ಹೊಂದುವ ರೀತಿ ಅಭ್ಯಾಸ ನಡೆಸಬೇಕು. ಆಟದ ಬಗ್ಗೆ ಅರಿತು, ಅದಕ್ಕೆ ಬ್ಯಾಟಿಂಗ್ ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ತಂಡದಲ್ಲೇನೋ ಪ್ರತಿಭಾವಂತರ ದಂಡೇ ಇದೆ. ಆದರೆ ಐಸಿಸಿ ಟೂರ್ನಿಗೆ ಹೇಗೆ ತಯಾರಿಯ ಯೋಜನೆಗಳಲ್ಲಿ ಸಮಸ್ಯೆ ಕಾಣುತ್ತಿದೆ. ಹಾಗಾಗಿ ಹೇಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬುದೇ ಮುಖ್ಯ. ಮುಂದಿನ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲೂ ಭಾರತ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೂರು ಮಾದರಿಯ ಕ್ರಿಕೆಟ್ನಲ್ಲೂ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫಾರ್ಮೆಟ್ನಿಂದ ಮತ್ತೊಂದು ಫಾರ್ಮೆಟ್ಗೆ ಪರಿವರ್ತನೆಯಾದಾಗ, ಪ್ರದರ್ಶನ ಕಷ್ಟವಾಗಬಹುದು. ಆಟಗಾರ ಲಯದಲ್ಲಿದ್ದರೆ, ಯಾವುದೇ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳಬೇಕು. ಆಟದಲ್ಲಿ ಲಯ ಬಹಳ ಮುಖ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಗಂಗೂಲಿ ಅವರು ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದು, ಟೂರ್ನಿಗಾಗಿ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ.
WTC ಫೈನಲ್ನಲ್ಲಿ ಟ್ರೋಫಿ ಬರ ನೀಗುತ್ತಾ?
ಸದ್ಯ ಈ ವರ್ಷ ಎರಡು ಐಸಿಸಿ ಟೂರ್ನಿಗಳು ನಡೆಯಲಿವೆ. ಐಪಿಎಲ್ ಮುಗಿದ ಬೆನ್ನಲ್ಲೇ ಜೂನ್ 7 ರಿಂದ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC Test Championship Final) ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಆದರೆ ಈ ಬಾರಿಯಾದರೂ ಫೈನಲ್ ಪಂದ್ಯದಲ್ಲಿ ಗೆದ್ದು 10 ವರ್ಷಗಳ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಅಕ್ಟೋಬರ್ನಲ್ಲಿ ಏಕದಿನ ವಿಶ್ವಕಪ್
ಇದೇ ವರ್ಷ ಅಕ್ಟೋಬರ್ - ನವೆಂಬರ್ನಲ್ಲಿ ಏಕದಿನ ವಿಶ್ವಕಪ್ (ODI World Cup) ಜರುಗಲಿದೆ. ಈ ಮೆಗಾ ಟೂರ್ನಿಗೆ ಭಾರತ ಆತಿಥ್ಯ ವಹಿಸಿರುವುದು ವಿಶೇಷ. ಹಾಗಾಗಿ ಭಾರತದ ಕ್ರಿಕೆಟ್ ಪ್ರಿಯರಲ್ಲಿ ಏಕದಿನ ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಹೆಚ್ಚಾಗಿದೆ. ಎರಡೂ ಐಸಿಸಿ ಟೂರ್ನಿಗಳ ಪೈಕಿ ಒಂದರಲ್ಲಾದರೂ, ಟ್ರೊಫಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಕೂಡ ಇದೆ. 2013ರಿಂದ ಈವರೆಗೂ ಟೀಮ್ ಇಂಡಿಯಾ ಸೆಮಿಫೈನಲ್, ಫೈನಲ್ನಲ್ಲಿಯೇ ಹೆಚ್ಚು ಸೋಲು ಕಂಡಿದೆ.