ಕ್ರೀಡಾ ವಸತಿ ಶಾಲೆ, ನಿಲಯಗಳ ಪ್ರವೇಶಕ್ಕೆ ತರಬೇತಿ ಶಿಬಿರ ಆರಂಭ; ದಿನಾಂಕ, ಆಯ್ಕೆಯ ನಿಯಮಗಳ ಮಾಹಿತಿ ಇಲ್ಲಿದೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ವಸತಿ ಶಾಲೆ, ನಿಲಯಗಳ ಪ್ರವೇಶಕ್ಕೆ ತರಬೇತಿ ಶಿಬಿರವನ್ನು ಏಪ್ರಿಲ್ 15ರಿಂದ ಆರಂಭಿಸಿದೆ. ಆಯ್ಕೆಯ ನಿಯಮಗಳ ಮಾಹಿತಿ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 2 ಕ್ರೀಡಾ ವಸತಿ ಶಾಲೆ ಹಾಗೂ 32 ಕ್ರೀಡಾ ವಸತಿ ನಿಲಯ ಹೊಂದಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 5ನೇ ತರಗತಿ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಹಂತದ ಕ್ರೀಡಾಪಟುಗಳಿಗೆ ಪ್ರವೇಶ ಆರಂಭಿಸಿದೆ. ಕ್ರೀಡಾಪಟುಗಳಿಗೆ ಉಚಿತ ಊಟೋಪಹಾರ, ವಸತಿ, ವೈಜ್ಞಾನಿಕ ಕ್ರೀಡಾ ತರಬೇತಿ, ಕ್ರೀಡಾ ಸಲಕರಣೆಗಳು, ಕ್ರೀಡಾ ಸಮವಸ್ತ್ರ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ದಿನಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನೂ ಒದಗಿಸಲಿದೆ.
ಈ ಕ್ರೀಡಾ ವಸತಿ ಶಾಲೆ ಮತ್ತು ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಆಯ್ಕೆ ಶಿಬಿರ ಆಯೋಜನೆ ಮಾಡಲಾಗಿದೆ. ಗ್ರಾಮೀಣ ಭಾಗದ ಬಾಲಕ ಮತ್ತು ಬಾಲಕಿಯರಿಗೆ ಮತ್ತೊಂದು ವಿಶೇಷ ಅವಕಾಶವನ್ನು ನೀಡುವ ದೃಷ್ಟಿಯಿಂದ 2025-26ನೇ ಸಾಲಿನಲ್ಲಿ ವಿಶೇಷ ಆಯ್ಕೆ ಶಿಬಿರವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇಲ್ಲಿ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪ್ರಖ್ಯಾತ ಕ್ರೀಡಾಪಟುಗಳಾದ ಪ್ರಮೀಳಾ ಅಯ್ಯಪ್ಪ, ಜಿಜಿ ಶೋಭಾ, ಹೆಚ್ಎಂ ಜ್ಯೋತಿ, ಎಸ್ಡಿ ಈಶನ್, ಬಾಂಧವ್ಯ ಶಶಿಕಾಂತ್, ಮಲಪ್ರಭಾ ಜಾಧನ್, ಮೋಹಿತ್ ಹೆಚ್ಎಸ್ ,ಪ್ರಿಯಾಂಕ ಪಿ ಸೇರಿದಂತೆ ನೂರಾರು ಕ್ರೀಡಾಪಟುಗಳು ಕ್ರೀಡಾ ವಸತಿ ಶಾಲೆ ಮತ್ತು ನಿಲಯಗಳಲ್ಲೇ ತರಬೇತಿ ಪಡೆದವರು. ಅಲ್ಲದೇ, ಇಲ್ಲಿ ತರಬೇತಿ ಪಡೆದ ನೂರಾರು ಕ್ರೀಡಾಪಟುಗಳು ತಮ್ಮ ಕ್ರೀಡಾ ಸಾಧನೆಯ ಹಿನ್ನೆಲೆಯಲ್ಲಿ ಪೊಲೀಸ್, ರೈಲ್ವೆ ಅರಣ್ಯ, ಆದಾಯ ತೆರಿಗೆ ಇಲಾಖೆ, ಮಹಾಲೇಖಪಾಲರ ಕಚೇರಿ, ಬ್ಯಾಂಕ್ಗಳು ಸೇರಿದಂತೆ ಪ್ರತಿಷ್ಠಿತ ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ 15, 17ರಂದು ತರಬೇತಿ ಶಿಬಿರ
ಏಪ್ರಿಲ್ 15 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್, ವಾಲಿಬಾಲ್, ಫೆನ್ಸಿಂಗ್, ಆರ್ಚರಿ ಹಾಗೂ ಧಾರವಾಡದ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್ ವಾಲಿಬಾಲ್, ಸೈಕ್ಲಿಂಗ್, ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ ಮತ್ತು ಕಬ್ಬಡಿ, ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಪುಟ್ಬಾಲ್, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಾಕಿ, ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ಸ್, ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಆಯ್ಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಭುವನೇಶ್ವರ್ ಕುಮಾರ್ ದಾಖಲೆ
ಅದೇ ರೀತಿ ಏಪ್ರಿಲ್ 17ರಂದು ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್, ವಾಲಿಬಾಲ್, ಕಬಡ್ಡಿ, ಬೀದರ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕ್ಲಿಂಗ್, ಬಳ್ಳಾರಿಯ ಪುಟ್ಬಾಲ್ ಕ್ರೀಡಾಂಗಣದಲ್ಲಿ ಪುಟ್ಬಾಲ್, ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ, ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜುಡೋ ತರಬೇತಿ ಆಯ್ಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಆಯ್ಕೆಯ ನಿಯಮಗಳು
ರಾಜ್ಯದ ಯಾವುದೇ ಭಾಗದ ಕ್ರೀಡಾಪಟುಗಳು ಯಾವುದೇ ಸ್ಥಳದ ಆಯ್ಕೆ ಶಿಬಿರದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. 2025-26ನೇ ಸಾಲಿನ ಪ್ರವೇಶಕ್ಕೆ ಈಗಾಗಲೇ ಆಯೋಜಿಸಲಾದ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸದ ಅಭ್ಯರ್ಥಿಗಳು ಈ ವಿಶೇಷ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಬಹುದು. ಈಗಾಗಲೇ ಆಯ್ಕೆ ಶಿಬಿರಗಳಲ್ಲಿ ಭಾಗಿಯಾಗಿರುವ ಆದರೆ, ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳು ತಮ್ಮ ಪ್ರದರ್ಶನ ಉತ್ತಮಪಡಿಸಿಕೊಳ್ಳಲು ಉದ್ದೇಶಿಸಿದಲ್ಲಿ ಈ ಬಗ್ಗೆ ಅರ್ಜಿ ನಮೂನೆ ಕಡ್ಡಾಯವಾಗಿ ದಾಖಲಿಸಿ, ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸಬಹುದು.
ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಈಗಾಗಲೇ ಆಯ್ಕೆಯಾಗಿರುವವರು ಈ ವಿಶೇಷ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ. 8ನೇ ತರಗತಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 8ನೇ ತರಗತಿ ಪ್ರವೇಶಕ್ಕೆ ಜೂನ್-2025ಕ್ಕೆ ಅನ್ವಯವಾಗುವಂತೆ 14 ವರ್ಷ ವಯಸ್ಸಿನ ಒಳಗೆ ಇರಬೇಕು. ಪ್ರಥಮ ಪಿಯುಸಿ. ಪ್ರವೇಶ ಬಯಸುವ ಅಭ್ಯರ್ಥಿಗಳ ವಯಸ್ಸು ಜೂನ್-2025ಕ್ಕೆ ಅನ್ವಯವಾಗುವಂತೆ 18 ವರ್ಷ ವಯಸ್ಸಿನ ಒಳಗೆ ಇರಬೇಕು.
ಇದನ್ನೂ ಓದಿ: ತವರಿನ ಹೊರಗೆ ಆರ್ಸಿಬಿಗೆ ಗೆಲುವು
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಆಯಾ ಸ್ಥಳಗಳಲ್ಲಿ ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳತಕ್ಕದ್ದು. ವಾಲಿಬಾಲ್ ಮತ್ತು ಬಾಸ್ಕೆಟ್ಬಾಲ್ ಹೊರತುಪಡಿಸಿ, ಇತರೆ ಕ್ರೀಡೆಗಳಲ್ಲಿ ಅಸಾಧಾರಣ ಸಾಧನೆ ತೋರುವ ಕ್ರೀಡಾಪಟುಗಳಿಗೆ ಎತ್ತರದ (Height) ಅರ್ಹತಾ ಮಾನದಂಡದಲ್ಲಿ ಸಡಿಲಿಕೆ ನೀಡಲಾಗುವುದು. ಈ ಶಿಬಿರಗಳಲ್ಲಿ ಭಾಗವಹಿಸಿ ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯ ಮಟ್ಟದ ಆಯ್ಕೆ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ, ಅರ್ಹರಾದಲ್ಲಿ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ ಪ್ರವೇಶ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಯುವ ಸಹಾಯವಾಣಿ ಸಂಖ್ಯೆ: 155265 ಅಥವಾ ನಿಮ್ಮ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಚರಿತ್ರೆ ಸೃಷ್ಟಿಸಿದ ವಿರಾಟ್ ಕೊಹ್ಲಿ; ಏನದು ದಾಖಲೆ?
