Karnataka Earthquake: ದ.ಕನ್ನಡ, ಕೊಡಗು ಆಯ್ತು, ಈಗ ವಿಜಯಪುರದಲ್ಲಿ ಭೂಕಂಪ, 4.9 ತೀವ್ರತೆ!
Jul 09, 2022 01:21 PM IST
ವಿಜಯಪುರದಲ್ಲಿ ಭೂಕಂಪ ತೀವ್ರತೆ 4.5
- ರಾಜ್ಯದಲ್ಲಿ ಜೂನ್ ಕೊನೆಯ ಭಾಗದಿಂದೀಚೆಗೆ ದಕ್ಷಿಣ ಕನ್ನಡ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಭೂಕಂಪನದ ಅನುಭವ ಆಗಿತ್ತು. ಅದರಲ್ಲೂ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಗಡಿಭಾಗ ಸುಳ್ಯ ಸುತ್ತಮುತ್ತ ಪದೇಪದೆ ಭೂಕಂಪದ ಅನುಭವ ಆಗಿ ಆತಂಕ ಉಂಟಾಗಿತ್ತು. ಈಗ ವಿಜಯಪುರ ಜಿಲ್ಲೆಯಲ್ಲಿ ಭೂಕಂಪ ಆಗಿರುವ ಸುದ್ದಿ ಕಳವಳ ಮೂಡಿಸಿದೆ.
ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಇಂದು (ಜು.9) ಬೆಳಗ್ಗೆ ನಾಲ್ಕಾರು ಸೆಕೆಂಡ್ ಕಾಲ ಭೂ ಕಂಪನವಾಗಿದೆ. ಈ ಕಂಪನದ ಅನುಭವ ಜನರಿಗೆ ಆಗಿದ್ದು, ಎಲ್ಲರೂ ಭಯಭೀತರಾಗಿ ಮನೆಯಿಂದ ಹೊರಗೋಡಿ ಬಂದಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಿಲ್ಲಾಡಳಿತವೂ ಇದನ್ನು ದೃಢೀಕರಿಸಿದೆ.
ವಿಜಯಪುರ ನಗರ, ಗ್ರಾಮೀಣ ಭಾಗದಲ್ಲಿ ಭೂಕಂಪನದ ಅನುಭವವಾಗಿತ್ತು. ಬೆಳಗ್ಗೆ 6.21ರ ಸುಮಾರಿಗೆ ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಭೂಕಂಪನವಾಗಿತ್ತು. ವಿಜಯಪುರ ನಗರ ದಲ್ಲಿ ಮಾತ್ರವಲ್ಲದೆ, ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ ಅನುಭವವಾಗಿದೆ.
ವಿಜಯಪುರ, ತಿಕೋಟಾ, ಬಬಲೇಶ್ವರ, ಇಂಡಿ ಹಾಗೂ ಚಡಚಣ ತಾಲೂಕುಗಳು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಭೂಮಿ ನಡುಗಿದೆ. ವಿಜಯಪುರ ತಾಲೂಕಿನ ನಾಗಠಾಣ, ಅಲಿಯಾಬಾದ ಹಾಗೂತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗದಲ್ಲೂ ಹೆಚ್ಚಿನ ಭೂ ಕಂಪನದ ಅನುಭವ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ರಿಕ್ಟರ್ ಮಾಪಕದಲ್ಲಿ 4.9 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ಭೂಕಂಪನದ ಕೇಂದ್ರ ಬಿಂದು ಎಲ್ಲಿ?
ವಿಜಯಪುರ ಜಿಲ್ಲೆಯ ಇಂಡಿ ಬಸವನಬಾಗೇವಾಡಿ ಭಾಗದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು. ಬಾಗಲಕೋಟೆಯ ಜಮಖಂಡಿ ರಬಕವಿ ಮತ್ತು ಮಹಾರಾಷ್ಟ್ರದ ಪುಣೆಯಲ್ಲೂ ಭೂಮಿ ಕಂಪಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿಯ ಪ್ರಾಥಮಿಕ ವರದಿ ಹೇಳಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹುಡ್ಕೊ ಕಾಲನಿ ಬಳಿ ಬೆಳಗ್ಗೆ 6 ಗಂಟೆ 21 ನಿಮಿಷಕ್ಕೆ ಭೂ ಕಂಪನದ ಅನುಭವವಾಗಿದೆ. ಟೈರ್ ಬ್ಲಾಸ್ಟ್ ಆದಂತೆ ಶಬ್ದ ಕೇಳಿತ್ತು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗೂಗಲ್ ಕೂಡ ಭೂಕಂಪನದ ಮಾಹಿತಿಯನ್ನು ನೀಡುತ್ತಿದ್ದು, ರಿಕ್ಟರ್ ಮಾಪಕದ ತೀವ್ರತೆ 4.5 ಎಂದಿದೆ. ಕೇಂದ್ರ ಬಿಂದು ವಿಜಯಪುರದಿಂದ 11 ಕಿ.ಮೀ. ದೂರದಲ್ಲಿತ್ತು ಎಂಬುದನ್ನು ಬಿಂಬಿಸುತ್ತಿದೆ.
ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ
ಭೂಕಂಪದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ನಿಖರ ಮಾಹಿತಿ ಒದಗಿಸಲಿದ್ದಾರೆ. ಸದ್ಯ, ಭೂಕಂಪದ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆಹಾಕುತ್ತಿದೆ. ಜನರು ಗಾಬರಿಯಾಗಬೇಕಾದ್ದು ಇಲ್ಲ. ಸಹಜವಾಗಿ ಇರಬಹುದು ಎಂದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಮೂವತ್ತು ವರ್ಷದಲ್ಲಿ ಈ ಪರಿ ಸದ್ದು ಕೇಳಿಲ್ಲ
ಕಳೆದ ಮೂವತ್ತು ವರ್ಷದ ಇತಿಹಾಸದಲ್ಲೇ ಭೂಮಿ ಕಂಪಿಸಿದಾಗ ಇಷ್ಟು ಪ್ರಮಾಣದ ಸದ್ದು ಆಗಿರಲಿಲ್ಲ ಎಂದು ಅನೇಕ ಹಿರಿಯರು ಹೇಳುತ್ತಿದ್ದಾರೆ. ವಿಜಯಪುರ, ಬಾಗಲಕೋಟೆ ಭಾಗದಲ್ಲಿ ಜನವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಭೂಕಂಪನವಾಗಿತ್ತು. ಪದೇಪದೆ ಭೂಕಂಪದಿಂದ ವಿಜಯಪುರ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯದಲ್ಲಿ 4 ಸಲ ಕಂಪನ
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಜೂ.25ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಭೂಕಂಪ ಸಂಭವಿಸಿದೆ. ಈ ಹಿಂದೆ ಜೂನ್ 25, ಜೂನ್ 28 ಮತ್ತು ಜುಲೈ 1 ರಂದು ತಾಲ್ಲೂಕಿನಲ್ಲಿ ವಿವಿಧ ತೀವ್ರತೆಯ ಭೂಕಂಪಗಳು ಸಂಭವಿಸಿದ್ದವು ಎಂಬುದನ್ನು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರಗಳು ದೃಢೀಕರಿಸಿದ್ದವು.
ಈ ವಾರ ಆರಂಭದಲ್ಲಿ ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ್ ಅವರು ಸುದ್ದಿಗಾರರ ಜತೆಗೆ ಮಾತನಾಡುತ್ತ “ಈ ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭೂಕಂಪದ ಕಂಪನಗಳು ಪದೇಪದೆ ಸಂಭವಿಸಿರುವುದು ಕಳವಳಕಾರಿ ವಿಷಯವಾಗಿದೆ. ಇದರ ಹಿಂದಿನ ಕಾರಣಗಳನ್ನು ನಾವು ಅಧ್ಯಯನ ಮಾಡಬೇಕಾಗಿದೆ. ಹಾಗಾಗಿ ಎನ್ಜಿಆರ್ಐ ತಂಡ ಭೇಟಿ ನೀಡುತ್ತಿದೆ. ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಪ್ರದೇಶವನ್ನು ನಕ್ಷೆ ಮಾಡಲು ತಂಡದೊಂದಿಗೆ ಸಮನ್ವಯಗೊಳಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ" ಎಂದು ಹೇಳಿದ್ದರು. ಅಲ್ಲದೆ ಅವರು ಈ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದರು.