BBK 10: ಬಿಗ್ಬಾಸ್ ಮನೆಗೆ ಹೊಸ ಅತಿಥಿ ಆಗಮನ, ಕುಣಿದು ಕುಪ್ಪಳಿಸಿದ ಸ್ಪರ್ಧಿಗಳು, ದಸರಾ ದರ್ಬಾರ್ ನಡೆಸಿಕೊಟ್ಟ ತಾರಾ ಅನುರಾಧ
Oct 24, 2023 12:20 PM IST
BBK 10: ಬಿಗ್ಬಾಸ್ ಮನೆಗೆ ಹೊಸ ಅತಿಥಿ ಆಗಮನ, ಕುಣಿದು ಕುಪ್ಪಳಿಸಿದ ಸ್ಪರ್ಧಿಗಳು
- Bigg Boss Kannada: ಹುಲಿ ಉಗುರು ಪ್ರಕರಣದಲ್ಲಿ ಸಂತೋಷ್ ಹೊರಹೋಗಿದ್ದಾರೆ. ಇದೀಗ ಈ ಬೇಸರ ಮರೆತು ಬಿಗ್ಬಾಸ್ ಮನೆಯೊಳಗಿನ ಸ್ಪರ್ಧಿಗಳು ದಸರಾ ಸಂಭ್ರಮದಲ್ಲಿದ್ದಾರೆ. ಬಿಗ್ಬಾಸ್ ಮನೆಯೊಳಗೆ ಹಿರಿಯ ನಟಿ ತಾರಾ ಪ್ರವೇಶಿಸಿದ್ದು, ದಸರಾ ದರ್ಬಾರ್ ನಡೆಸಿಕೊಟ್ಟಿದ್ದಾರೆ.
ಬೆಂಗಳೂರು: ಇಂದು ಎಲ್ಲೆಡೆ ದಸರಾ ಸಂಭ್ರಮ. ಮೈಸೂರಿನಲ್ಲಿ ಜಂಬೂ ಸವಾರಿ ನಡೆಯಲಿದ್ದು, ಮಡಿಕೇರಿ, ಮಂಗಳೂರು ಸೇರಿದಂತೆ ವಿವಿಧೆಡೆ ದಸರಾ ಕಾರ್ಯಕ್ರಮಗಳು ಜೋರಾಗಿವೆ. ಇದೇ ಸಮಯದಲ್ಲಿ ಬಿಗ್ಬಾಸ್ ಮನೆಯೊಳಗಿನ ಸ್ಪರ್ಧಿಗಳು ದಸರಾ ಸಂಭ್ರಮದಲ್ಲಿದ್ದಾರೆ. ಬಿಗ್ಬಾಸ್ ಮನೆಯೊಳಗೆ ಹಿರಿಯ ನಟಿ ತಾರಾ ಪ್ರವೇಶಿಸಿದ್ದು, ದಸರಾ ದರ್ಬಾರ್ ನಡೆಸಿಕೊಟ್ಟಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಬಿಗ್ಬಾಸ್ ಎಪಿಸೋಡ್ನಲ್ಲಿ ಮನೆಯೊಳಗಿನ ದಸರಾ ಸಂಭ್ರಮ ಪ್ರಸಾರವಾಗಲಿದೆ.
ಹಿರಿಯ ನಟಿ ತಾರಾ ಎಂಟ್ರಿ
ಕಲರ್ಸ್ ಕನ್ನಡ ಈಗಾಗಲೇ ಬಿಗ್ಬಾಸ್ ಮನೆಯ ದಸರಾ ದರ್ಬಾರ್ನ ಪ್ರಮೋ ಪ್ರಕಟಿಸಿದೆ. ಎಲ್ಲಾ ಸ್ಪರ್ಧಿಗಳು ಹೊಸ ಬಟ್ಟೆ ತೊಟ್ಟು ದಸರಾ ಸಂಭ್ರಮದಲ್ಲಿ ಇರುತ್ತಾರೆ. ಈ ಸಮಯದಲ್ಲಿ ಬಿಗ್ಬಾಸ್ ಡೋರ್ ತೆರೆದುಕೊಳ್ಳುತ್ತದೆ. ನಟಿ ತಾರಾ ಮನೆ ಪ್ರವೇಶಿಸುತ್ತಾರೆ. ಮನೆಯೊಳಗಿನ ಸದಸ್ಯರ ಸಂಭ್ರಮ ಹಲವು ಪಟ್ಟು ಹೆಚ್ಚುತ್ತದೆ. ಇದಾದ ಬಳಿಕ ಬಿಗ್ಬಾಸ್ ಹಾಡುಗಳನ್ನು ಪ್ಲೇ ಮಾಡುತ್ತದೆ. ಇದಕ್ಕೆ ಒಬ್ಬರೊಬ್ಬರೇ ಬಿಗ್ಬಾಸ್ ಸ್ಪರ್ಧಿಗಳು ಕುಣಿದು ಈ ಹಾಡನ್ನು ಮನೆಯ ಯಾವ ಸದಸ್ಯರಿಗೆ ಅರ್ಪಿಸುತ್ತೇವೆ ಎಂದು ಹೇಳುತ್ತಾರೆ.
ಈ ಸಮಯದಲ್ಲಿ ಮನೆಯ ಸದಸ್ಯರು ತಾರಾರಿಗೆ ದೂರು ಸಹ ನೀಡುತ್ತಾರೆ. ಕಾರ್ತಿಕ್ ಫ್ಲರ್ಟ್ ಮಾಡುತ್ತಾರೆ ಎಂದು ಮನೆಯವರು ದೂರುತ್ತಾರೆ. ನೀನು ಫ್ಲರ್ಟ್ ಕೂಡ ಮಾಡ್ತಿಯಾ ಎಂದು ತಾರಾ ಪ್ರಶ್ನಿಸುತ್ತಾರೆ. ಅದಕ್ಕೆ ಉಳಿದವರು ಹೌದು ಎನ್ನುತ್ತಾರೆ. ಒಟ್ಟಾರೆ, ಬಿಗ್ಬಾಸ್ ಮನೆಯೊಳಗೆ ಸಂಭ್ರಮ ಮನೆ ಮಾಡಿರುವುದು ಕಾಣಿಸುತ್ತದೆ.
ಬಿಗ್ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ ತಾರಾ ಕನ್ನಡದ ಜನಪ್ರಿಯ ನಟಿ. ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಈಗ ಸಕ್ರೀಯರಾಗಿದ್ದಾರೆ. ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ತಾರಾ ಜಡ್ಜ್ ಆಗಿದ್ದಾರೆ.
ಸಂತೋಷ್ ನಿರ್ಗಮನದ ನೋವು
ಹುಲಿ ಉಗುರು ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸಂತೋಷ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರ ಅನಿರೀಕ್ಷಿತ ನಿರ್ಗಮನ ಮನೆಯವರಿಗೆ ಆಘಾತ ನೀಡಿದೆ. ಇದೇ ಸಮಯದಲ್ಲಿ ಎಲ್ಲಾ ನೋವು ಮರೆತವರಂತೆ ದಸರಾ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ. ಸಂತೋಷ್ ಮಾತ್ರವಲ್ಲದೆ ಈಗಾಗಲೇ ಸ್ಯಾಂಡಲ್ವುಡ್ನ ಹಲವು ನಟರು, ನಿರ್ದೇಶಕರು ಕೂಡ ಇದೇ ರೀತಿಯ ಹುಲಿ ಉಗುರು ಧರಿಸಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ನಟ ದರ್ಶನ್, ರಾಕ್ಲೈನ್ ವೆಂಕಟೇಶ್ ಮುಂತಾದವರು ಇಂತಹ ಹುಲಿ ಉಗುರು ಪೆಂಡೆಂಟ್ ಧರಿಸಿದ್ದರು ಎಂದು ಚರ್ಚೆಗಳಾಗುತ್ತಿವೆ.
ಹಳ್ಳಿಕಾರ್ ಹಸುವಿನ ತಳಿಯ ರಕ್ಷಣೆಯಲ್ಲಿ ನಿರತರಾಗಿರುವ ವರ್ತೂರು ಸಂತೋಷ್, ಬಿಗ್ ಬಾಸ್ ಶೋಗೆ ಬರುವ ವೇಳೆ ಕೈತುಂಬ ಬಂಗಾರದ ಆಭರಣ, ಕೊರಳಲ್ಲಿ ಚಿನ್ನದ ಸರ ಧರಿಸಿ ಎಂಟ್ರಿ ಕೊಟ್ಟಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ, ಕೊರಳಲ್ಲಿನ ಚಿನ್ನದ ಪೆಂಡೆಂಟ್ವೊಂದರಲ್ಲಿ ಹುಲಿಯ ಉಗುರೂ ಕಾಣಿಸಿತ್ತು. ಇದೀಗ ಆ ಉಗುರು ಧರಿಸಿದ ಹಿನ್ನೆಲೆಯಲ್ಲಿಯೇ ವರ್ತೂರು ಅವರನ್ನು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಇಂದು ಮೈಸೂರು ದಸರಾ ಜಂಬೂ ಸವಾರಿ ನಡೆಯಲಿದ್ದು, ಸ್ಯಾಂಡಲ್ವುಡ್ನ ಹಲವು ನಟನಟಿಯರು ಭಾಗವಹಿಸಲಿದ್ದಾರೆ. ಮೈಸೂರು ದಸರಾದ ಕುರಿತು ಕ್ಷಣಕ್ಷಣದ ಅಪ್ಡೇಟ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡವು ನೀಡುತ್ತಿದ್ದು, ಲೈವ್ ಅಪ್ಡೇಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಬಹುದು.