Davanagere News: ಮುಸ್ಲಿಂ ಗೆಳೆಯನ ಆರೋಗ್ಯ ಚೇತರಿಕೆಗೆ ಹರಕೆ ಹೊತ್ತ ಹಿಂದು ಗೆಳೆಯ; ಧರ್ಮಸ್ಥಳದಲ್ಲಿ ತುಲಾಭಾರ ಮಾಡಿ ಹರಕೆ ಪೂರ್ಣ
Oct 16, 2023 05:11 PM IST
ಮುಸ್ಲಿಂ ಗೆಳೆಯನ ಆರೋಗ್ಯ ಚೇತರಿಕೆಗೆ ಹರಕೆ ಹೊತ್ತ ಹಿಂದು ಗೆಳೆಯ; ಧರ್ಮಸ್ಥಳದಲ್ಲಿ ತುಲಾಭಾರ ಮಾಡಿ ಹರಕೆ ಪೂರ್ಣ
- ಕೊರೊನಾ ಸಮಯದಲ್ಲಿ ವಕೀಲ ಅನೀಸ್ ಪಾಷಾಗೆ ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಿತ್ತು. ಇದರಿಂದ ಬೇಸರಗೊಂಡ ಗೆಳೆಯ ಅರುಣ್ ತನ್ನ ಸ್ನೇಹಿತ ಅನೀಸ್ ಪಾಷಾ 'ಗುಣಮುಖರಾಗಲಿ' ಎಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಲಾಭಾರ ಮಾಡಿಸುತ್ತೇನೆ ಎಂದು ಹರಕೆ ಹೊತ್ತಿದ್ದರು.
ದಾವಣಗೆರೆ: ದೇಶದಲ್ಲಿ ಒಂದು ಕಡೆ ಹಿಂದು- ಮುಸ್ಲಿಂ ಗಲಾಟೆ. ಅವರನ್ನ ಕಂಡರೆ ಇವರಿಗೆ, ಇವರನ್ನ ಕಂಡರೆ ಅವರಿಗೆ ಆಗಲ್ಲ ಅನ್ನೋ ಪರಿಸ್ಥಿತಿ. ಆದರೆ, ಮುಸ್ಲಿಂ ಗೆಳೆಯನ ಆರೋಗ್ಯ ಚೇತರಿಕೆಗಾಗಿ ಹಿಂದು ವ್ಯಕ್ತಿಯೊಬ್ಬ ಧರ್ಮಸ್ಥಳದ ಮಂಜುನಾಥನಿಗೆ ಹರಕೆ ಹೊತ್ತ ವಿರಳಾತಿ ವಿರಳ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ನಿಜ ಜೀವನದಲ್ಲಿ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದು, ಧರ್ಮಸ್ಥಳದಲ್ಲಿ ಅವನ ಹೆಸರಿನಲ್ಲಿ ತುಲಾಭಾರ ನಡೆಸಿದ್ದಾರೆ. ಒಬ್ಬ ವಕೀಲ ಮುಸ್ಲಿಂ ಸಮುದಾಯ, ಇನ್ನೊಬ್ಬ ಉದ್ಯಮಿ ಅರುಣ್ ಹಿಂದೂ ಸಮುದಾಯದವರು. ಮುಸ್ಲಿಂ ವಕೀಲ ಅನೀಸ್ಪಾಷಾ ಎಂಬುವರ ಬಳಿ ಉದ್ಯಮಿ ಅರುಣ್ ಒಂದು ಕೇಸ್ನ ಸಲುವಾಗಿ ಬಂದಿದ್ದಾಗ ಅವರಿಬ್ಬರಿಗೂ ಪರಿಚಯವಾಗಿತ್ತು. ಆ ಕೇಸ್ನ್ನು ವಕೀಲ ಅನೀಸ್ಪಾಷಾ ಗೆದ್ದು ಕೊಟ್ಟಿದ್ದರು. ವಕೀಲ ಅನಿಸ್ ಪಾಷ ಹಾಗೂ ಅರುಣ್ ಖಾಸ ಗೆಳೆಯರಾಗುತ್ತಾರೆ. ಅಲ್ಲಿಂದ ಈ ಗೆಳೆತನ ಶುರುವಾಗುತ್ತದೆ.
ಹೀಗಿರುವಾಗ ಕೊರೊನಾ ಸಮಯದಲ್ಲಿ ವಕೀಲ ಅನೀಸ್ ಪಾಷಾಗೆ ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಿತ್ತು. ಇದರಿಂದ ಬೇಸರಗೊಂಡ ಗೆಳೆಯ ಅರುಣ್ ತನ್ನ ಸ್ನೇಹಿತ ಅನೀಸ್ ಪಾಷಾ 'ಗುಣಮುಖರಾಗಲಿ' ಎಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಲಾಭಾರ ಮಾಡಿಸುತ್ತೇನೆ ಎಂದು ಹರಕೆ ಹೊತ್ತಿದ್ದರು.
ಸ್ನೇಹಿತ ಅನೀಸ್ ಪಾಷಾ ಗುಣಮುಖರಾದ ಕಾರಣ ಕಳೆದ ವಾರವಷ್ಟೇ ಧರ್ಮಸ್ಥಳಕ್ಕೆ ಕರೆದೊಯ್ದು ಅರುಣ್ ದೇವರ ದರ್ಶನ, ಅಭಿಷೇಕ ಮಾಡಿಸಿ, ಅವರ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಇದಕ್ಕೆ ಸಹಕರಿಸಿದ ಮುಸ್ಲಿಂ ಸ್ನೇಹಿತ ಇತರರಿಗೆ ಮಾದರಿಯಾಗಿದ್ದಾರೆ.
'ನನ್ನ ವೃತ್ತಿಯಲ್ಲಿ ಸಾಕಷ್ಟು ಕಕ್ಷಿದಾರರನ್ನು ಕಂಡಿದ್ದೇನೆ. ಆದರೆ, ಕಕ್ಷಿದಾರರಾಗಿ ಪರಿಚಿತರಾದ ಅರುಣ್ ಕುಮಾರ್ ತುಂಬಾ ಹತ್ತಿರವಾದರು. ಇಬ್ಬರೂ ಕುಟುಂಬ ಸ್ನೇಹಿತರಾಗಿದ್ದೇವೆ. 2021ರಲ್ಲಿ ಇದ್ದಕ್ಕಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಹೃದಯದ ರಕ್ತನಾಳ ಎರಡು ಕಡೆ ಬ್ಲಾಕ್ ಆಗಿದ್ದರಿಂದ ಸ್ಟಂಟ್ ಅಳವಡಿಸಿದರು. ಈ ಸಂಬಂಧ ಗೆಳೆಯ ಅರುಣ್ ನನ್ನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದರು. ಈಚೆಗೆ ಧರ್ಮಸ್ಥಳ ಒಟ್ಟಿಗೇ ತೆರಳಿ ಹರಕೆ ತೀರಿಸಿ ಬಂದಿದ್ದಾರೆ.
'ಧರ್ಮ, ಆಚರಣೆಗಳು ಬೇರೆಯಾದರೂ ಅರುಣ್ ಅವರ ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹರಕೆ ತೀರಿಸಿದ್ದಾರೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎಂಬ ಖುರಾನ್ ಸಾಲುಗಳಂತೆ ಇಬ್ಬರು ಬದುಕುತ್ತಿದ್ದಾರೆ. ಏನೇ ಆಗಲಿ ತಾನು ಹಿಂದು, ತಾನೂ ಮುಸ್ಲಿಂ ಎಂದು ಘರ್ಷಣೆಗೊಳಗಾಗುವ ಈ ಸಂದರ್ಭದಲ್ಲಿ ಜಾತಿ, ಬೇಧ ಮರೆತು, ಗೆಳೆಯನ ಆರೋಗ್ಯಕ್ಕಾಗಿ ಹರಕೆ ಹೊತ್ತ ಹಿಂದೂ ಭಕ್ತನ ಚಿಂತನೆ ಇದೀಗ ಎಲ್ಲೆಡೆ ಮೆಚ್ಚೆಗೆ ಪಾತ್ರವಾಗಿದೆ. ಧರ್ಮಗಳು ಬೇರೆಯಾಗಿರಬಹುದು ಆದರೆ, ಅದಕ್ಕಿಂತಲೂ ಗೆಳೆತನ ಗ್ರೇಟ್ ಎಂದು ಈ ಸ್ನೇಹಿತರು ತೋರಿಸಿ ಕೊಟ್ಟಿದ್ದಾರೆ.