Ind vs Aus: 3, 4, 0, 20.. ಇದು ಟಾಪ್-4 ಬ್ಯಾಟರ್ಗಳ ಸ್ಕೋರ್.. ಫ್ಯಾನ್ಸ್ ಸಿಡಿಮಿಡಿ!
Ind vs Aus: ಮೊದಲ ಏಕದಿನ ಪಂದ್ಯದಲ್ಲಿ ಬೌಲರ್ಗಳು ತಮ್ಮ ಕರ್ತವ್ಯವನ್ನು ಅಚ್ಚಕಟ್ಟಾಗಿ ನಿಭಾಯಸಿದರೆ, ಬ್ಯಾಟ್ಸ್ಮನ್ಗಳು ಮಾತ್ರ ಜವಾಬ್ದಾರಿ ಮರೆತು ಆಡಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ. ಭಾರತದ ಪಿಚ್ಗಳಲ್ಲೇ ಆಸಿಸ್ ಬೌಲರ್ಗಳ ಮುಂದೆ ಘಟಾನುಘಟಿ ಬ್ಯಾಟ್ಸ್ಮನ್ಗಳು ಮಂಡಿಯೂರಿದ್ದು, ಭಾರಿ ಟೀಕೆಗೆ ಕಾರಣವಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಕಳಪೆ (Team India Batters Flop show) ಪ್ರದರ್ಶನ ತೋರಿದ್ದಾರೆ. ಬೌಲರ್ಗಳು ತಮ್ಮ ಕರ್ತವ್ಯವನ್ನು ಅಚ್ಚಕಟ್ಟಾಗಿ ನಿಭಾಯಸಿದರೆ, ಬ್ಯಾಟ್ಸ್ಮನ್ಗಳು ಮಾತ್ರ ಜವಾಬ್ದಾರಿ ಮರೆತು ಆಡಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ. ಭಾರತದ ಪಿಚ್ಗಳಲ್ಲೇ ಆಸಿಸ್ ಬೌಲರ್ಗಳ ಮುಂದೆ ಘಟಾನುಘಟಿ ಬ್ಯಾಟ್ಸ್ಮನ್ಗಳು ಮಂಡಿಯೂರಿದ್ದು, ಭಾರಿ ಟೀಕೆಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ನೀಡಿದ್ದು ಕೇವಲ 189 ರನ್ಗಳ ಗುರಿ. ಹಾಗಾಗಿ ಕ್ರಿಕೆಟ್ ಪ್ರೇಮಿಗಳು, ಏನಿಲ್ಲವೆಂದರೂ 35 ಓವರ್ಗಳಲ್ಲಿ ಗೆಲುವಿನ ಬಾವುಟ ಹಾರಿಸುತ್ತಾರೆ ಎಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ.! ಸುಲಭ ಗುರಿಯನ್ನು ಬೆನ್ನೆತ್ತುವ ಭರದಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಪೆವಿಲಿಯನ್ನತ್ತ ಹೆಜ್ಜೆ ಹಾಕಿ, ತಂಡವನ್ನು ಮೃತ್ಯುಕೂಪಕ್ಕೆ ತಳ್ಳಿದರು.
ನಿರೀಕ್ಷೆ ಹುಸಿಗೊಳಿಸಿದ ಇಶಾನ್..!
ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ದ್ವಿಶತಕ ವೀರ ಇಶಾನ್ ಕಿಶನ್ (Ishan Kishan), ನಿರೀಕ್ಷೆ ಹುಸಿಗೊಳಿಸಿದರು. ಸಿಕ್ಕ ಅವಕಾಶದಲ್ಲಿ ಅಬ್ಬರಿಸುವ ಬದಲಿಗೆ ಒದ್ದಾಡಿದರು. 8 ಎಸೆತಗಳಲ್ಲಿ ಕೇವಲ 3 ರನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಆ ಮೂಲಕ ತಂಡವನ್ನು ಆರಂಭಿಕ ಆಘಾತಕ್ಕೆ ಸಿಲುಕಿಸಿದ ಎಡಗೈ ಬ್ಯಾಟರ್, ಮ್ಯಾನೇಜ್ಮೆಂಟ್ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡರು.
ಕೊಹ್ಲಿಯಿಂದ ಬರಲಿಲ್ಲ ದೊಡ್ಡ ಇನ್ನಿಂಗ್ಸ್..!
ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ (Virat Kohli), ಅದೇ ಫಾರ್ಮ್ ಏಕದಿನದಲ್ಲೂ ಮುಂದುವರೆಸುವ ವಿಶ್ವಾಸದಲ್ಲಿದ್ದರು. ಆದರೆ ಅದು ಕೈ ಹಿಡಿಯಲಿಲ್ಲ. ಒಂದೆರಡು ಎಸೆತಗಳ ಬಳಿಕ ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಕಿಂಗ್, 4 ರನ್ಗಳಿಗೇ ಆಟ ಮುಗಿಸಿದರು. ಏಕದಿನ ಕ್ರಿಕೆಟ್ನಲ್ಲೂ ಫಾರ್ಮ್ಗೆ ಮರಳಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಕೋಟ್ಯಂತರ ಫ್ಯಾನ್ಸ್ಗೆ ನಿರಾಸೆ ಮೂಡಿಸಿದರು. ಕೊಹ್ಲಿ ಔಟಾದಾಗ ತಂಡದ ಮೊತ್ತ 16 ರನ್.
ಮತ್ತೆ ಫೇಲ್.. ಸೂರ್ಯ ಗೋಲ್ಡನ್ ಡಕ್.!
ಶ್ರೇಯಸ್ ಅಯ್ಯರ್ (Shreyas Iyer) ಅಲಭ್ಯತೆಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡ ಸೂರ್ಯಕುಮಾರ್ ಯಾದವ್ (Suryakumar Yadav), ಏಕದಿನ ಕ್ರಿಕೆಟ್ನಲ್ಲಿ ಫ್ಲಾಪ್ ಶೋ ಮುಂದುವರೆಸಿದರು. ಟಿ20 ಕ್ರಿಕೆಟ್ನಲ್ಲಿ ರನ್ ಶಿಖರ ನಿರ್ಮಿಸಿದ ಸ್ಕೈ, ಒಡಿಐ ಕ್ರಿಕೆಟ್ನಲ್ಲಿ ಮಾತ್ರ ಸದ್ದು ಮಾಡುತ್ತಲೇ ಇಲ್ಲ. ಇದು ಟೀಮ್ ಮ್ಯಾನೇಜ್ಮೆಂಟ್ಗೆ ತಲೆನೋವು ತರಿಸಿದೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ಗೆ ಸೂಕ್ತ ಬದಲಿ ಆಟಗಾರ ಸಿಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಕೊಹ್ಲಿ ಔಟಾದ ಮರು ಎಸೆತದಲ್ಲೇ ಸೂರ್ಯ ಗೋಲ್ಡನ್ ಡಕ್ಗೆ ಬಲಿಯಾದರು.
ಜೀವದಾನ ಸಿಕ್ಕರೂ ಆಡಲಿಲ್ಲ ಗಿಲ್.!
ಸತತ ವಿಕೆಟ್ಗಳ ಪತನದ ನಡುವೆಯೂ ಶುಭ್ಮನ್ ಗಿಲ್ (Shubman Gill) ಜವಾಬ್ದಾರಿಯುತ ಆಟವಾಡಿದರು. ಆದರೆ ಗಿಲ್ಗೆ ಆರಂಭದಲ್ಲೇ ಒಂದು ಜೀವದಾನ ಸಿಕ್ಕಿತ್ತು ಎಂಬುದು ವಿಶೇಷ. ಇದರ ಲಾಭ ಪಡೆಯದ ಆರಂಭಿಕ ಆಟಗಾರ 20 ರನ್ ಗಳಿಸಿ ಆಟ ಮುಗಿಸಿದರು. ರಕ್ಷಣಾತ್ಮಕ ಆಟಕ್ಕೆ ಕೈ ಹಾಕಿದ ಪಂಜಾಬ್ ಪುತ್ತರ್, ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಬಲಿಯಾದರು. ಆಗ ಭಾರತದ ಮೊತ್ತ 39 ರನ್ಗಳಷ್ಟೇ.
ಪ್ರಮುಖ 4 ವಿಕೆಟ್ಗಳು ಬೇಗನೆ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿದೆ. ಈ ಅಲ್ಪ ಮೊತ್ತವನ್ನೂ ಬೆನ್ನತ್ತಲಾಗದೇ ಪರದಾಟ ನಡೆಸಿ ಔಟಾದ ಬ್ಯಾಟರ್ಗಳ ವಿರುದ್ಧ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನಾ ಬ್ಯಾಟಿಂಗ್ ಅಂದರೆ ಅಂತ ಕಿಡಿಕಾರಿದ್ದಾರೆ.