Earthquake in Dakshina Kannada: ದಕ್ಷಿಣ ಕನ್ನಡದ ಸಂಪಾಜೆಯಲ್ಲಿ ಮತ್ತೆ ಭೂಕಂಪನದ ಅನುಭವ
Jun 28, 2022 06:52 PM IST
ಸಾಂದರ್ಭಿಕ ಚಿತ್ರ
- ಇಂದು ಬೆಳಗ್ಗೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯಲ್ಲಿ ಭೂಕಂಪನದ ಅನುಭವವಾಗಿತ್ತು. ಇದೀಗ ಸಂಜೆ 4.40 ರ ವೇಳೆಗೆ ಸಂಪಾಜೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿರುವುದು ವರದಿಯಾಗಿದೆ.
ದಕ್ಷಿಣ ಕನ್ನಡ: ಇಂದು ಬೆಳಗ್ಗೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯಲ್ಲಿ ಭೂಕಂಪನದ ಅನುಭವವಾಗಿತ್ತು. ಇದೀಗ ಸಂಜೆ 4.40 ರ ವೇಳೆಗೆ ಸಂಪಾಜೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿರುವುದು ವರದಿಯಾಗಿದೆ.
ಬೆಳಗ್ಗೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 3.0ರಷ್ಟು ತೀವ್ರತೆ ಇತ್ತು ಎನ್ನಲಾಗಿದ್ದು, ಜನರು ಭಯಭೀತರಾಗಿದ್ದರು. ಇದೀಗ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ. ಸಂಜೆ ಭೂಕಂಪನದ ಅನುಭವವಾಗಿರುವ ಬಗ್ಗೆ ಜನರು ಒಬ್ಬರಿಗೊಬ್ಬರು ಕರೆ ಮಾಡಿ ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಗಡಿಯಲ್ಲಿರುವ ಸುಳ್ಯ ತಾಲೂಕಿನಲ್ಲಿ ಇಂದು ಬೆಳಗ್ಗೆ 7.45ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿತ್ತು. ಇದರಿಂದಾಗಿ ಮನೆಯೊಳಗಿದ್ದ ಜನರೆಲ್ಲ ಹೊರಗೆ ಓಡಿ ಬಂದು ಕೆಲಕಾಲ ನಿಂತುಕೊಂಡಿದ್ದರು ಎಂದು ವರದಿ ಹೇಳಿದೆ. ತೊಡಿಕಾನ, ಮಿತ್ತೂರು, ಸಂಪಾಜೆ, ಅರಂತೋಡು, ಉಬರಡ್ಕ ಪೆರಾಜೆ, ಜಾಲ್ಸೂರು ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ, ಜನರು ಭಯಭೀತಗೊಂಡು ಮನೆಯಿಂದ ಹೊರಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಬೆಳಿಗ್ಗೆ 7.45ರ ಸಮಯದಲ್ಲಿ ಕಂಪನದ ಅನುಭವ ಆಗಿದ್ದು, ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಸಾರ್ವಜನಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೂರರಿಂದ ನಾಲ್ಕು ಸೆಕೆಂಡ್ ಕಂಪನ ಆಗಿದ್ದು, ಮನೆಯೊಳಗಿದ್ದ ಪಾತ್ರೆ ಸಾಮಗ್ರಿಗಳು ಅಲುಗಾಡಿ ಬಿದ್ದಿವೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಈ ಭಾಗದಲ್ಲಿ ಜೂನ್ 25 ರಂದು ಕೂಡಾ ಭೂಕಂಪನದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ದಾಖಲಾಗಿತ್ತು. ಆ ದಿನ ಬೆಳಗ್ಗೆ 9 ಗಂಟೆ 9 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿತ್ತು. ಭೂಕಂಪನದ ಕೇಂದ್ರ ಸ್ಥಾನದಿಂದ 4.7 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿತ್ತು ಎಂದು ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ತಿಳಿಸಿತ್ತು.
ಕೊಡಗು ಜಿಲ್ಲೆಯಲ್ಲಿ ಕೂಡ ಭೂಕಂಪನ
ಕೊಡಗು ಜಿಲ್ಲೆಯಲ್ಲಿ ಕೆಲವು ಗ್ರಾಮಗಳಲ್ಲಿ ಇಂದು ಬೆಳಗ್ಗೆ ಭೂಕಂಪನವಾಗಿತ್ತು. ಕಳೆದ ಏಳು ದಿನಗಳ ಅವಧಿಯಲ್ಲಿ ಇದು ಮೂರನೇ ಸಲ ಈ ರೀತಿ ಭೂ ಕಂಪನದ ಅನುಭವ ಸ್ಥಳೀಯರಿಗೆ ಆಗಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಭಾಗಮಂಡಲ, ವನಚಲ್, ಕರಿಕೆ, ಚೆಯ್ಯಂಡಾಣೆ, ನಾಪೋಕ್ಲು, ಕುಕ್ಕುಂದ, ಕಾಡು, ಬಲ್ಲಮಾವಟ್ಟಿ. ದಬ್ಬಡ್ಕ, ಪೆರಾಜೆ, ಕರಿಕೆ ಸೇರಿವಿವಿಧೆಡೆ ಬೆಳಗ್ಗೆ 7.45 ಕ್ಕೆ ಭೂಮಿ ಕಂಪಿಸಿದೆ.
ಈ ಎಲ್ಲ ಗ್ರಾಮಸ್ಥರು ಭೂಮಿ ಕಂಪಿಸಿದ ಅನುಭವವಾಗುತ್ತಲೇ ರಸ್ತೆಗೆ ಬಂದು ನಿಂತಿದ್ದರು. ಇಲ್ಲಿ ಈ ರೀತಿ ಆಗುತ್ತಿರುವುದು ಇದು ಮೂರನೇ ಸಲವಾದ್ದರಿಂದ ಜನ ಕಂಪನದ ವಿಚಾರದಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ಕಂಪನದ ಸಂದರ್ಭದಲ್ಲಿ ಮನೆಯಲ್ಲಿದ್ದ ಪಾತ್ರೆ ವಸ್ತುಗಳು ಕೆಳಕ್ಕೆ ಬಿದ್ದಿದ್ದವು ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಗಳ ಮೂಲಗಳು ಕಂಪನದ ವಿಚಾರವಾಗಿ ಕರೆ ಬಂದಿರುವುದನ್ನು ದೃಢೀಕರಿಸಿದ್ದು, ಕೆಲವು ಕಡೆ 5 ಸೆಕೆಂಡ್ ಭೂಮಿ ಕಂಪಿಸಿದ ಅನುಭವ ಬಹುತೇಕರಿಗೆ ಆಗಿದೆ. ಈ ಕುರಿತು ವಿವಿಧ ಗ್ರಾಮಗಳಿಂದ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಗಮನಕ್ಕೆ ಭೂಮಿ ಕಂಪಿಸಿದ ವಿಚಾರವನ್ನು ತರಲಾಗಿದೆ. ರಿಕ್ಟರ್ ಮಾಪಕದ ದತ್ತಾಂಶ ಪರಿಶೀಲನೆ ನಡೆದಿದೆ. ಆ ಬಳಿಕ ಕಂಪನದ ತೀವ್ರತೆ ಗೊತ್ತಾಗಲಿದೆ. ಆದಾಗ್ಯೂ, ಜನ ಆತಂಕಿತರಾಗಬೇಕಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 23ಕ್ಕೆ ಹಾಸನ, ಮಂಡ್ಯ ಭಾಗದಲ್ಲಾಗಿತ್ತು ಭೂಕಂಪ
ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಕರ್ನಾಟಕದ ನೆರೆಯ ಕೆಲವು ಪ್ರದೇಶಗಳಲ್ಲಿ ಜೂನ್ 23ರ ಮುಂಜಾನೆ 4.37ರ ಸುಮಾರಿಗೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.4 ಅಳತೆಯ ಭೂಕಂಪನ ದಾಖಲಾಗಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಾಗರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಗನಹಳ್ಳಿ ಗ್ರಾಮದಲ್ಲಿ ಈ ಕಂಪನದ ಕೇಂದ್ರಬಿಂದು ಇತ್ತು.