ಧಾರಾವಾಹಿ ರೂಪದಲ್ಲಿ ಕಾದಂಬರಿ ಓದಿಸಿದ್ದ ಅಜ್ಜಂಪುರ ಜಿ ಸೂರಿ
By Umesh Kumar S Apr 17, 2025
Hindustan Times Kannada
ವಿವಿಧ ದಿನಪತ್ರಿಕೆ, ವಾರ ಪತ್ರಿಕೆಗಳ ಓದುಗರಿಗೆ ಧಾರಾವಾಹಿ ರೂಪದಲ್ಲಿ ಕಾದಂಬರಿಯನ್ನು ಓದಿಸಿದ ಅಜ್ಜಂಪುರ ಜಿ ಸೂರಿ ಅವರ ಜಯಂತಿ ಇಂದು (ಏಪ್ರಿಲ್ 17).
ಅವರನ್ನು, ಅವರ ಬರಹಗಳನ್ನು ನೆನಪು ಮಾಡಿಕೊಳ್ಳಲು ಈ ದಿನ ಒಂದು ನಿಮಿತ್ತ. ಕವಿ, ವಚನಕಾರ, ಕಾದಂಬರಿಕಾರ ಮತ್ತು ಅನುವಾದಕರಾಗಿ ಹೆಸರಾಗಿದ್ದವರು ಅಜ್ಜಂಪುರ ಜಿ ಸೂರಿ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಅಜ್ಜಂಪುರದಲ್ಲಿ ಗೋವಿಂದಪ್ಪ, ಪಾರ್ವತಮ್ಮ ದಂಪತಿಯ ಪುತ್ರನಾಗಿ 1939ರ ಏಪ್ರಿಲ್ 17 ರಂದು ಜನಿಸಿದರು. ಅಜ್ಜಂಪುರ ಜಿ ಸೂರಿ ಅವರ ಪೂರ್ಣ ಹೆಸರು ಜಿ ಸೂರ್ಯನಾರಾಯಣ.
ಅಜ್ಜಂಪುರದಲ್ಲೇ ಪ್ರೌಢಶಾಲಾ ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಡಿಪ್ಲೊಮಾ ಮಾಡಿಕೊಂಡು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೆಲಸಕ್ಕೆ ಸೇರಿದರು. ಕ್ಷೇತ್ರಾಭಿವೃದ್ಧಿ ಅಧಿಕಾರಿಯಾಗಿ ನಿವೃತ್ತರಾದರು.
ಬಾಲ್ಯದಿಂದಲೇ ಸಣ್ಣ ಕಥೆ, ಕಾದಂಬರಿ ಬರೆಯುವುದು ಅವರ ಹವ್ಯಾಸವಾಗಿತ್ತು. ಅವರ ಬಹುಪಾಲು ಕಾದಂಬರಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು.
ಶಾಪ, ಹೊಸಚಿಗುರು, ತೋಟದಮನೆ, ಎರಡು ಮನಸು, ಅನುಬಂಧ ಕಾದಂಬರಿಗಳು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಓದುಗರ ಮನಸೂರೆಗೊಂಡವು.
ಮಾರ್ಗದರ್ಶಿ, ಶ್ವೇತಾಗ್ನಿ, ವಿಮುಕ್ತಿ, ನೇಗಿಲಗೆರೆ ಮುಂತಾದ ಕಾದಂಬರಿಗಳು ‘ಗಿರಿವಾರ್ತೆ’, ‘ಮನ್ವಂತರ’, ‘ಅಭಿಮಾನಿ’, ‘ಗೆಳತಿ’ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು
‘ತರಂಗ’ದಲ್ಲಿ ಮನ್ಮಥರೇಖೆ, ಷಾಂಗ್ರೀಲಾ, ಲೇಡೀಸ್ ಹಾಸ್ಟೆಲ್, ಅರಣ್ಯ ಮೃದಂಗ, ಜ್ವಾಲಾಮುಖಿ, ಭೂಮಿ ಬಾಯ್ಬಿಟ್ಟಾಗ, ಕ್ರಿಕೆಟ್-ಕ್ರಿಕೆಟ್ ಕಾದಂಬರಿಗಳು ಪ್ರಕಟವಾಗಿದ್ದವು.
ಸುಧಾ, ಮಯೂರ ಪತ್ರಿಕೆಗಳಲ್ಲಿ ಅಜ್ಜಂಪುರ ಜಿ ಸೂರಿ ಅವರ ವೂಡು, ಕಾಲರುದ್ರ, ಒಬ್ಬ ಸೂರ್ಯ ಕಾದಂಬರಿಗಳು ಪ್ರಕಟವಾಗಿದ್ದವು.
ಅಜ್ಜಂಪುರ ಜಿ ಸೂರಿಯವರು ಬರೆದ ಬಾನುಲಿ ನಾಟಕಗಳು ಕೇಳುಗರಿಗೆ ರಂಗಭೂಮಿಯ ಚಿತ್ರಣವನ್ನೇ ಕಟ್ಟಿಕೊಡುತ್ತಿದ್ದವು. ಬೆಂಗಳೂರು, ಭದ್ರಾವತಿ ನಿಲಯಗಳಿಂದ ಇವು ಪ್ರಸಾರವಾಗಿದ್ದವು.
ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತೊಡಗಿಸಿಕೊಂಡಿದ್ದ ಅಜ್ಜಂಪುರ ಜಿ ಸೂರಿ ಅವರಿಗೆ, ಭಾರ್ಗವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಲೆನಾಡ ರತ್ನ ಪ್ರಶಸ್ತಿ ಒಲಿದು ಬಂದಿದ್ದವು.
ಅಜ್ಜಂಪುರ ಜಿ ಸೂರಿಯವರು 2008ರ ಮೇ 25ರಂದು ಇಹಲೋಕ ತ್ಯಜಿಸಿದರು. ಆದಾಗ್ಯೂ, ಬದುಕು ಬರಹಗಳ ಮೂಲಕ ಅಜ್ಜಂಪುರ ಜಿ ಸೂರಿಯವರು ಓದುಗರ ಮನಸ್ಸಿನಲ್ಲಿ ಇನ್ನೂ ನೆಲೆಸಿದ್ದಾರೆ.
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ 5 ಆಹಾರಗಳಿವು