ಕನ್ನಡ ಸುದ್ದಿ  /  Sports  /  Virat Kohlis Pep Talk To The Rcb Womens Team

RCB: ನೀವು ಈ ಬಾರಿ ಟ್ರೋಫಿ ಗೆದ್ದರೆ ಚರಿತ್ರೆ ಸೃಷ್ಟಿ.. ಆದ್ರೆ ಅದು ನಿಮ್ಮ ಕೈಯಲ್ಲೇ ಇದೆ; ಕೊಹ್ಲಿ ಆತ್ಮವಿಶ್ವಾಸದ ನುಡಿ!

Virat Kohli: ಸತತ ಸೋಲಿನಿಂದ ಕಂಗೆಟ್ಟಿದ ಆರ್​ಸಿಬಿಗೆ ವಿರಾಟ್​ ಕೊಹ್ಲಿ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ. ಇದರ ಪರಿಣಾಮ ಆರ್​ಸಿಬಿ ತನ್ನ 6ನೇ ಪಂದ್ಯದಲ್ಲಿ ಗೆಲುವು ಸಾಧಿಸಿತು. ಸತತ ಸೋಲುಗಳು ಎದುರಾದರೂ ಧೈರ್ಯಗೆಡದೆ ಹೇಗೆ ಆಡಬೇಕು. 2019ರಲ್ಲಿ ತಾವು ಆಡಿದ ಸತತ 6 ಪಂದ್ಯಗಳಲ್ಲಿ ಸೋತು ಬೇಸರವಾಗಿದ್ದನ್ನು ನೆನೆದ ಕೊಹ್ಲಿ, ಮಹಿಳಾ ತಂಡದ ಆತಂಕವನ್ನು ದೂರ ಮಾಡಿದರು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (RCB/Twitter)

ಮಹಿಳಾ ಪ್ರೀಮಿಯರ್​​ ಲೀಗ್​​ನಲ್ಲಿ (Women's Premier League) ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಸತತ ಸೋಲಿನ ಸರಪಳಿಯನ್ನು ತುಂಡರಿಸಿದೆ. ನಿರಾಸೆಯ ಮುಖಗಳಲ್ಲಿ ನಗು ಆವರಿಸಿದೆ. ಬ್ಯಾಕ್ ಟು ಬ್ಯಾಕ್​ 5 ಸೋಲುಗಳನ್ನು ಕಂಡಿದ್ದ ಆರ್​​ಸಿಬಿ, ಯುಪಿ ವಾರಿಯರ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್​ ಆಸೆ ಜೀವಂತವಾಗಿರಿಸಿಕೊಂಡಿದೆ. ಉಳಿದ ಎರಡೂ ಪಂದ್ಯಗಳನ್ನೂ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.

ಆದರೆ ಈ ಗೆಲುವಿಗೆ ಕಾರಣವಾಗಿದ್ದು, ವಿರಾಟ್​ ಕೊಹ್ಲಿ ನೀಡಿದ ಸ್ಫೂರ್ತಿಯ ನುಡಿಗಳಿಂದ.! ಹೀನಾಯ ಸೋಲುಗಳಿಂದ ಕಂಗೆಟ್ಟಿದ ಸ್ಮೃತಿ ಮಂಧಾನ ಪಡೆಗೆ ಪ್ರೇರಣೆ, ಸ್ಫೂರ್ತಿಗಳನ್ನಾಡಿದ ಆರ್​ಸಿಬಿ ಮಾಜಿ ನಾಯಕ ಆಟಗಾರರ ಅದ್ಭುತ ಪ್ರದರ್ಶನಕ್ಕೆ ಕಾರಣರಾದರು. ಇವರ ಧೈರ್ಯದ ಮಾತುಗಳಿಂದ, ಆರ್​ಸಿಬಿ ಆಟಗಾರ್ತಿಯರು ಕೆಚ್ಚೆದೆಯ ಹೋರಾಟ ನಡೆಸಿ, ಅಂತಿಮವಾಗಿ ಗೆಲುವಿನ ಬಾವುಟ ಹಾರಿಸಿ ಸಂಭ್ರಮಿಸಿದರು.

ಮಾರ್ಚ್​ 17ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಲುವಾಗಿ ಮುಂಬೈನ ವಾಂಖೆಡೆ ಮೈದಾನಕ್ಕೆ ಕೊಹ್ಲಿ ಬಂದಿದ್ದರು. ಇದೇ ವೇಳೆ ನವಿ ಮುಂಬೈನ ಡಿವೈ ಪಾಟೀಲ್​ ಸ್ಟೋರ್ಟ್ಸ್​ ಅಕಾಡೆಮಿಯಲ್ಲಿ ನಡೆಯುತ್ತಿದ್ದ ಯುಪಿ ವಾರಿಯರ್ಸ್ ವಿರುದ್ದದ ಸೆಣಸಾಟಕ್ಕೂ ಮುನ್ನ ಆರ್​ಸಿಬಿ ಡ್ರೆಸ್ಸಿಂಗ್​​ ರೂಮ್​​​ಗೆ ಸರ್​ಪ್ರೈಸ್​ ಭೇಟಿ ನೀಡಿದ ಕೊಹ್ಲಿ, ಸತತ ಸೋಲಿನ ದುಃಖದಲ್ಲಿದ್ದ ಆಟಗಾರ್ತಿಯರಿಗೆ ಆತ್ಮಸ್ಥೈರ್ಯ ತುಂಬಿದರು. ಸೋಲಿನ ಹತಾಶೆಯಲ್ಲಿದ್ದ ಆಟಗಾರ್ತಿಯರಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ಸಲುವಾಗಿ ಪ್ಲಾನ್​ ಮಾಡಿದ್ದ ಟೀಮ್​ ಮ್ಯಾನೇಜ್​ಮೆಂಟ್​ ಕೊಹ್ಲಿ ಜೊತೆ ಮಾತುಕತೆ ನಡೆಸಿ, ಅವರನ್ನು ಆಹ್ವಾನ ನೀಡಿತ್ತು.

ಆಟಗಾರ್ತಿಯರನ್ನು 7 ರಿಂದ 8 ನಿಮಿಷಗಳ ಕಾಲ ಮಾತನಾಡಿದ ವಿರಾಟ್ ಕೊಹ್ಲಿ ವಿಡಿಯೋವನ್ನು ಆರ್​​ಸಿಬಿ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸತತ ಸೋಲುಗಳನ್ನು ಹೇಗೆ ಎದುರಿಸುತ್ತಿದ್ದರು. ಧೈರ್ಯಗೆಡದೆ ಹೇಗೆ ಆಡುತ್ತಿದ್ದೆವು. 2019ರಲ್ಲಿ ತಾವು ಆಡಿದ ಸತತ 6 ಪಂದ್ಯಗಳಲ್ಲಿ ಸೋತು ಬೇಸರವಾಗಿದ್ದನ್ನು ನೆನೆದ ಕೊಹ್ಲಿ, ಮಹಿಳಾ ತಂಡದ ಆತಂಕವನ್ನು ದೂರ ಮಾಡಿದರು.

2019ರಲ್ಲಿ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದೆವು. ನಾನು ಮತ್ತು ಎಬಿ ಡಿವಿಲಿಯರ್ಸ್​​​ ಒಬ್ಬರನ್ನು ಒಬ್ಬರು ನೋಡಿಕೊಂಡೆವು. ನಮ್ಮ ಕ್ರಿಕೆಟ್​ ಇತಿಹಾಸದಲ್ಲಿ ಯಾವತ್ತೂ ಕೂಡ ಸತತ 6 ಪಂದ್ಯಗಳನ್ನು ಸೋತಿರಲಿಲ್ಲ. ಆದರೆ ಇವೆಲ್ಲವೂ ಸಹಜ. ಸನ್ನಿವೇಶಗಳು ನಮಗೆ ಎದುರಾಗಲೇ ಇರುತ್ತವೆ. ಅದೀಗ ನಿಮಗೆ ಎದುರಾಗಿದೆ. ಹಾಗಂತ ದೃತಿಗೆಡಬಾರದು ಎಂದು ಆತ್ಮ ವಿಶ್ವಾಸದ ನುಡಿಗಳನ್ನು ಹೇಳಿದ್ದಾರೆ.

ನಿಮಗೆ ಇನ್ನೂ ಅವಕಾಶವಿದೆ. ಮತ್ತಷ್ಟು ಪ್ರಯತ್ನ ಪಟ್ಟರೆ ಕಪ್ ಗೆಲ್ಲುವ ಸಾಧ್ಯತೆ ನಿಮ್ಮ ಮುಂದಿದೆ. ಆದರೆ, ಅದು ನಿಮ್ಮ ಆತ್ಮ ವಿಶ್ವಾಸದ ಮೇಲೆ ನಿಂತಿದೆ. ನಿಮಗಿದು ಮೊದಲ ಸೀಸನ್​. ಆತ್ಮ ಸ್ಥೈರ್ಯದಿಂದ ಮುಂದಿನ ಪಂದ್ಯವನ್ನು ಗೆದ್ದರೆ ಪ್ರಶಸ್ತಿ ಗೆಲ್ಲುವುದು ದೊಡ್ಡದೇನಲ್ಲ. 100ಕ್ಕೆ 110 ರಷ್ಟು ಶ್ರಮ ಹಾಕಿ ಪ್ರಯತ್ನಪಟ್ಟಿದ್ದೀರಿ ಎನಿಸಬೇಕು. ಇದು ಮುಂದಿನ ಪಂದ್ಯಗಳಲ್ಲಿ ನಿಮ್ಮ ಫಲಿತಾಂಶದಲ್ಲಿ ತಿಳಿಸುತ್ತದೆ. ಒಂದು ವೇಳೆ ಗೆದ್ದರೆ ಯಾರೂ ನಿಮ್ಮನ್ನು ಮರೆಯಲ್ಲ. ಈ ಚರಿತ್ರೆ ಸೃಷ್ಟಿಯಾಗಬೇಕು ಅಂದರೆ ಅದು ನಿಮ್ಮ ಕೈಯಲ್ಲೇ ಇದೆ. ಹಾಗೆಯೇ ಈ ಗೆಲುವು ಮುಂಬರುವ ಸೀಸನ್‌ಗೆ, ಯುವ ಕ್ರಿಕೆಟರ್ಸ್​​ಗೆ ಆತ್ಮವಿಶ್ವಾಸ ತುಂಬುತ್ತದೆ ಎಂದು ಹೇಳಿದ್ದಾರೆ.

ಕೊಹ್ಲಿಯ ಸ್ಫೂರ್ತಿಯ ಮಾತುಗಳಿಂದ ಪ್ರೇರಿತರಾದ ಆಟಗಾರ್ತಿಯರು, ಮೈದಾನದಲ್ಲಿ ಅಗ್ರೆಸ್ಸಿವ್​ ಆಟವಾಡಿದರು. ಯುಪಿ ವಾರಿಯರ್ಸ್​​ ದಾಳಿಯನ್ನು ಮೆಟ್ಟಿ ನಿಂತು ಅಮೋಘ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು. ಉಳಿದ ಪಂದ್ಯಗಳಲ್ಲೂ ಗೆದ್ದರೆ, ಆರ್​ಸಿಬಿ ಪ್ಲೇ ಆಫ್​​ಗೇರುವ ಸಾಧ್ಯತೆ ಇದೆ. ಇದು ಸಾಧ್ಯವಾಗಬೇಕೆಂದರೆ ಗುಜರಾತ್​ ಜೈಂಟ್ಸ್​ ಮತ್ತು ಯುಪಿ ವಾರಿಯರ್ಸ್​​ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ.